ಬೆಂಗಳೂರು, ಏಪ್ರಿಲ್ 20: ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ನಲಪಾಡ್ ನಿವಾಸ ಸೇರಿದಂತೆ 12 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಈ ಪರಿಶೀಲನೆ ಈಗಲೂ ಮುಂದುವರಿದಿದೆ. ಅಂದಹಾಗೆ, 10 ಲಕ್ಷ ರೂ. ವಹಿವಾಟಿಗೆ ಸಂಬಂಧಿಸಿ ಈ ದಾಳಿ ನಡೆದಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ. ಅದಕ್ಕೆ ಕಾರಣ 2020ರಲ್ಲಿ ದಾಖಲಾಗಿದ್ದ ದೂರು. 2020ರಲ್ಲಿ ಯಶೋದಾದೇವಿ ಎಂಬುವವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಿಂದ ತನಿಖೆ ಪ್ರಾರಂಭವಾಗಿತ್ತು. ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ ಶ್ರೀಕಿ (ಶ್ರೀಕೃಷ್ಣ), ರಾಬಿನ್ ಖಂಡೇಲ್ವಾಲ ಮತ್ತು ಅಜಿತ್ ಖಂಡೇಲ್ವಾಲ ವಿರುದ್ಧ, ‘28 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 45 ಲಕ್ಷ ರೂಪಾಯಿ ಲಾಭ ಗಳಿಸಬಹುದು’ ಎಂದು ಭರವಸೆ ನೀಡಿ ವಂಚಿಸಿದ ಆರೋಪವಿತ್ತು. ಯಶೋದಾದೇವಿ ಅಜಿತ್ ಖಾತೆಗೆ 28 ಲಕ್ಷ ರೂಪಾಯಿ ಜಮಾ ಮಾಡಿದ್ದರು. ಆದರೆ ಲಾಭವೂ ಸಿಗದೆ, ಹೂಡಿಕೆ ಮಾಡಿದ ಹಣವೂ ಮರಳದೆ ವಂಚನೆಗೆ ಒಳಗಾಗಿದ್ದರು.
ಈ ಪ್ರಕರಣದ ತನಿಖೆ ವೇಳೆ 10 ಲಕ್ಷ ರೂ. ವಹಿವಾಟು ಸಂಬಂಧ ನಲಪಾಡ್ ಹೆಸರು ಕೂಡ ಕೇಳಿಬಂದಿತ್ತು. ಸರ್ಕಾರ ರಚಿಸಿದ ಎಸ್ಐಟಿ ಈ ವಂಚನೆ ಮತ್ತು ಎನ್ಡಿಪಿಎಸ್ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿತ್ತು. ಬಿಟ್ಕಾಯಿನ್ ಹ್ಯಾಕಿಂಗ್ ಮತ್ತು ಕ್ರಿಪ್ಟೋ ವಂಚನೆಗಳ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂಬ ಆರೋಪವಿದೆ. ಇದೇ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪಿಎಂಎಲ್ಎ ಕಾಯ್ದೆಯಡಿ ತನಿಖೆಯನ್ನು ಪ್ರಾರಂಭಿಸಿದೆ. ಇದೀಗ ನಲಪಾಡ್ ಮನೆ ಮೇಲೆ ದಾಳಿಗೆ ಈ ವಹಿವಾಟೇ ಕಾರಣವಾಯ್ತೇ ಎಂಬ ಪ್ರಶ್ನೆ ಮೂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ