ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ವಿಚಾರಣೆಯಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಸಾಕ್ಷಿಗಳಿಗೆ ಬೆದರಿಕೆ, ತಿರುಚಿದ ಹೇಳಿಕೆ, ಮಾಫಿ ಸಾಕ್ಷಿಯಾಗಿ ಬದಲಾದ ಆರೋಪಿ ಹೀಗೆ ಹಲವು ಮಹತ್ವದ ಸಂಗತಿಗಳು ವಿಚಾರಣೆಯಲ್ಲಿ ನಡೆಯುತ್ತಿದೆ. ಸಾಕ್ಷಿಗಳ ವಿಚಾರಣೆ ವೇಳೆ ನಟ ದರ್ಶನ್, ನ್ಯಾಯಾಲಯದಲ್ಲಿ ಖುದ್ದು ಹಾಜರಿರಲು ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ವಿಚಾರಣೆ ನಡೆಯುತ್ತಿರುವ 59 ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಅದರ ವಾದ-ಪ್ರತಿವಾದ ನ್ಯಾಯಾಲಯದಲ್ಲಿ ನಡೆದಿದೆ.
ವಾದ ಮಂಡಿಸಿದ ದರ್ಶನ್ ಪರ ವಕೀಲರಾದ ಹಷ್ಮತ್ ಪಾಷಾ, ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲಿನ ವೇಳೆ ಕಕ್ಷಿದಾರರೊಂದಿಗೆ (ದರ್ಶನ್) ಜೊತೆಗೆ ಚರ್ಚಿಸಬೇಕಿದೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಅದು ಸಾಧ್ಯವಿಲ್ಲ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ನಲ್ಲಿ ಹೆಡ್ ವ್ಯವಸ್ಥೆಯೂ ಇಲ್ಲ. ಹಾಗಾಗಿ ಕಕ್ಷಿದಾರರೊಟ್ಟಿಗೆ ಚರ್ಚೆ, ಮಾಹಿತಿ ಪಡೆಯುವುದು ಅಸಾಧ್ಯ. ಹಾಗಾಗಿ ಸಾಕ್ಷಿಗಳ ವಿಚಾರಣೆ ನಡೆಸುವಾಗ ದರ್ಶನ್, ನ್ಯಾಯಾಲಯದಲ್ಲಿ ಖುದ್ದು ಹಾಜರಿರಬೇಕು ಎಂದು ವಕೀಲರು ವಾದ ಮಂಡಿಸಿದರು.
ಆದರೆ ಇದಕ್ಕೆ ಆಕ್ಷೇಪಣೆ ಎತ್ತಿದ ಸಹಾಯಕ ಎಸ್ಪಿಪಿ ಸಚಿನ್, ‘ವಿಡಿಯೋ ಕಾನ್ಫರೆನ್ಸ್ಗೆ ಕಾನೂನಿನಲ್ಲಿ ಅವಕಾಶ ಇದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಕಾನೂನಿನಲ್ಲೇ ಅವಕಾಶವಿದೆ ಖುದ್ದು ಹಾಜರಿ ಅಗತ್ಯವಿಲ್ಲವೆಂದರು, ಜೊತೆಗೆ ಬಿಹಾರದ ಪ್ರಕರಣವೊಂದನ್ನು ಉಲ್ಲೇಖಿಸಿ ವಾದವನ್ನು ಅವರು ಮಂಡಿಸಿದರು. ಪ್ರಕರಣದ ಹಿನ್ನೆಲೆ, ಈ ವರೆಗೆ ನಡೆದಿರುವ ಸಾಕ್ಷಿಗಳ ವಿಚಾರಣೆಗಳ ಹಿನ್ನೆಲೆಯಲ್ಲಿ ದರ್ಶನ್ ಖುದ್ದು ಹಾಜರಿಯ ಅಗತ್ಯತೆ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯವು, ಪ್ರಕರಣದ ಆದೇಶವನ್ನು ಆಗಸ್ಟ್ 17ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ
ನ್ಯಾಯಾಲಯದಲ್ಲಿ ದರ್ಶನ್ ಖುದ್ದು ಹಾಜರಿದ್ದರೆ, ಸಾಕ್ಷಿಗಳ ಮೇಲೆ ಪರೋಕ್ಷ ಪ್ರಭಾವ ಉಂಟಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪ್ರಾಸಿಕ್ಯೂಷನ್ ಅವರು ದರ್ಶನ್, ನ್ಯಾಯಾಲಯದಲ್ಲಿ ಖುದ್ದು ಹಾಜರಿರಬಾರದು ಎಂದು ವಾದಿಸಿದ್ದಾರೆ. ಅಲ್ಲದೆ, ಕಳೆದ ಕೆಲ ಬಾರಿ ದರ್ಶನ್ ನ್ಯಾಯಾಲಯಕ್ಕೆ ಬಂದಾಗ ಭಾರಿ ಸಂಖ್ಯೆಯ ಜನ ಸೇರಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ