ಬೆಂಗಳೂರು, ಮೇ 04: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಟ್ರೆಂಡ್ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಎಣಿಕೆ ಏಜೆಂಟ್ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ತಮ್ಮ ಎಕ್ಸ್ (X) ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಎಣಿಕೆ ಕೇಂದ್ರದಿಂದ ಯಾರೂ ಹೊರಬರಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅವರು ತಮ್ಮ ವೀಡಿಯೋದಲ್ಲಿ ನಮ್ಮ ಎಲ್ಲಾ ಮತ ಎಣಿಕೆ ಏಜೆಂಟ್ಗಳು ಮತ್ತು ಅಭ್ಯರ್ಥಿಗಳಲ್ಲಿ ನನ್ನದೊಂದು ವಿನಂತಿ, ಯಾರೂ ಎಣಿಕೆ ಕೇಂದ್ರದಿಂದ ಹೊರಬರಬೇಡಿ. ಇದು ಬಿಜೆಪಿಯ ಯೋಜನೆಯಾಗಿದೆ. ನಿನ್ನೆಯಿಂದಲೇ ನಾನು ಹೇಳುತ್ತಿದ್ದಂತೆ, ಅವರು ಮೊದಲ ಎರಡು-ಮೂರು ಸುತ್ತುಗಳಲ್ಲಿ ತಮ್ಮ ಫಲಿತಾಂಶಗಳನ್ನು ಮೊದಲು ತೋರಿಸುತ್ತಾರೆ ಮತ್ತು ನಮ್ಮದನ್ನು ಆಮೇಲೆ ತೋರಿಸುತ್ತಾರೆ. ಸುಮಾರು 100 ಕಡೆಗಳಲ್ಲಿ ಎರಡು-ಮೂರು ಸುತ್ತುಗಳ ನಂತರ ಎಣಿಕೆಯನ್ನು ನಿಲ್ಲಿಸಲಾಗಿದೆ. ಕೇಂದ್ರ ಪಡೆಗಳನ್ನು ಬಳಸಿ ತೃಣಮೂಲ ಕಾಂಗ್ರೆಸ್ ಅನ್ನು ಎಲ್ಲೆಡೆ ಹತ್ತಿಕ್ಕಲಾಗುತ್ತಿದೆ, ಕಚೇರಿಗಳನ್ನು ಧ್ವಂಸಗೊಳಿಸಲಾಗುತ್ತಿದೆ ಮತ್ತು ಬಲವಂತವಾಗಿ ವಶಪಡಿಸಿಕೊಳ್ಳಲಾಗುತ್ತಿದೆ
ಅವರು ಸಂಪೂರ್ಣ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ನಾವು ಮುನ್ನಡೆಯಲ್ಲಿದ್ದರೂ ಅದನ್ನು ವರದಿ ಮಾಡುತ್ತಿಲ್ಲ. ಚುನಾವಣಾ ಆಯೋಗವು ಕೇಂದ್ರ ಪಡೆಗಳೊಂದಿಗೆ ಸೇರಿ ತನ್ನ ಇಚ್ಛೆಯಂತೆ ಆಡುತ್ತಿದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಎದೆಗುಂದಬೇಡಿ. ಎಣಿಕೆಯ 14-18 ಸುತ್ತುಗಳು ಬಾಕಿ ಇವೆ. ಸೂರ್ಯ ಮುಳುಗಿದ ನಂತರ ನಾವು ಗೆಲ್ಲುತ್ತೇವೆ. ಹುಲಿ ಮರಿಗಳಂತೆ ಹೋರಾಡಿ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
