ಕೊಪ್ಪಳ, ಜು.7: ಅಯೋಧ್ಯೆಯ ರಾಮ ಮಂದಿರದ ಹುಂಡಿ ಎಣಿಕೆ ವೇಳೆ ಲೂಟಿ ನಡೆದಿರುವ ವಿವಾದದ ಬೆನ್ನಲ್ಲೇ, ಈಗ ಹನುಮ ಜನ್ಮ ಸ್ಥಳವಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದ (Anjanadri Hill) ಹುಂಡಿ ಎಣಿಕೆ ಪ್ರಕ್ರಿಯೆಯೂ ತೀವ್ರ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹುಂಡಿ ಎಣಿಕೆ ಕಾರ್ಯ ಮುಗಿದು ನಾಲ್ಕು ದಿನ ಕಳೆದರು ಯಾವುದೇ ಮಾಹಿತಿ ನೀಡದೆ, ತಡವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ತಾಲೂಕು ಆಡಳಿತದ ನಡೆ ಸದ್ಯ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಜುಲೈ 3ರಂದು (ಶುಕ್ರವಾರ) ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣದ ಎಣಿಕೆ ಕಾರ್ಯ ನಡೆದಿತ್ತು. ಸಾಮಾನ್ಯವಾಗಿ ಹುಂಡಿ ಎಣಿಕೆ ಮುಗಿದ ತಕ್ಷಣವೇ ಇಲಾಖೆಯು ಸಂಗ್ರಹವಾದ ಮೊತ್ತದ ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತದೆ. ಆದರೆ, ಈ ಬಾರಿ ಎಣಿಕೆ ಮುಗಿದು 4 ದಿನಗಳ ಕಾಲ ತಾಲೂಕು ಆಡಳಿತ ಮೌನ ವಹಿಸಿದ್ದು, ಇಂದು ಜುಲೈ 7 ರಂದು ತಡವಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ರಾಮ ಮಂದಿರದ ಹುಂಡಿ ವಿವಾದದ ಮಧ್ಯೆ ಅಧಿಕಾರಿಗಳು ಈ ರೀತಿ ನಡೆದುಕೊಂಡಿರುವುದು ಹನುಮ ಭಕ್ತರಲ್ಲಿ ಹಲವು ಸಂಶಯಗಳನ್ನು ಹುಟ್ಟುಹಾಕಿದೆ.
94 ದಿನಗಳಲ್ಲಿ ಬರೊಬ್ಬರಿ 71.77 ಲಕ್ಷ ರೂ. ಸಂಗ್ರಹ:
ಇದಕ್ಕೂ ಮುನ್ನ ಮಾರ್ಚ್ 23 ರಂದು ಅಂಜನಾದ್ರಿಯ ಹುಂಡಿ ಎಣಿಕೆ ಮಾಡಲಾಗಿತ್ತು. ಅದಾಗಿ ಕಳೆದ 94 ದಿನಗಳ ಅವಧಿಯಲ್ಲಿ ಭಕ್ತರು ದೇವಸ್ಥಾನದ ಹುಂಡಿಗೆ ಭರಪೂರ ಕಾಣಿಕೆ ಅರ್ಪಿಸಿದ್ದಾರೆ. ಪ್ರಸ್ತುತ ಜುಲೈ 3 ರಂದು ನಡೆದ ಎಣಿಕೆಯಲ್ಲಿ ಒಟ್ಟು 71,77,460 ರೂಪಾಯಿ ನಗದು ಹಣ ಸಂಗ್ರಹವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ: 45 ದಿನಗಳಲ್ಲಿ 70 ಬಾರಿ ಕಳ್ಳತನ, ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧ ತನಿಖೆ
ಹುಂಡಿಯಲ್ಲಿ ಪತ್ತೆಯಾದ ವಿದೇಶಿ ಕರೆನ್ಸಿಗಳು:
ಈ ಬಾರಿಯ ಕಾಣಿಕೆಯಲ್ಲಿ ಭಾರತೀಯ ಕರೆನ್ಸಿ ಮಾತ್ರವಲ್ಲದೆ ಗಣನೀಯ ಪ್ರಮಾಣದಲ್ಲಿ ವಿದೇಶಿ ನೋಟುಗಳು ಸಹ ಪತ್ತೆಯಾಗಿವೆ. ದೇಶ-ವಿದೇಶಗಳಿಂದ ಅಂಜನಾದ್ರಿಗೆ ಆಗಮಿಸುವ ಭಕ್ತರು ದೊಡ್ಡ ಮಟ್ಟದಲ್ಲಿ ಕಾಣಿಕೆ ಹಾಕಿದ್ದು, ಹುಂಡಿಯಲ್ಲಿ ಮುಖ್ಯವಾಗಿ ನೇಪಾಳ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ , ಥೈಲ್ಯಾಂಡ್ ಹಾಗೂ ಹಾಂಗ್ ಕಾಂಗ್ ದೇಶಗಳ ಕರೆನ್ಸಿಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 2:46 pm, Tue, 7 July 26