ಚಿಕ್ಕಮಗಳೂರಿನಲ್ಲಿ ಸುರಿದ ಮಳೆImage Credit source: tv9
ಬೆಂಗಳೂರು, ಏಪ್ರಿಲ್ 21: ಕರ್ನಾಟಕದಲ್ಲಿ ಉಷ್ಣ (Heat Wave) ಅಲೆಯ ಆಘಾತದ ನಡುವೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ (Karnataka Rains) ರೌದ್ರಾವತಾರ ತಾಳಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಮನೆಗಳು ಜಖಂಗೊಂಡಿದ್ದು, ಹಾಸನದಲ್ಲಿ ಸಿಡಿಲು ಬಡಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡೆದಿದೆ.
ಹಾಸನ: ಸಿಡಿಲಿಗೆ ಬಲಿಯಾದ ವೃದ್ಧೆ
ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹುಲಕುಂದ ಗ್ರಾಮದ ಎಸ್ಟೇಟ್ ಬಳಿ ಸಿಡಿಲು ಬಡಿದು ನೀಲಮ್ಮ ಎಂಬ ವೃದ್ಧೆ ಸಾವನ್ನಪ್ಪಿದ್ದಾರೆ. ಮಳೆ ಬರುತ್ತಿದ್ದ ಕಾರಣ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಬಿರುಗಾಳಿಗೆ ಕಾಲೇಜು ಮತ್ತು ಅಂಗಡಿಗಳ ಶೀಟ್ಗಳು ಹಾರಿ ಹೋಗಿವೆ. ಮರದ ಕೊಂಬೆಗಳು ಬಿದ್ದು ಎರಡು ಕಾರುಗಳು ಜಖಂಗೊಂಡಿವೆ.
ಮನೆಯ ಮೇಲ್ಚಾವಣಿ ಹಾರಿರುವುದು
ಚಿಕ್ಕಮಗಳೂರು: ಮರ ಬಿದ್ದು ಮನೆಗಳಿಗೆ ಹಾನಿ
ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಜಿಲ್ಲೆಯ ಗಾಳಿಗುಂಡಿಯಲ್ಲಿ ಬೃಹತ್ ಮರ ಬಿದ್ದು ಐದು ಮನೆಗಳ ಮೇಲ್ಚಾವಣಿ ಪುಡಿಪುಡಿಯಾಗಿದೆ. ಕಳಸ ಪಟ್ಟಣದಲ್ಲಿ ಲಾಡ್ಜ್ ಒಂದರ ಮೇಲ್ಭಾಗದ ತಗಡಿನ ಶೀಟ್ಗಳು ಗಾಳಿಗೆ ಹಾರಿಹೋಗಿವೆ. ಮೂಡಿಗೆರೆ ತಾಲೂಕಿನ ಅಮ್ತಿ ಗ್ರಾಮದಲ್ಲಿ ಮರ ಬಿದ್ದು ಬಾಳೂರು-ಕಳಸ ಸಂಪರ್ಕ ಕಡಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೊಪ್ಪ ಮತ್ತು ಎನ್.ಆರ್.ಪುರ ಭಾಗದಲ್ಲಿಯೂ ಆಲಿಕಲ್ಲು ಮಳೆ ಆರ್ಭಟಿಸಿದೆ.
ಹಾವೇರಿ: ಕೆರೆಯಂತಾದ ರಸ್ತೆಗಳು
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ನಗರದ ದುರ್ಗಾ ಸರ್ಕಲ್ ಬಳಿ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು.
ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ಭಾರಿ ಅವಾಂತರ, ವಿಡಿಯೋ ನೋಡಿ
ಒಟ್ಟಾರೆಯಾಗಿ, ಸುಡುವ ಬಿಸಿಲಿನ ನಡುವೆ ಬಂದ ಅಕಾಲಿಕ ಮಳೆ ತಂಪು ನೀಡುವ ಬದಲು ಆಸ್ತಿ-ಪಾಸ್ತಿ ಹಾನಿ ಮಾಡುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ