Aati Amavasya: ನಾಳೆ ಆಟಿ ಅಮಾವಾಸ್ಯೆ; ಕರಾವಳಿಯ ‘ಪಾಲೆದ ಕಷಾಯ’ದ ಮಹತ್ವ ಹಾಗೂ ತಯಾರಿಕೆಯ ವಿವರ ಇಲ್ಲಿದೆ – Kannada News | Aati amavasya tulunadus paleda kashaya tradition and monsoon health benefits

ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿ, ಆಚರಣೆ ಹಾಗೂ ಪರಂಪರೆಯಲ್ಲಿ ‘ಆಟಿ ಅಮಾವಾಸ್ಯೆ‘ಗೆ ಅತ್ಯಂತ ವಿಶೇಷ ಸ್ಥಾನವಿದೆ. ಈ ಬಾರಿ ಆಗಸ್ಟ್ 12ರ ಬುಧವಾರದಂದು ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ತುಳುನಾಡಿನ ವಿವಿಧ ಭಾಗಗಳಲ್ಲಿ ಈ ದಿನಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಸಂಪ್ರದಾಯಗಳು ಸಂಭ್ರಮದಿಂದ ನೆರವೇರಿಸಲಾಗುತ್ತದೆ.

ಆಷಾಢ ಮಾಸದ ಅಮಾವಾಸ್ಯೆಗೆ ವಿಶೇಷ ಮಹತ್ವ:

ಆಷಾಢ ಮಾಸದ ಅಮಾವಾಸ್ಯೆಯನ್ನೇ ತುಳುನಾಡಿನಲ್ಲಿ ‘ಆಟಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ. ಇದೇ ಅಮಾವಾಸ್ಯೆಯನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ‘ಭೀಮನ ಅಮಾವಾಸ್ಯೆ’ ಅಥವಾ ‘ಆಷಾಢ ಅಮಾವಾಸ್ಯೆ’ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ತುಳುನಾಡಿನ ಜನಜೀವನದಲ್ಲಿ ಆಟಿ ತಿಂಗಳಿಗೆ ಅತ್ಯಂತ ವಿಶೇಷ ಸ್ಥಾನವಿದ್ದು, ಈ ಅವಧಿಯಲ್ಲಿ ಪ್ರಕೃತಿ, ಆರೋಗ್ಯ ಮತ್ತು ಸಾಂಪ್ರದಾಯಿಕ ಜೀವನಶೈಲಿಗೆ ಸಂಬಂಧಿಸಿದ ಹಲವು ಆಚರಣೆಗಳು ಕಂಡುಬರುತ್ತವೆ. ಅವುಗಳಲ್ಲಿ ಆಟಿ ಅಮಾವಾಸ್ಯೆಯ ಆಚರಣೆಯು ಕರಾವಳಿಗರ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ.

‘ಪಾಲೆದ ಕಷಾಯ’ ಸೇವನೆಯ ಸಾಂಪ್ರದಾಯಿಕ ನಂಬಿಕೆ:

ಆಟಿ ಅಮಾವಾಸ್ಯೆಯ ದಿನದ ಪ್ರಮುಖ ಆಚರಣೆಗಳಲ್ಲಿ ‘ಪಾಲೆದ ಕಷಾಯ’ ಸೇವನೆಯು ಅತ್ಯಂತ ವಿಶೇಷವಾದದ್ದು. ಸಾಮಾನ್ಯವಾಗಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪಾಳೆ ಮರದ (ಹಾಲೆ ಮರ ಅಥವಾ ಸರ್ಪಪರ್ಣೀ ಮರ) ತೊಗಟೆಯಿಂದ ತಯಾರಿಸಿದ ಕಷಾಯವನ್ನು ಸೇವಿಸುವ ಸಂಪ್ರದಾಯವನ್ನು ಕರಾವಳಿ ಜನರು ಇಂದಿಗೂ ಅತ್ಯಂತ ಶ್ರದ್ಧೆಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ತುಳುನಾಡಿನ ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಆಟಿ ಅಮಾವಾಸ್ಯೆಯಂದು ಪಾಳೆ ಮರದಲ್ಲಿ 108 ಗಿಡಮೂಲಿಕೆಗಳ ಔಷಧೀಯ ಗುಣಗಳು ಸೇರಿರುತ್ತವೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಈ ಪವಿತ್ರ ದಿನದಂದು ತಯಾರಿಸುವ ಕಷಾಯಕ್ಕೆ ವಿಶೇಷ ಧಾರ್ಮಿಕ ಮತ್ತು ಆರೋಗ್ಯಕರ ಮಹತ್ವ ನೀಡಲಾಗುತ್ತದೆ.

ಕಷಾಯ ತಯಾರಿಸುವ ವಿಧಾನ ಮತ್ತು ಮೆಂತ್ಯ ಗಂಜಿ:

ಬ್ರಾಹ್ಮಿ ಮುಹೂರ್ತದಲ್ಲಿ ಪಾಲೆ ಮರದ ಕೆತ್ತೆಯನ್ನು (ತೊಗಟೆ) ತಂದು, ಚೆನ್ನಾಗಿ ತೊಳೆದು ಅದರ ಹೊರಕವಚವನ್ನು ಕೆರೆದು ತೆಗೆಯಲಾಗುತ್ತದೆ. ನಂತರ ಅದನ್ನು ಕಲ್ಲಿನಲ್ಲಿ ಜಜ್ಜಿ ರಸವನ್ನು (ಹಾಲು) ಹೊರತೆಗೆಯಲಾಗುತ್ತದೆ. ಈ ರಸಕ್ಕೆ ಕರಿಮೆಣಸು, ಬೆಳ್ಳುಳ್ಳಿ ಮತ್ತು ಓಮ್ ಕಾಳುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ಕಷಾಯ ಸಿದ್ಧಪಡಿಸಲಾಗುತ್ತದೆ. ಅತ್ಯಂತ ಕಹಿಯಾಗಿರುವ ಈ ಆಟಿಯ ಕಷಾಯವನ್ನು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವಿಸಲಾಗುತ್ತದೆ. ಇದರ ಜೊತೆಗೆ, ಈ ದಿನ ದೇಹಕ್ಕೆ ತಂಪು ನೀಡಲು ಮೆಂತ್ಯ ಗಂಜಿಯನ್ನು ತಯಾರಿಸಿ ಸೇವಿಸುವುದು ತುಳುನಾಡಿನ ಮತ್ತೊಂದು ಸಾಂಪ್ರದಾಯಿಕ ಪದ್ಧತಿಯಾಗಿದೆ.

ಆರೋಗ್ಯದ ದೃಷ್ಟಿಯಿಂದ ಕಷಾಯದ ಪ್ರಯೋಜನಗಳು:

ಹಿರಿಯರು ಪಾರಂಪರಿಕವಾಗಿ ಪಾಲೆದ ಕಷಾಯವನ್ನು ದೇಹಕ್ಕೆ ಅತ್ಯಂತ ಆರೋಗ್ಯಕರವೆಂದು ಪರಿಗಣಿಸಿಕೊಂಡು ಬಂದಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಎದುರಾಗುವ ವಿವಿಧ ಆರೋಗ್ಯ ಸಮಸ್ಯೆಗಳು ಮತ್ತು ರೋಗರುಜಿನಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದನ್ನು ಔಷಧೀಯ ಪದ್ಧತಿಯ ಭಾಗವಾಗಿ ಸೇವಿಸಲಾಗುತ್ತದೆ. ಆದರೆ ಯಾವುದೇ ಔಷಧೀಯ ಸಸ್ಯ ಅಥವಾ ಕಷಾಯವನ್ನು ಸೇವಿಸುವಾಗ ಮರದ ಸರಿಯಾದ ಗುರುತು, ತಯಾರಿಸುವ ವಿಧಾನ ಹಾಗೂ ಸೂಕ್ತ ಪ್ರಮಾಣದ ಬಗ್ಗೆ ತಿಳಿದಿರುವುದು ಅತ್ಯಗತ್ಯ. ಯಾವುದೇ ಆರೋಗ್ಯ ಸಮಸ್ಯೆಗಳಿರುವವರು ತಜ್ಞರ ಸಲಹೆ ಪಡೆದು ಸೇವಿಸುವುದು ಸೂಕ್ತ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *