ಹನುಮಕೊಂಡ, ಜು.27: ಹೃದಯಾಘಾತದಿಂದ (Heart Attack) ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹನುಮಕೊಂಡದ ಬಿಆರ್ಎಸ್ (BRS) ಹಿರಿಯ ನಾಯಕ, ನರಸಂಪೇಟೆಯ ಮಾಜಿ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರಿಗೆ ಸತತ 9 ಬಾರಿ ಸಿಪಿಆರ್ (CPR) ನೀಡುವ ಮೂಲಕ ವೈದ್ಯೆಯೊಬ್ಬರು ಮರುಜೀವ ನೀಡಿದ್ದಾರೆ.
ಭಾನುವಾರ ಬೆಳಿಗ್ಗೆ ತೀವ್ರ ಹೃದಯಾಘಾತಕ್ಕೊಳಗಾಗಿ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿದ್ದ ಸುದರ್ಶನ್ ರೆಡ್ಡಿ ಅವರನ್ನು ರೋಹಿಣಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಆದರೆ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ. ಸಿ. ಮಮತಾ ರೆಡ್ಡಿ ತಮ್ಮ ಸತತ ಪ್ರಯತ್ನದಿಂದ, ಪಟ್ಟುಬಿಡದೆ ಸತತ 9 ಬಾರಿ CPR ನೀಡಿ ಅವರ ಹೃದಯ ಬಡಿತ ಮರಳಿ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಡಾ. ಮಮತಾ ರೆಡ್ಡಿ ಅವರು ಹೀಗೆ ಕ್ಲಿಷ್ಟಕರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿರುವುದು ಇದೇ ಮೊದಲಲ್ಲ. ಬಿಜೆಪಿ ರಾಜ್ಯ ನಾಯಕ, ವಾರಂಗಲ್ ಪಶ್ಚಿಮದ ಮಾಜಿ ಶಾಸಕ ಮಾರ್ತಿನೇನಿ ಧರ್ಮಾರಾವ್ ಅವರಿಗೂ ಹೃದಯಾಘಾತವಾಗಿ ಬಡಿತ ನಿಂತಾಗ, ಡಾ. ಮಮತಾ ರೆಡ್ಡಿ ಅವರು ಏಕಪ್ರಕಾರವಾಗಿ 11 ಬಾರಿ CPR ನೀಡಿ ಜೀವ ರಕ್ಷಿಸಿದ್ದರು. ವೈದ್ಯೆಯ ಈ ಅದ್ಭುತ ಶ್ರಮ ಮತ್ತು ಸಮಯ ಪ್ರಜ್ಞೆಗೆ ಮಾಜಿ ಸಚಿವ ಹರೀಶ್ ರಾವ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬಿ-ಖಾತಾ ಆಸ್ತಿ ಮಾಲೀಕರಿಗೆ ಜ್ಯಾಕ್ಪಾಟ್: ‘ಎ-ಖಾತಾ’ ಪರಿವರ್ತನಾ ಶುಲ್ಕ ಭಾರಿ ಕಡಿತ
ಸಿಪಿಆರ್ ಎಂಬುದು ಹೃದಯ ಬಡಿತ ಅಥವಾ ಉಸಿರಾಟ ಸಂಪೂರ್ಣ ನಿಂತುಹೋದಾಗ ಜೀವ ರಕ್ಷಿಸಲು ಮಾಡುವ ಅತ್ಯಂತ ಪ್ರಮುಖ ತುರ್ತು ಚಿಕಿತ್ಸಾ ವಿಧಾನ. ಎದೆಯ ಭಾಗದ ಮೇಲೆ ನಿರ್ದಿಷ್ಟ ವೇಗ ಮತ್ತು ಒತ್ತಡದೊಂದಿಗೆ ಕೈಗಳಿಂದ ಒತ್ತುವುದು ಹಾಗೂ ಅಗತ್ಯವಿದ್ದರೆ ಕೃತಕ ಉಸಿರಾಟ ನೀಡುವುದು. ಹೃದಯದ ಬಡಿತ ನಿಂತಿದ್ದರೂ, ಈ ಪ್ರಕ್ರಿಯೆಯಿಂದ ಮೆದುಳು ಮತ್ತು ಹೃದಯಕ್ಕೆ ಕನಿಷ್ಠ ಮಟ್ಟದ ರಕ್ತಸಂಚಾರ ಮುಂದುವರಿಯುತ್ತದೆ. ಇದರಿಂದ ಮೆದುಳಿನ ಕೋಶಗಳು ಶಾಶ್ವತವಾಗಿ ಹಾನಿಗೊಳಗಾಗುವುದು ತಪ್ಪುತ್ತದೆ ಎಂದು ಮಮತಾ ರೆಡ್ಡಿ ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 2:35 pm, Mon, 27 July 26
