ಬೆಂಗಳೂರು, ಡಿಸೆಂಬರ್ 20: ಹೈಕಮಾಂಡ್ ನನ್ನ ಪರವಾಗಿದೆ. ಎರಡೂವರೆ ವರ್ಷದ ಅಗ್ರಿಮೆಂಟೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಶುಕ್ರವಾರ ಹೇಳಿದ್ದರು. ಈ ಮಾತು ಸದ್ಯ ಅವರ ಬೆಂಬಲಿಗರಲ್ಲಿ ವಿಶ್ವಾಸ ಹೆಚ್ಚಿಸಿದೆ. ಜೊತೆಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಬಣ ಹಾಗೂ ಹೈಕಮಾಂಡ್ಗೂ ಸಂದೇಶ ರವಾನೆ ಆಗಿದೆ. ಈ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿರುವುದು ಕುತೂಹಲ ಮೂಡುವಂತೆ ಮಾಡಿದೆ. ದೆಹಲಿಗೆ ತೆರಳುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಹೈಕಮಾಂಡ್ ನಮ್ಮಿಬ್ಬರಿಗೂ ಏನೋ ಹೇಳಿದೆ. ಹೈಕಮಾಂಡ್ ನಾಯಕರು ಕರೆದಾಗ ಇಬ್ಬರೂ ಒಟ್ಟಿಗೆ ದೆಹಲಿಗೆ ಹೋಗುತ್ತೇವೆ ಎಂದಿದ್ದಾರೆ. ಆದರೆ ವರಿಷ್ಠರು ಹೇಳಿದ್ಯಾವ ವಿಚಾರ ಎಂಬ ಬಗ್ಗೆ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.
