ಯಕೃತ್ತು (ಲಿವರ್) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಆಹಾರದ ಜೀರ್ಣಕ್ರಿಯೆ, ವಿಷಕಾರಿ ಪದಾರ್ಥಗಳ ನಿವಾರಣೆ, ಶಕ್ತಿಯ ಸಂಗ್ರಹಣೆ ಹಾಗೂ ಅನೇಕ ಜೀವಸತ್ವಗಳ ಚಯಾಪಚಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ವ್ಯಾಧಿ ಎಂದರೆ ಅದು ಹೆಪಟೈಟಿಸ್; ಯಕೃತ್ತಿನ ಉರಿಯೂತ (inflammation of the Liver). ಇದು ಹೆಪಟೈಟಿಸ್ ವೈರಸ್(hepatitis A,B,CD and E) ಮೂಲಕ ಹರಡುತ್ತದೆ. ಜೊತೆಗೆಅತಿಯಾದ ಮಧ್ಯಪಾನ, ಕೆಲವು ಔಷಧಗಳ ದುಷ್ಪರಿಣಾಮ, ಯಕೃತ್ತಿನಲ್ಲಿ ಸೇರುವ ಕೊಬ್ಬು (fatty liver) ಅಥವಾ ಕಲುಷಿತ ಆಹಾರ/ನೀರಿನ ಕಾರಣಗಳಿಂದಲೂ ಬರಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ಎಸ್ ಡಿ ಎಂ ಆಯುರ್ವೇದ ಕಾಲೇಜಿನ ಸಂಹಿತಾ ಮತ್ತು ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡ್ ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ಈ ಆರೋಗ್ಯ ಸಮಸ್ಯೆಯ ಲಕ್ಷಣ ಮತ್ತು ಇದನ್ನು ತಡೆಗಟ್ಟಲು ಅನುಸರಿಸಬೇಕಾದ ಕೆಲವು ಸಲಹೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೆಪಟೈಟಿಸ್ ಪ್ರಮುಖ ಲಕ್ಷಣಗಳು:
ಕಾಮಾಲೆ(ಚರ್ಮ ಮತ್ತು ಕಣ್ಣು ಹಳದಿಯಾಗುವುದು), ಜ್ವರ, ಅತಿಯಾದ ಆಯಾಸ, ವಾಂತಿ ಅಥವಾ ವಾಕರಿಕೆ, ಹೊಟ್ಟೆನೋವು ಮತ್ತು ಮಲ ಮೂತ್ರದ ಬಣ್ಣ ಗಾಢವಾಗುವುದು ಮುಂತಾದ ಲಕ್ಷಣಗಳು ಕಾಣಬಹುದು. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಯಕೃತ್ ಹಾನಿ, liver cirrhosis, ಯಕೃತ್ ಕ್ಯಾನ್ಸರ್ ನಂತಹ ದೀರ್ಘ ಉಪದ್ರವಗಳು ಕಾಡಬಹುದು. ಇದು ಒಬ್ಬ ವ್ಯಕ್ತಿಯ ದೈನಂದಿನ ಕ್ರಿಯೆ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದು.
ಹೆಪಟೈಟಿಸ್ ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ:
ಆಹಾರ: ಈ ಕಾಯಿಲೆ ಬರದಂತೆ ತಡೆಗಟ್ಟಲು, ಯಕೃತ್ತಿನ ಆರೋಗ್ಯ ಕಾಪಾಡಲು ಜೀವನಶೈಲಿಯ ಬದಲಾವಣೆಗಳು ಬಹಳ ಸಹಾಯಕಾರಿ. ಅದರಲ್ಲಿಯೂ ಮೊದಲಿಗೆ ಯಕೃತ್ತಿನ ಕಾರ್ಯವನ್ನು ಉತ್ತೇಜಿಸಲು ಸಮತೋಲನದ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಪೌಷ್ಟಿಕಭರಿತ ನಿಯಮಿತ ಆಹಾರ ಸೇವನೆ, ತಾಜಾ ಹಣ್ಣು ತರಕಾರಿಗಳು, ಧಾನ್ಯಗಳ ಬಳಕೆ ಮಾಡಬಹುದು.
ಯಕೃತ್ ಸಂರಕ್ಷಕ ಆಹಾರ (Liver protective foods): ಅಂದರೆ ನೆಲ್ಲಿಕಾಯಿ, ನಿಂಬೆಹಣ್ಣು, ಬ್ರೋಕಲಿ, ಸಕ್ಕರೆ ಸೇರಿಸದ ಕಾಫಿ, ಬೆರ್ರಿ ಹಣ್ಣುಗಳು, ಅರಿಶಿಣ, ಶುಂಠಿ, ಬೆಳ್ಳುಳ್ಳಿ, ಆಲಿವ್ ಎಣ್ಣೆ ಇತ್ಯಾದಿಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಬಹುದು. ಇದರ ಜೊತೆಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅತಿಯಾದ ಸಕ್ಕರೆ ಇರುವ ಆಹಾರ-ಪಾನೀಯಗಳು, ಸಂಸ್ಕರಿತ ಆಹಾರಗಳು, ಜಂಕ್ ಫುಡ್ ಹಾಗೂ ಮದ್ಯಪಾನವನ್ನು ಸಾಧ್ಯವಾದಷ್ಟು ದೂರವಿಡಬೇಕು. ಏಕೆಂದರೆ ಇವು ಯಕೃತ್ತಿನ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಿ ಕೊಬ್ಬಿನ ಯಕೃತ್ತು, ಉರಿಯೂತ ಹಾಗೂ ಇತರ ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು.
ಇದನ್ನೂ ಓದಿ: ನುಗ್ಗೆ ಸೊಪ್ಪು: ಹಾಲು-ಬಾಳೆಹಣ್ಣಿಗಿಂತಲೂ ಹೆಚ್ಚು ಪೌಷ್ಟಿಕಾಂಶವಿರುವ ಈ ಸೊಪ್ಪಿನಲ್ಲಿದೆ ಅನೇಕ ಪ್ರಯೋಜನ!
ಗಿಡಮೂಲಿಕೆ: ಯಕೃತ್ತಿನ ಆರೋಗ್ಯಕ್ಕೆ ಹಲವು ಗಿಡಮೂಲಿಕೆಗಳನ್ನು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ತುಳಸಿ, ಅಮೃತಬಳ್ಳಿ, ನೆಲನಲ್ಲಿ, ಭೃಂಗರಾಜ, ಕಟುಕಿ, ಪುನರ್ನವ ಮುಂತಾದ ಔಷಧಗಳನ್ನು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಇಲ್ಲದೆಯೇ ಬಳಕೆ ಮಾಡಬಾರದು. ಅದರ ಬದಲು ಸೂಕ್ತ ಆಯುರ್ವೇದ ತಜ್ಞರ ಸಲಹೆಯ ಮೇರೆಗೆ ಈ ಔಷಧಿಗಳನ್ನು ಸೇವಿಸಬಹುದು.
ವಿಹಾರ: ದೇಹದ ತೂಕ ಸಮತೋಲನದಲ್ಲಿ ಇಡುವುದು ಬಹಳ ಮುಖ್ಯ. ಹಾಗಾಗಿ ನಿಯಮಿತ ವ್ಯಾಯಾಮ, ಯೋಗದಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಂಡು ಹಲವು ಯಕೃತ್ ಸಮಸ್ಯೆಗಳನ್ನು ದೂರವಿಡಬಹುದು.
ಲಸಿಕೆ: ಹೆಪಟೈಟಿಸ್ ಗೆ ಲಭ್ಯವಿರುವ ಲಸಿಕೆಗಳನ್ನು ಸರಿಯಾದ ವಯಸ್ಸಿನಲ್ಲಿ ತಪ್ಪದೆ ತೆಗೆದುಕೊಳ್ಳುವುದು.
ಕೆಲವು ಮುನ್ನೆಚ್ಚರಿಕೆಗಳು: ಶುದ್ಧ ಕುಡಿಯುವ ನೀರು, ಸ್ವಚ್ಛ ಆಹಾರ, ಕೈಗಳನ್ನು ಆಗಾಗ ತೊಳೆಯುವ ಅಭ್ಯಾಸ, ಆಸ್ಪತ್ರೆಗಳಲ್ಲಿ ರಕ್ತ ಮತ್ತು ಸೂಜಿ ಬಳಸುವಾಗ ಸೂಕ್ತ ಮುನ್ನೆಚ್ಚರಿಕೆಯಿಂದ ಸೋಂಕು ಹರಡುವುದನ್ನು ತಡೆಯಬಹುದು.
ಯಾವುದೇ ಆರಂಭಿಕ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಸರಿಯಾದ ಆಹಾರ ಪದ್ಧತಿ, ಶಿಸ್ತಿನ ಜೀವನಶೈಲಿ, ಸರಿಯಾದ ಲಸಿಕೆಯಿಂದ ಯಕೃತ್ತಿನ ಆರೋಗ್ಯ ಕಾಪಾಡಿ ರೋಗಗಳನ್ನು ತಡೆಯಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
