ವಿಜಯ್ (Vijay) ಸಿಎಂ ಆಗಿದ್ದಾರೆ. ವಿಜಯ್, ಸಿನಿಮಾ ಮತ್ತು ರಾಜಕೀಯ ಕ್ಷೇತ್ರ ಎರಡರಲ್ಲೂ ದೊಡ್ಡ ಯಶಸ್ಸು ಗಳಿಸಿದಂತಾಗಿದೆ. ಆದರೆ ಅವರ ಖಾಸಗಿ ಬದುಕು ಇನ್ನೂ ಚರ್ಚೆಯ ವಿಷಯವಾಗಿಯೇ ಉಳಿದಿದೆ. ವಿಜಯ್ ಅವರು ಸಿಎಂ ಆಗುವ ಮುಂಚೆಯೇ ಪತ್ನಿ ಸಂಗೀತಾ ಅವರೊಟ್ಟಿಗೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆ ಸಮಯದಲ್ಲಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಜೊತೆಗಿದ್ದ ‘ವಿಜಯ್’ ಹೆಸರನ್ನು ತೆಗೆದು ಹಾಕಿದ್ದರು. ಆ ಮೂಲಕ ಪರೋಕ್ಷ ಸಿಟ್ಟನ್ನು ತಂದೆಯ ವಿರದ್ಧ ಹೊರ ಹಾಕಿದ್ದರು. ಆದರೆ ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಜೇಸನ್, ಮೊದಲ ಬಾರಿಗೆ ತಂದೆಯ ಬಗ್ಗೆ ಮಾತನಾಡಿದ್ದಾರೆ.
ವಿಕಟನ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜೇಸನ್, ‘ನಾನು ತಂದೆ, ತಾಯಿ ಸಂಗೀತ ಮತ್ತು ಸಹೋದರಿಯೊಡನೆ ನನ್ನ ಆಯ್ಕೆ (ಸಿನಿಮಾ ನಿರ್ದೇಶನ) ಬಗ್ಗೆ ಚರ್ಚಿಸಿಯೇ ನಿರ್ದೇಶನಕ್ಕೆ ಮುಂದಾದೆ. ಎಲ್ಲರೂ ಸಹ ನನಗೆ ಬೆಂಬಲ ನೀಡಿದರು, ಹಾರೈಸಿದರು. ಒಂದು ಕುಟುಂಬವಾಗಿ ಅವರು ಬಹಳ ಪ್ರೀತಿ, ನಂಬಿಕೆಯನ್ನು ವ್ಯಕ್ತಪಡಿಸಿದರು. ನನ್ನ ಕುಟುಂಬದವರು ನನ್ನ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದಾರೆ ಎಂಬುದು ನನಗೆ ಇದರಿಂದ ಗೊತ್ತಾಯ್ತು’ ಎಂದಿದ್ದಾರೆ. ಜೇಸನ್ ಮೊದಲ ಸಿನಿಮಾ ನಿರ್ದೇಶನ ಆರಂಭಿಸಿದಾಗ ವಿಜಯ್ ಸೇತುಪತಿ ಸೇರಿ ಹಲವರಿಗೆ ಅವರಿಗೆ ಶುಭ ಹಾರೈಕೆಗಳು, ಆಶೀರ್ವಾದ ದೊರಕಿತಂತೆ. ಸಂದರ್ಶನದಲ್ಲಿ, ಸಂಜಯ್, ತಮಗೆ ವಿಜಯ್ ಅವರಿಂದ ಯಾವುದೇ ಸಹಾಯ ದೊರೆತಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’
ಜೇಸನ್ ಸಂಜಯ್ ಅವರು ತಮ್ಮ ಸಿನಿಮಾ ಜರ್ನಿಯ ಬಗ್ಗೆಯೂ ಮಾತನಾಡಿದ್ದು, ‘ನಾನು ಕೆನಡಾನಲ್ಲಿ ಸಿನಿಮಾ ಕಲಿಯುತ್ತಿದ್ದಾಗ 120 ಪುಟಗಳ ಚಿತ್ರಕತೆಯನ್ನು ಬರೆದಿದ್ದೆ. ಆದರೆ ಅದನ್ನು ಸಿನಿಮಾ ಮಾಡುತ್ತೇನೆಯೋ ಇಲ್ಲವೋ ಗೊತ್ತಿರಲಿಲ್ಲ. ಹಾಗಾಗಿ ಆದ ಅದನ್ನು 20 ನಿಮಿಷಗಳ ಶಾರ್ಟ್ ಫಿಲಂ ಮಾಡಿದೆ. ಭಾರತಕ್ಕೆ ಬಂದ ಬಳಿಕ ಮೂರು ಕತೆಗಳ ಮೇಲೆ ಕೆಲಸ ಮಾಡುತ್ತಿದ್ದೆ. ಅದರಲ್ಲಿ ಒಂದು ಐಡಿಯಾ ನನಗೆ ಹಿಡಿಸಿತು, ಕೆಲವರೊಟ್ಟಿಗೆ ಚರ್ಚೆ ಮಾಡಿದೆ. ಎಲ್ಲರಿಗೂ ಅದು ಇಷ್ಟವಾಯ್ತು. ಸೋ ಅದೇ ಐಡಿಯಾ ಮೇಲೆ ಕೆಲಸ ಮಾಡಿ, ಸಿನಿಮಾ ಮಾಡುವ ಮನಸ್ಸು ಮಾಡಿದೆ’ ಎಂದಿದ್ದಾರೆ.
‘ನನ್ನ ಅಂಕಲ್ ಸಂಜೀವ್ ಅವರ ನೆರವಿನಿಂದ ನಾನು ಕೆಲ ನಿರ್ಮಾಪಕರನ್ನು ಭೇಟಿಯಾಗಿ ಸಿನಿಮಾ ಕತೆ ಹೇಳಿದೆ. ತಮಿಳು ಕುಮಾರನ್ ಅವರಿಗೆ ಕತೆ ಇಷ್ಟವಾಯ್ತು, ಸುಭಾಸ್ಕರನ್ ಅವರಿಗೂ ಕತೆ ಇಷ್ಟವಾಯ್ತು. ಹಾಗಾಗಿ ನಾವು ‘ಸಿಗ್ಮಾ’ ಸಿನಿಮಾ ಮಾಡುವ ಮನಸ್ಸು ಮಾಡಿದೆವು. ಸಿನಿಮಾ ನಾವಂದುಕೊಂಡಂತೆ ಚೆನ್ನಾಗಿ ಮೂಡಿ ಬಂದಿದೆ’ ಎಂದಿದ್ದಾರೆ. ಸಂದೀಪ್ ಕೃಷ್ಣ ನಾಯಕನಾಗಿ ನಟಿಸಿರುವ ‘ಸಿಗ್ಮಾ’ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಖುದ್ದು ಜೇಸನ್ ಸಂಜಯ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
