ಹೇಮಾವತಿ ಲಿಂಕಿಂಗ್ ಕೆನಾಲ್ ಕದನ: ‘ನಾಲ್ಕು ಗೋಡೆಗಳ ಮಧ್ಯೆ ವಿರೋಧಿಸಿದ್ದೇನೆ’ ಎಂದ ಗುಬ್ಬಿ ಶಾಸಕ, ರಾಮಲಿಂಗಾರೆಡ್ಡಿ ಹೇಳಿದ್ದೇನು? – Kannada News | Karnataka Hemavathi Canal Dispute: Congress MLA Challenges Govt; Minister Responds

ತುಮಕೂರು ಜು 2: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ವಿವಾದಿತ ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಕನಸಿನ ಯೋಜನೆ ಎನ್ನಲಾದ ಈ ಕಾಮಗಾರಿಗೆ ಪ್ರಭಾವಿ ನಾಯಕರೇ ಅಪಸ್ವರ ಎತ್ತಿದ್ದಾರೆ.

ಸರ್ಕಾರಕ್ಕೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಬಹಿರಂಗ ಸವಾಲು

ಈ ಯೋಜನೆಗೆ ಕಟುವಾಗಿ ವಿರೋಧ ವ್ಯಕ್ತಪಡಿಸಿರುವ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ (ವಾಸಣ್ಣ), ಸರ್ಕಾರದ ವಿರುದ್ಧವೇ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. “ಯಾವುದೇ ಕಾರಣಕ್ಕೂ ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿ ನಡೆಯಲು ಬಿಡುವುದಿಲ್ಲ” ಎಂದು ಅವರು ಆಕ್ರೋಶದಿಂದ ಹೇಳಿದ್ದಾರೆ.

“ನಾನು ಈ ಹಿಂದೆ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದೇ ಇದೇ ಯೋಜನೆಗೆ ತಡೆಯೊಡ್ಡುವ ಉದ್ದೇಶಕ್ಕಾಗಿ. ನನ್ನ ಕ್ಷೇತ್ರದ ಹಿತ ಹಾಗೂ ರೈತರ ಹೋರಾಟವೇ ನನಗೆ ಮುಖ್ಯ. ಈಗಾಗಲೇ ಈ ವಿಚಾರವಾಗಿ ಸರ್ಕಾರದ ಉನ್ನತ ಮಟ್ಟದಲ್ಲಿ, ನಾಲ್ಕು ಗೋಡೆಗಳ ಮಧ್ಯೆ ನನ್ನ ತೀವ್ರ ವಿರೋಧವನ್ನು ಮಾಡುತ್ತೇನೆ. ಹಾಗಾಗಿ ಕಾಮಗಾರಿ ಆರಂಭವಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ” ಎಂದು ಶ್ರೀನಿವಾಸ್ ಖಡಕ್ ಆಗಿ ಹೇಳಿದ್ದಾರೆ. ಕಾಮಗಾರಿ ಏನಾದರೂ ಮುಂದುವರಿದರೆ ಅವರು ಪಕ್ಷ ತೊರೆಯಲಿದ್ದಾರಾ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಶಾಸಕರ ಭಿನ್ನಮತ ಶಮನಗೊಳಿಸಲು ಸರ್ಕಾರ ನಡೆಸಿದ ಸಂಧಾನ ಸಫಲವಾಗಿಲ್ಲ ಎಂಬ ಸುಳಿವು ಇದರಿಂದ ಸಿಕ್ಕಿದೆ.

ಇದನ್ನೂ ಓದಿ: ಹಿರಿಯೂರು ಬೈಎಲೆಕ್ಷನ್ ಅಖಾಡ ರಂಗು: ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸಲು ಹೆಚ್‌ಡಿಕೆ ಮಾಸ್ಟರ್ ಪ್ಲಾನ್; ದಿವಂಗತ ಸುಧಾಕರ್ ಪುತ್ರನಿಗೆ ಟಿಕೆಟ್​​​ಗೆ ಒತ್ತಡ

ಯೋಜನೆ ಜಾರಿಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಪಟ್ಟು:

ಆದರೆ ಮತ್ತೊಂದೆಡೆ, ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ಯೋಜನೆ ಜಾರಿಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಮಾಗಡಿ ಮತ್ತು ಕುಣಿಗಲ್ ಭಾಗದವರು ತಮಗೆ ನೀರು ತಲುಪುತ್ತಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಎಷ್ಟು ನೀರು ಬೇಕೋ ಅಷ್ಟನ್ನು ನಾಲೆಯಲ್ಲೇ ಪಡೆದುಕೊಳ್ಳಲಿ. ಈ ಬಗ್ಗೆ ಸಚಿವ ಜಿ. ಪರಮೇಶ್ವರ್ ಅವರೊಂದಿಗೆ ಚರ್ಚಿಸಿ, ಬಳಿಕ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲರೂ ಒಂದೇ ಜಿಲ್ಲೆಯವರಾಗಿದ್ದು (ತುಮಕೂರು/ರಾಮನಗರ ಭಾಗ), ಪರ-ವಿರೋಧದ ನಡುವೆಯೂ ಎಲ್ಲಾ ಪಕ್ಷದವರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಕೆನಾಲ್ ಲಿಂಕಿಂಗ್ ಯೋಜನೆಯು ಕಾಂಗ್ರೆಸ್ ಪಕ್ಷದ ಒ ನಾಯಕರ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *