ಹುಬ್ಬಳ್ಳಿ, ಆ,17: ಜಿಲ್ಲೆಯ ಅಸಾರ ಓಣಿಯಲ್ಲಿರುವ ಪ್ರಾಚೀನ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪವು ವಿವಾದಕ್ಕೆ ಕಾರಣವಾಗಿದೆ. ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನದ ಪುಷ್ಕರಣಿ ಇದ್ದ ಜಾಗದಲ್ಲಿ ಆಗಸ್ಟ್ 5ರಂದು ಹುಬ್ಬಳ್ಳಿ ಪಾಲಿಕೆ 25 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸಿದೆ ಎನ್ನಲಾಗಿದೆ. ಈ ಕುರಿತು ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ನಿರ್ಮಿಸಿರುವ ಜಾಗದಲ್ಲಿ ದೇವಸ್ಥಾನಕ್ಕೆ ಸೇರಿದ ಪುಷ್ಕರಣಿ ಇತ್ತು ಎಂದು ಪ್ರತಿಪಾದಿಸಿವೆ. ಪುಷ್ಕರಣಿಯನ್ನು ಉಳಿಸಿ, ಉತ್ಖನನ ಮಾಡುವಂತೆ ಆಗ್ರಹಿಸಿವೆ. ಆದರೆ, ರಾಜ್ಯ ಪುರಾತತ್ವ ಇಲಾಖೆ ಹಾಗೂ ಪಾಲಿಕೆಯ ಅಧಿಕಾರಿಗಳು ಪುಷ್ಕರಣಿ ಇರುವ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸ್ಥಳೀಯರು ಹಲವು ವರ್ಷಗಳ ಹಿಂದೆ ಪುಷ್ಕರಣಿ ಇದ್ದ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಹಿಂದೂಪರ ಸಂಘಟನೆಗಳು ಆಗಸ್ಟ್ 22ರೊಳಗೆ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
