5.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಎಸಿ ಕಾವ್ಯಾರಾಣಿ – Kannada News | Mysuru Lokayukta Traps Hunsur AC Kavyarani Taking Rs 5.5 Lakh Bribe for Land Appeal

ಮೈಸೂರು, ಆ.3: ಮೈಸೂರು ಜಿಲ್ಲೆಯ ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಭಾರಿ ಮೊತ್ತದ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕಂದಾಯ ಮೇಲ್ಮನವಿ ಇತ್ಯರ್ಥಪಡಿಸಲು 5.50 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನಲ್ಲಿರುವ ನಾಲ್ಕೂವರೆ ಎಕರೆ ಜಮೀನಿಗೆ ಸಂಬಂಧಿಸಿದಂತೆ ಕಂದಾಯ ಮೇಲ್ಮನವಿ ಇತ್ಯರ್ಥಪಡಿಸಲು ನ್ಯಾಯಾಲಯದ ಆದೇಶವಿತ್ತು. ಆದರೂ ಕೆಲಸ ಮಾಡಿಕೊಡಲು ಎಸಿ ಕಾವ್ಯಾರಾಣಿ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತು ಬೆಂಗಳೂರು ಮೂಲದ ದೂರುದಾರೆ ಡಾ. ರೂಪಾ ಅವರು ಮೈಸೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಧ್ಯಾಹ್ನದ ಊಟದ ಸಮಯದಲ್ಲಿ ಎಸಿ ಕಾವ್ಯಾರಾಣಿ ಅವರು ತಮ್ಮ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಯೋಜನೆಯಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ತಂಡ ದಾಳಿ ಸಂಘಟಿಸಿತು.

ಇದನ್ನೂ ಓದಿ: ನಕಲಿ ಪಿಯುಸಿ ಅಂಕಪಟ್ಟಿ ನೀಡಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆದಿದ್ದ ನಾಲ್ವರಿಗೆ ಶಾಕ್​​: 2 ವರ್ಷ ಜೈಲು ಶಿಕ್ಷೆ

ಎಸಿ ಕಚೇರಿಯ ಗುಮಾಸ್ತ ಶಿವಕುಮಾರ್ ಅವರಿಗೆ ದೂರುದಾರೆ ಡಾ. ರೂಪಾ ಅವರು 5.50 ಲಕ್ಷ ರೂ. ಲಂಚದ ಹಣವನ್ನು ನೀಡಿದ್ದರು. ಗುಮಾಸ್ತನಿಂದ ಹಣ ಪಡೆದು ಮನೆಯಲ್ಲಿದ್ದ ಎಸಿ ಕಾವ್ಯಾರಾಣಿ ಸ್ವೀಕರಿಸುತ್ತಿದ್ದಂತೆಯೇ, ಲೋಕಾಯುಕ್ತ ಡಿವೈಎಸ್‌ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ 3 ಜೀಪ್‌ಗಳಲ್ಲಿ ಬಂದಿದ್ದ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿ ಹಣ ಸಮೇತ ಅಧಿಕಾರಿಗಳನ್ನು ವಶಕ್ಕೆ ಪಡೆಯಿತು. ಪ್ರಸ್ತುತ ಲೋಕಾಯುಕ್ತ ಅಧಿಕಾರಿಗಳು ಎಸಿ ಕಾವ್ಯಾರಾಣಿ ಹಾಗೂ ಗುಮಾಸ್ತ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *