6ನೇ ದಿನದಾಟ, ಡ್ರಾ, ಕ್ವೋಶಿಯಂಟ್: ಹೀಗಿದೆ ರಣಜಿ ಟ್ರೋಫಿ ಫೈನಲ್ ನಿಯಮ – Kannada News | A 6th reserve day is typically allocated for the Ranji Trophy final

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಮತ್ತು ಕರ್ನಾಟಕ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ 584 ರನ್​ ಕಲೆಹಾಕಿದೆ. ಇದೀಗ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಶುರು ಮಾಡಿದ್ದು, 20 ಓವರ್​ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ.

ಇದೀಗ (ಫೆ.26) ಮೂರನೇ ದಿನದಾಟ ನಡೆಯುತ್ತಿರುವುದರಿಂದ ಈ ಮ್ಯಾಚ್​ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ಆರಂಭಿಕ ಆಘಾತಕ್ಕೆ ಒಳಗಾಗಿರುವ ಕರ್ನಾಟಕ ತಂಡವು ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಲು ಇನ್ನೆರಡು ದಿನಗಳವರೆಗೆ ಬ್ಯಾಟಿಂಗ್ ಮುಂದುವರೆಸಲು ಪ್ಲ್ಯಾನ್ ರೂಪಿಸಲಿದ್ದಾರೆ.

ಒಂದು ವೇಳೆ ಕರ್ನಾಟಕ ತಂಡವು ಪಂದ್ಯದ ಕೊನೆಯ ದಿನದಾಟದವರೆಗೆ ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಆಗದೇ ಉಳಿದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ರಣಜಿ ಟೂರ್ನಿಯ ಫೈನಲ್​ನಲ್ಲಿ ಫಲಿತಾಂಶ ನಿರ್ಧರಿಸಲು ಎರಡು ತಂಡಗಳ ಮೊದಲು ಇನಿಂಗ್ಸ್ ಪೂರ್ಣಗೊಂಡಿರಬೇಕು.

ಒಂದು ವೇಳೆ 2ನೇ ಬ್ಯಾಟಿಂಗ್ ಆಡಿದ ತಂಡವು ಮೊದಲ ಇನಿಂಗ್ಸ್ ಪೂರ್ಣಗೊಳಿಸದೇ ಇದ್ದರೆ ಮುಂದೇನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ…

  • ಪಂದ್ಯದ ಅವಧಿ: ರಣಜಿ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಸಾಮಾನ್ಯವಾಗಿ 5 ದಿನಗಳವರೆಗೆ ನಡೆಯುತ್ತವೆ.
  • 6ನೇ ದಿನದ ಬಳಕೆ: ಒಂದು ವೇಳೆ ಮೊದಲ 5 ದಿನಗಳಲ್ಲಿ ಪಂದ್ಯದ ಫಲಿತಾಂಶ ಬರದಿದ್ದರೆ ಅಥವಾ ಮಳೆ ಹಾಗೂ ಇನ್ನಿತರ ಕಾರಣಗಳಿಂದ ಪಂದ್ಯದ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಆಗ 6ನೇ ದಿನವನ್ನು ಬಳಸಲಾಗುತ್ತದೆ.
  • ವಿಜೇತರ ನಿರ್ಧಾರ: ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ.

ಉದಾಹರಣೆಗೆ: ಕರ್ನಾಟಕ ತಂಡವು ಇದೀಗ ಮೊದಲ ಇನಿಂಗ್ಸ್ ಆಡುತ್ತಿದೆ. ಭಾನುವಾರದೊಳಗೆ ಜಮ್ಮು-ಕಾಶ್ಮೀರ ತಂಡಕ್ಕೆ ಕರ್ನಾಟಕ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಮಾಡಲು ಸಾಧ್ಯವಾಗದೇ ಇದ್ದರೆ, ಪಂದ್ಯವನ್ನು ಆರನೇ ದಿನದಾಟಕ್ಕೆ ಕೊಂಡೊಯ್ಯಲಾಗುತ್ತದೆ. ಅಂದರೆ ಮೀಸಲು ದಿನದಾಟದಲ್ಲಿ ಪಂದ್ಯವನ್ನು ಮುಂದುವರೆಸಲಾಗುತ್ತದೆ.

ಮೊದಲ ಇನಿಂಗ್ಸ್​ ಪೂರ್ಣಗೊಳಿಸಲೆಂದೇ ಇಂತಹದೊಂದು ನಿಯಮ ರೂಪಿಸಲಾಗಿದೆ. ಅಂದರೆ ಎರಡೂ ತಂಡಗಳ ಮೊದಲ ಇನಿಂಗ್ಸ್ ಪೂರ್ಣಗೊಂಡರೆ ಒಂದು ತಂಡದ ಇನಿಂಗ್ಸ್​ನಲ್ಲಿ ಮುನ್ನಡೆ ಕಂಡು ಬರಲಿದೆ. ಹೀಗೆ ಮೊದಲ ಇನಿಂಗ್ಸ್ ಪೂರ್ಣಗೊಂಡಿದ್ದರೆ ಪ್ರಥಮ ಇನಿಂಗ್ಸ್​ನಲ್ಲಿ ಮುನ್ನಡೆ ಹೊಂದಿರುವ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ರಣಜಿ ಟ್ರೋಫಿ ಫೈನಲ್ ‘ಡ್ರಾ’ ನಿಯಮಗಳು:

  • ಮೊದಲ ಇನಿಂಗ್ಸ್ ಮುನ್ನಡೆ: ಐದು ಅಥವಾ ಆರು ದಿನಗಳ ಆಟದ ನಂತರವೂ ಪಂದ್ಯವು ಡ್ರಾದಲ್ಲಿ ಕೊನೆಗೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚು ರನ್ ಗಳಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಪ್ರಸ್ತುತ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ 584 ರನ್ ಗಳಿಸಿದೆ. ಕರ್ನಾಟಕ ಈ ಮೊತ್ತವನ್ನು ದಾಟಿದರೆ ಮಾತ್ರ ಮುನ್ನಡೆಯ ಆಧಾರದ ಮೇಲೆ ಗೆಲ್ಲಲು ಸಾಧ್ಯ.
  • ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ: ಒಂದು ವೇಳೆ ಮಳೆ ಅಥವಾ ಇತರ ಕಾರಣಗಳಿಂದ ಎರಡೂ ತಂಡಗಳ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಅಂದರೆ ಕರ್ನಾಟಕ ತಂಡ  ತನ್ನ ಮೊದಲ ಇನಿಂಗ್ಸ್ ಮುಗಿಸುವ ಮೊದಲೇ ಪಂದ್ಯ ಅಂತ್ಯವಾದರೆ ಆಗ ಲೀಗ್ ಹಂತದ ಅಂಕಗಳನ್ನು ಪರಿಗಣಿಸಲಾಗುತ್ತದೆ.
  • ಲೀಗ್ ಹಂತದ ಅಂಕಗಳು ಸಮ: ಒಂದು ವೇಳೆ ಉಭಯ ತಂಡಗಳ ಲೀಗ್ ಹಂತದ ಅಂಕಗಳು ಸಮವಾಗಿದ್ದರೆ, ಈ ವೇಳೆ ಯಾವ ತಂಡಕ್ಕೆ ಹೆಚ್ಚು ಬೋನಸ್ ಅಂಕ ಸಿಕ್ಕಿದೆ ಎಂದು ನೋಡಲಾಗುತ್ತದೆ.
  • ಬೋನಸ್ ಅಂಕಗಳು ಸಮ: ಲೀಗ್ ಅಂಕಗಳು ಮತ್ತು  ಬೋನಸ್ ಅಂಕಗಳು ಸಮವಾಗಿದ್ದರೆ ಲೀಗ್ ಹಂತದಲ್ಲಿ ಹೆಚ್ಚಿನ ಗೆಲುವು ಸಾಧಿಸಿದ ತಂಡ ಯಾವುದೆಂದು ನೋಡಲಾಗುತ್ತದೆ.
  • ಹೆಚ್ಚಿನ ಗೆಲುವುಗಳು ಸಮ: ಇನ್ನು ಲೀಗ್ ಹಂತದಲ್ಲಿ ಉಭಯ ತಂಡಗಳು ಸಮಾನವಾದ ಗೆಲುವು ದಾಖಲಿಸಿದ್ದರೆ ಕ್ವೋಶಿಯಂಟ್​​ನ ಮೊರೆ ಹೋಗಲಾಗುತ್ತದೆ.
  • ಕ್ವೋಶಿಯಂಟ್: ಲೀಗ್ ಹಂತದಲ್ಲಿ ಎರಡು ತಂಡಗಳ ಗೆಲುವುಗಳ ಸಂಖ್ಯೆಯೂ ಸಮನಾಗಿದ್ದರೆ, ಇಡೀ ಟೂರ್ನಿಯಲ್ಲಿ ತಂಡಗಳ ಬ್ಯಾಟಿಂಗ್ ಸರಾಸರಿ ಮತ್ತು ಬೌಲಿಂಗ್ ಸರಾಸರಿಯ ಅನುಪಾತವನ್ನು ಲೆಕ್ಕ ಹಾಕಲಾಗುತ್ತದೆ. ಈ ವೇಳೆ ಯಾವ ತಂಡ ಕ್ವೋಶಿಯಂಟ್ ಹೆಚ್ಚಿರುತ್ತದೋ ಅವರೇ ಚಾಂಪಿಯನ್. ಕ್ವೋಶಿಯಂಟ್ ಎಂದರೆ- (ತಂಡದ ಒಟ್ಟು ರನ್ / ಒಟ್ಟು ವಿಕೆಟ್ ಪತನ) ÷ (ಎದುರಾಳಿ ತಂಡದ ಒಟ್ಟು ರನ್ / ಎದುರಾಳಿಯ ಒಟ್ಟು ವಿಕೆಟ್ ಪತನ)
  • ಕ್ವೋಶಿಯಂಟ್ ಸಮ: ಕ್ವೋಶಿಯಂಟ್ ಲೆಕ್ಕಾಚಾರ ಕೂಡ ಸಮವಾಗಿದ್ದರೆ ಪ್ರತಿ ವಿಕೆಟ್‌ಗೆ ಗಳಿಸಿದ ರನ್‌ಗಳ ಸರಾಸರಿಯನ್ನು ನೋಡಲಾಗುತ್ತದೆ. ಈ ವೇಳೆ ಯಾರು ಮುಂದಿರುತ್ತಾರೋ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
  • ಜಂಟಿ ವಿಜೇತರು: ಮೇಲೆ ತಿಳಿಸಿದ ಎಲ್ಲಾ ಮಾನದಂಡಗಳಲ್ಲೂ (Points, Wins, Quotient) ಉಭಯ ತಂಡಗಳು ಸಮಬಲ ಸಾಧಿಸಿದರೆ ಮಾತ್ರ, ರಣಜಿ ಟ್ರೋಫಿಯನ್ನು ಉಭಯ ತಂಡಗಳಿಗೆ ಹಂಚಲಾಗುತ್ತದೆ. ಅಂದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: IND vs ZIM: ಪಂದ್ಯ ಗೆಲ್ಲಲು ‘ಕೆಮಿಕಲ್’ ಮೊರೆ ಹೋದ ಟೀಮ್ ಇಂಡಿಯಾ?

ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ಕರ್ನಾಟಕ ತಂಡದ ಮೊದಲ ಇನಿಂಗ್ಸ್​ ಐದನೇ ದಿನದಾಟದ ಮೊದಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಐದನೇ ದಿನದಾಟದ ಅಂತ್ಯದೊಳಗೆ ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಆಗದೇ ಇದ್ದರೆ ಮಾತ್ರ ಪಂದ್ಯವನ್ನು 6ನೇ ದಿನದಾಟಕ್ಕೆ ಕೊಂಡೊಯ್ಯಲಾಗುತ್ತದೆ. ಹೀಗಾಗಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಣ ಪಂದ್ಯದಲ್ಲಿ ಫಲಿತಾಂಶವನ್ನು ಎದುರು ನೋಡಬಹುದು.

Source link

Leave a Reply

Your email address will not be published. Required fields are marked *