ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ: ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ – Kannada News | India Condemns Hormuz Strait Attacks at UNSC: Urges Diplomacy Amidst West Asia Conflict

ವಾಷಿಂಗ್ಟನ್, ಜುಲೈ 29: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿರುವ ಪರ್ವತನೇನಿ ಹರೀಶ್,ಈ ಪ್ರದೇಶದ ಉದ್ವಿಗ್ನತೆಯು ತೀವ್ರ ಕಳವಳಕಾರಿಯಾಗಿದ್ದು, ಎಲ್ಲಾ ಕಡೆಯವರು ತಕ್ಷಣವೇ ಸಂಯಮ ವಹಿಸಿ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳಬೇಕು ಎಂದು ಆಗ್ರಹಿಸಿದ್ದಾರೆ.

ದಾಳಿಯಲ್ಲಿ ಭಾರತೀಯ ನಾವಿಕನ ಸಾವು
ಹಾರ್ಮುಜ್ ಜಲಸಂಧಿಯಲ್ಲಿ ‘ಜಿಎಫ್‌ಎಸ್ ಗ್ಯಾಲಕ್ಸಿ’,’ಎಂಟಿ ಅಲ್ ಬಹಿಯಾ’ ಮತ್ತು ‘ಎಂಟಿ ಮೊಂಬಾಸಾ’ ಸೇರಿದಂತೆ ಹಲವು ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ದಾಳಿಗಳಲ್ಲಿ ಒಬ್ಬ ಭಾರತೀಯ ನಾವಿಕ ದುರಂತವಾಗಿ ಸಾವನ್ನಪ್ಪಿದ್ದು, ಮತ್ತೊಬ್ಬರು ಕಾಣೆಯಾಗಿದ್ದಾರೆ ಹಾಗೂ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ನಾವಿಕರನ್ನು ಗುರಿಯಾಗಿಸಿಕೊಂಡು ನಡೆಸುವ ಹಿಂಸಾಚಾರವನ್ನು ಭಾರತ ಖಂಡಿಸಿದ್ದು, ಅಡೆತಡೆಯಿಲ್ಲದ ಮತ್ತು ಸುರಕ್ಷಿತ ಹಡಗು ಸಂಚಾರವನ್ನು ತಕ್ಷಣವೇ ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿದೆ. ಪಶ್ಚಿಮ ಏಷ್ಯಾದ ಸ್ಥಿರತೆಯು ಭಾರತದ ಆರ್ಥಿಕತೆ ಹಾಗೂ ಭದ್ರತೆಗೆ ಅತ್ಯಂತ ನಿರ್ಣಾಯಕವಾಗಿದೆ ಎಂದು ರಾಯಭಾರಿ ಹರೀಶ್ ವಿವರಣೆ ನೀಡಿದ್ದಾರೆ.

ಮತ್ತಷ್ಟು ಓದಿ: ಇರಾನ್ ಜತೆ ಮಾತುಕತೆ ನಡೆಸಲು ನಮಗೆ ಆಸಕ್ತಿ ಇಲ್ಲ, ತೆರೆಮರೆಯ ಸಂಭಾಷಣೆ ತಿರಸ್ಕರಿಸಿದ ಟ್ರಂಪ್

ಗಲ್ಫ್ ದೇಶಗಳಲ್ಲಿ ಸುಮಾರು 1 ಕೋಟಿ ಭಾರತೀಯರು ವಾಸಿಸುತ್ತಿದ್ದು, ಅವರ ಸುರಕ್ಷತೆಯೇ ಭಾರತದ ಮೊದಲ ಆದ್ಯತೆಯಾಗಿದೆ. ಭಾರತವು ಈ ಪ್ರದೇಶದೊಂದಿಗೆ ವಾರ್ಷಿಕ 180 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿದ್ದು, ಗಲ್ಫ್ ದೇಶಗಳಿಂದ ವಾರ್ಷಿಕ 52 ಶತಕೋಟಿ ಡಾಲರ್​ಗೂ ಹೆಚ್ಚು ವಿದೇಶಿ ಹಣ ಭಾರತಕ್ಕೆ ಹರಿದುಬರುತ್ತದೆ.

ಇಸ್ರೇಲ್-ಅಮೆರಿಕ ಹಾಗೂ ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಜುಲೈ 11 ರಿಂದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ್ದರಿಂದ, ಪ್ರತಿದಿನ 100ಕ್ಕೂ ಹೆಚ್ಚು ಸಂಚರಿಸುತ್ತಿದ್ದ ಹಡಗುಗಳ ಸಂಖ್ಯೆ ಕೇವಲ 8 ರಿಂದ 15 ಕ್ಕೆ ಕುಸಿದಿದೆ. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆಯೂ ಗಾಜಾ ಪಟ್ಟಿಯಲ್ಲಿರುವ ಮಾನವೀಯ ಬಿಕ್ಕಟ್ಟನ್ನು ನಿರ್ಲಕ್ಷಿಸುವಂತಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಪ್ಯಾಲೆಸ್ತೀನ್ ಜನರಿಗೆ ಭಾರತ ಇದುವರೆಗೆ175 ಮಿಲಿಯನ್ ಡಾಲರ್ ಅಭಿವೃದ್ಧಿ ನೆರವು ನೀಡಿದೆ.

ಇಸ್ರೇಲ್ ಜೊತೆಗೆ ಸುರಕ್ಷಿತ ಗಡಿಗಳನ್ನು ಹೊಂದಿರುವ ‘ಸ್ವತಂತ್ರ ಮತ್ತು ಸಾರ್ವಭೌಮ ಪ್ಯಾಲೆಸ್ತೀನ್ ರಾಷ್ಟ್ರ’ ನಿರ್ಮಾಣವಾಗುವುದೇ ಈ ಸುದೀರ್ಘ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *