ಪ್ರಧಾನಿ ನರೇಂದ್ರ ಮೋದಿImage Credit source: TV9 Network
ನವದೆಹಲಿ, ಮೇ 16: ವಿದೇಶಿ ಪ್ರವಾಸ ಕೈಗೊಳ್ಳುವವರ ಮೇಲೆ ಸರ್ಕಾರವು ಹೊಸದಾಗಿ ಸೆಸ್ ಅಥವಾ ಹೆಚ್ಚುವರಿ ತೆರಿಗೆ ವಿಧಿಸಲು ಚಿಂತನೆ ನಡೆಸುತ್ತಿದೆ ಎಂಬ ಮಾಧ್ಯಮ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಬಲವಾಗಿ ತಳ್ಳಿಹಾಕಿದ್ದಾರೆ. ಮಾಧ್ಯಮವೊಂದರ ವರದಿಗೆ ಸಾಮಾಜಿಕ ಜಾಲತಾಣ ಎಕ್ಸ್ನನಲ್ಲಿ ಖುದ್ದಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ, ಈ ಸುದ್ದಿಯಲ್ಲಿ ‘ಸಾಸಿವೆ ಕಾಳಿನಷ್ಟೂ ಸತ್ಯವಿಲ್ಲ’ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ, ಮಾಧ್ಯಮ ಸಂಸ್ಥೆಯು ವರದಿಯನ್ನು ಅಳಿಸಿಹಾಕಿದೆ.
ಮುಖ್ಯಾಂಶಗಳು
- ವಿದೇಶಿ ಪ್ರಯಾಣದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವನೆ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ವರದಿಯಾಗಿತ್ತು.
- ಈ ವರದಿ ಸಂಪೂರ್ಣ ಸುಳ್ಳು ಎಂದ ಪ್ರಧಾನಿ ಮೋದಿ.
- ಜನಜೀವನ ಸುಗಮಗೊಳಿಸಲು ಬದ್ಧ ಎಂದ ಪ್ರಧಾನಿ.
ಅಮೆರಿಕ, ಇಸ್ರೇಲ್, ಇರಾನ್ ಯುದ್ಧದಿಂದಾಗಿ ಜಾಗತಿಕವಾಗಿ ಕಚ್ಚಾತೈಲ ಹಾಗೂ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ವಿದೇಶಿ ಪ್ರವಾಸದ ಮೇಲೆ ಒಂದು ವರ್ಷದ ಅವಧಿಗೆ ವಿಶೇಷ ಸೆಸ್ ವಿಧಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿತ್ತು. ಈ ಬಗ್ಗೆ ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ವರದಿ ಸುಳ್ಳಿನಿಂದ ಕೂಡಿದೆ ಎಂದಿದ್ದಾರೆ.
ಮೋದಿ ಎಕ್ಸ್ ಸಂದೇಶದಲ್ಲೇನಿದೆ?
‘ವರದಿಯಲ್ಲಿ ಸಾಸಿವೆ ಕಾಳಿನಷ್ಟೂ ಸತ್ಯವಿಲ್ಲ. ವಿದೇಶಿ ಪ್ರಯಾಣದ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರುವ ಪ್ರಶ್ನೆಯೇ ಇಲ್ಲ. ದೇಶದ ಜನರ ಸುಲಭ ಜೀವನ ಸುಲಭಗೊಳಿಸುವುದು ಮತ್ತು ಸುಗಮ ವ್ಯವಹಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಮೋದಿ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಪ್ರಧಾನಿ ಅವರಿಂದ ಖಡಕ್ ಪ್ರತಿಕ್ರಿಯೆ ಹೊರಬೀಳುತ್ತಿದ್ದಂತೆಯೇ ವರದಿ ಅಳಿಸಿಹಾಕಿದ ಮಾಧ್ಯಮ ಸಂಸ್ಥೆಯು ತಪ್ಪು ವರದಿಗೆ ವಿಷಾದ ವ್ಯಕ್ತಪಡಿಸಿದೆ.
ಮೋದಿ ಎಕ್ಸ್ ಸಂದೇಶ
This is totally false.
Not an iota of truth in this.
There is no question of putting such restrictions on foreign travel.
We remain committed to improving ‘Ease of Doing Business’ and ‘Ease of Living’ for our people. https://t.co/9lxjbxz0nV
— Narendra Modi (@narendramodi) May 15, 2026
ಇತ್ತೀಚೆಗಷ್ಟೇ ಹೈದರಾಬಾದ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಯುದ್ಧದ ಸಂದರ್ಭದಲ್ಲಿ ಇಂಧನ ಉಳಿತಾಯ ಮತ್ತು ವಿದೇಶಿ ವಿನಿಮಯ ಮೀಸಲು ರಕ್ಷಿಸಲು ಸಾರ್ವಜನಿಕ ಸಾರಿಗೆ ಬಳಸಿ, ಅನಗತ್ಯ ವಿದೇಶಿ ಪ್ರವಾಸ ಹಾಗೂ ಚಿನ್ನದ ಖರೀದಿಯಿಂದ ದೂರವಿರಿ ಎಂದು ದೇಶದ ಜನತೆಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್ಗೆ 3 ರೂಪಾಯಿಯಷ್ಟು ದುಬಾರಿಯಾಗಿದ್ದು, ತೈಲ ಕಂಪನಿಗಳ ನಷ್ಟದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಮೋದಿ ಕರೆಗೆ ಓಗೊಟ್ಟ ವಿವಿಧ ರಾಜ್ಯಗಳ ನಾಯಕರು; ಯೋಗಿಯಿಂದ ಹಿಡಿದು ರೇಖಾವರೆಗೆ ಯಾರಿಂದೇನು ಕ್ರಮ?
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
