Video: ತಾನು 15 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬ್ಯಾಂಕ್​ನಲ್ಲೇ 8.70 ಕೋಟಿ ರೂ. ದರೋಡೆ ಮಾಡಿ ಸಿಕ್ಕಿಬಿದ್ದ – Kannada News | Bank Official Accused in Massive RBI Currency Chest Heist on Gandhi Road Ahmedabad

ಅಹಮದಾಬಾದ್, ಮೇ 25: ವ್ಯಕ್ತಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿ(Bank)ನಲ್ಲಿ ದರೋಡೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಅಹಮದಾಬಾದಿನ ಬ್ಯಾಂಕ್ ಆಫ್ ಬರೋಡಾದಲ್ಲಿ ದರೋಡೆಕೋರರ ಗ್ಯಾಂಗ್ ಒಂದು 8.70 ಕೋಟಿ ರೂ. ದರೋಡೆ ಮಾಡಿದೆ. ಗಾಂಧಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಆರ್‌ಬಿಐ ಕರೆನ್ಸಿ ಚೆಸ್ಟ್‌ನಿಂದ (RBI Currency Chest) ಬರೋಬ್ಬರಿ 8.70ಕೋಟಿ ರೂಪಾಯಿ ಹಣವನ್ನು ಅತ್ಯಂತ ಚಾಣಾಕ್ಷತನದಿಂದ ಕದ್ದು, ಯಾರಿಗೂ ಅನುಮಾನ ಬಾರದಂತೆ ಮೂರು ತಿಂಗಳ ಕಾಲ ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಜಾಯಿಂಟ್ ಕಸ್ಟೋಡಿಯನ್ ಕೊನೆಗೂ ಸಿಸಿಟಿವಿ ಕ್ಯಾಮೆರಾದಿಂದಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ರೋಚಕ ದರೋಡೆಯ ಸಿಸಿಟಿವಿ ದೃಶ್ಯಾವಳಿಗಳು ಇಂದು ಲೀಕ್ ಆಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಬ್ಯಾಂಕ್‌ನ ಆರ್‌ಬಿಐ ಕರೆನ್ಸಿ ಚೆಸ್ಟ್‌ನಲ್ಲಿ ಕಳೆದ 15 ವರ್ಷಗಳಿಂದ ಅತ್ಯಂತ ಜವಾಬ್ದಾರಿಯುತ ಜಂಟಿ ಕಸ್ಟೋಡಿಯನ್ ಹುದ್ದೆಯಲ್ಲಿದ್ದ ಹರಸಿದ್ಧ್ ಕಡಿಯಾರ್ ಎಂಬಾತನೇ ಈ ಮೆಗಾ ದರೋಡೆಯ ಮುಖ್ಯ ಸೂತ್ರಧಾರಿ. ಅತ್ಯಂತ ವಿಲಾಸಿ ಮತ್ತು ಐಷಾರಾಮಿ ಜೀವನ ನಡೆಸಬೇಕೆಂಬ ದುರಾಶೆಗೆ ಬಿದ್ದ ಈತ, ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ಗೇ ಕನ್ನ ಹಾಕಲು ಪಕ್ಕಾ ಪ್ಲಾನ್ ಮಾಡಿದ್ದ.

ತನಿಖಾ ವರದಿಗಳ ಪ್ರಕಾರ, ಈ ಘಟನೆ ನಡೆದಿದ್ದು2026ರ ಜನವರಿ 13ರ ರಾತ್ರಿ. ಕಡಿಯಾರ್ ಕರೆನ್ಸಿ ಚೆಸ್ಟ್‌ನಲ್ಲಿದ್ದ ಬರೋಬ್ಬರಿ 8.70 ಕೋಟಿ ರೂಪಾಯಿ ನಗದು ಹಣವನ್ನು ಒಂದು ದೊಡ್ಡ ಬಾಕ್ಸ್‌ನಲ್ಲಿ ತುಂಬಿಸಿಟ್ಟಿದ್ದ. ಯಾರಿಗೂ ಅನುಮಾನ ಬಾರದಂತೆ ಆ ಹಣದ ಬಾಕ್ಸ್ ಅನ್ನು ಲಗೇಜ್ ವಾಹನಕ್ಕೆ ಲೋಡ್ ಮಾಡಿಸಿ, ಅತ್ಯಂತ ಬಿಗಿ ಭದ್ರತೆ ಇರುವ ಕರೆನ್ಸಿ ಚೆಸ್ಟ್‌ನಿಂದ ಕೋಟ್ಯಂತರ ರೂಪಾಯಿ ಹಣದೊಂದಿಗೆ ರಾಜಾರೋಷವಾಗಿ ಹೊರನಡೆದಿದ್ದಾನೆ.

ಮತ್ತಷ್ಟು ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಸಾಮಾನ್ಯವಾಗಿ ಬ್ಯಾಂಕ್‌ಗಳ ಸಿಸಿಟಿವಿ ದೃಶ್ಯಾವಳಿಗಳು  90 ದಿನಗಳ ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತವೆ ಎಂಬ ಬಲವಾದ ನಂಬಿಕೆ ಕಡಿಯಾರ್‌ಗೆ ಇತ್ತು. ಹೀಗಾಗಿ, ದರೋಡೆ ಮಾಡಿದ ನಂತರವೂ ಆತ ಯಾವುದೇ ಭಯವಿಲ್ಲದೆ, ತನಗೇನೂ ತಿಳಿಯದವನಂತೆ ಪ್ರತಿದಿನ ಎಂದಿನಂತೆ ಬ್ಯಾಂಕ್ ಕೆಲಸಕ್ಕೆ ಹಾಜರಾಗುತ್ತಿದ್ದ ತಾನು ಸಿಕ್ಕಿಬೀಳುವುದಿಲ್ಲ ಎಂದು ಆತ ಬೀಗುತ್ತಿದ್ದಾಗಲೇ ಬ್ಯಾಂಕ್‌ನ ಆಡಿಟಿಂಗ್ ವೇಳೆ ಕೋಟ್ಯಂತರ ರೂಪಾಯಿ ವ್ಯತ್ಯಾಸ ಕಂಡುಬಂದಿದೆ.

ಪೊಲೀಸರು ತನಿಖೆ ಆರಂಭಿಸಿ ಬ್ಯಾಂಕ್‌ನ ಹಳೆಯ ಡೇಟಾವನ್ನು ಪರಿಶೀಲಿಸಿದಾಗ, ಡಿಲೀಟ್ ಆಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ತಾಂತ್ರಿಕ ತಜ್ಞರ ಸಹಾಯದಿಂದ ಯಶಸ್ವಿಯಾಗಿ ರಿಕವರಿ  ಮಾಡಿದ್ದಾರೆ. ಈ ದೃಶ್ಯದಲ್ಲಿ ಕಡಿಯಾರ್ ಹಣದ ಬಾಕ್ಸ್ ತೆಗೆದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದ್ದು, ಪೊಲೀಸರಿಗೆ ಇದು ಅತ್ಯಂತ ಪ್ರಮುಖ ಸಾಕ್ಷಿಯಾಗಿದೆ.

ಪ್ರಸ್ತುತ ಆರೋಪಿ ಹರಸಿದ್ಧ್ ಕಡಿಯಾರ್ ವಿರುದ್ಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಇಷ್ಟು ದೊಡ್ಡ ಮೊತ್ತದ ದರೋಡೆಯಲ್ಲಿ ಬ್ಯಾಂಕ್‌ನ ಇತರ ಸಿಬ್ಬಂದಿ ಅಥವಾ ಹೊರಗಿನ ಸಹಚರರು ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಕದ್ದ ಹಣವನ್ನು ಎಲ್ಲಿ ಬಚ್ಚಿಡಲಾಗಿದೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *