ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಲಕ್ಷಾಂತರ ವಂಚನೆ
ಬೆಂಗಳೂರು, ಆಗಸ್ಟ್ 07: ಸ್ಟಾಕ್ ಮಾರ್ಕೆಟ್ನಲ್ಲಿ(Stock market) ಹೂಡಿಕೆ ಮಾಡುವ ನೆಪದಲ್ಲಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಇದರ ಬೆನ್ನಲ್ಲೇ, ವಂಚನೆ ಬಗ್ಗೆ ಪ್ರಶ್ನಿಸಲು ಹೋದ ಹೂಡಿಕೆದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕನ್ನಡ ಭಾಷೆಯ ಕುರಿತು ಉದ್ಧಟತನ ಪ್ರದರ್ಶಿಸಿದ್ದ ಮಹಿಳೆಯೊಬ್ಬಳು ಕೊನೆಗೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಕನ್ನಡಿಗರ ಕ್ಷಮೆ ಕೋರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕನ್ನಡದಲ್ಲಿ ಮಾತನಾಡಿದ್ದಕ್ಕೆ ನಿಂದನೆ
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿತ್ತು. ಕಂಪನಿಯಿಂದ ವಂಚನೆಗೊಳಗಾದ ಹಲವಾರು ಹೂಡಿಕೆದಾರರು ಒಟ್ಟಾಗಿ ಸಂಸ್ಥೆಯ ಪ್ರತಿನಿಧಿಗಳನ್ನು ಪ್ರಶ್ನಿಸಲು ತೆರಳಿದ್ದರು. ಈ ವೇಳೆ ಅಲ್ಲಿಯೇ ಇದ್ದ ಪ್ರಿಯಾಂಕ ಎಂಬ ಮಹಿಳೆ ಹೂಡಿಕೆದಾರರೊಂದಿಗೆ ತೀವ್ರ ಗಲಾಟೆ ಆರಂಭಿಸಿದ್ದಾಳೆ. ಸಂತ್ರಸ್ತರು ಆಕೆಗೆ “ಕನ್ನಡದಲ್ಲಿ ಮಾತನಾಡು” ಎಂದು ಹೇಳಿದ್ದಕ್ಕೆ ಆಕೆ ತೀವ್ರವಾಗಿ ಆಕ್ರೋಶಗೊಂಡಿದ್ದಾಳೆ. ಅಲ್ಲದೆ, “ನನಗೆ ಕನ್ನಡ ಗೊತ್ತಿಲ್ಲ,ಏನ್ ಮಾಡ್ತಿರಾ ಮಾಡ್ಕೊಳಿ” ಎಂದು ಅತ್ಯಂತ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿ ಕನ್ನಡಿಗರನ್ನು ನಿಂದಿಸಿದ್ದಾಳೆ.
ಠಾಣೆ ಮುಂಭಾಗದಲ್ಲೇ ಕ್ಷಮೆಯಾಚನೆ
ಮಹಿಳೆಯ ಈ ಉದ್ಧಟತನ ಮತ್ತು ಸ್ಥಳದಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೀಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕಾನೂನು ಕ್ರಮ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ ಆರೋಪಿ ಮಹಿಳೆ ಪ್ರಿಯಾಂಕ, ಕೊನೆಗೆ ಪೀಣ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಬಹಿರಂಗವಾಗಿ ಕನ್ನಡಿಗರ ಕ್ಷಮೆಯಾಚಿಸಿದ್ದಾಳೆ. “ಮುಂದೆ ಎಂದಿಗೂ ಕನ್ನಡ ಭಾಷೆ ಹಾಗೂ ಕನ್ನಡಿಗರ ವಿಚಾರದಲ್ಲಿ ಇಂತಹ ಅವಾಚ್ಯ ಶಬ್ದಗಳನ್ನು ಬಳಸುವುದಿಲ್ಲ” ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಮತ್ತೊಂದೆಡೆ, ಸ್ಟಾಕ್ ಮಾರ್ಕೆಟ್ ಹೆಸರಿನಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ವಂಚನೆ ಹಗರಣದ ಕುರಿತು ಪೀಣ್ಯ ಠಾಣಾ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
