ಜಯಂ ರವಿ (Jayam Ravi), ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ತಮಿಳಿನ ‘ಜಯಂ’ ಸಿನಿಮಾ ಮೂಲಕ ನಟರಾದ ರವಿ ಮೋಹನ್, ಆ ನಂತರ ನಾಯಕರಾಗಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನಿಡಿದ್ದಾರೆ. ಆದರೆ ಇತ್ತೀಚೆಗೆ ಜಯಂ ರವಿ ಅವರು ಸಿನಿಮಾಗಳ ಬದಲಿಗೆ ತಮ್ಮ ಖಾಸಗಿ ಬದುಕಿನಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಜಯಂ ರವಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಗಾಯಕಿ ಕೆನೀಶಾ ಪ್ರಾನ್ಸಿಸ್ ಜೊತೆ ಸಂಬಂಧದಲ್ಲಿದ್ದರು. ಇದೀಗ ರವಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಮುಖ ಘೋಷಣೆ ಮಾಡಿದ್ದಾರೆ. ‘ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದಿದ್ದಾರೆ.
ರವಿ, ತಮ್ಮ ಪತ್ನಿ ಆರತಿ ಇಂದ ಪ್ರತ್ಯೇಕವಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ರವಿ, ತಮ್ಮ ಮನೆಯನ್ನು ಸಹ ಪತ್ನಿಗೆ ಬಿಟ್ಟುಕೊಟ್ಟಿದ್ದರು. ಆದರೆ ಅವರಿಗೆ ಇನ್ನೂ ಅಧಿಕೃತವಾಗಿ ವಿಚ್ಛೇದನ ದೊರೆತಿಲ್ಲ. ಇದೀಗ ಸುದ್ದಿಗೋಷ್ಠಿ ನಡೆಸಿ ಭಾವುಕರಾಗಿ ಮಾತನಾಡಿದ ಅವರು, ‘ನನ್ನನ್ನು ಗುಲಾನಂತೆ ಇರಿಸಿಕೊಳ್ಳಲಾಗಿತ್ತು’ ಎಂದಿದ್ದಾರೆ. ಸುದ್ದಿಗೋಷ್ಠಿ ಸಂದರ್ಭದಲ್ಲಿ ಜೋರಾಗಿ ಕಿರುಚಾಡಿ, ಕೂಗಾಡಿ ಜಯಂ ರವಿ ಮಾತನಾಡಿದ್ದು, ಅದರ ವಿಡಿಯೋಗಳು ಇದೀಗ ವೈರಲ್ ಆಗಿವೆ.
‘ನನಗೆ ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸಲ್ಲ. ನನಗೆ ಆಗಿರುವ ಅವಮಾನಗಳು, ಹಾನಿ ಆಗಿರುವ ನನ್ನ ಖಾಸಗಿ ಬದುಕು ಎಲ್ಲವನ್ನೂ ನಾನು ಸರಿ ಮಾಡಿಕೊಳ್ಳುವೆ. ಅಲ್ಲಿಯ ವರೆಗೆ ನನಗೆ ನಟಿಸಲು ಆಗುವುದಿಲ್ಲ. ನಾನು ಸುಮ್ಮನೆ ಕೂರುವುದೂ ಇಲ್ಲ. ಎಲ್ಲ ಸತ್ಯವನ್ನು ಹೊರಗೆ ತೆಗೆದುಕೊಂಡು ಬರುವೆ, 14 ವರ್ಷಗಳಿಂದ ಸುಮ್ಮನಿದ್ದೆ, ಆದರೆ ಇನ್ನು ಮುಂದೆ ನಾನು ಸುಮ್ಮನೆ ಕೂರುವುದಿಲ್ಲ’ ಎಂದು ರವಿ ಹೇಳಿದ್ದಾರೆ.
‘ಆನ್ಲೈನ್ ನಿಂದನೆ ಮಾಡುವವರ ವಿರುದ್ಧ ಹೋರಾಡುತ್ತೇನೆ. ನನ್ನ ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಹೇಗೆ ಹೇಳುತ್ತೀರಿ, ಮಕ್ಕಳ ಫೀಸು 90 ಲಕ್ಷ ರೂಪಾಯಿ ಕಟ್ಟುತ್ತಿದ್ದೇನೆ. ಸಣ್ಣ ಮಗನ ಜೊತೆಗೆ ಪ್ರತಿದಿನ ಚೆಸ್ ಆಡುತ್ತಿದ್ದೆ. ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಹೇಗೆ ಹೇಳುತ್ತಾರೆ. ಈಗ ನನ್ನ ಮಕ್ಕಳನ್ನೇ ನೋಡಲು ಬಿಡುತ್ತಿಲ್ಲ. ಶಾಲೆಗೆ ಬಾಡಿಗಾರ್ಡ್ ಜೊತೆಗೆ ಕಳಿಸುತ್ತಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ:ಮಾಜಿ ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಜಯಂ ರವಿ
‘ನಾನು ಇದ್ದಾಗ ನನ್ನನ್ನು ಗುಲಾಮನಂತೆ ನೋಡಿದರು. ಇರಬೇಕಾದರೆ ನೋಡಿಕೊಳ್ಳಲು ಆಗಲಿಲ್ಲ ಎಂದಮೇಲೆ, ಇಲ್ಲದೇ ಇದ್ದಾಗ ಮುಚ್ಚಿಕೊಂಡು ಇರಬೇಕು. ನಾನು ಸಾಕಷ್ಟು ನೊಂದಿದ್ದೀನಿ, ಈ ಆನ್ಲೈನ್ ನಿಂದನೆಯಿಂದ ಇನ್ನಷ್ಟು ನೋಯಿಸಬೇಡಿ. ಈಗಾಗಲೇ ಒಬ್ಬ ಮಹಿಳೆಯನ್ನು ಹಾಳು ಮಾಡಿದ್ದೀರಿ, ಚೆನ್ನೈನಿಂದ ದೂರ ಹೋಗುವಂತೆ ಮಾಡಿದ್ದೀರಿ (ಗೆಳತಿ ಕೆನೀಶಾ ಚೆನ್ನೈ ಬಿಟ್ಟು ಹೋದ ಬಗ್ಗೆ) ಇದನ್ನು ಮುಂದುವರೆಸಬೇಡಿ, ಮುಂದಿನ ದಿನಗಳಲ್ಲಿ ಸಾಕಷ್ಟು ಸತ್ಯಗಳು ಹೊರಗೆ ಬರಲಿವೆ’ ಎಂದು ರವಿ ಹೇಳಿದ್ದಾರೆ.
ರವಿ ಜೊತೆಗೆ ಆಪ್ತವಾಗಿದ್ದ ಗಾಯಕಿ ಕೆನೀಶಾ ಫ್ರಾನ್ಸಿಸ್ ಈಗ ರವಿ ಅವರ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕನ್ನಡಿಯ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿಕೊಂಡಿರುವ ಫೋಟೋ ಒಂದನ್ನು ಕೆನೀಶಾ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ಬರೆದಿರುವ ಶೀರ್ಷಿಕೆ ನೆಟ್ಟಿಗರ ಗಮನ ಸೆಳೆದಿದೆ. ಅವರು, ‘ವಿದಾಯ ಚೆನ್ನೈ, ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಅಂದಹಾಗೆ, ಅವನು ಈಗ ಸಂಪೂರ್ಣವಾಗಿ ನಿಮ್ಮವನೇ’ ಎಂದು ಬರೆದುಕೊಂಡಿದ್ದಾರೆ. ಅದರ ಬೆನ್ನಲ್ಲೆ ಇದೀಗ ರವಿ, ಸುದ್ದಿಗೋಷ್ಠಿ ನಡೆಸಿ ಪರೋಕ್ಷವಾಗಿ ಪತ್ನಿಯ ವಿರುದ್ಧ ಟ್ರೋಲಿಗರ ವಿರುದ್ಧ ಕಿಡಿ ಕಾರಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 3:18 pm, Sat, 16 May 26