ಚಾಮರಾಜನಗರ, ಫೆಬ್ರವರಿ 27: ಮಾದಪ್ಪನ ಭಕ್ತರು ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಹಬ್ಬ, ಹರಿದಿನ ಸೇರಿದಂತೆ ಅಮವಾಸ್ಯೆ ಬಂದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Betta) ಕಾಲಿಡಲು ಸ್ಥಳ ಇರುವುದಿಲ್ಲ. ತಂಗುವುದಕ್ಕೂ ಸ್ಥಳವಿರಲ್ಲ. ಈ ಸಮಸ್ಯೆ ಬಗೆ ಹರಿಸುವುದಕ್ಕೆ ಪ್ರಾಧಿಕಾರ ಮುಂದಾಗಿದೆ. 376 ಕೊಠಡಿಯ ವಜ್ರ ಮಲೆ ಕಟ್ಟಡ ಉದ್ಘಾಟಿಸಲಾಗಿದೆ. ಆದರೂ ಪ್ರಯೋಜನಕ್ಕೆ ಬಾರದ ರೀತಿಯಂತಾಗಿದೆ. ಪ್ರಾಧಿಕಾರದ ವಿಳಂಬ ನಡೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಏಳು ಎಪ್ಪತ್ತೇಳು ಮಲೆಯ ಒಡೆಯ ಮಲೆ ಮಾದಪ್ಪನಿಗೆ ಭಕ್ತ ವೃಂದ ಅಪಾರ. ರಾಜ್ಯ ಅಷ್ಟೇ ಅಲ್ಲದೆ ಹೊರ ರಾಜ್ಯದಿಂದಲೂ ಮಾದಪ್ಪನ ದರ್ಶನ ಪಡೆಯಲು ಕೋಟ್ಯಂತರ ಸಂಖ್ಯೆಯಲ್ಲಿ ಬರುತ್ತಾರೆ. ಹೀಗೆ ಬರುವ ಭಕ್ತ ವೃಂದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದು ಪ್ರಾಧಿಕಾರದ ಆದ್ಯ ಕರ್ತವ್ಯ. ಹಾಗಾಗಿ ದೂರದ ಊರಿನಿಂದ ಬರುವ ಭಕ್ತಾದಿಗಳು ವಿಶ್ರಮಿಸಲು ಕೊಠಡಿಗಳ ಕೊರತೆ ಇರುವ ಕಾರಣ 5 ಮಹಡಿಯಲ್ಲಿ 376 ಕೊಠಡಿಗಳು ಉಳ್ಳ ವಜ್ರ ಭವನ ನಿರ್ಮಾಣ ಮಾಡಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ದಿನ ಸ್ವತಃ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು. ಆದರೂ ಇವರೆಗೆ ಭಕ್ತರ ವಾಸ್ತವ್ಯಕ್ಕೆ ನೀಡದೆ ಇರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಮಲೆ ಮಹದೇಶ್ವರನಿಗೆ ಮಹಾಮೋಸ: ಸಚಿವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗುತ್ತಿಗೆದಾರರು
ಇನ್ನು ಈ ನೂತನ ವಜ್ರಮಲೆ ಭವನದಲ್ಲಿ ಬರೋಬ್ಬರಿ 8 ವಿವಿಐಪಿ ಕೊಠಡಿಗಳಿದ್ದು, ಕೇವಲ ಈ ಕೊಠಡಿಗಳಿಗೆ ಮಾತ್ರ ಎಸಿ ಸೇರಿದಂತೆ ಮಂಚ, ಸೋಫಾ ಹಾಗೂ ಎಲ್ಲಾ ರೀತಿಯ ಫರ್ನಿಚರ್ಗಳನ್ನ ಅಳವಡಿಸಲಾಗುತ್ತಿದೆ. ಇನ್ನುಳಿದ ಸಾಮಾನ್ಯ ಕೊಠಡಿಗಳಿಗೆ ಇನ್ನು ಪೀಠೋಪಕರಣ ಅಳವಡಿಕೆ ಮಾಡುವ ಕೆಲಸ ಮಾಡಲಾಗುತ್ತಿದೆ.
ಇತ್ತೀಚೆಗೆ ಸ್ವತಃ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್ ಮಂಜುನಾಥ್ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದು, 11 ಕೋಟಿ ರೂ ವೆಚ್ಛದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಪೀಠೋಪಕರಣದಲ್ಲಿ ತೇಗ ಮರವನ್ನ ಬಳಸದೆ ಬಿಳಿ ಮರ ಬಳಸಿದ್ದನ್ನ ಕಂಡು ಸ್ವತಃ ಸಚಿವ ಕೆ ವೆಂಕಟೇಶ್ ಕೆಂಡಾಮಂಡಲರಾದರು. ಕಳಪೆ ಕಾಮಗಾರಿ ನಡೆಸದಂತೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಮನ್ ಕಿ ಬಾತ್ ಪ್ರೇರಣೆ: ಸಿರಿಧಾನ್ಯದ ಹೋಟೆಲ್ ತೆರೆದ ಚಾಮರಾಜನಗರದ ಗೃಹಿಣಿ
ಆರಂಭ ಶೂರತ್ವದಂತೆ ಆರಂಭಿಸಿ ಬಳಿಕ ಕೆಲಸ ಆದಮೇಲೆ ಯಾರಿಗೂ ಪ್ರಯೋಜನಕ್ಕೆ ಬಾರದೆ ಇರುವ ರೀತಿ ಮಾಡಿದ ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ನಡೆ ಈಗ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
