ಗುನಾ, ಆಗಸ್ಟ್ 19: ಮಧ್ಯಪ್ರದೇಶದ ಗುನಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ(School)ಯೊಂದರಲ್ಲಿ ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 5ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಇಬ್ಬರು ಸಹಪಾಠಿ ಬಾಲಕಿಯರ ನೀರಿನ ಬಾಟಲಿಯಲ್ಲಿ ಮೂತ್ರ ಬೆರೆಸಿ ಅವರಿಗೆ ಬಲವಂತವಾಗಿ ಕುಡಿಸಿದ್ದಾನೆ.
ಇದಕ್ಕಿಂತ ಆಘಾತಕಾರಿ ಸಂಗತಿಯೆಂದರೆ, ಸಂತ್ರಸ್ತ ವಿದ್ಯಾರ್ಥಿನಿಯರು ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದಾಗ, ಅವರು ಬಾಯಿಯ ರುಚಿ ಕೆಟ್ಟಿದ್ದರೆ 10 ರೂ. ಚಾಕೊಲೇಟ್ ತಿಂದು ಸರಿಪಡಿಸಿಕೊಳ್ಳಿ ಎಂದು ನಿರ್ಲಕ್ಷ್ಯದಿಂದ ಉತ್ತರಿಸಿದ್ದಾರೆ.
ಗುನಾ ಜಿಲ್ಲೆಯ ಆರನ್ ಬ್ಲಾಕ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ. 5ನೇ ತರಗತಿ ಬಾಲಕನೊಬ್ಬ ನೀರಿನ ಬಾಟಲಿಗೆ ಮೂತ್ರ ಬೆರೆಸಿ ವಿದ್ಯಾರ್ಥಿನಿಯರಿಗೆ ಕುಡಿಯಲು ನೀಡಿದ್ದಾನೆ. ಬಾಲಕಿಯರು ಅಳುತ್ತಾ ಪ್ರಾಂಶುಪಾಲರಿಗೆ ದೂರು ನೀಡಿದಾಗ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಪ್ರಾಂಶುಪಾಲರು ಅಮಾನವೀಯವಾಗಿ ವರ್ತಿಸಿ ಚಾಕೊಲೇಟ್ ತಿನ್ನುವಂತೆ ಲೇವಡಿ ಮಾಡಿದ್ದಾರೆ.
ಮತ್ತಷ್ಟು ಓದಿ: ಲೈಸನ್ಸ್ ಇದ್ದರೆ ಮಾತ್ರ ಬೈಕ್ ಸ್ಟಾರ್ಟ್: ಹಾವೇರಿ ರಾಷ್ಟ್ರೋತ್ಥಾನ ಶಾಲೆಯ 5ನೇ ತರಗತಿ ಮಕ್ಕಳ ವಿನೂತನ ಆವಿಷ್ಕಾರ
ಗ್ರಾಮಸ್ಥರ ಆಕ್ರೋಶ ಹಾಗೂ ಶಾಲೆಗೆ ಬೀಗ: ಮಂಗಳವಾರ ಈ ವಿಷಯ ತಿಳಿಯುತ್ತಿದ್ದಂತೆ ಸಂತ್ರಸ್ತ ಬಾಲಕಿಯರ ಪೋಷಕರು ಹಾಗೂ ಸ್ಥಳೀಯ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ, ಶಾಲೆಯ ಮುಖ್ಯ ದ್ವಾರಕ್ಕೆ ಬೀಗ ಜಡಿದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಘಟನೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ ಕಿಶೋರ್ ಕುಮಾರ್ ಕನ್ಯಾಲ್ ಅವರು ಪ್ರಾಂಶುಪಾಲರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಆರೋನ್ನ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಮಂಜುಷಾ ಖತ್ರಿ ಹಾಗೂ ಬ್ಲಾಕ್ ಶಿಕ್ಷಣ ಅಧಿಕಾರಿ (BEO) ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಘಟನೆಯ ಸಂಪೂರ್ಣ ತನಿಖೆ ನಡೆಸಿ 2 ದಿನಗಳಲ್ಲಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಆದೇಶಿಸಲಾಗಿದ್ದು, ವರದಿ ಬಂದ ನಂತರ ಪ್ರಾಂಶುಪಾಲರು ಮತ್ತು ತಪ್ಪಿತಸ್ಥ ವಿದ್ಯಾರ್ಥಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ತಿಳಿಸಿದೆ.
ಪ್ರಾಥಮಿಕ ಶಾಲಾ ಹಂತದ ಮಕ್ಕಳಲ್ಲೇ ಇಂತಹ ಗಂಭೀರ ವಿಕೃತ ಮನಸ್ಥಿತಿ ಮತ್ತು ಅಶಿಸ್ತು ಕಂಡುಬರುತ್ತಿರುವುದು ಪೋಷಕರು ಹಾಗೂ ಶಿಕ್ಷಣ ತಜ್ಞರಲ್ಲಿ ತೀವ್ರ ಆತಂಕ ಮೂಡಿಸಿದೆ. ಶಾಲಾ ಮಕ್ಕಳ ಸುರಕ್ಷತೆ ಮತ್ತು ನೈತಿಕ ಮಾರ್ಗದರ್ಶನ ನೀಡಬೇಕಾದ ಮುಖ್ಯೋಪಾಧ್ಯಾಯರೇ ಇಂತಹ ಲೈಂಗಿಕ, ಮಾನಸಿಕ ದೌರ್ಜನ್ಯದ ಸ್ವರೂಪದ ಘಟನೆಯನ್ನು ತಮಾಷೆಯಾಗಿ ಪರಿಗಣಿಸಿರುವುದು ಶಿಕ್ಷಣ ಇಲಾಖೆಯ ಹೊಣೆಗಾರಿಕೆಯ ಮೇಲೆಯೇ ಪ್ರಶ್ನೆಗಳನ್ನು ಎತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಜಾಗೃತಿ ಸಮಿತಿ ರಚನೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 11:24 am, Wed, 19 August 26