ಗೃಹಲಕ್ಷ್ಮಿ ಯೋಜನೆ (ಸಾಂದರ್ಭಿಕ ಚಿತ್ರ)Image Credit source: tv9
ಬೆಂಗಳೂರು, ಜೂನ್ 10: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ (Gruha Lakshmi)’ ಯೋಜನೆಯಲ್ಲಿ ನಡೆದಿರುವ ಭಾರಿ ತಾಂತ್ರಿಕ ಲೋಪ ಹಾಗೂ ಹಣ ದುರ್ಬಳಕೆಯನ್ನು ತಡೆಯಲು ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಪೈಕಿ ಮೃತಪಟ್ಟಿರುವ ಮಹಿಳೆಯರ ಖಾತೆಗಳಿಗೂ ಕಳೆದ ಐದು ತಿಂಗಳುಗಳಿಂದ ಹಣ ಸಂದಾಯವಾಗುತ್ತಿರುವುದು ಪತ್ತೆಯಾಗಿದ್ದು, ಇಡೀ ಯೋಜನೆಯನ್ನು ಸಮೂಲವಾಗಿ ಪರಿಷ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಖ್ಯಾಂಶಗಳು
- 1.48 ಲಕ್ಷ ಮೃತ ಫಲಾನುಭವಿಗಳ ಪತ್ತೆ.
- ಮೃತರ ಖಾತೆಗಳಿಗೆ 128 ಕೋಟಿ ರೂ. ಜಮೆ.
- ಗೊಂದಲ ನಿವಾರಣೆಗೆ ಮರು ಅರ್ಜಿ ಸ್ವೀಕಾರ.
ದಿನೇಶ್ ಗೂಳಿಗೌಡ ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ನಡೆಸಿದ ಪರಿಶೀಲನೆ ಹಾಗೂ ತಾಂತ್ರಿಕ ಆಡಿಟ್ ವೇಳೆ ಈ ಭಾರಿ ದೋಷ ಬೆಳಕಿಗೆ ಬಂದಿದೆ. ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಪಡೆಯುತ್ತಿದ್ದ ಸುಮಾರು 1,48,000 ಮಹಿಳೆಯರು ಈಗಾಗಲೇ ಮೃತಪಟ್ಟಿದ್ದರೂ, ಅವರ ಹೆಸರಿನ ಬ್ಯಾಂಕ್ ಖಾತೆಗಳಿಗೆ ಕಳೆದ ಐದು ತಿಂಗಳುಗಳಿಂದ ನಿರಂತರವಾಗಿ ಹಣ ಜಮೆಯಾಗುತ್ತಿತ್ತು. ಈ ಮೂಲಕ ಬರೋಬ್ಬರಿ 128 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಹಣ ದುರ್ಬಳಕೆಯಾಗಿರುವುದನ್ನು ದಿನೇಶ್ ಗೂಳಿಗೌಡ ಅಂಕಿ-ಅಂಶಗಳ ಸಹಿತ ಪತ್ತೆಮಾಡಿದ್ದಾರೆ. ಕೆಲವು ಕಡೆಗಳಲ್ಲಿ ಮೃತ ಫಲಾನುಭವಿಗಳ ಸಂಬಂಧಿಕರೇ ಎಟಿಎಂ ಹಾಗೂ ಯುಪಿಐ ಮೂಲಕ ಈ ಹಣವನ್ನು ಡ್ರಾ ಮಾಡಿಕೊಳ್ಳುತ್ತಿರುವುದು ಪತ್ತೆಯಾಗಿದೆ.
ಖಾತೆ ಒಂದು, ಮೊಬೈಲ್ ನಂಬರ್ ಬೇರೆ: ತಾಂತ್ರಿಕ ಗೊಂದಲ
ಈ ಆಘಾತಕಾರಿ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ. ತಕ್ಷಣವೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತನಿಖೆಯ ವೇಳೆ, ಯೋಜನೆಯಲ್ಲಿ ಮತ್ತೊಂದು ಗಂಭೀರ ಲೋಪ ಪತ್ತೆಯಾಗಿದ್ದು, ಬ್ಯಾಂಕ್ ಖಾತೆಯನ್ನು ಹೊಂದಿರುವ ಫಲಾನುಭವಿಯೇ ಬೇರೆ ಹಾಗೂ ಅದಕ್ಕೆ ಲಿಂಕ್ ಆಗಿರುವ ನೋಂದಾಯಿತ ಮೊಬೈಲ್ ಸಂಖ್ಯೆಗಳೇ ಬೇರೆಯಾಗಿವೆ. ಇಂತಹ ತಾಂತ್ರಿಕ ಗೊಂದಲಗಳಿಂದಾಗಿ ನಿಜವಾದ ಅರ್ಹರಿಗೆ ಹಣ ತಲುಪದೆ ವ್ಯವಸ್ಥೆ ದುರ್ಬಳಕೆಯಾಗುತ್ತಿದೆ.
ಹೊಸದಾಗಿ ಅರ್ಜಿ ಸ್ವೀಕರಿಸಲು ಸರ್ಕಾರದ ಚಿಂತನೆ
ಈ ಎಲ್ಲಾ ಗೊಂದಲಗಳು ಹಾಗೂ ಅನರ್ಹರನ್ನು ವ್ಯವಸ್ಥೆಯಿಂದ ಶಾಶ್ವತವಾಗಿ ಹೊರದಬ್ಬಲು ಸದ್ಯ ಚಾಲ್ತಿಯಲ್ಲಿರುವ ಗೃಹಲಕ್ಷ್ಮಿ ಫಲಾನುಭವಿಗಳ ಲಿಸ್ಟ್ ಅನ್ನು ಹೋಲ್ಡ್ ಮಾಡಿ, ಅರ್ಹ ಮಹಿಳೆಯರಿಂದ ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇನ್ಮುಂದೆ ಇ-ಜನ್ಮ (E-Janma) ಪೋರ್ಟಲ್ ಮೂಲಕ ಮರಣ ಪ್ರಮಾಣಪತ್ರಗಳನ್ನು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವ ಹಾಗೂ ಫಲಾನುಭವಿಗಳು ಬದುಕಿರುವ ಬಗ್ಗೆ ವಾರ್ಷಿಕವಾಗಿ ‘ಜೀವಿತ ಪ್ರಮಾಣ ಪತ್ರ’ (Life Certificate) ಅಥವಾ ಬಯೋಮೆಟ್ರಿಕ್ ಕಡ್ಡಾಯಗೊಳಿಸುವ ಕಟ್ಟುನಿಟ್ಟಿನ ನಿಯಮ ತರಲು ಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ