Headlines

‘ಸಿಟಿಲೈಟ್ಸ್‌’ ಹಾಡು ಬಿಡುಗಡೆ: ಹೊಸ ಪ್ರತಿಭೆಗೆ ದುನಿಯಾ ವಿಜಿ ಬೆಂಬಲ – Kannada News | New song released from City Lights movie directing by Duniya Vijay

ದುನಿಯಾ ವಿಜಯ್ (Duniya Vijay) ನಿರ್ದೇಶನದ ಮೂರನೇ ಸಿನಿಮಾ ‘ಸಿಟಿಲೈಟ್ಸ್‌’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿಂದೆ ‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ಮೂಲಕ ಭರ್ಜರಿ ಜಯ ಕಂಡಿರುವ ದುನಿಯಾ ವಿಜಿ, ಇದೇ ಮೊದಲ ಬಾರಿಗೆ ತಮ್ಮ ನಿರ್ದೇಶನದಲ್ಲಿ ಮತ್ತೊಬ್ಬ ನಾಯಕನಿಗೆ ಅವಕಾಶ ನೀಡಿದ್ದಾರೆ. ‘ಸಿಟಿ ಲೈಟ್ಸ್’ ಸಿನಿಮಾನಲ್ಲಿ ವಿನಯ್ ರಾಜ್​ಕುಮಾರ್ ನಾಯಕ, ದುನಿಯಾ ವಿಜಿ ಅವರ ಪುತ್ರಿಯೇ ನಾಯಕಿ. ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇದೀಗ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ‘ಬಾವ ಬಾವ’ ಎಂಬ ವಿಶಿಷ್ಟ ರ್ಯಾಪ್ ಹಾಡಿನ ಮೂಲಕ ವಿಜಯ್ ಮತ್ತೊಮ್ಮೆ ಟ್ರೆಂಡಿ ಸಾಂಗ್ ಒಂದನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.

ಚರಣ್ ರಾಜ್ ಸಂಗೀತದಲ್ಲಿ ‘ಬಾವ ಬಾವ’ ಹಾಡು ಮೂಡಿಬಂದಿದ್ದು, ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚರಣ್ ರಾಜ್ ಅವರ ಸಂಗೀತವನ್ನು ದುನಿಯಾ ವಿಜಿ ಕೊಂಡಾಡಿದರು. ದುನಿಯಾ ವಿಜಿ ಅವರು ಹೊಸ ಪ್ರತಿಭೆಗಳಿಗೆ ತಮ್ಮ ಸಿನಿಮಾನಲ್ಲಿ ಅವಕಾಶ ನೀಡುತ್ತಾ ಬಂದಿದ್ದಾರೆ. ಈಗ ಬಿಡುಗಡೆ ಆಗಿರುವ ‘ಬಾವ ಬಾವ’ ಹಾಡನ್ನು ಅಂಕಿತ್‌ ಕುಮಾರ್‌ ಬಾವ ಅವರೇ ಬರೆದು ಧ್ವನಿ ನೀಡಿದ್ದಾರೆ.

ತಮ್ಮ ಹಳೆಯ ಹಾಡುಗಳನ್ನು ನೋಡಿ ದುನಿಯಾ ವಿಜಯ್ ಅವರು ಅವಕಾಶ ನೀಡಿದ್ದಕ್ಕೆ ಹಾಡುಗಾರ ಅಂಕಿತ್ ಕುಮಾರ್ ಬಾವ ಭಾವುಕರಾದರು. ‘ನಮ್ಮ ತಂಡವನ್ನು ಕರೆಸಿ ಅವಕಾಶ ಕೊಡುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ವಿಜಯ್ ಸರ್ ನನ್ನ ಪ್ರತಿಭೆಯನ್ನು ಗುರುತಿಸಿ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ’ ಎಂದು ತಮ್ಮ ಸಂತಸ ಹಂಚಿಕೊಂಡರು ಅಂಕಿತ್ ಕುಮಾರ್.

ಇದನ್ನೂ ಓದಿ:‘ನೀರಿಗೆ ಬಾರೆ ಚನ್ನಿ’ ಹಾಡಿಗೆ ರಚಿತಾ-ದುನಿಯಾ ವಿಜಯ್ ಡ್ಯಾನ್ಸ್

ಚಿತ್ರದ ನಾಯಕ ವಿನಯ್ ರಾಜ್‌ಕುಮಾರ್ ಮಾತನಾಡಿ, ‘ನಾನು ಚರಣ್ ಸರ್ ಬಳಿ ಒಂದು ಒಳ್ಳೆ ಹಾಡು ಕೇಳಿದ್ದೆ, ಆದರೆ ಅವರು ಐದು ಅದ್ಭುತ ಹಾಡುಗಳನ್ನು ಕೊಟ್ಟಿದ್ದಾರೆ. ಈ ಚಿತ್ರದ ಜರ್ನಿ ತುಂಬಾ ಖುಷಿ ಕೊಡುತ್ತಿದೆ’ ಎಂದಿದ್ದಾರೆ. ಚಿತ್ರದಲ್ಲಿ ಹಳ್ಳಿಯಿಂದ ಬೆಂಗಳೂರಿಗೆ ಬಂದ ಯುವಕನ ಪಾತ್ರದಲ್ಲಿ ವಿನಯ್ ಮಿಂಚಲಿದ್ದಾರೆ.

ಈ ಸಿನಿಮಾ ಮೂಲಕ ದುನಿಯಾ ವಿಜಯ್ ತಮ್ಮ ಪುತ್ರಿ ಮೋನಿಷಾ ವಿಜಯ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ನಾಯಕಿ ಮೋನಿಷಾ ಮಾತನಾಡಿ, ‘ವಿನಯ್ ರಾಜ್‌ಕುಮಾರ್ ಅವರ ಜೊತೆ ಕೆಲಸ ಮಾಡಿದ್ದು ದೊಡ್ಡ ಅನುಭವ. ಅವರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ’ ಎಂದರು. ಇನ್ನು ವಿಜಯ್ ಕುಮಾರ್ ಮಾತನಾಡಿ, ‘ರ್ಯಾಪ್ ಹಾಡುಗಳು ನೋವನ್ನು ಹೇಳಿಕೊಳ್ಳುವ ಮಾಧ್ಯಮ. ಈ ಸಿನಿಮಾನಲ್ಲಿ ನೋವಿನ ಕತೆಯನ್ನು ಹೇಳೋಕೆ ಹೊರಟಿದ್ದೀನಿ, ಈ ಕಥೆಗೆ ವಿನಯ್ ಅವರೇ ಸೂಕ್ತ ಎಂದು ನನಗನ್ನಿಸಿತು, ನನಗೂ ಸಹ ವಿನಯ್ ಬಹಳ ಇಷ್ಟ’ ಎಂದರು.

ಹಳ್ಳಿಯಿಂದ ನಗರಕ್ಕೆ ವಲಸೆ ಬರುವ ಇಬ್ಬರು ಯುವಜನರು ಎದುರಿಸುವ ಸವಾಲುಗಳೇ ಚಿತ್ರದ ಹೂರಣ. ಸಿನಿಮಾಕ್ಕೆ ಶಿವಸೇನಾ ಅವರ ಛಾಯಾಗ್ರಹಣ ಇದೆ, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ದುನಿಯಾ ಟಾಕೀಸ್ ಮತ್ತು ಯಂತ್ರೋದ್ದಾರಕ ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಂ ಆರ್ಯಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *