ಸಾಗರ, ಜು.15: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಸಂಪರ್ಕಿಸುವ ಹಾಗೂ ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣಗೊಂಡಿರುವ ಐತಿಹಾಸಿಕ ಸಿಗಂದೂರು ಸೇತುವೆಯು ಸಾರ್ವಜನಿಕ ಸೇವೆಗೆ ಮುಕ್ತವಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ವಿಶೇಷ ದಿನವನ್ನು ಮಲೆನಾಡಿನ ಗಡಿಭಾಗದ ಜನತೆ ಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿದ್ದ ಈ ಸುಂದರ ಕೇಬಲ್ ಸೇತುವೆಯು, ಇದೀಗ ಮೊದಲ ವರ್ಷದ ವಾರ್ಷಿಕೋತ್ಸವದ ನೆನಪಿನಲ್ಲಿ ಮೈದುಂಬಿ ಕಂಗೊಳಿಸುತ್ತಿದೆ. ಸೇತುವೆಯ ಮೊದಲ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಡೀ ಸೇತುವೆಗೆ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬಣ್ಣ ಬಣ್ಣದ ಎಲ್ಇಡಿ ದೀಪಗಳಿಂದ ಸಿಂಗಾರಗೊಂಡಿದ್ದ ಸೇತುವೆಯು ಶರಾವತಿ ನದಿಯ ಹಿನ್ನೀರಿನ ಮಧ್ಯೆ ಸ್ವರ್ಗಲೋಕದಂತೆ ಕಂಗೊಳಿಸುತ್ತಿತ್ತು.ರಾತ್ರಿಯ ಹೊತ್ತು ಕಗ್ಗತ್ತಲ ನಡುವೆ ದೀಪಾಲಂಕಾರದ ಭವ್ಯತೆಯಿಂದ ಮಿಂಚುತ್ತಿದ್ದ ಸೇತುವೆಯ ರಮಣೀಯ ದೃಶ್ಯಗಳನ್ನು ಡ್ರೋನ್ ಕ್ಯಾಮರಾ ಬಳಸಿ ಅತ್ಯಂತ ಆಕರ್ಷಕವಾಗಿ ವಿಡಿಯೋ ಮತ್ತು ಫೋಟೋಗಳ ಮೂಲಕ ಸೆರೆಹಿಡಿಯಲಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
