ಸಲ್ಮಾನ್ ಖಾನ್ ವಿರುದ್ಧ ಸಿನಿಮಾ, ಪ್ರಾಜೆಕ್ಟ್​​ನಿಂದ ಹೊರನಡೆದ ನಟ – Kannada News | Actor Sonu Mishra out from Kaala Hiran movie which is about Salman Khan

ಸಲ್ಮಾನ್ ಖಾನ್ (Salman Khan) ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಜೊತೆಗೆ ವಿರೋಧಿಸುವವರೂ ಸಹ ಇದ್ದಾರೆ. ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಒಂದು ದೊಡ್ಡ ತಂಡವೇ ಪ್ರಯತ್ನಿಸುತ್ತಿದೆ. ಇನ್ನು ಕೆಲವರು ಸಲ್ಮಾನ್ ಖಾನ್ ಅವರ ವಿರುದ್ಧ ಪೋಸ್ಟ್​ಗಳನ್ನು ಹಾಕುತ್ತಾ, ಅವರ ಬಗ್ಗೆ ಸಂದರ್ಶನಗಳಲ್ಲಿ ಋಣಾತ್ಮಕವಾಗಿ ಮಾತನಾಡುತ್ತಾ ಅವರ ವ್ಯಕ್ತಿಕತ್ವವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬರು, ಸಲ್ಮಾನ್ ಖಾನ್ ಅವರ ವಿವಾದಗಳಲ್ಲಿ ಒಂದಾಗಿರುವ ಕೃಷ್ಣ ಮೃಗ ಭೇಟೆಯ ವಿಷಯವಾಗಿ ಸಿನಿಮಾ ಮಾಡಲು ಮುಂದಾಗಿದ್ದರು. ಸಿನಿಮಾಕ್ಕೆ ‘ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ’ ಎಂದು ಹೆಸರಿಡಲಾಗಿತ್ತು. ಆದರೆ ಇದೀಗ ಸಿನಿಮಾದ ನಟರೊಬ್ಬರು ಸಿನಿಮಾದಿಂದ ಹೊರ ಬಂದಿದ್ದಾರೆ.

‘ಕಾಲಾ ಹಿರನ್’ ಸಿನಿಮಾನಲ್ಲಿ ಸೋನು ಮಿಶ್ರಾ ಮುಖ್ಯ ಪಾತ್ರದಲ್ಲಿ ನಟಿಸುವವರಿದ್ದರು. ಅವರ ಪೋಸ್ಟರ್​​ಗಳು ಸಹ ಬಿಡುಗಡೆ ಆಗಿದ್ದವು. ಆದರೆ ಇದೀಗ ಸೋನು ಮಿಶ್ರಾ, ಆ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಟ, ‘ಆರಂಭದಲ್ಲಿ ಈ ಯೋಜನೆಯು ಸಲ್ಮಾನ್ ಖಾನ್ ಅವರ ಪರವಾದ ನಿರೂಪಣೆಯನ್ನು ಹೊಂದಿರುತ್ತದೆ ಎಂದು ತಾವು ನಂಬಿದ್ದಾಗಿ ತಿಳಿಸಿದ್ದಾರೆ. ಆದರೆ ಚಿತ್ರವು ಸಾಗುತ್ತಿರುವ ದಿಕ್ಕನ್ನು ಅರಿತಾಗ ಅವರ ಅಭಿಪ್ರಾಯ ಬದಲಾಯಿತು. ಸೋನು ಮಿಶ್ರಾ, ‘ನಾನು ಸಲ್ಮಾನ್ ಖಾನ್ ಅವರ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ, ಈ ಚಿತ್ರವನ್ನು ಒಬ್ಬ ಸೂಪರ್‌ಸ್ಟಾರ್‌ನ ಹೆಸರನ್ನು ಕೆಡಿಸಲು ಮತ್ತು ರಾಜಸ್ಥಾನದ ಸಂಸ್ಕೃತಿಯ ಪ್ರತಿಷ್ಠೆಗೆ ಧಕ್ಕೆ ತರಲು ಮಾಡಲಾಗಿದೆ ಎಂದು ಅರಿವಾದಾಗ, ಸಿನಿಮಾದ ಭಾಗವಾಗಲು ನನ್ನ ನೈತಿಕತೆ ಒಪ್ಪಲಿಲ್ಲ. ಚಿತ್ರತಂಡದೊಂದಿಗೆ ಉಂಟಾದ ಸೃಜನಶೀಲ ಭಿನ್ನಾಭಿಪ್ರಾಯಗಳ ನಂತರ, ನಾನು ಚಿತ್ರದಿಂದ ದೂರ ಸರಿಯಲು ನಿರ್ಧರಿಸಿದೆ’ ಎಂದು ಹೇಳಿದರು.

ಸಿನಿಮಾದ ಒಪ್ಪಂದ, ಚಿತ್ರೀಕರಣದ ಸಂದರ್ಭದಲ್ಲಿ ನಿರ್ಮಾಪಕರು ತಮ್ಮೊಂದಿಗೆ ಸ್ಕ್ರಿಪ್ಟ್ ಅನ್ನು ಎಂದಿಗೂ ಹಂಚಿಕೊಂಡಿರಲಿಲ್ಲ ಎಂದು ನಟ ಆರೋಪಿಸಿದ್ದಾರೆ. ಜೊತೆಗೆ, ಬಿಷ್ಣೋಯ್ ಸಮುದಾಯದಿಂದ ಯಾವುದೇ ಬೆದರಿಕೆ ಬಂದಿಲ್ಲ. ಅದು ನನ್ನದೇ ಸಮುದಾಯ. ಸಮಾಜದ ಕಲ್ಯಾಣಕ್ಕಾಗಿ ಸಮುದಾಯವು ಮಾಡಿದ ವಿವಿಧ ಪ್ರಯತ್ನಗಳ ಮೇಲೆ ಸಿನಿಮಾಗಳನ್ನು ಮಾಡಬೇಕು ಎಂದು ನಾನು ನಂಬುತ್ತೇನೆ. ಅಂತಹ ವಿಷಯಗಳಿದ್ದರೆ ನಾನು ಸಂತೋಷದಿಂದ ಮಾಡುತ್ತಿದ್ದೆ’ ಎಂದು ಸೋನು ಹೇಳಿದ್ದಾರೆ. ಈಗ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಬಗ್ಗೆ ಉಲ್ಲೇಖಿಸಿದ ಮಿಶ್ರಾ, ವಿಷಯವನ್ನು ಈಗ ನ್ಯಾಯಾಲಯಕ್ಕೆ ಬಿಡಬೇಕು ಎಂದರು. ‘ತಡೆಗಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯು ಜುಲೈ 1 ರಂದು ನಿಗದಿಯಾಗಿದೆ. ನಾವು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು’ ಎಂದು ಅವರು ಹೇಳಿದರು.

ಇದನ್ನೂ ಓದಿ: ಬಿಗ್ ಬಜೆಟ್ ಐತಿಹಾಸಿಕ ಸಿನಿಮಾಗಾಗಿ ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್?

‘ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ’ ಚಿತ್ರದ ಚಿತ್ರೀಕರಣ, ಪ್ರಚಾರ ಮತ್ತು ಬಿಡುಗಡೆಯನ್ನು ತಡೆಯುವಂತೆ ಕೋರಿ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. 1998ರ ಕೃಷ್ಣಮೃಗ ಭೇಟೆಯ ಪ್ರಕರಣದಿಂದ ಪ್ರೇರಿತವಾಗಿದೆ ಎನ್ನಲಾದ ಈ ಚಿತ್ರವು, ಸಲ್ಮಾನ್ ಖಾನ್ ಅವರ ವ್ಯಕ್ತಿತ್ವ ಮತ್ತು ಪ್ರಚಾರದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಹಾಗೂ ಅವರ ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂದು ನಟನ ಕಾನೂನು ತಂಡ ವಾದಿಸಿದೆ.

ಈ ತಿಂಗಳ ಆರಂಭದಲ್ಲಿ, ಚಲನಚಿತ್ರ ನಿರ್ಮಾಪಕರ ಪರ ವಕೀಲರು ಸಲ್ಮಾನ್ ಖಾನ್ ಅವರ ಮನವಿಗೆ ಪ್ರತಿಕ್ರಿಯಿಸಲು ಹೆಚ್ಚಿನ ಸಮಯ ಕೋರಿದ ನಂತರ ದೆಹಲಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು. ಸಲ್ಮಾನ್ ಖಾನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ನಿರ್ಮಾಪಕರು ಸಲ್ಮಾನ್ ಅವರ ಅನುಮತಿಯಿಲ್ಲದೆ ಅವರ ಜೀವನವನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾದಿಸಿ, ತಕ್ಷಣದ ಮಧ್ಯಂತರ ರಕ್ಷಣೆಯನ್ನು ಕೋರಿದರು. ಈ ವಿಷಯವು ಈಗ ಜುಲೈ 1 ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *