ಸರ್ಕಾರಿ ಕೆಲಸದ ಆಮಿಷ ಒಡ್ಡಿ ಬೆಂಗಳೂರಿನ ವ್ಯಕ್ತಿಗೆ 26 ಲಕ್ಷ ರೂ. ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್! – Kannada News | Bengaluru Man Promised Govt Job Duped of Rs 26 Lakh; 4 Booked

ಬೆಂಗಳೂರು, ಜುಲೈ 25: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆ ಕೊಡಿಸುವುದಾಗಿ ನಂಬಿಸಿ ಖಾಸಗಿ ಕಂಪನಿಯ ಹಿರಿಯ ವ್ಯವಸ್ಥಾಪಕರೊಬ್ಬರಿಗೆ 26 ಲಕ್ಷ ರೂಪಾಯಿ ವಂಚಿಸಿರುವ ಜಾಲವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್‌ನ ಖಾಸಗಿ ಗೋಲ್ಡ್ ಫರ್ಮ್‌ನಲ್ಲಿ ಕೆಲಸ ಮಾಡುತ್ತಿರುವ ಜಿ.ಕೆ. ರಘುನಂದನ್ (36) ಎಂಬುವರೇ ಹಣ ಕಳೆದುಕೊಂಡ ಸಂತ್ರಸ್ತ. ಈ ಸಂಬಂಧ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಂತೋಷ್ ಹೊಸಮನಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

50 ಲಕ್ಷಕ್ಕೆ ಡೀಲ್, 26 ಲಕ್ಷ ರೂ. ಅಡ್ವಾನ್ಸ್!

ಸಂತ್ರಸ್ತ ರಘುನಂದನ್ ಅವರಿಗೆ 2024 ರ ಡಿಸೆಂಬರ್‌ನಲ್ಲಿ ಸಂತೋಷ್ ಹೊಸಮನಿ ಎಂಬಾತನ ಪರಿಚಯವಾಗಿತ್ತು. ತಾನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ (DPAR) ಕೆಲಸ ಮಾಡುತ್ತಿದ್ದು, ಕೆಪಿಎಸ್‌ಸಿ (KPSC) ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕವಿದೆ ಎಂದು ಸಂತೋಷ್ ನಂಬಿಸಿದ್ದ. ಪಿಡಿಒ ಹುದ್ದೆ ಕೊಡಿಸಲು 50 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಆರೋಪಿ, ಹಂತ ಹಂತವಾಗಿ ಒಟ್ಟು 26 ಲಕ್ಷ ರೂಪಾಯಿ ನಗದನ್ನು ಪಡೆದುಕೊಂಡಿದ್ದ.

ಕೆಪಿಎಸ್‌ಸಿ ಕಚೇರಿ ಲ್ಯಾಂಡ್‌ಲೈನ್‌ ಹೆಸರಿನಲ್ಲಿ ನಕಲಿ ಕರೆ!

ಹಣ ನೀಡಿದ ಮೇಲೂ ನೇಮಕಾತಿ ಆದೇಶ ಪತ್ರ ಬಾರದೇ ಇದ್ದಾಗ ರಘುನಂದನ್ ಆರೋಪಿಯನ್ನು ಪ್ರಶ್ನಿಸಲು ಆರಂಭಿಸಿದ್ದರು. ಈ ವೇಳೆ ಸಂಶಯ ಬಾರದಂತೆ ತಡೆಯಲು, ಕೆಪಿಎಸ್‌ಸಿ ಕಚೇರಿಯ ಲ್ಯಾಂಡ್‌ಲೈನ್ ಸಂಖ್ಯೆಗಳಿಂದ ‘ರಾವ್’ ಎಂಬ ವ್ಯಕ್ತಿ ರಘುನಂದನ್ ಅವರಿಗೆ ಕರೆ ಮಾಡಿ, “ನಿಮಗೆ ಪಿಡಿಒ ಕೆಲಸ ಖಚಿತವಾಗಿದೆ” ಎಂದು ಹಲವು ಬಾರಿ ಭರವಸೆ ನೀಡಿದ್ದ. ಆದರೆ, ದಿನಗಳು ಕಳೆದರೂ ನೇಮಕಾತಿ ಆದೇಶ ಸಿಗದೆ, ಆರೋಪಿ ಸಂತೋಷ್ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದಾಗ ತಾನು ವಂಚನೆಗೆ ಒಳಗಾಗಿರುವುದು ರಘುನಂದನ್‌ಗೆ ಅರಿವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು ಸಂತೋಷ್ ಹೊಸಮನಿ, ರಾವ್, ಮಹೇಶ್ ಕುಮಾರ್ ಮತ್ತು ಬಸವರಾಜ್ ಎಂಬ ನಾಲ್ವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *