ಬೆಳಗಾವಿ, ಜುಲೈ 13: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಕಾರವಾರದ ಜೋಯಿಡಾದಲ್ಲಿ ಹುಟ್ಟುವ ದೂದ್ ಸಾಗರ ಜಲಪಾತವು ಜೀವಕಳೆ ಪಡೆದುಕೊಂಡಿದೆ. ಹಾಲಿನ ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಪಾತವನ್ನು ನೋಡುವ ದೃಶ್ಯ ಕಣ್ಣಿಗೆ ಹಬ್ಬವಾಗಿದೆ. ಕರ್ನಾಟಕದಲ್ಲಿ ಹುಟ್ಟಿ ಗೋವಾಕ್ಕೆ ಹರಿಯುವ ದೂದ್ ಸಾಗರ, ಮಹದಾಯಿ ನದಿಯನ್ನು ಸೇರುತ್ತದೆ. 1017 ಅಡಿ ಎತ್ತರದಿಂದ ಕಲ್ಲು-ಬಂಡೆಗಳನ್ನು ಕೊರೆದುಕೊಂಡು ರಭಸವಾಗಿ ಹರಿಯುವ ಈ ಜಲಪಾತವು ದೇಶದ ನಾಲ್ಕನೇ ಅತಿದೊಡ್ಡ ಜಲಪಾತವಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರವಾಸಿಗರಿಗೆ ಇಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ರಸ್ತುತ ಮಳೆ ಕಡಿಮೆಯಾಗಿದ್ದರೂ, ದೂದ್ ಸಾಗರದ ರುದ್ರರಮಣೀಯ ದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ