ಬೆಳ್ಳಿತೆರೆಯ ಮೇಲೆ ಮಿಂಚುವ ಕನಸು ಕಂಡಿದ್ದ ನಟಿಯೊಬ್ಬಳು, ನಿಜ ಜೀವನದಲ್ಲಿ ಕ್ರೂರ ಕೊಲೆಗಾತಿಯಾಗಿ ಬದಲಾದ ಕಥೆಯಿದು. ಪ್ರೀತಿ, ವಂಚನೆ ಮತ್ತು ರಕ್ತಸಿಕ್ತ ಅಂತ್ಯದ ಈ ಟ್ರಯಾಂಗಲ್ ಲವ್ ಸ್ಟೋರಿ ಈಗ ಇಡೀ ಸ್ಯಾಂಡಲ್ವುಡ್ ಬೆಚ್ಚಿಬೀಳುವಂತೆ ಮಾಡಿದೆ. ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಟಿ (Kannada Actress) ಬಿಂದು ಅಲಿಯಾಸ್ ಊರ್ವಶಿ, ಈಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿದ್ದಾಳೆ. ‘ಭಜರಂಗಿ’, ‘ರಂಗೋಲಿ’, ‘ಪೊಲೀಸ್ ಕ್ವಾರ್ಟರ್ಸ್’, ‘ಕಾಲಭೈರವ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಬಿಂಧು (Bindu), ಇತ್ತೀಚೆಗೆ ಬಿಡುಗಡೆಯಾದ ‘ಹಯಗ್ರೀವ’ ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಳು. ಆದರೆ ಈ ಬಣ್ಣದ ಲೋಕದ ಹಿಂದೆ ಅಡಗಿದ್ದದ್ದು ಮಾತ್ರ ಭೀಕರ ಅಪರಾಧದ ಕಥೆ.
ಈ ಘಟನೆಯ ಸಂತ್ರಸ್ತ ಮೋಹನ್ ಕೃಷ್ಣ ರಾವ್. ಅಂಜನನಗರದ ನಿವಾಸಿಗಳಾದ ಗಿರಿಜಾಬಾಯಿ ಮತ್ತು ರಾಮರಾವ್ ಅವರ ಮೂರನೇ ಮಗ ಈತ. ಏಳು ವರ್ಷಗಳ ಹಿಂದೆ ಪ್ರೀತಿಸಿದ ಹುಡುಗಿಗಾಗಿ ಮನೆ ಬಿಟ್ಟಿದ್ದ ಮೋಹನ್, ಐದು ವರ್ಷಗಳ ಹಿಂದೆ ಪತ್ನಿಯಿಂದ ದೂರವಾಗಿ ಒಂಟಿಯಾಗಿದ್ದ. ಇತ್ತ ಭದ್ರಾವತಿ ಮೂಲದ ಬಿಂದು ಕೂಡ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಳು. ತಾಯಿಯ ಸಾವು, ತಂದೆಯ ಎರಡನೇ ಮದುವೆ ಹಾಗೂ ಕೋವಿಡ್ ಸಮಯದಲ್ಲಿ ತನ್ನ ಮಗುವನ್ನು ಕಳೆದುಕೊಂಡ ನೋವಿನಲ್ಲಿದ್ದ ಈಕೆಯನ್ನು ಪತಿ ಬಿಟ್ಟು ಹೋಗಿದ್ದ ಎನ್ನಲಾಗಿದೆ.
ಸಿನಿಮಾದಲ್ಲಿ ನಟಿಸುವ ಹಂಬಲದೊಂದಿಗೆ ಬೆಂಗಳೂರಿಗೆ ಬಂದ ಬಿಂದು, ಮಂಜುನಾಥ್ ನಗರದಲ್ಲಿ ಮೋಹನ್ ಮನೆ ಪಕ್ಕದಲ್ಲೇ ವಾಸವಿದ್ದಳು. ಈ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಮದುವೆಯಾಗದಿದ್ದರೂ ದಂಪತಿಗಳಂತೆ ಒಟ್ಟಿಗೆ ವಾಸಿಸಲು ಶುರು ಮಾಡಿದ್ದರು. ಕಳೆದ ಡಿಸೆಂಬರ್ನಲ್ಲಿ ಮಹಾಲಕ್ಷ್ಮಿ ಲೇಔಟ್ನ ನಟರಾಜ್ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆದ ಈ ಜೋಡಿ, ನೆಮ್ಮದಿಯಿಂದಲೇ ಸಂಸಾರ ಹೂಡಿದ್ದರು. ಆದರೆ ಕೇವಲ ಎರಡೂವರೆ ತಿಂಗಳ ಹಿಂದೆ ಬಿಂದುವಿನ ಜೀವನಕ್ಕೆ ವಿನಯ್ ಎಂಬಾತನ ಎಂಟ್ರಿಯಾಯಿತು.
ಹೋಟೆಲ್ ಉದ್ಯಮದಲ್ಲಿ ನಷ್ಟ ಅನುಭವಿಸಿ ಕೆಲಸವಿಲ್ಲದೆ ಅಲೆಯುತ್ತಿದ್ದ ವಿನಯ್ ಜೊತೆ ಬಿಂದುವಿಗೆ ಅಕ್ರಮ ಸಂಬಂಧ ಶುರುವಾಯಿತು. ಈ ವಿಚಾರ ಮೋಹನ್ ಗಮನಕ್ಕೆ ಬಂದಾಗ ಮನೆಯಲ್ಲಿ ಪ್ರತಿದಿನ ಜಗಳಗಳು ಆರಂಭವಾದವು. ಈ ಜಗಳವೇ ಮುಂದೆ ಮೋಹನ್ ಪಾಲಿಗೆ ಮೃತ್ಯುವಾಗಿ ಕಾಡಿತು.
ಫೆಬ್ರವರಿ 18ರಂದು ಮೋಹನ್ ಮದ್ಯಪಾನ ಮಾಡಿ ಬಿಂದುವಿನ ಜೊತೆ ಜಗಳವಾಡಿದ್ದ. ಈ ವೇಳೆ ಬಿಂದು ತನ್ನ ಹೊಸ ಪ್ರಿಯಕರ ವಿನಯ್ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಳು. ವಿನಯ್ ತನ್ನ ಸ್ನೇಹಿತ ಧನುಷ್ ಎಂಬಾತನನ್ನೂ ಕರೆತಂದಿದ್ದ. ಆರೋಪಿಗಳು ಮೋಹನ್ನನ್ನು ಕಟ್ಟಿಹಾಕಿ, ಬಾಯಿಗೆ ಟೇಪ್ ಸುತ್ತಿ ಅಟ್ಟಹಾಸ ಮೆರೆದಿದ್ದರು. ಕ್ರೌರ್ಯದ ಪರಮಾವಧಿ ತೋರಿದ್ದಾರೆ. ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು, ಚಾಕುವಿನಿಂದ ದೇಹದ ಹಲವು ಭಾಗಗಳಿಗೆ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಶವವನ್ನು ನೋಡಿದ ಪೊಲೀಸರೇ ಒಂದು ಕ್ಷಣ ಬೆಚ್ಚಿಬೀಳುವಂತೆ ಆರೋಪಿಗಳು ಕ್ರೌರ್ಯ ಮೆರೆದಿದ್ದರು.
ಇದನ್ನೂ ಓದಿ: ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ; ಆಸ್ತಿ ಹೊಡೆಯಲು ನಡೆದಿತ್ತು ಪ್ಲ್ಯಾನ್
ಕೊಲೆಯ ನಂತರ ಶವವನ್ನು ಸುಟ್ಟು ಹಾಕಲು ಆರೋಪಿಗಳು ಸಂಚು ರೂಪಿಸಿದ್ದರು. ಆದರೆ ಸ್ಮಶಾನದಲ್ಲಿ ಡೆತ್ ಸರ್ಟಿಫಿಕೇಟ್ ಕೇಳುತ್ತಾರೆ ಎಂಬ ಭಯದಿಂದ ಆ ಪ್ಲಾನ್ ಕೈಬಿಟ್ಟು, ಸಂಜೆ 5 ಗಂಟೆ ಸುಮಾರಿಗೆ ಬಿಂದು ಮತ್ತು ವಿನಯ್ ಕೆ.ಆರ್. ನಗರಕ್ಕೆ ಪರಾರಿಯಾದರು. ಧನುಷ್ಗೆ ಸ್ವಲ್ಪ ಹಣ ನೀಡಿ ಬೇರೆಡೆ ಕಳುಹಿಸಿದ್ದರು. ಮೂರು ದಿನಗಳ ನಂತರ ಮನೆಯಿಂದ ದುರ್ನಾತ ಬರಲಾರಂಭಿಸಿದಾಗ ನೆರೆಹೊರೆಯವರು ಮಾಲೀಕರಿಗೆ ಮಾಹಿತಿ ನೀಡಿದರು. ಮಾಲೀಕರ ಮಗ ರವಿಕಿರಣ್ ಪೊಲೀಸರಿಗೆ ದೂರು ನೀಡಿದಾಗ ಈ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂತು.
ತನಿಖೆ ಆರಂಭಿಸಿದ ಪೊಲೀಸರಿಗೆ ಬಿಂದುವನ್ನು ಪತ್ತೆ ಮಾಡುವುದು ಸವಾಲಾಗಿತ್ತು. ಏಕೆಂದರೆ ಆಕೆ ಐದು ಬೇರೆ ಬೇರೆ ಹೆಸರಿನ ಸಿಮ್ ಕಾರ್ಡ್ಗಳನ್ನು ಬಳಸುತ್ತಿದ್ದಳು. ಆದರೆ ತಾಂತ್ರಿಕ ತಂಡದ ಸಹಾಯದಿಂದ ಸಿಡಿಆರ್ (CDR) ಮಾಹಿತಿ ಆಧರಿಸಿ ಕೆ.ಆರ್. ನಗರದಲ್ಲಿದ್ದ ಬಿಂದು ಮತ್ತು ವಿನಯ್ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.
ವರದಿ: ಮಂಜುನಾಥ್, ಟಿವಿ9. ಬೆಂಗಳೂರು ಗ್ರಾಮಾಂತರ
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
