ಚೆನ್ನೈ, ಮೇ 7: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 107 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಯ ಮ್ಯಾಜಿಕ್ ನಂಬರ್ ತಲುಪಲು ತೀವ್ರ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಬೇಕು. 118 ಶಾಸಕರ ಪಟ್ಟಿ ನೀಡುವಂತೆ ವಿಜಯ್ ರಾಜ್ಯಪಾಲರು ಸೂಚಿಸಿದ್ದಾರೆ. ಟಿವಿಕೆ ಬಳಿ ಪ್ರಸ್ತುತ 112 ಶಾಸಕರ ಬೆಂಬಲವಿದೆ (ಟಿವಿಕೆಯ 107 + ಕಾಂಗ್ರೆಸ್ನ 5 ಶಾಸಕರು). ಇನ್ನು ಕೇವಲ 6 ಶಾಸಕರ ಬೆಂಬಲ ಸಿಕ್ಕರೆ ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತ.
ಏತನ್ಮಧ್ಯೆ ಎಐಎಡಿಎಂಕೆಯ (AIADMK) ಸಿ.ವಿ. ಷಣ್ಮುಗಂ ಬಣದ ಶಾಸಕರು ಟಿವಿಕೆಗೆ ಬೆಂಬಲ ನೀಡುವಂತೆ ಪಳನಿಸ್ವಾಮಿಗೆ ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ಬೆಂಬಲ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಪುದುಚೇರಿಯ ರೆಸಾರ್ಟ್ಗೆ ಎಐಎಡಿಎಂಕೆಯ 28 ಶಾಸಕರನ್ನು ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಪಳನಿಸ್ವಾಮಿ ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅತ್ತ ಡಿಎಂಕೆ ಶಾಸಕರು ಮೇ 10ರವರೆಗೆ ಚೆನ್ನೈ ಬಿಟ್ಟು ಹೋಗದಂತೆ ನಿರ್ಗಮಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಜಯ್ ಸರ್ಕಾರ ರಚನೆ ಮಾಡಲಿ, ನಾವು ಆರು ತಿಂಗಳವರೆಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಸ್ಟಾಲಿನ್ ಗುರುವಾರ ಅಚ್ಚರಿಯ ಹೇಳಿಕೆ ನೀಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
