ಕೋಲ್ಕತ್ತಾ, ಜುಲೈ 30: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಮಾಜಿ ಸರ್ಕಾರಿ ಬಸ್ ಚಾಲಕ ಮಿನಾರ್ ಮಂಡಲ್ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಬೃಹತ್ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಅಧಿಕಾರಿಗಳು 28 ಕೋಟಿ ರೂಪಾಯಿ ನಗದು ಮತ್ತು 21 ಕೋಟಿ ರೂಪಾಯಿ ಮೌಲ್ಯದ 15 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ನಗದು ಹಣ ಎಣಿಸಲು ಬಳಸಿದ ಐದು ಯಂತ್ರಗಳು ಕೆಟ್ಟುಹೋದವು ಎಂದು ವರದಿಯಾಗಿದೆ. ಈ ಹಣವನ್ನು 33 ಬ್ಯಾಗ್ಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಈ ದಾಳಿ ಮತ್ತು ಎಣಿಕೆ ಪ್ರಕ್ರಿಯೆ ಕಳೆದ ಮಧ್ಯರಾತ್ರಿಯಿಂದ ಶುರುವಾಗಿತ್ತು. ಆರಂಭಿಕವಾಗಿ 5.5 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ತನಿಖೆ ಮುಂದುವರೆದಂತೆ ಸಂಪೂರ್ಣ 28 ಕೋಟಿ ರೂಪಾಯಿ ನಗದು ದೊರೆತಿದೆ ಎನ್ನಲಾಗಿದೆ. ಬಸ್ ಚಾಲಕನಾಗಿದ್ದ ಮಿನಾರ್ ಮಂಡಲ್ ನಂತರ ಕಲ್ಲು ಕ್ವಾರಿ ವ್ಯವಹಾರಿಯಾಗಿ ಬದಲಾಗಿದ್ದು, ಈ ಅಕ್ರಮ ಸಂಪತ್ತು ಕಲ್ಲು ಕ್ವಾರಿ ಮಾಲೀಕ ಟುಲು ಮಂಡಲ್ ಅವರಿಗೆ ಸೇರಿದ್ದಾಗಿರುವುದಾಗಿ ಮಿನಾರ್ ಮಂಡಲ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಟುಲು ಮಂಡಲ್ ಅವರು ಟಿಎಂಸಿ ನಾಯಕ ಅನಬ್ರತಾ ಮಂಡಲ್ ಅವರ ಆಪ್ತರಾಗಿದ್ದಾರೆ ಎಂದು ಹೇಳಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
