ಬೆಳಗಾವಿ, (ಮೇ 14): ಶಿವಂ ಅಸೋಸಿಯೇಟ್ (Shivam Associates) ಮಾಲೀಕನ ಕಚೇರಿ ಮೇಲೆ ಬೆಳಗಾವಿ (Belagavi) ಉಪ ವಿಭಾಗಾಧಿಕಾರಿ ಶ್ರವಣ ನಾಯಕ್ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಂದಾಜು 4,500 ಕೋಟಿ ಹಣ ವಂಚನೆ ಮಾಡಿದ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಸೂಚನೆಯ ಮೇರೆಗೆ ಶಿವಾನಂದ ನೀಲಣ್ಣನವರ್ಗೆ ಸೇರಿದ 2 ಕಚೇರಿ ಮೇಲೆ ದಾಳಿ ಮಾಡಲಾಗಿದ್ದು, ಕಳೆದ 8 ಗಂಟೆಗಳಿಂದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇನ್ನು ದಾಖಲೆ ಪರಿಶೀಲನೆ ವೇಳೆ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.
ಮೂಲಗಳ ಪ್ರಕಾರ 45 ಸಾವಿರ ಜನರಿಂದ ಹಣ ಹೂಡಿಕೆ ಮಾಡಿದ್ದು, ಹಣದ ಲೆಕ್ಕಹಾಕೋಕೆ ಅಧಿಕಾರಿಗಳು ಪರದಾಡುತ್ತಿದ್ದಾರೆ. ಅಂದಾಜು 4,500 ಕೋಟಿ ಹಣ ವಂಚನೆ ಮಾಡಿದ ಶಂಕೆ ವ್ಯಕ್ತವಾಗಿದ್ದು, ಸದ್ಯ 400 ಕೋಟಿ ರೂ. ಮೌಲ್ಯದ ಬಾಂಡ್ ಪೇಪರ್ಗಳು, ಸ್ಟಾಕ್ಮಾರ್ಕೆಟ್, ರಿಯಲ್ ಎಸ್ಟೇಟ್, ರೆಸಾರ್ಟ್ಗಳಲ್ಲಿ ಹೂಡಿಕೆ ಮಾಡಿರುವುದು ಹಾಗೂ ಆನ್ಲೈನ್ನಲ್ಲಿ ಹಣದ ವ್ಯವಹಾರ ನಡೆದಿರುವ ಮಾಹಿತಿ ಸಿಕ್ಕಿದೆ. ಕರ್ನಾಟಕ ಸೇರಿ ಮಹಾರಾಷ್ಟ್ರ ಜನರಿಂದ ಹಣ ಹೂಡಿಕೆ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ 4 ಖಾತೆಗಳನ್ನು ಫ್ರೀಜ್ ಮಾಡಿ ಅಧಿಕಾರಿಗಳು ನಿಗಾವಹಿಸಿದ್ದಾರೆ. ಇನ್ನು ತಡರಾತ್ರಿ ಶಿವಾನಂದ ನೀಲಣ್ಣವರ್ ಅವರನ್ನ ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.
