2 ಹೀನಾಯ ಸೋಲುಗಳು; ಭಾರತದ ಎರಡೂ ತಂಡಗಳು ಎಡವಿದ್ದೆಲ್ಲಿ? ಇಲ್ಲಿದೆ ವಿವರ – Kannada News | India’s Cricket June 28: Analyzing Men’s Ireland Defeat and Women’s T20 World Cup Exit

ಜೂನ್ 28 ರ ಭಾನುವಾರದಂದು ಭಾರತದ ಕ್ರಿಕೆಟ್ ಪ್ರಿಯರು ಮನರಂಜನೆಯ ರಸದೌತಣವನ್ನು ನಿರೀಕ್ಷಿಸಿದ್ದರು. ಏಕೆಂದರೆ ಈ ದಿನದಂದು ಭಾರತದ ಎರಡು ಬಲಿಷ್ಠ ತಂಡಗಳು ನಿರ್ಣಾಯಕ ಪಂದ್ಯಗಳನ್ನಾಡಲು ಕಣಕ್ಕಿಳಿದಿದ್ದವು. ಒಂದೆಡೆ ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಭಾರತದ ಪುರುಷರ ತಂಡ ಸರಣಿ ನಿರ್ಧಾರಕ ಪಂದ್ಯವನ್ನಾಡಿದರೆ, ಮತ್ತೊಂದೆಡೆ ಭಾರತದ ಮಹಿಳಾ ತಂಡ 2026 ರ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಎದುರಿಸಿತ್ತು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ಭಾರತ ಮಹಿಳಾ ತಂಡಕ್ಕೆ ಬಹಳ ಮುಖ್ಯವಾಗಿತ್ತು. ಅಂದರೆ ಒಂದೇ ದಿನ ಎರಡು ತಂಡಗಳು ತಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯೊಂದಿಗೆ ಅಂಗಳಕ್ಕಿಳಿದಿದ್ದವು. ಆದರೆ ಎರಡು ತಂಡಗಳಿಗೆ ಎದುರಾಗಿದ್ದು ಸೋಲಿನ ನಿರಾಶೆ.

ಇಂಗು ತಿಂದ ಮಂಗನಂತ್ತಾದರು

ಮಹಿಳಾ ತಂಡಕ್ಕೆ ಹೋಲಿಸಿದರೆ, ಪುರುಷರ ತಂಡದ ಸೋಲನ್ನು ಯಾವ ಭಾರತೀಯನಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೌದು, ಐರ್ಲೆಂಡ್ ವಿಶ್ವ ದರ್ಜೆಯ ಪ್ರದರ್ಶನ ನೀಡಿತು ಎಂಬುದರಲ್ಲಿ ಸುಳಿಲ್ಲ. ಆದರೆ ಸತತ ಎರಡು ಬಾರಿ ಟಿ20 ವಿಶ್ವಕಪ್‌ ಗೆದ್ದಿರುವ ತಂಡಕ್ಕೆ ಐರ್ಲೆಂಡ್ ವಿರುದ್ಧ ಸೋಲು ಎಂಬುದನ್ನು ಕೇಳಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಐರ್ಲೆಂಡ್ ಪ್ರವಾಸಕ್ಕೂ ಮೊದಲು ಐಪಿಎಲ್‌ನಲ್ಲಿ ಇವರ ಆಟವನ್ನು ನೋಡಿದವರೆಲ್ಲ, ಇವರ ಮುಂದೆ ಐರ್ಲೆಂಡ್ ಲೆಕ್ಕಕ್ಕೆ ಇಲ್ಲ ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ ಐರ್ಲೆಂಡ್ ಲೆಕ್ಕಾಚಾರದ ಮುಂದೆ ಐಪಿಎಲ್ ಕಲಿಗಳ ಕರಾಮತ್ತು ನಡೆಯಲಿಲ್ಲ. ಅತಿ ವೇಗದ ಶತಕ, ಅರ್ಧಶತಕ, ಸಿಕ್ಸರ್‌ಗಳ ಮಳೆ ಎಂಬೆಲ್ಲ ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡು ಐರ್ಲೆಂಡ್​ಗೆ ಹೋಗಿದ್ದವರು ಐರಿಶ್ ಆಟಗಾರರ ತಂತ್ರದ ಎದುರು ಇಂಗು ತಿಂದ ಮಂಗನಂತ್ತಾದರು.

ಪಿಚ್​ನ ಮರ್ಮವನ್ನು ಅರಿತುಕೊಳ್ಳಲಿಲ್ಲ

ಮೊದಲ ಟಿ20 ಸೋಲನ್ನು ಎಚ್ಚರಿಕೆಯ ಪಾಠವನ್ನಾಗಿ ತೆಗೆದುಕೊಳ್ಳದ ಯಂಗ್ ಇಂಡಿಯಾ, ಎರಡನೇ ಟಿ20 ಪಂದ್ಯದಲ್ಲಿ 1 ರನ್​ಗಳ ಸೋಲು ಅನುಭವಿಸಿತು. ಕೇವಲ 1 ರನ್​ಗಳ ಸೋಲಿಗೆ ಕಾರಣವಾಗಿದ್ದು, ಭಾರತದ ಯುವ ಬೌಲರ್​ಗಳೇ ಹೊರತು, ಐಪಿಎಲ್‌ನಲ್ಲಿ ರನ್​ಗಳ ಮಳೆಯನ್ನೇ ಹರಿಸಿದ ಬ್ಯಾಟ್ಸ್‌ಮನ್​ಗಳಲ್ಲ. ನಮ್ಮಂತಹ ಬ್ಯಾಟಿಂಗ್‌ ವೀರರ ಮುಂದೆ ಈ ಐರ್ಲೆಂಡ್ ಬೌಲರ್​ಗಳು ಯಾವ ಲೆಕ್ಕ ಎಂಬ ಅಂಹಕಾರದೊಂದಿಗೆ ಕ್ರೀಸ್​ಗಿಳಿದವರು ಪಿಚ್​ನ ಮರ್ಮವನ್ನು ಅರಿತುಕೊಳ್ಳುವ ಮುನ್ನವೇ ದೊಡ್ಡ ದೊಡ್ಡ ಹೊಡೆತಗಳಿಗೆ ಕೈ ಹಾಕಿ ಪೆವಿಲಿಯನ್ ಸೇರಿಕೊಂಡರು. ಟೀಂ ಇಂಡಿಯಾದ ಈ ಮಂದಬುದ್ದಿಯ ಬ್ಯಾಟಿಂಗ್ ವಿಭಾಗವನ್ನು ಮೊದಲ ಪಂದ್ಯದಲ್ಲೇ ಅರ್ಥ ಮಾಡಿಕೊಂಡಿದ್ದ ಐರ್ಲೆಂಡ್ ಬೌಲರ್​ಗಳು ಎರಡನೇ ಪಂದ್ಯಕ್ಕೆ ಮತ್ತಷ್ಟು ಉತ್ತಮ ತಯಾರಿಯನ್ನು ಮಾಡಿಕೊಂಡು ಕಣಕ್ಕಿಳಿದಿದ್ದರು.

ಐರ್ಲೆಂಡ್ ತಂಡದ ತಂತ್ರಗಾರಿಕೆ ಹೇಗಿತ್ತು?|

ಹೀಗಾಗಿ 154 ರನ್​ಗಳ ಅಲ್ಪ ಗುರಿ ನೀಡಿಯೂ ಐರ್ಲೆಂಡ್ ಬೌಲಿಂಗ್ ವಿಭಾಗ ಎಲ್ಲಿಯೂ ಲಯ ಕಳೆದುಕೊಳ್ಳಲಿಲ್ಲ. ಇತ್ತ ಫಿಲ್ಡರ್​ಗಳು ಕೂಡ ಬೌಲರ್​ಗಳ ಶ್ರಮಕ್ಕೆ ಪ್ರತಿಫಲವೆಂಬಂತೆ ಒಂದೇ ಒಂದು ಕ್ಯಾಚ್​ಗಳನ್ನು ಕೈಚೆಲ್ಲಲಿಲ್ಲ. ಇತ್ತ ಎಷ್ಟೇ ಟಾರ್ಗೆಟ್ ಇದ್ದರೂ ಕೊನೆಯ ಐದು ಓವರ್​ಗಳಲ್ಲಿ ಪಂದ್ಯ ಮುಗಿಸುವ ಮನಸ್ಥಿತಿಯಲ್ಲಿದ್ದ ಭಾರತದ ಮಧ್ಯಮ ಕ್ರಮಾಂಕ ಸ್ಟ್ರೈಕ್ ತಿರುಗಿಸುವುದನ್ನು ಬಿಟ್ಟು ಹೆಚ್ಚು ಡಾಟ್ ಬಾಲ್​ಗಳನ್ನು ಆಡಿತು. ಇದಕ್ಕೂ ಮತ್ತೊಂದು ಪ್ಲಾನ್ ಮಾಡಿಕೊಂಡು ಬಂದಿದ್ದ ಐರ್ಲೆಂಡ್ ಬೌಲರ್​ಗಳು ಟೀಂ ಇಂಡಿಯಾ ಬ್ಯಾಟರ್​ಗಳಿಗೆ ಒಂದೇ ಒಂದು ಸ್ಟ್ರೈಟ್ ಹಿಟ್ಟಿಂಗ್​ಗೆ ಅವಕಾಶ ನೀಡಲಿಲ್ಲ. ಸೈಡ್ ಬೌಂಡರಿಗಳು ದೊಡ್ಡದ್ದಾಗಿದ್ದರ ಕಾರಣ ಭಾರತದ ಬ್ಯಾಟರ್​​ಗಳು ಆ ಕಡೆಗೆ ಶಾಟ್ ಆಡುವಂತೆ ಐರ್ಲೆಂಡ್ ಬೌಲರ್​ಗಳು ಬೌಲ್ ಮಾಡಿದರು. ತಮ್ಮ ತೋಳ್ಬಲವನ್ನು ನೆಚ್ಚಿಕೊಂಡಿದ್ದ ಭಾರತದ ಬ್ಯಾಟರ್​​ಗಳು ಗಾಳಿಯ ವಿರುದ್ಧವಾಗಿ ದೊಡ್ಡ ದೊಡ್ಡ ಹೊಡೆತಗಳಿಗೆ ಕೈಹಾಕಿ ಕ್ಯಾಚ್ ನೀಡಿ ಔಟಾದರು.

ಮಾನ ಉಳಿಸಿದ ಬೌಲರ್​ಗಳು

ಕೊನೆಯಲ್ಲಿ ಯುವ ಬೌಲಿಂಗ್ ಆಲ್‌ರೌಂಡರ್ ಹರ್ಷಿತ್ ರಾಣಾ ಹಾಗೂ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಪ್ರಿನ್ಸ್ ಯಾದವ್ ಗೆಲುವಿಗಾಗಿ ಹೋರಾಟ ನೀಡದಿದ್ದರೆ, ಟೀಂ ಇಂಡಿಯಾ ಮೊದಲ ಪಂದ್ಯದಂತೆಯೇ ಎರಡನೇ ಪಂದ್ಯದಲ್ಲೂ 30 ರನ್​ಗಳ ಸೋಲು ಅನುಭವಿಸುತ್ತಿತ್ತು. ಐರ್ಲೆಂಡ್​ನಂತಹ ದುರ್ಬಲ ತಂಡದ ಎದುರೇ ಮುಗ್ಗರಿಸಿರುವ ಟೀಂ ಇಂಡಿಯಾ, ಇದೀಗ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಎದುರಿಸಲು ಹೋಗುತ್ತಿದೆ. ಅಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮಹಿಳಾ ತಂಡ ಟಿ20 ಮಾದರಿಗೆ ಬದಲಾಗಲಿಲ್ಲ

ಇದು ಪುರುಷರ ತಂಡದ ವ್ಯಥೆಯಾದರೆ, ಇತ್ತ ಮಹಿಳಾ ತಂಡದ್ದು ಇನ್ನೊಂದು ರೀತಿಯ ವ್ಯಥೆ. ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ ವನಿತಾ ಪಡೆ, ಏಕದಿನ ಮಾದರಿಯಿಂದ ಟಿ20 ಮಾದರಿಗೆ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವ ಕೆಲಸವನ್ನು ಟೂರ್ನಿ ಆರಂಭಕ್ಕೂ ಮುನ್ನ ಹಾಗೂ ಟೂರ್ನಿಯ ನಡುವೆಯೂ ಮಾಡಲಿಲ್ಲ. ಆರಂಭಿಕ ಆಟಘಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನರನ್ನು ಹೊರತುಪಡಿಸಿ ಯಾವ ಆಟಗಾರ್ತಿಗೂ ನಾವು ಟಿ20 ಕ್ರಿಕೆಟ್ ಆಡುತ್ತಿದ್ದೇವೆ ಎಂಬುದು ನೆನಪಿಗೂ ಬಾರಲಿಲ್ಲ ಎನಿಸುತ್ತದೆ. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಲ ಹೆಚ್ಚಿಸಬೇಕಿದ್ದ ಜೆಮಿಮಾ ರೊಡ್ರಿಗ್ಸ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಲೀಗ್ ಹಂತದ ಯಾವ ಪಂದ್ಯದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ನಾಯಕಿ ಹರ್ಮನ್, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಕೆಚ್ಚೆದೆಯ ಹೋರಾಟ ನೀಡಿದರು ಎಂಬುದನ್ನು ಮರೆಯಬಾರದು. ಹರ್ಮನ್ ಆ ರೀತಿಯ ಬ್ಯಾಟಿಂಗ್‌ ಮಾಡದಿದ್ದರೆ, ಟೀಂ ಇಂಡಿಯಾ 150 ರನ್​ಗಳ ಗಡಿ ಕೂಡ ದಾಟುತ್ತಿರಲಿಲ್ಲ.

ಆಸೀಸ್ ವಿರುದ್ಧ ಬ್ಯಾಟಿಂಗ್ ವೈಫಲ್ಯ

ಇದೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಸೆಮಿಫೈನಲ್​ನಲ್ಲಿ ಅಜೇಯ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಜೆಮಿಮಾ, ಟಿ20 ವಿಶ್ವಕಪ್‌ನಲ್ಲಿ ಹೆಸರಿಗಷ್ಟೇ ತಂಡದಲ್ಲಿದ್ದರು ಎಂದರೆ ತಪ್ಪಾಗಲಾರದು. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಜೆಮಿಮಾ 34 ರನ್ ಬಾರಿಸದರಾದರೂ ಅದಕ್ಕೆ ತೆಗೆದುಕೊಂಡಿದ್ದು, ಬರೊಬ್ಬರಿ 28 ಎಸೆತಗಳು. ಇದನ್ನು ನೋಡಿಯೇ ಅವರನ್ನು ಕೊನೆಯ ಓವರ್​ಗೂ ಮುನ್ನ ರಿಟೈರ್ಡ್​ ಔಟ್​ ಆಗಿ ವಾಪಸ್ ಕರೆಸಿಕೊಂಡಿದ್ದು. ಇನ್ನು ಈ ಪಂದ್ಯದಲ್ಲಿ ಸ್ಮೃತಿ ಅವರ ಇನ್ನಿಂಗ್ಸ್ ಕೂಡ ನಿಧಾನಗತಿಯಲ್ಲಿತ್ತು. ಹೀಗಾಗಿ ತಂಡ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳಲಿಲ್ಲ, ಇತ್ತ ರನ್ ಕೂಡ ಕಲೆಹಾಕಲಿಲ್ಲ. ಒಂದು ವೇಳೆ ಮೊದಲ 10 ಓವರ್​ಗಳಲ್ಲಿ ಸ್ಫೋಟಕ ಆರಂಭ ಸಿಕ್ಕಿದ್ದಿದ್ದರೆ, ನಿನ್ನೆಯ ಫಲಿತಾಂಶ ಬೇರೆಯದ್ದೇ ಇರುತ್ತಿತ್ತು.

ಬಲಿಷ್ಠ ಪ್ಲೇಯಿಂಗ್ 11 ಕಟ್ಟಲಿಲ್ಲ

ಒಟ್ಟಾರೆ ಒಂದು ಒಳ್ಳೇಯ ತಂಡವನ್ನು ಕಟ್ಟದೆ ಏಕದಿನ ಕ್ರಿಕೆಟ್​ನಲ್ಲಿ ಮಿಂಚಿದವರನ್ನೇ ಟಿ20 ಮಾದರಿಗೂ ಕರೆತಂದಿದ್ದು, ಮಹಿಳಾ ತಂಡದ ಸೋಲಿಗೆ ಕಾರಣವೆನ್ನಬಹುದು. ಏಕೆಂದರೆ ಲೀಗ್ ಹಂತ ಮುಗಿಯುವ ಹಂತಕ್ಕೆ ಬಂದರೂ ಮೂರನೇ ಕ್ರಮಾಂಕಕ್ಕೆ ಸರಿಯಾದ ಆಟಗಾರ್ತಿಯರನ್ನು ಆಯ್ಕೆ ಮಾಡಲು ಆಯ್ಕೆ ಮಂಡಳಿಗೆ ಸಾಧ್ಯವಾಗಲಿಲ್ಲ. ವೇಗದ ಬೌಲರ್​ಗಳು ಯಶಸ್ವಿಯಾಗದಿದ್ದರೂ, ಸ್ಪಿನ್ನರ್​ಗಳ ಶ್ರಮಕ್ಕೆ ಫಿಲ್ಡರ್​ಗಳಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಒಂದರ್ಥದಲ್ಲಿ ಭಾರತ ತಂಡ ಸೆಮಿಫೈನಲ್​ಗೇರಲು ಆಗದಿರುವುದಕ್ಕೆ ಪ್ರಮುಖ ಕಾರಣ ತಂಡದ ಕಳಪೆ ಫಿಲ್ಡಿಂಗ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೈಚೆಲ್ಲಿದ ಆ ಕ್ಯಾಚ್​ಗಳು ತಂಡವನ್ನು ಟೂರ್ನಿಯಿಂದ ಹೊರಹಾಕಿದವು ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎನ್ನಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:36 pm, Mon, 29 June 26

Source link

Leave a Reply

Your email address will not be published. Required fields are marked *