ಬೆಂಗಳೂರು, ಜುಲೈ 27: ಕೆಪಿಎಸ್ಸಿ ನೇಮಕಾತಿಗಾಗಿ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ ಆರೋಪದ ಸಂಬಂಧ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಸುಮಾ ಸಾಹುಕಾರ್ (ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮಗಳು) ಅವರನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಿದೆ. ಸುಮಾ ಸಾಹುಕಾರ್ ಅವರ ವಾರ್ಷಿಕ ಆದಾಯ 30 ಲಕ್ಷ ರೂಪಾಯಿಗಳಾಗಿದ್ದರೂ, ಅವರು ಕೇವಲ 40,000 ರೂಪಾಯಿ ಆದಾಯ ಎಂದು ನಮೂದಿಸಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯವು ಇದನ್ನು ‘‘ಮೇಲ್ನೋಟಕ್ಕೆ ವಂಚನೆ’’ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದು, ಬಡವರಿಗೆ ಸಿಗಬೇಕಾದ ಅವಕಾಶಗಳನ್ನು ಕಿತ್ತುಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದೆ. ಪ್ರತಿ ನೇಮಕಾತಿಯೂ ವಿವಾದಗಳಿಂದ ಕೂಡಿರುತ್ತದೆ ಎಂದು ಹೈಕೋರ್ಟ್ ಕೆಪಿಎಸ್ಸಿ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಸುಮಾ ಸಾಹುಕಾರ್ ಪರ ವಕೀಲರು ತಮ್ಮ ಕಕ್ಷಿದಾರರು ವೈಯಕ್ತಿಕ ಆದಾಯವನ್ನು ಮಾತ್ರ ನಮೂದಿಸಿದ್ದಾರೆ ಎಂದು ವಾದಿಸಿದರೂ, ಆದಾಯ ಪ್ರಮಾಣಪತ್ರವು ಕುಟುಂಬದ ವಾರ್ಷಿಕ ಆದಾಯವನ್ನು ಆಧರಿಸಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ನ್ಯಾಯಾಲಯದ ಕಠಿಣ ಪ್ರಶ್ನೆಗಳು ಮತ್ತು ಅರ್ಜಿಗೆ ಯಾವುದೇ ಸ್ಟೇ ಸಿಗುವುದಿಲ್ಲ ಎಂದು ಮನವರಿಕೆಯಾದ ನಂತರ, ಸುಮಾ ಸಾಹುಕಾರ್ ತಮ್ಮ ಅರ್ಜಿಯನ್ನು ಹಿಂಪಡೆದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ