
ಬೆಳಗಾವಿ, (ಮಾರ್ಚ್ 23): ಅವರಿಬ್ಬರೂ ಹದಿನೈದು ವರ್ಷದ ಹಿಂದೆ ಪ್ರೀತಿಸಿ ಕುಟುಂಬಸ್ಥರ ವಿರೋಧದ ನಡುವೆಯೂ ಅಂತರ್ಜಾತಿ ಮದುವೆಯಾದವರು. ಮೂರು ಮುದ್ದಾದ ಮಕ್ಕಳು ಈ ದಂಪತಿ ಅನ್ಯೋನ್ಯತೆಗೆ ಸಾಕ್ಷಿಯಾಗಿದ್ದರು. ಆದರೀಗ ಅದೊಂದು ಕಾರಣಕ್ಕೆ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಪತಿ ಮನೆಯಿಂದ ಎಳೆತಂದು ಕಲ್ಲಿನಿಂದ ಜಜ್ಜಿ ನಡು ರಸ್ತೆಯಲ್ಲೇ ಬರ್ಬರ ಹತ್ಯೆ ಮಾಡಿದ್ದಾನೆ. ಈ ಘೋರ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ಶಿವಕ್ಕ ಹಾಗೂ ಬಸವರಾಜ 15 ವರ್ಷಗಳ ಹಿಂದೆ ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಶಿವಕ್ಕ ಮೊದಲ ಪತಿ ಅಕಾಲಿಕ ಮರಣದ ನಂತರ ತನ್ನದೇ ಗ್ರಾಮದ ಬಸವರಾಜನನ್ನ ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಕಳೆದ ಐದಾರು ವರ್ಷಗಳಿಂದ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಗಳು ಹೆಚ್ಚಾಗುತ್ತಾ ಬಂದಿದ್ದವು. ಗಲಾಟೆಗಳಿಂದ ಬೇಸತ್ತ ಶಿವಕ್ಕ, ತನ್ನಿಬ್ಬರು ಮಕ್ಕಳೊಂದಿಗೆ ನರಗುಂದದ ಮಠವೊಂದರಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಅಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾ ಮಕ್ಕಳಿಗೆ ಶಿಕ್ಷಣವನ್ನೂ ಕೊಡಿಸುತ್ತಿದ್ದಳು. ಮತ್ತೊಂದೆಡೆ, ಬಸವರಾಜ ಮೊದಲ ಮಗಳನ್ನು ತನ್ನ ತಾಯಿ ಬಳಿ ಇಟ್ಟುಕೊಂಡು ಡ್ರೈವರ್ ಕೆಲಸ ಮಾಡುತ್ತಿದ್ದ. ದೂರದ ಊರುಗಳಿಗೆ ಹೋಗ್ತಿದ್ದ ಬಸವರಾಜ, ಆಗಾಗ ತಾಯಿ ಮಗಳ ಕಡೆಗೆ ಬಂದು ಹೋಗುವುದನ್ನ ಮಾಡ್ತಿದ್ದ. ಮಗಳನ್ನ ನೋಡಿಕೊಳ್ಳುವ ವಿಚಾರಕ್ಕೆ ನಡೆದ ಗಲಾಟೆ ಬಳಿಕ ಪತ್ನಿ ಮೇಲೆ ಸಂಶಯಗೊಂಡು ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸಾರ್ವಜನಿಕವಾಗಿ ಕಲ್ಲಿಂದ ಜಜ್ಜಿ ಪತ್ನಿ ಹತ್ಯೆ ಮಾಡಿದ್ಯಾಕೆ? ಗಂಡನಿಗೆ ಅಂತಹ ದ್ವೇಷ ಏನಿತ್ತು ಎನ್ನುವುದನ್ನು ಎಸ್ಪಿ ಬಿಚ್ಚಿಟ್ಟಿದ್ದಾರೆ.