Headlines

ರಾಮನಗರದಲ್ಲಿ ಭುಗಿಲೆದ್ದ ಟೌನ್​​ಶಿಪ್ ಕಿಚ್ಚು: ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ – Kannada News | Bidadi Township Row: Farmers Clash with Officials During Project Survey

ಬಿಡದಿ ಟೌನ್​ಶಿಪ್​ ಯೋಜನೆImage Credit source: tv9 kannada

ರಾಮನಗರ, ಜುಲೈ 13: ಬಿಡದಿ ಟೌನ್​ಶಿಪ್​ (Bidadi Township) ಯೋಜನೆಗೆ ಈಗಾಗಲೇ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಮಾಡಲಾಗುತ್ತಿದೆ. ರೈತರ ಈ ತೀವ್ರ ವಿರೋಧದ ನಡುವೆಯೂ ಇಂದು ಜಂಟಿ ಅಳತೆ ಕಾರ್ಯಕ್ಕೆ (ಜೆಎಂಸಿ) ಮುಂದಾದ ಅಧಿಕಾರಿಗಳ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ (ramanagara) ತಾಲೂಕಿನ ಮಂಡಲಹಳ್ಳಿ ಗ್ರಾಮಸ್ಥರು ಸಿಡಿದೆದಿದ್ದಾರೆ. ಸರ್ವೆ ಕಾರ್ಯ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆಯಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲದೆ ಎರಡು ಕಾರುಗಳನ್ನು ಜಖಂಗೊಳಿಸಿದ್ದಾರೆ.

ನಡೆದಿದ್ದೇನು?

ಬಿಡದಿ ಟೌನ್‌ಶಿಪ್ ಯೋಜನೆ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯೋಜನೆ ವಿರೋಧಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹೀಗಿರುವಾಗ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಇಂದು ಅಧಿಕಾರಿಗಳು ಸರ್ವೆಗೆ ಆಗಮಿಸಿದ್ದಾರೆ. ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದ್ದು, ದೊಡ್ಡ ಹೈಡ್ರಾಮವೇ ನಡೆದಿದೆ.

ಅಧಿಕಾರಿಗಳಿಗೆ ಮಹಿಳೆಯರು ಪೊರಕೆ ಸೇವೆ

ವಿರೋಧದ ನಡುವೆಯೂ ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರು ಪೊರಕೆ ಸೇವೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಟ್ಟಿಗೆಯಿಂದ ಹೊಡೆದು ಎರಡು ಕಾರುಗಳನ್ನ ಹಾನಿಗೊಳಿಸಿದ್ದಾರೆ. ‘ಯಾವುದೇ ಕಾರಣಕ್ಕೂ ಸರ್ವೆ ಕಾರ್ಯ ನಡೆಸಬಾರದು’ ಎಂದು ಪಟ್ಟುಹಿಡಿಯಲಾಗಿದ್ದು, ಈ ವೇಳೆ ರೈತ ಮುಖಂಡರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ಕೂಡ ನಡೆದಿದೆ.

ಇದನ್ನೂ ಓದಿ: ಬಿಡದಿ ಟೌನ್​ಶಿಪ್ ವಿರೋಧಿಸಿ ಅಪ್ಪಿಕೋ ಚಳವಳಿ: ರಾಜ್ಯವ್ಯಾಪಿ ಜನಾಂದೋಲನಕ್ಕೆ ಹೆಚ್​ಡಿ ಕುಮಾರಸ್ವಾಮಿ ತಂತ್ರ

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು, ಅಧಿಕಾರಿಗಳನ್ನು ತಮ್ಮ ಭದ್ರತೆಯಲ್ಲಿ ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಂಡಲಹಳ್ಳಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಟೌನ್‌ಶಿಪ್ ಪರ-ವಿರೋಧದ ಎರಡೂ ಗುಂಪುಗಳು ಮುಖಾಮುಖಿ

ಇನ್ನು ಇತ್ತೀಚೆಗೆ ಟೌನ್‌ಶಿಪ್ ಪರ-ವಿರೋಧದ ಎರಡೂ ಗುಂಪುಗಳು ಮುಖಾಮುಖಿಯಾಗಿದ್ದು ಈ ವೇಳೆ ಕೂಡ ಹೈಡ್ರಾಮಾವೇ ನಡೆದಿತ್ತು. ಟೌನ್​​ಶಿಪ್ ಯೋಜನೆ ವಿರೋಧಿ ಪ್ರತಿಭಟನೆಗೆ ಆಗಮಿಸ್ತಿದ್ದ ರೈತರ ಬಸ್, ಕಾರುಗಳನ್ನು ಯೋಜನೆ ಪರ ಇರುವ ರೈತರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಹೊರ ಜಿಲ್ಲೆಗಳಿಂದ ರೈತರನ್ನು ಕರೆತಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ 2 ಗುಂಪಿನವರನ್ನ ಸಮಾಧಾನಪಡಿಸಿದ್ದರು. ಹೀಗಾಗಿ ರಾಮನಗರ ತಾಲೂಕಿನ ಬೈರಮಂಗಲದಲ್ಲಿ ಇಡೀ ದಿನ ಬಿಗುವಿನ ವಾತವರಣ ನಿರ್ಮಾಣವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *