ಸರ್ಕಾರಿ ಜಿಲ್ಲಾಸ್ಪತ್ರೆImage Credit source: tv9 kannada
ಕೋಲಾರ, ಫೆಬ್ರವರಿ 18: ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಇಷ್ಟು ದಿನ ಆ ಎಲ್ಲಾ ಸ್ಕ್ಯಾನಿಂಗ್ ಸೇವೆಗಳು (Scanning services) ಬಡ ರೋಗಿಗಳಿಗೆ ಉಚಿತವಾಗಿ ಸಿಗುತ್ತಿತ್ತು. ಆದರೆ ಸರ್ಕಾರದಿಂದ ಕೊಡಬೇಕಿದ್ದ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಆ ಎಲ್ಲಾ ಸ್ಕ್ಯಾನಿಂಗ್ ಸೇವೆಗಳನ್ನು ಸ್ಥಗಿತಗೊಳಸಲಾಗಿದೆ. ಪರಿಣಾಮ ರೋಗಿಗಳು ಹಾಗೂ ಅವರ ಸಂಬಂಧಿಕರು ಅಕ್ರೋಶ ವ್ಯಕ್ತಪಡಿಸಿದದ್ದು, ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಗೊಂದಲದ ವಾತಾರವರಣ ನಿರ್ಮಾಣವಾಗಿತ್ತು.
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಇಷ್ಟು ದಿನ ಸಿಟಿ ಹಾಗೂ ಎಂ.ಆರ್.ಐ ಸ್ಕ್ಯಾನಿಂಗ್ಯನ್ನ ಉಚಿತವಾಗಿ ಮಾಡಲಾಗುತ್ತಿತ್ತು. ಆದರೆ ಇಂದು ಏಕಾಏಕಿ ಸ್ಕ್ಯಾನಿಂಗ್ ಘಟಕದ ಸಿಬ್ಬಂದಿ ಹಣ ಕೊಟ್ಟರೆ ಮಾತ್ರ ಸ್ಕ್ಯಾನಿಂಗ್ ಮಾಡಲಾಗುತ್ತದೆ, ಉಚಿತ ಸ್ಕ್ಯಾನಿಂಗ್ ಇಲ್ಲಾ ಎಂದಿದ್ದಾರೆ. ಇದರಿಂದ ರೋಗಿಗಳು ಹಾಗೂ ಅವರ ಸಂಬಂಧಿಕರು ತಮ್ಮ ಆಕ್ರೊಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಅವ್ಯವಸ್ಥೆ ಆಗರವಾದ ಗದಗ ಜಿಮ್ಸ್ ಆಸ್ಪತ್ರೆ: ಫ್ಯಾನ್, ಎಸಿ ಇಲ್ಲದೆ ಹಸುಗೂಸು, ಬಾಣಂತಿಯರು ನರಳಾಟ
ನಾವೆಲ್ಲಾ ಬಡವರು ಅಷ್ಟೊಂದು ಹಣ ಇಲ್ಲಾ ಅಂತಲೇ ನಾವೆಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದಿರುವುದು. ಇಷ್ಟು ದಿನ ಉಚಿತವಾಗಿ ಮಾಡುತ್ತಿದ್ದ ಸ್ಕ್ಯಾನಿಂಗ್ಗೆ ಇವಾಗ ಏಕೆ ಹಣ ಕೊಡಬೇಕು, ನಮ್ಮ ಬಳಿ ಹಣವಿಲ್ಲ ಎಂದು ಆಕ್ರೊಶ ಹೊರಹಾಕಿದ್ದಾರೆ. ಈ ವೇಳೆ ಸ್ಕ್ಯಾನಿಂಗ್ ಘಟಕದ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಜಿಲ್ಲಾಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾಸ್ಪತ್ರೆಗೆ ಸ್ಕ್ಯಾನಿಂಗ್ಗಾಗಿ ದೂರುದ ಊರುಗಳಿಂದ ಬಂದಿದ್ದ ಬಡರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಸರ್ಕಾರ ಕೂಡಲೇ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಹಣ ಬಾಕಿ ಉಳಿಸಿಕೊಂಡರೆ ನಾವು ಬದುಕುವುದು ಹೇಗೆ
ಕೋಲಾರ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಹಾಗೂ ಸಿಟಿ ಘಟಕವಷ್ಟೇ ಅಲ್ಲದೆ ಇಲ್ಲಿನ ಹೊರಗುತ್ತಿಗೆ ಸಿಬ್ಬಂದಿ ಕೂಡ ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲವೆಂದು ಆಸ್ಪತ್ರೆಯ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಹಣಕ್ಕಾಗಿಯೇ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಹೀಗೆ ಹಣ ಬಾಕಿ ಉಳಿಸಿಕೊಂಡರೆ ನಾವು ಬದುಕುವುದು ಹೇಗೆ ಎಂದು ಆಸ್ಪತ್ರೆ ಎದುರು ಕಣ್ಣೀರಿಡುತ್ತಿದ್ದಾರೆ. ಈಬೆನ್ನಲ್ಲೇ ಸ್ಕ್ಯಾನಿಂಗ್ ಘಟಕ ಕೂಡ ಸ್ಥಗಿತವಾಗಿದೆ.
ಇನ್ನು ಇದಕ್ಕೆ ಕಾರಣ ನೋಡುವುದಾದರೆ ಸರ್ಕಾರ ಕ್ರಸ್ನಾ ಡಯಾಗ್ನೋಸ್ಟಿಕ್ ಕಂಪನಿಯವರಿಗೆ ಸ್ಕ್ಯಾನಿಂಗ್ ಘಟಕವನ್ನ ಹೊರಗುತ್ತಿಗೆ ನೀಡಿದೆ. ಹಾಗಾಗಿ ಕಳೆದ ಹಲವು ವರ್ಷಗಳಿಂದ ಇದೇ ಕ್ರಸ್ನಾ ಕಂಪನಿಯವರೇ ಸ್ಕ್ಯಾನಿಂಗ್ ಘಟಕವನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಸರ್ಕಾರ ಕಳೆದ ಮೂರು-ನಾಲ್ಕು ವರ್ಷಗಳಿಂದ ಕ್ರಸ್ನಾ ಕಂಪನಿಗೆ ನೀಡಬೇಕಿದ್ದ ಹಣವನ್ನು ನೀಡದೆ ಕೋಲಾರ ಜಿಲ್ಲಾಸ್ಪತ್ರೆಯೊಂದರಲ್ಲೇ ಸುಮಾರು 140 ಕೋಟಿ ರೂ ಅಷ್ಟು ಹಣ ಬಾಕಿ ಉಳಿಸಿಕೊಂಡಿದ್ದು, ಸರ್ಕಾರಕ್ಕೆ ಈವರೆಗೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಕ್ರಸ್ನಾ ಡಯಾಗ್ನೋಸ್ಟಿಕ್ ಕಂಪನಿಯವರು ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.
ಸರ್ಕಾರ ಬಾಕಿ ಹಣ ನೀಡಿದರೆ ಸ್ಕ್ಯಾನಿಂಗ್ ಎಂದ ರಾಹುಲ್
ಒಂದು ವೇಳೆ ಹಣ ಕೊಟ್ಟರೆ ಸ್ಕ್ಯಾನಿಂಗ್ ಮಾಡಿ ಎಂದು ಇಲ್ಲಿನ ಸಿಬ್ಬಂದಿಗೆ ತಿಳಿಸಿರುವ ಹಿನ್ನೆಲೆ ಸ್ಕ್ಯಾನಿಂಗ್ ಸೇವೆಗಳನ್ನು ಸ್ಥಗಿತಗೊಳಿಸಿ, ಹಣ ಕೊಟ್ಟವರಿಗೆ ಸ್ಕ್ಯಾನಿಂಗ್ ಮಾಡುವುದಾಗಿ ತಿಳಿಸಿದ್ದಾರೆ. ಕೂಡಲೇ ಸರ್ಕಾರ ನಮ್ಮ ಬಾಕಿ ಹಣ ನೀಡಿದರೆ ನಾವು ಸ್ಕ್ಯಾನಿಂಗ್ ಸೇವೆಗಳನ್ನು ಎಂದಿನಂತೆ ಮುಂದುವರೆಸುತ್ತೇವೆ ಅನ್ನೋದು ಕ್ರಸ್ನಾ ಸಂಸ್ಥೆಯ ಮುಖ್ಯಸ್ಥ ರಾಹುಲ್ ಮಾತು.
ಇದನ್ನೂ ಓದಿ: ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು
ಒಟ್ಟಾರೆ ಸರ್ಕಾರದ ಬಳಿ ಹಣ ಇಲ್ಲವೋ ಅಥವಾ ಸರ್ಕಾರದ ನಿರ್ಲಕ್ಷವೋ ಗೊತ್ತಿಲ್ಲ ಸರ್ಕಾರ ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಸೇವೆಗಳನ್ನು ಹೊರಗುತ್ತಿಗೆಯವರಿಗೆ ಕೊಟ್ಟು ಅವರಿಗೆ ನೀಡಬೇಕಾದ ಹಣ ನೀಡದೆ ಬಾಕಿ ಉಳಿಸಿಕೊಂಡಿರುವ ಪರಿಣಾಮ ಇಂದು ಕೋಲಾರ ಜಿಲ್ಲಾಸ್ಪತ್ರೆ ಗೊಂದಲದ ಗೂಡಾಗಿ ಕಂಡುಬಂದಿದ್ದಂತು ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
