17ನೇ ವಯಸ್ಸಿಗೆ ನಕ್ಸಲ್ ಆಗ ಹೊರಟಿದ್ದ ಪವನ್ ಕಲ್ಯಾಣ್; ತಡೆದಿದ್ದು ಅಣ್ಣ ಚಿರಂಜೀವಿ – Kannada News

ಟಾಲಿವುಡ್‌ನ ನಟ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ತಮ್ಮ ಹದಿಹರೆಯದ ದಿನಗಳ ಕುರಿತು ಅತ್ಯಂತ ಶಾಕಿಂಗ್ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಾವು ಒಂದು ಕಾಲದಲ್ಲಿ ನಕ್ಸಲ್ ಆಗಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಅಣ್ಣ ಮೆಗಾಸ್ಟಾರ್ ಚಿರಂಜೀವಿ ತಮ್ಮನ್ನು ತಡೆದು ದಾರಿ ತೋರಿಸಿದ್ದಾಗಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಪವನ್ ಕಲ್ಯಾಣ್ ಅವರಿಗೆ 17-21 ವರ್ಷ ವಯಸ್ಸಾಗಿದ್ದಾಗ ಸಮಾಜದಲ್ಲಾಗುತ್ತಿದ್ದ ಅನ್ಯಾಯಗಳ ವಿರುದ್ಧ ಭಾರಿ ಸಿಟ್ಟು ಇತ್ತಂತೆ.‘ಆ ವಯಸ್ಸಿನಲ್ಲಿ ನನಗೆ ಗನ್ ಹಿಡಿದು ನಕ್ಸಲೈಟ್ ಸೇರುವ ಹುಚ್ಚು ಆಲೋಚನೆ ಬಂದಿತ್ತು. ಗುಟ್ಟಾಗಿ ವಿದ್ಯಾರ್ಥಿ ಸಂಘಟನೆಗಳ ಸಭೆಗಳಿಗೂ ಹೋಗುತ್ತಿದ್ದೆ. ನನ್ನ ತಲೆಯಲ್ಲಿ ಆಕ್ರೋಶದ ಯೋಚನೆಗಳು ಸ್ಫೋಟಗೊಳ್ಳುತ್ತಿದ್ದವು’ ಎಂದು ಪವನ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ತಮ್ಮನ ಈ ಹುಚ್ಚು ಕೋಪವನ್ನು ಕಂಡು ಮೆಗಾಸ್ಟಾರ್ ಚಿರಂಜೀವಿ ತೀವ್ರ ಆತಂಕಗೊಂಡಿದ್ದರು. ಆಗ ಪವನ್ ಕಲ್ಯಾಣ್ ಅವರನ್ನು ಕೂರಿಸಿ ಚಿರಂಜೀವಿ ಒಂದು ಪ್ರಶ್ನೆ ಕೇಳಿದ್ದರು. ‘ನಾನು ಚಿರಂಜೀವಿ ಆಗಿರದಿದ್ದರೆ, ನಿನ್ನ ಸಂಬಳ ಹಾಗೂ ಕಷ್ಟದ ಮೇಲೆ ಇಡೀ ಕುಟುಂಬ ಅವಲಂಬಿತವಾಗಿದ್ದರೆ ನೀನು ಇದೇ ನಿರ್ಧಾರ ತೂಗುತ್ತಿದ್ದೆಯಾ’ ಎಂದು ಪ್ರಶ್ನಿಸಿದ್ದರು. ಅಣ್ಣನ ಈ ಜವಾಬ್ದಾರಿಯುತ ಮಾತಿಗೆ ಪವನ್ ಬಳಿ ಯಾವುದೇ ಉತ್ತರವಿರಲಿಲ್ಲ. ಆ ಬಳಿಕ ಅವರು ಆ ದಾರಿಯಿಂದ ಹಿಂದೆ ಸರಿದರು.

ಇದನ್ನೂ ಓದಿ: ‘ಈ ಬೆದರಿಕೆ ಬೇಡ’: ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರೈ ಎಚ್ಚರಿಕೆ

ಚಿರಂಜೀವಿ ಅವರೇ ನನ್ನ ಏಕೈಕ ಹೀರೋ:

ತಮ್ಮ ಸಿನಿಮಾಗಳ ಪ್ರಚಾರದ ವೇಳೆ ಪವನ್ ಕಲ್ಯಾಣ್ ಸದಾ ಅಣ್ಣನನ್ನು ಕೊಂಡಾಡುತ್ತಾರೆ. ‘ನನಗೆ ಜಗತ್ತಿನಲ್ಲಿ ಒಬ್ಬರೇ ಹೀರೋ, ಅದು ಮೆಗಾಸ್ಟಾರ್ ಚಿರಂಜೀವಿ. ಅವರ ಪಕ್ಕ ನಿಂತಾಗ ನಾನು ಕೂಡ ಒಬ್ಬ ನಟ ಎಂಬುದನ್ನೇ ಮರೆತುಬಿಡುತ್ತೇನೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 90ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪವನ್ ಕಲ್ಯಾಣ್, ಜನಸೇನಾ ಪಾರ್ಟಿ ಕಟ್ಟಿ ಸದ್ಯ ಆಂಧ್ರಪ್ರದೇಶದ ಡಿಸಿಎಂ ಆಗಿ ಜನಸೇವೆ ಮಾಡುತ್ತಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *