ಅಯೋಧ್ಯೆ, ಜುಲೈ 14: ಇತ್ತೀಚೆಗಷ್ಟೇ ರಾಮ ಮಂದಿರ(Ram Mandir)ದಲ್ಲಿ ಭಕ್ತರು ಅರ್ಪಿಸಿದ ಕೋಟ್ಯಂತರ ರೂಪಾಯಿ ದೇಣಿಗೆ ಹಣವನ್ನು ನೌಕರರೇ ವ್ಯವಸ್ಥಿತವಾಗಿ ಲೂಟಿ ಮಾಡಿದ ಘಟನೆ ಬಯಲಿಗೆ ಬಂದ ತಕ್ಷಣ ಎಚ್ಚೆತ್ತುಕೊಂಡ ರಾಮ ಜನ್ಮಭೂಮಿ ಟ್ರಸ್ಟ್ ಮಂದಿರದ ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಮುಂದಾಗಿದೆ. ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಟ್ರಸ್ಟ್ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ವಿಶೇಷ ತನಿಖಾ ತಂಡ ಕಳ್ಳತನದ ತನಿಖೆ ನಡೆಸಿ ಈಗಾಗಲೇ ಎಂಟು ಜನರನ್ನು ಜೈಲಿಗಟ್ಟಿರುವ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಆಯ್ಕೆಯಾಗುವ ಸಿಇಒ ಆರಂಭದಲ್ಲಿ 3 ವರ್ಷಗಳ ಒಪ್ಪಂದದ ಅವಧಿಗೆ ನೇಮಕಗೊಳ್ಳಲಿದ್ದು, ಇಡೀ ಮಂದಿರದ ಆಡಳಿತವನ್ನು ನೋಡಿಕೊಳ್ಳುತ್ತಾ ಟ್ರಸ್ಟ್ನ ಪ್ರಧಾನ ಕಾರ್ಯದಶರ್ಶಗೆ ವರದಿ ಒಪ್ಪಿಸಬೇಕಾಗುತ್ತದೆ.
ರಾಮನ ಭಕ್ತರಿಗಷ್ಟೇ ಚಾನ್ಸ್, ಇಲ್ಲಿದೆ ವಯಸ್ಸು, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ
ಮಂದಿರದ ಪವಿತ್ರತೆ ಮತ್ತು ಭದ್ರತೆಯನ್ನು ಕಾಯಬಲ್ಲ ಅತ್ಯಂತ ದಕ್ಷ ಅಧಿಕಾರಿಯನ್ನು ಹುಡುಕಲು ಟ್ರಸ್ಟ್ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.
ವಯಸ್ಸು ಮತ್ತು ಅನುಭವ: ಅಭ್ಯರ್ಥಿಯ ವಯಸ್ಸು 50 ರಿಂದ 70 ವರ್ಷದೊಳಗಿರಬೇಕು. ದೊಡ್ಡ ಸಾರ್ವಜನಿಕ ಸಂಸ್ಥೆ, ಬ್ಯಾಂಕ್ ಅಥವಾ ಕಂಪನಿಗಳಲ್ಲಿ ಕನಿಷ್ಠ 20 ವರ್ಷಗಳ ವ್ಯವಸ್ಥಾಪಕ ಅನುಭವ ಕಡ್ಡಾಯ. ಸಾಮಾನ್ಯ ಆಡಳಿತ, ಹಣಕಾಸು, ಕಾನೂನು, ಭದ್ರತೆ ಮತ್ತು ಐಟಿ (IT) ಕ್ಷೇತ್ರಗಳ ಜ್ಞಾನವಿರಬೇಕು.
ಮತ್ತಷ್ಟು ಓದಿ: ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು
ಧಾರ್ಮಿಕ ನಂಬಿಕೆ: ಅರ್ಜಿದಾರರು ಕಡ್ಡಾಯವಾಗಿ ಹಿಂದೂ ಧರ್ಮದ ಸಕ್ರಿಯ ಅನುಯಾಯಿ ಹಾಗೂ ಶ್ರೀರಾಮನ ಭಕ್ತರಾಗಿರಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅತ್ಯುತ್ತಮ ಪ್ರಾವೀಣ್ಯತೆ ಇರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಸಕ್ತರು ತಮ್ಮ ಪ್ರೊಫೈಲ್ ಅನ್ನು ಜುಲೈ 18, 2026 ರ ಶನಿವಾರ ಸಂಜೆ 4 ಗಂಟೆಯೊಳಗೆ searchcommittee.srjbt@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಸಂಬಳ ಮತ್ತು ಇತರೆ ಸವಲತ್ತುಗಳನ್ನು ಮುಖಾಮುಖಿ ಚರ್ಚೆಯ ಮೂಲಕ ನಿರ್ಧರಿಸಲಾಗುತ್ತದೆ.
ಎಕ್ಸ್ ಪೋಸ್ಟ್
श्री राम जन्मभूमि तीर्थक्षेत्र (न्यास) श्री राम जन्मभूमि मंदिर के मुख्य कार्यकारी अधिकारी पद के लिए योग्य जनों से आवेदन आमंत्रित करता है
आवेदन की अंतिम तिथि: शनिवार १८ जुलाई २०२६; सायं ४ बजे
Shri Ram Janmabhoomi Teerth Kshetra (Trust) invites applications from eligible… pic.twitter.com/PHa0MbT5kY
— Shri Ram Janmbhoomi Teerth Kshetra (@ShriRamTeerth) July 13, 2026
ಕಳ್ಳತನ ತಡೆಯಲು ಜೇಬಿಲ್ಲದ ಬಟ್ಟೆ ಮತ್ತು ಬ್ಯಾಂಕ್ ಬದಲಾವಣೆ
ವಿಶ್ವದ ಮೂಲೆ ಮೂಲೆಗಳಿಂದ ಬರುವ ಕೋಟ್ಯಂತರ ರಾಮಭಕ್ತರ ನಂಬಿಕೆಗೆ ದ್ರೋಹವಾಗಬಾರದು ಎಂಬುದು ಟ್ರಸ್ಟ್ನ ಮುಖ್ಯ ಉದ್ದೇಶವಾಗಿದೆ. ಕಾಣಿಕೆ ಹಣ ಎಣಿಸುವ ಸಿಬ್ಬಂದಿಗಳಿಗೆ ಇನ್ಮುಂದೆ ಜೇಬಿಲ್ಲದ ವಿಶೇಷ ಸಮವಸ್ತ್ರಗಳನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಬಿಗಿಗೊಳಿಸಲಾಗುತ್ತಿದೆ.
ಖಾಸಗಿ ಬ್ಯಾಂಕುಗಳ ಪ್ರವೇಶ: ಸದ್ಯ ಮಂದಿರದ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿರ್ವಹಿಸುತ್ತಿದೆಯಾದರೂ, ಅವರ ಭದ್ರತಾ ಲೋಪದಿಂದಲೇ ಕಳ್ಳತನ ನಡೆದಿದೆ ಎಂದು ಟ್ರಸ್ಟ್ ಆರೋಪಿಸಿದೆ. ಹೀಗಾಗಿ, ಇನ್ಮುಂದೆ ಹಣದ ಠೇವಣಿಗಾಗಿ ದೇಶದ ಪ್ರಮುಖ ಖಾಸಗಿ ವಲಯದ ಹೈಟೆಕ್ ಬ್ಯಾಂಕುಗಳ ತಂತ್ರಜ್ಞಾನ ಮತ್ತು ಸೇವೆಗಳನ್ನು ಬಳಸಿಕೊಳ್ಳಲು ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಹೊಸ ಸಿಇಒ ನೇಮಕದೊಂದಿಗೆ ರಾಮ ಮಂದಿರದ ಆಡಳಿತ ಶೈಲಿ ಸಂಪೂರ್ಣ ಕಾರ್ಪೊರೇಟ್ ಮಾದರಿಗೆ ಬದಲಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 7:53 am, Tue, 14 July 26