ಪೊಲೀಸರಿಂದ ಸ್ಥಳ ಪರಿಶೀಲನೆImage Credit source: Tv9 Kannada
ಬಾಗಲಕೋಟೆ, ಜುಲೈ 26: ಬಾರ್ ಎದುರು ನಿಲ್ಲಿಸಿದ್ದ ಕಾರೊಂದು ಸ್ಫೋಟಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ನಡೆದಿದೆ. ವೈನ್ ಶಾಪ್ ಮ್ಯಾನೇಜರ್ ಹನುಮಂತ ಸಂಗೊಂಡ ಎಂಬವರು ತಂದಿದ್ದ ಕಾರು ಸ್ಫೋಟಗೊಂಡ ತೀವ್ರತೆಗೆ ಕಾರಿನ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ವೈನ್ ಶಾಪ್ ಗೋಡೆಯ ಸಿಮೆಂಟ್ ಉದುರಿದ್ದರೆ, ಬಿಯರ್ ಹಾಗೂ ಕೂಲ್ ಡ್ರಿಂಕ್ಸ್ ಬಾಟಲ್ಗಳು ಕೆಳಗೆ ಬಿದ್ದಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸೊಕೊ ಟೀಂ ಮತ್ತು ಜಮಖಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವ ಕಾರಣದಿಂದ ಸ್ಪೋಟ ಆಗಿದೆ ಎಂದು ತನಿಖೆ ನಡೆಸುತ್ತಿದ್ದಾರೆ.
ಆಗಿದ್ದೇನು?
ಸ್ಪೋಟಗೊಂಡಿರುವ ಮಹಿಂದ್ರಾ XUV300 ಕಾರು ಎಂ.ಜಿ.ತೋರಗಲ್ ಎಂಬುವರ ಹೆಸರಿನಲ್ಲಿರುವುದು ಗೊತ್ತಾಗಿದ್ದು, ಕಾರು ಸ್ಫೋಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ನಿನ್ನೆ ಸಂಜೆ 4.30ರಲ್ಲಿ ಕಾರನ್ನು ತಂದು ಬಾರ್ ಬಳಿ ನಿಲ್ಲಿಸಲಾಗಿತ್ತು. ರಾತ್ರಿ ಮನೆಗೆ ಹೊರಡಬೇಕು ಅಂದಾಗ ಸ್ಫೋಟದ ಶಬ್ದ ಕೇಳಿಸಿತು. ಬಾಂಬ್ ಸ್ಫೋಟ ಆಗಿರಬಹುದು ಅಂತಾ ಅನುಮಾನ ಬರುತ್ತಿದೆ. ಕಾರು ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಮನೆಗಳ ಶೀಟ್ ಹಾರಿವೆ. ಘಟನೆ ವೇಳೆ ಪೂಜಾರಿ ಎಂಬ ಹುಡುಗ ಸ್ವಲ್ಪ ದೂರದಲ್ಲಿ ಇದ್ದ. ಆ ಹುಡುಗನೇ ಹೀಗೆ ಮಾಡಿರಬಹುದು ಎಂದು ಹಿಡಿದೆವು. ಆದರೆ ಆತ ನನಗೆ ಗಾಯವಾಗಿದೆ ಎಂದು ತೋರಿಸಿದ್ದಾನೆ. ಜಮಖಂಡಿ ಆಸ್ಪತ್ರೆಯಲ್ಲಿ ಆ ಹುಡುಗ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಕಾರು ನಿಲ್ಲಿಸಿದ್ದ ವೈನ್ ಶಾಪ್ ಮ್ಯಾನೇಜರ್ ಹನುಮಂತ ತಿಳಿಸಿದ್ದಾರೆ.
ಇದನ್ನೂ ಓದಿ: ನಗರಸಭೆ ಆಯುಕ್ತರ ಚೇಂಬರ್ಗೆ “ಸಾರ್ವಜನಿಕರಿಗೆ ಪ್ರವೇಶವಿಲ್ಲ”; ಬೋರ್ಡ್ ನೋಡಿ ಉಪ ಲೋಕಾಯುಕ್ತ ಶಾಕ್
ತಪ್ಪಿದ ಭಾರಿ ಅನಾಹುತ
ಸ್ಫೋಟದ ತೀವ್ರತೆ ಗಮನಿಸಿದರೆ ಸಂಭವನೀಯ ಭಾರಿ ಅನಾಹುತವೊಂದು ತಪ್ಪಿದೆ. ಘಟನೆ ವೇಳೆ ಸುತ್ತಮುತ್ತಲಿನ ಪ್ರದೇಶದಲ್ಲಿ ಧೂಳು ತುಂಬಿಕೊಂಡು ಕೆಲ ಕಾಲ ಆತಂಕದ ವಾತಾವಣರ ನಿರ್ಮಾಣವಾಗಿತ್ತು. ಆದರೆ ಯಾವುದೇ ಜೀವಹಾನಿ ಆಗಿಲ್ಲ. ಕಾರಿನ ಸಮೀಪ ಅಥವಾ ಕಾರಲ್ಲಿ ಯಾರಾದರೂ ಇದ್ದ ವೇಳೆಯೇ ಘಟನೆ ನಡೆದಿದ್ದರೆ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು. ಅಷ್ಟಕ್ಕೂ ಕಾರು ಸ್ಫೋಟಗೊಂಡಿದ್ದು ಯಾವ ಕಾರಣಕ್ಕೆ? ಇದು ದುಷ್ಕೃತ್ಯವಾ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿದ್ದು ಎಲ್ಲ ಆಯಾಮಗಳಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 7:10 am, Sun, 26 July 26
