ಸಾಯುವ ಮುನ್ನ ತಮಗಿದ್ದ ಬೇಸರ ಹೇಳಿಕೊಂಡಿದ್ದ ಜೋ ಸೈಮನ್ – Kannada News | Joe Simon was upset that he did not get recognition from government

ಕನ್ನಡ ಚಿತ್ರರಂಗದ (Sandalwood) ಹಿರಿಯ ನಿರ್ದೇಶಕ, ನಟ ಜೋ ಸೈಮನ್ ಇಂದು (ಫೆಬ್ರವರಿ 13) ನಿಧನ ಹೊಂದಿದ್ದಾರೆ. ಫಿಲಂ ಚೇಂಬರ್​​ನಲ್ಲಿ ಆಯೋಜಿಸಿದ್ದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದಾಗ ಹೃದಯಾಘಾತ ಉಂಟಾಗಿ ಜೋ ಸೈಮನ್ ಅವರು ನಿಧನ ಹೊಂದಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಹಿರಿಯ ನಿರ್ದೇಶಕ ಆಗಿದ್ದರೂ ಸಹ ಯಾವುದೇ ಸದ್ದಿಲ್ಲದೆ, ಸುದ್ದಿಗೆ ಹಪ-ಹಪಿಸದೆ ಸರಳವಾಗಿ ಬದುಕಿದ್ದರು, ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತಿದ್ದ ಅವರಿಗೆ ಯಾವುದೇ ಕೊರಗು ಇರಲಿಲ್ಲ, ಆದರೆ ಒಂದು ಸಣ್ಣ ಬೇಸರವಂತೂ ಇತ್ತು. ಆ ಬಗ್ಗೆ ಸಾಯುವ ಕೇವಲ ತಿಂಗಳ ಹಿಂದಷ್ಟೆ ಹೇಳಿಕೊಂಡಿದ್ದರು.

ಕೆಲ ವಾರಗಳ ಹಿಂದಷ್ಟೆ ಯೂಟ್ಯೂಬ್ ಚಾನೆಲ್​ ‘ಕಲಾಮಾಧ್ಯಮ’ಕ್ಕೆ ಸಂದರ್ಶನ ನೀಡಿದ್ದ ಜೋ ಸೈಮನ್, ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದರು. ಅದರಲ್ಲೂ ತಮ್ಮ ಆರೋಗ್ಯ, ತಮ್ಮ ಮನಸ್ಥಿತಿ, ತಮ್ಮ ದಿನಚರಿ ಇನ್ನಿತರೆ, ತಮ್ಮ ಸರಳತೆಗೆ ಕಾರಣ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದೇ ಸಂದರ್ಶನದಲ್ಲಿ ತಮಗಿರುವ ಸಣ್ಣ ಬೇಸರವನ್ನೂ ಸಹ ಹೊರಗೆ ಹಾಕಿದ್ದಾರೆ.

ತಮ್ಮ ಹಿರಿತನವನ್ನು, ತಾವು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡೆಗೆಯನ್ನು ಸರ್ಕಾರ ಗುರುತಿಸಲಿಲ್ಲ ಎಂಬ ಬೇಸರ ಜೋ ಸೈಮನ್ ಅವರಿಗೆ ಇದ್ದಂತಿತ್ತು. ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ಸೈಮನ್, ‘ಗೆಳೆಯರು ಪ್ರತಿ ಬಾರಿ ಹೇಳುತ್ತಾರೆ ರಾಜ್ಯೋತ್ಸವ ಪ್ರಶಸ್ತಿಗೆ ಪ್ರಯತ್ನಿಸಿ ಎಂದು. ನಮ್ಮ ಸಂಘದ ಕಡೆಯಿಂದ ಪ್ರತಿ ಬಾರಿಯೂ ನನ್ನ ಹೆಸರು ಕಳಿಸುತ್ತಾರೆ. ಸಂಸದ ತೇಜಸ್ವಿ ಸೂರ್ಯ ಸಹ ಒಮ್ಮೆ ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಿಸು ಮಾಡಿದ್ದರು. ಆದರೆ ಪ್ರತಿ ಬಾರಿ ಬೇರೆಯವರಿಗೆ ಪ್ರಶಸ್ತಿ ಬಂದಿರುತ್ತದೆ. ಕಣಗಾಲ್ ಪ್ರಶಸ್ತಿ ಪಡೆಯುವ ಅರ್ಹತೆಯೂ ನನಗೆ ಇದೆಯೆಂಬ ಭಾವನೆ ಇದೆ. ಅದಕ್ಕೂ ಸಹ ಅರ್ಜಿ ಹಾಕಿದ್ದೆ ಆದರೆ ಅದಕ್ಕೂ ಸಹ ನನ್ನನ್ನು ಪರಿಗಣಿಸಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Breaking: ಫಿಲಂ ಚೇಂಬರ್​​ನಲ್ಲೇ ಹೃದಯಾಘಾತ: ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ

ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವರು ಪ್ರಶಸ್ತಿಗೆ ಅರ್ಜಿ ಹಾಕುವುದನ್ನೇ ಬಿಟ್ಟಿದ್ದರಂತೆ. ‘ನೀವು ಪ್ರಶಸ್ತಿಗಳಿಗೆ ಅರ್ಜಿ ಹಾಕಬೇಡಿ, ಸಿಗಲಿಲ್ಲ ಎಂದು ಬೇಸರ ಆಗುವುದು ಸರಿ ಎನಿಸುವುದಿಲ್ಲ. ನಿಮ್ಮನ್ನು ಜನ ಪ್ರೀತಿಸಿದ್ದಾರೆ. ಎಲ್ಲೇ ಹೋದರು ಗುರುತಿಸುತ್ತಾರೆ, ನಿಮ್ಮೊಂದಿಗೆ ಫೊಟೊ ತೆಗೆದುಕೊಳ್ಳುತ್ತಾರೆ ನನಗೆ ಅಷ್ಟು ಸಾಕು, ಪ್ರಶಸ್ತಿಗಳು ಬೇಡ ಎಂದರಂತೆ. ಪತ್ನಿಯ ಮಾತಿನಂತೆ ಪ್ರಶಸ್ತಿಗಳಿಗೆ ಅರ್ಜಿ ಹಾಕುವುದನ್ನೇ ನಿಲ್ಲಿಸಿದ್ದರಂತೆ ಜೋ ಸೈಮನ್.

ಸರಳವಾಗಿ ಬದುಕುವುದು ತಮಗೆ ಬಹಳ ಇಷ್ಟ ಎಂದು ಹೇಳಿದ್ದ ಜೋ ಸೈಮನ್, ‘ನನ್ನ ಮನೆಯ ಎದುರು ನನ್ನ ಪರಿಚಯ ಹೇಳುವ ಬೋರ್ಡ್ ಹಾಕಿಸಿಕೊಂಡಿಲ್ಲ. ನಾನು ಯಾವುದೇ ವಿಸಿಟಿಂಗ್ ಕಾರ್ಡ್ ಸಹ ಮಾಡಿಕೊಂಡಿಲ್ಲ. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ಕೆಟ್ಟದಾದಾಗ ಬೇಸರಗೊಳ್ಳದೆ, ಒಳ್ಳೆಯದಾದಾಗ ಅತಿಯಾಗಿ ಉಬ್ಬದೆ ಸಮಚಿತ್ತದಿಂದ ಜೀವನ ನಡೆಸಿಕೊಂಡು ಹೋಗುತ್ತಿದ್ದೀನಿ’ ಎಂದಿದ್ದರು ಸೈಮನ್.

ಜೋ ಸೈಮನ್ ಅವರ ಅಂತಿಮ ದರ್ಶನವನ್ನು ನಾಳೆ (ಫೆಬ್ರವರಿ 14) ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ನಾಳೆಯೇ ಕ್ರಿಶ್ಚಿಯನ್ ವಿಧಿ-ವಿಧಾನಗಳ ಅನುಸಾರ ಅವರ ಅಂತಿಮ ಕಾರ್ಯಗಳು ನಡೆಯಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *