ಬೆಂಗಳೂರು, (ಜುಲೈ 29): ಕೆಲಸದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿದ್ದರಬೆಟ್ಟದ ತಪ್ಪಲಲ್ಲಿ ಮದ್ಯ ಸಹಿತ ಪಾರ್ಟಿ ಮಾಡಿದ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ 6 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ಹಾಗೂ ಇಬ್ಬರು ಕಾರ್ಯದರ್ಶಿಗಳನ್ನು ಅಮಾನತು ಮಾಡಲಾಗಿದೆ. ಪಿಡಿಒಗಳಾದ ರವಿಶಂಕರ್, ಗಿರೀಶ್, ಹರೀಶ್, ಪ್ರಶಾಂತ್, ದಿನೇಶ್, ಚಿರಂಜೀವಿ, ಕಾರ್ಯದರ್ಶಿಗಳಾದ ಕೆಂಪರಂಗಯ್ಯ, ಗಂಗಾಧರ್ ಅಮಾನತುಗೊಂಡವರು. ಕರ್ತವ್ಯದ ವೇಳೆ ಕಚೇರಿ ಕೆಲಸ ಬಿಟ್ಟು ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸಿದ್ದರಬೆಟ್ಟದಲ್ಲಿ ಕಳೆದ ಶುಕ್ರವಾರ ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ವೈರಲ್ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ತನಿಖೆ ಆದೇಶಿಸಿದ್ದರು. ಇದೀಗ ಎಂಟು ಅಧಿಕಾರಿಗಳ ವಿರುದ್ಧ ದಿಟ್ಟ ಕ್ರಮಕೈಗೊಳ್ಳಲಾಗಿದೆ.
ಸಸ್ಪೆಂಡ್ ಆದ ಅಧಿಕಾರಿಗಳು ಕಳೆದ ಶುಕ್ರವಾರ ಕರ್ತವ್ಯದ ಸಮಯದಲ್ಲಿ ನೆಲಮಂಗಲ ತಾಲೂಕಿನ ಸಿದ್ದರಬೆಟ್ಟದ ತಪ್ಪಲಿನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅವರು 24 ಗಂಟೆಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಸದ್ಯ ಅಧಿಕಾರಿಗಳ ವರದಿ ಆಧಾರದ ಮೇರೆಗೆ 8 ಜನರನ್ನು ಅಮಾನತು ಮಾಡಿ ಸಿಇಒ ವಾಸಂತಿ ಅಮರ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಐಪಿಎಸ್ ಲೇಔಟ್ ವಿಲ್ಲಾದಲ್ಲಿ ಭರ್ಜರಿ ರೇವ್ ಪಾರ್ಟಿ: ಸಿಸಿಬಿ ದಾಳಿ, ಮೂವರ ಬಂಧನ!
ಡಾಬಸ್ ಪೇಟೆ ಪಿಡಿಒ ರವಿಶಂಕರ್, ಪಿಡಿಒ ದಿನೇಶ್, ಶಿವಗಂಗೆ ಪಿಡಿಒ ಗಿರೀಶ್, ಅಗಲಕುಪ್ಪೆ ಪಿಡಿಒ ಹರೀಶ್, ಮರಳಕುಂಟೆ ಪಿಡಿಒ, ಪ್ರಶಾಂತ್ ಸೇರಿ ಸೋಪುರ ಹೋಬಳಿ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಪಿಡಿಒಗಳು ಜು.24ರಂದು ಮೋಜು ಮಸ್ತಿ ಮಾಡಿದ್ದು, ಪಾರ್ಟಿ ವಿಡಿಯೋ ಹಲವು ಮಾಧ್ಯಮಗಳಲ್ಲಿ ವರದ ಪ್ರಸರವಾಗಿತ್ತು. ಈ ಹಿನ್ನೆಲೆಯಲ್ಲಿ ಪಾರ್ಟಿ ಮಾಡಿದ್ದ ಎಲ್ಲಾ ಅಧಿಕಾರಿಗಳಿಗೂ ಕಾರಣ ಕೇಳಿ ನೋಟಿಸ್ ನೀಡಿ, ಕರ್ತವ್ಯ ಸಮಯದಲ್ಲಿ ಒಂದು ಕಡೆ ಸೇರಿ ಪಾರ್ಟಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಲ್ಲಿ ಅಮಾನತು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಸೂಚಿಸಿದ್ದರು.
ಇದರ ಬೆನ್ನಲ್ಲೇ ಆರು ಪಿಡಿಒಗಳಿಗೆ ನೋಟಿಸ್ ನೀಡಿ್ದ ಬೆಂಗಳೂರಯ ಗ್ರಾಮಾಂತರ ಜಿಲ್ಲೆಯ ಮುಖ್ಯ ಕಾರ್ಯನಿರ್ವಹ ಅಧಿಕಾರಿ ಡಾ ವಾಸಂತಿ ಅಮರ್ ಅವರು, ಇಂದು ಈ ಎಲ್ಲಾ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ದಿಟ್ಟ ಕ್ರಮ ಇತರೆ ಅಧಿಕಾರಿಗಳಿಗೂ ಪಾಠವಾಗಿದೆ.
