ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರ ಪಾದಯಾತ್ರೆ ಬಹುತೇಕ ಕ್ಯಾನ್ಸಲ್? – Kannada News | BJP Leaders’ Padayatra Demanding Minister Nagendra’s Resignation Likely to Be Cancelled

ಬೆಂಗಳೂರು, ಆಗಸ್ಟ್​ 18: ವಾಲ್ಮೀಕಿ ನಿಗಮ ಹಗರಣದಲ್ಲಿ ರಾಜೀನಾಮೆ ನೀಡಿದ್ದ ನಾಗೇಂದ್ರರನ್ನ (B Nagendra) ಮತ್ತೆ ಮಂತ್ರಿ ಮಾಡಿರುವುದು ಬಿಜೆಪಿ (bjp) ನಾಯಕರನ್ನ ಕೆರಳಿಸಿದೆ. ಹೀಗಾಗಿ ನಾಗೇಂದ್ರ ರಾಜೀನಾಮೆ ನೀಡೋವೆರಗೂ ಹೋರಾಟ ಅಂತಾ ಪಟ್ಟು ಹಿಡಿದಿದೆ. ಅಷ್ಟೇ ಅಲ್ಲದೆ ಪಾದಯಾತ್ರೆಗೂ ಮುಂದಾಗಿತ್ತು. ಆದರೆ ಇದೀಗ ಬಿಜೆಪಿ ಪಾದಯಾತ್ರೆ ಬಹುತೇಕ ರದ್ದು ಎನ್ನಲಾಗುತ್ತಿದೆ.

ಪಾದಯಾತ್ರೆ ಬಗ್ಗೆ ಮುಖಂಡರಲ್ಲಿ ಮೂಡದ ಸಹಮತ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನು ಮುಂದಿಟ್ಟುಕೊಂಡು ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿದ್ದ ರಾಜ್ಯ ಬಿಜೆಪಿ ಹೋರಾಟ ಬಹುತೇಕ ಕ್ಯಾನ್ಸಲ್ ಎನ್ನಲಾಗುತ್ತಿದೆ. ಪಕ್ಷದ ಆಂತರಿಕ ವಲಯದಲ್ಲಿ ಒಮ್ಮತ ಮೂಡದ ಕಾರಣ, ಉದ್ದೇಶಿತ ಪಾದಯಾತ್ರೆಯನ್ನು ಕೈಬಿಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಾಗೇಂದ್ರ ರಾಜೀನಾಮೆಗೆ ಬಿಜೆಪಿ-ಜೆಡಿಎಸ್ ಪಟ್ಟು: ಸದನದೊಳಗೆ ಗದ್ದಲ, ಜಿಲ್ಲೆಗಳಲ್ಲಿಯೂ ಪ್ರತಿಭಟನೆ ಜೋರು

ರಾಯಚೂರು ಜಿಲ್ಲೆಯ ದೇವದುರ್ಗದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬೃಹತ್ ರಣತಂತ್ರ ರೂಪಿಸಲಾಗಿತ್ತು. ಈ ಸಂಬಂಧ ಕಳೆದ ವಾರವಷ್ಟೇ ವಿಜಯೇಂದ್ರ ಸಾರಥ್ಯದಲ್ಲಿ ಪ್ರಮುಖ ಮುಖಂಡರ ಮೊದಲ ಹಂತದ ಪೂರ್ವಭಾವಿ ಸಭೆಯೂ ನಡೆದಿತ್ತು.

ಪಾದಯಾತ್ರೆ ಬಹುತೇಕ ಕ್ಯಾನ್ಸಲ್?

ಪಾದಯಾತ್ರೆ ಹಮ್ಮಿಕೊಳ್ಳುವ ವಿಚಾರದಲ್ಲಿ ಪಕ್ಷದ ಎಸ್‌ಟಿ ಸಮುದಾಯದ ಪ್ರಮುಖ ನಾಯಕರಲ್ಲಿ ಪೂರ್ಣ ಪ್ರಮಾಣದ ಸಹಮತ ವ್ಯಕ್ತವಾಗಿಲ್ಲ. ಸಮುದಾಯದ ಮುಖಂಡರಲ್ಲೇ ಭಿನ್ನಾಭಿಪ್ರಾಯ ಹಾಗೂ ಗೊಂದಲಗಳು ಮುಂದುವರಿದಿರುವ ಹಿನ್ನೆಲೆ ಪಾದಯಾತ್ರೆ ಇದೀಗ ಬಹುತೇಕ ಕ್ಯಾನ್ಸಲ್ ಎನ್ನಲಾಗುತ್ತಿದೆ.

ಸದನದ ಬಾವಿಗಿಳಿದು ಪ್ರತಿಭಟನೆ: ಕಲಾಪದಲ್ಲಿ ತೀವ್ರ ಗದ್ದಲ

ಇನ್ನು ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲೂ ಬಿಜೆಪಿ ನಾಯಕರು ಸಮರ ಸಾರಿದ್ದಾರೆ. ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಕಲಾಪದಲ್ಲಿ ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಯಿತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿಷಯವನ್ನು ಪ್ರಸ್ತಾಪಿಸಿ, ‘ಹಗರಣದಲ್ಲಿ ನೇರ ಆರೋಪ ಹೊತ್ತಿರುವ ಸಚಿವ ನಾಗೇಂದ್ರರಿಂದ ಸರ್ಕಾರ ಕೂಡಲೇ ರಾಜೀನಾಮೆ ಪಡೆಯಬೇಕು,’ ಎಂದು ಪಟ್ಟುಹಿಡಿದರು. ಈ ವೇಳೆ ಪೋಸ್ಟರ್‌ಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಸದಸ್ಯರು, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *