ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ? – Kannada News | Mamata banerjee refuses to resign as chief minister what happens next in west bengal

ಕೊಲ್ಕತ್ತಾ, ಮೇ 5: ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿಯ ಗೆಲುವು ಅನೈತಿಕ ಎಂದು ಆರೋಪಿಸಿದ್ದಾರೆ. ಬಿಜೆಪಿ 100 ಸ್ಥಾನಗಳನ್ನು ಕದ್ದಿದೆ. ನೈತಿಕವಾಗಿ ನಾವೇ ಗೆದ್ದಿದ್ದೇವೆ. ಹೀಗಾಗಿ, ರಾಜಭವನಕ್ಕೆ ಹೋಗೋ ಮಾತೇ ಇಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿಗೆ ಹೊಸ ಶಾಕ್ ನೀಡಿದ್ದಾರೆ. ಹಾಗಾದರೆ, ಮಮತಾ ಬ್ಯಾನರ್ಜಿ ಅವರ ಈ ನಿರ್ಧಾರದಿಂದಾಗಿ ಪಶ್ಚಿಮ ಬಂಗಾಳದ (West Bengal) ರಾಜಕೀಯದಲ್ಲಿ ಏನಾಗಬಹುದು?

ಮಮತಾ ಬ್ಯಾನರ್ಜಿ ಅವರಿಗೆ ಈ ಬಾರಿಯ ಚುನಾವಣೆ ನೀಡಿರುವ ಏಟು ಅಂತಿಂಥದ್ದಲ್ಲ. 15 ವರ್ಷ ಅಧಿಕಾರದಲ್ಲಿದ್ದ ಪಕ್ಷವಾದ ಟಿಎಂಸಿ ಹೀನಾಯವಾಗಿ ಸೋತಿದೆ. ತಮ್ಮ ಭದ್ರಕೋಟೆಯಾಗಿದ್ದ ಭವಾನಿಪುರದಲ್ಲಿ ತಮ್ಮ ಸ್ಥಾನವನ್ನು ಕೂಡ ಉಳಿಸಿಕೊಳ್ಳಲು ದೀದಿಗೆ ಸಾಧ್ಯವಾಗಲಿಲ್ಲ. ತಮ್ಮ ಪಕ್ಷದ ಗೆಲುವು ಹಾಗಿರಲಿ ತಮ್ಮ ಕ್ಷೇತ್ರದಲ್ಲೇ ಸಿಎಂ ಮಮತಾ ಬ್ಯಾನರ್ಜಿ ಗೆಲ್ಲಲಾಗದೆ ಮುಖಭಂಗ ಅನುಭವಿಸಿದರು. ಮಮತಾ ಬ್ಯಾನರ್ಜಿ ಈಗ ಶಾಸಕಿಯೂ ಅಲ್ಲ, ಮುಖ್ಯಮಂತ್ರಿಯೂ ಅಲ್ಲ. ಸರ್ಕಾರದ ಪತನವಾದ ಕೂಡಲೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಮಮತಾ ಬ್ಯಾನರ್ಜಿ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ.

ಇದನ್ನೂ ಓದಿ: ನಾವು ಸೋತಿಲ್ಲ, ರಾಜೀನಾಮೆ ನೀಡೋ ಮಾತೇ ಇಲ್ಲ; ಹೊಸ ಬಾಂಬ್ ಸಿಡಿಸಿದ ಸಿಎಂ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೂ ರಾಜ್ಯಪಾಲರು ಮುಂದಿನ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಯಾರಿಗೆ ಆಹ್ವಾನ ನೀಡಬೇಕೆಂಬುದರ ನಿರ್ಧಾರ ತೆಗೆದುಕೊಳ್ಳಬಹುದು. “ಸಂವಿಧಾನದ 164ನೇ ವಿಧಿಯು ರಾಜ್ಯಪಾಲರು ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಬೇಕು ಎಂದು ಹೇಳುತ್ತದೆ. ಈ ಸಂದರ್ಭದಲ್ಲಿ, ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ನಿರ್ಗಮಿತ ಸಚಿವ ಸಂಪುಟದ ಅವಧಿ ಕೊನೆಗೊಳ್ಳುತ್ತದೆ. ಸಂಪ್ರದಾಯದ ಪ್ರಕಾರ ಅವರು ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ ನಂತರ ನಿರ್ಗಮಿತ ಮುಖ್ಯಮಂತ್ರಿಯನ್ನು ಈ ಎರಡು ಅಥವಾ ಮೂರು ದಿನಗಳವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ನೇಮಿಸಲಾಗುತ್ತದೆ. ಆದರೆ, ಮಮತಾ ಬ್ಯಾನರ್ಜಿ ರಾಜೀನಾಮೆ ನೀಡದಿದ್ದರೂ ಯಾವುದೇ ಸಮಸ್ಯೆ ಇಲ್ಲ. ರಾಜ್ಯಪಾಲರು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇರುತ್ತದೆ” ಎಂದು ಮಾಜಿ ನ್ಯಾಯಮೂರ್ತಿ ದೇಬಾಶಿಶ್ ಕರ್ಗುಪ್ತ ಹೇಳಿದ್ದಾರೆ.

17ನೇ ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 7ರಂದು ಕೊನೆಗೊಳ್ಳುತ್ತದೆ. ಇದು 2021ರಲ್ಲಿ ಪ್ರಾರಂಭವಾದ ಮಮತಾ ಬ್ಯಾನರ್ಜಿ ಅವರ 5 ವರ್ಷಗಳ ಅಧಿಕಾರಾವಧಿಯ ಅಂತ್ಯವನ್ನು ಸೂಚಿಸುತ್ತದೆ. ಕಾನೂನಿನ ಪ್ರಕಾರ ಯಾವುದೇ ಸರ್ಕಾರ 5 ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಇರಲು ಅಸಾಧ್ಯ. ಹೀಗಾಗಿ, ಮಮತಾ ಬ್ಯಾನರ್ಜಿ ರಾಜೀನಾಮೆ ನೀಡದಿದ್ದರೂ ರಾಜ್ಯಪಾಲರಿಗೆ ಆ ಸರ್ಕಾರವನ್ನು ವಜಾಗೊಳಿಸಿ, ನೂತನ ಸರ್ಕಾರ ರಚನೆಗೆ ಅನುಮತಿ ನೀಡುವ ಅಧಿಕಾರವಿದೆ. ಹೀಗಾಗಿ, ದೀದಿಯ ಈ ನಿರ್ಧಾರದಿಂದ ಬಿಜೆಪಿ ಸರ್ಕಾರ ರಚನೆಗೆ ಯಾವುದೇ ಕಾನೂನು ತೊಡಕುಗಳು ಆಗುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ನಿವಾಸದ ಹೊರಗೆ ಬಿಜೆಪಿ ಬೆಂಬಲಿಗರಿಂದ ಜೈ ಶ್ರೀ ರಾಮ್ ಘೋಷಣೆ

ಏಕೆಂದರೆ, ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಮುಂದುವರಿಸಲು, ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ. ಪಶ್ಚಿಮ ಬಂಗಾಳದ ರಾಜ್ಯ ವಿಧಾನಸಭೆಯಲ್ಲಿ 207 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದರೆ ಟಿಎಂಸಿ ಕೇವಲ 80 ಸ್ಥಾನಗಳನ್ನು ಪಡೆದಿದೆ. ಹೀಗಾಗಿ, ಟಿಎಂಸಿ ಮತ್ತೆ ಅಧಿಕಾರಕ್ಕೆ ಬರುವುದು ಅಸಾಧ್ಯವಾದ ಸಂಗತಿ.

ಈ ನಡುವೆ, ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಸರ್ಕಾರ ರಚಿಸಲಿರುವ ಬಿಜೆಪಿ ಮುಂದಿನ ಮುಖ್ಯಮಂತ್ರಿ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವರಿಗೆ ಪಶ್ಚಿಮ ಬಂಗಾಳದಲ್ಲಿ ಮೇ 9ರ ಶನಿವಾರ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನಾಚರಣೆಯಂದೇ ಪ್ರಮಾಣ ವಚನ ಸಮಾರಂಭವನ್ನು ಏರ್ಪಡಿಸಲು ನಿರ್ಧರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *