ಬೆಂಗಳೂರು, ಮಾರ್ಚ್ 29: ಬಿರು ಬೇಸಿಗೆಯಲ್ಲೇ ಮಳೆ ಅಬ್ಬರಿಸುತ್ತಿದೆ. ರಾಜ್ಯದ ಇಂದು ಕೂಡ ಮಳೆ ಸುರಿದಿದ್ದು, ಮಳೆರಾಯನ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಕೋಲಾರ, ಚಿಕ್ಕಮಗಳೂರು, ಹಾವೇರಿಯಲ್ಲಿ ಮಳೆ ಆಗಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಧಾರಾಕಾರ ಮಳೆ ಸುರಿದಿದ್ದು ವಾಹನ ಸವಾರರು ಪರದಾಡಿದರು. ದಿಢೀರ್ ಮಳೆಗೆ ಸಿಟಿಮಂದಿ ಹಿಡಿಶಾಪ ಹಾಕಿದ್ದಾರೆ.
ಬೆಂಗಳೂರು, (ಮಾರ್ಚ್ 29): ಒಂದನೇ ತರಗತಿ (1st standard) ದಾಖಲಾತಿಗೆ ಜೂನ್ 1ಕ್ಕೆ 6 ವರ್ಷ ತುಂಬಿರಬೇಕು ಎಂಬ ನಿಯಮಕ್ಕೆ ಸಾಕಷ್ಟು ಪೋಷಕರು ಈ ವರ್ಷವೂ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು (Madhu bangarappa) ಮೊನ್ನೆ ಸುದ್ದಿಗೋಷ್ಠಿ ನಡೆಸಿ 2026-27 ನೇ ಸಾಲಿಗೆ ವಯೋಮಿತಿ ಸಡಲಿಕೆ ಮಾಡಿ ಘೋಷಣೆ ಮಾಡಿದ್ದರು. 1ನೇ ತರಗತಿ ದಾಖಲಾತಿಗೆ ಎರಡು ತಿಂಗಳ ವಿನಾಯಿತಿ ನೀಡಲಾಗಿದ್ದು, ಒಂದನೇ ಕ್ಲಾಸ್ಗೆ ಅಡ್ಮಿಷನ್ ಮಾಡಿಸಲು ಮಕ್ಕಳಿಗೆ 5.8 ವರ್ಷ ಆಗಿದ್ದರೆ ಸಾಕು. ಜೊತೆಗೆ ಯುಕೆಜಿ ವಯೋಮಿತಿಗೂ ಸಡಲಿಕೆ ಅವಕಾಶ ನೀಡಿದ್ದಾರೆ. ಆದ್ರೆ ಈ ವಯೋಮಿತಿ ಸಡಲಿಕೆ ಈಗ ಪೋಷಕರ ವಿರೋಧಕ್ಕೆ ಕಾರಣವಾಗಿದೆ. ಎರಡು ತಿಂಗಳ ಸಡಲಿಕೆ ಬೇಡ ಕಳೆದ ವರ್ಷದಂತೆ 5.5 ವರ್ಷಕ್ಕೆ 1ನೇ ತರಗತಿ ದಾಖಲಾತಿಗೆ ಅವಕಾಶ ನೀಡುವಂತೆ ಹೋರಾಟ ಶುರು ಮಾಡಿದ್ದಾರೆ.
ಹೌದು… ಸರ್ಕಾರ 2 ತಿಂಗಳ ವಯೋಮಿತಿ ಸಡಲಿಕೆ ಮಾಡಿದೆ. ಆದರೆ ಅರ್ಧಕರ್ಧ ಪೋಷಕರಿಗೆ ನಿಲ್ಲದ ಕಳವಳ ಶುರುವಾಗಿದೆ. 60 ದಿನ ಬೇಡ ಕಳೆದ ವರ್ಷದಂತೆ 5.5 ವರ್ಷಕ್ಕೆ ದಾಖಲಾತಿ ನೀಡಿ ವಯೋಮಿತಿ ಸಡಲಿಕೆಗೆ ಪೋಷಕರ ಒತ್ತಾಯ ಶುರು ಮಾಡಿದ್ದಾರೆ. 5.5 ವಯೋಮಿತಿ ಸಡಲಿಕೆಗೆ ವಯೋಮಿತಿ ಸಡಲಿಕೆ ಹೋರಾಟ ವೇದಿಕೆ ಮಾಡಿಕೊಂಡ ಪೋಷಕರು, ಸಿಎಂಗೂ ಮನವಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಶಾಲಾ ಪ್ರವೇಶಕ್ಕೆ ಕಡ್ಡಾಯ ವಯೋಮಿತಿ ವಿಚಾರ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ.
ಪೋಷಕರ ಒತ್ತಾಯದ ಬಳಿಕ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವರ್ಷ ವಯೋಮಿತಿ ಸಡಲಿಕೆ ಏನೋ ನೀಡಿದ್ದಾರೆ. ಆದ್ರೆ ಇದರಿಂದ ಈಗ ಮತಷ್ಟು ಪೋಷಕರು ಎರಡು ತಿಂಗಳು ಸಾಲದು ಆರು ತಿಂಗಳವರೆಗೂ ಅವಕಾಶ ನೀಡಿ ಎಂದು ಹೋರಾಟ ಶುರು ಮಾಡಿದ್ದಾರೆ.
ಮೇ, ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳಿಗೆ ಸಡಲಿಕೆ ಭಾಗ್ಯ ಇಲ್ಲ. ಹೀಗಾಗಿ ಸರ್ಕಾರದ ನಿರ್ಧಾರ ಅರ್ಧ ಖುಷಿ ಕೊಟ್ಟಿದೆ ಎಂದು ಪೋಷಕರು ಬೇಸರ ಹೊರ ಹಾಕಿದ್ದಾರೆ . ಸರ್ಕಾರದ ಸಡಲಿಕೆ ನಿರ್ಧಾರದಿಂದ ಕೇವಲ 1.70 ಲಕ್ಷ ಮಕ್ಕಳಿಗೆ ಮಾತ್ರ ಅನುಕೂಲ. ಇನ್ನುಳಿದ 75 ಸಾವಿರ ಮಕ್ಕಳಿಗೆ ಸಮಸ್ಯೆ ಕಟ್ಟಿಟ್ಟಬುತ್ತಿ. ಹೀಗಾಗಿ ಮತ್ತೆ ಸರ್ಕಾರ, ಶಿಕ್ಷಣ ಸಚಿವರಿಗೆ ಮನವಿ ಮಾಡಲು ಮುಂದಾಗಿದ್ದು, 5.5 ವರೆಗೂ ಸಡಿಲಿಕೆ ಮಾಡಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.
ನವದೆಹಲಿ, ಮಾರ್ಚ್ 29: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ (Iran War) ಇನ್ನೂ ಅಂತ್ಯವಾಗದ ಹಿನ್ನೆಲೆಯಲ್ಲಿ ತೈಲ ಕಂಟಕ ಮತ್ತಷ್ಟು ಹೆಚ್ಚುತ್ತಿದೆ. ಪೆಟ್ರೋಲ್, ಡೀಸಲ್, ಗ್ಯಾಸ್ ಸಿಗದೇ ಹೋಗಬಹುದು ಎಂದು ಬಹಳಷ್ಟು ಜನರು ಆತಂಕಗೊಳ್ಳುತ್ತಿದ್ದಾರೆ. ಇಂಧನ ದಾಸ್ತಾನು ಸಾಕಷ್ಟಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಜನರಿಗೆ ಆತಂಕ ತಪ್ಪಿಲ್ಲ. ಇದೇ ವೇಳೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಇಂದು ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಇಂಧನ ಪರಿಸ್ಥಿತಿ ಬಗ್ಗೆ ಇಂಚಿಂಚು ಮಾಹಿತಿ ನೀಡಿದೆ.
ಇಂಧನ ಪೂರೈಕೆ ನಿರಂತರವಾಗಿ ನಡೆಯಲು ಪ್ರಯತ್ನಗಳನ್ನು ಹಾಕಲಾಗುತ್ತಿದೆ. ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಸರ್ಕಾರವು ಈ ಪ್ರಕಟಣೆ ಮೂಲಕ ಮನವಿ ಮಾಡಿದೆ.
ಎಲ್ಲಾ ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಪೂರೈಕೆ ನಿರಂತರವಾಗಿ ಆಗುತ್ತಿದೆ. ಎಲ್ಪಿಜಿ ಸಮಸ್ಯೆ ಕಡಿಮೆ ಮಾಡಲು ಪಿಎನ್ಜಿ ಸಂಪರ್ಕ ಹೆಚ್ಚಿಸಲಾಗಿದೆ. ಎಲ್ಲಾ ರಿಫೈನರಿಗಳು ಉತ್ತಮ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.
ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 10 ರೂನಷ್ಟು ಕಡಿಮೆ ಮಾಡಿದೆ. ಪೆಟ್ರೋಲಿಯಂ ಕಂಪನಿಗಳು ಪೆಟ್ರೋಲ್ ಮತ್ತು ಡೀಸಲ್ ಅನ್ನು ರಫ್ತು ಮಾಡದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಒಂದು ಲೀಟರ್ ಡೀಸಲ್ಗೆ 21.5 ರೂ ರಫ್ತು ಸುಂಕ ಹಾಕಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಆಗಿಲ್ಲ. ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಸಹಜವಾಗಿ ನಡೆದಿದೆ. ಕಮರ್ಷಿಯಲ್ ಗ್ಯಾಸ್ ಹಂಚಿಕೆಯು ಶೇ. 70ರ ಸಾಮರ್ಥ್ಯಕ್ಕೆ ಏರಿದೆ. ಮಾರ್ಚ್ ತಿಂಗಳಲ್ಲಿ 2.9 ಲಕ್ಷ ಹೊಸ ಪಿಎನ್ಜಿ ಸಂಪರ್ಕಗಳನ್ನು ನೀಡಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಈ ಕ್ರಮಗಳಿಂದ ಎಲ್ಪಿಜಿ ಮೇಲಿನ ಒತ್ತಡ ಕಡಿಮೆ ಆಗುವ ನಿರೀಕ್ಷೆ ಇದೆ.
ಶ್ರೀಲೀಲಾ (Sreeleela) ಕನ್ನಡದ ನಟಿ ಆದರೆ ಈಗ ಅವರು ಮಿಂಚುತ್ತಿರುವುದು ಪರಭಾಷೆ ಸಿನಿಮಾಗಳಲ್ಲಿ. ತೆಲುಗಿನಲ್ಲಿ ಬಹಳ ಬೇಗ ಸ್ಟಾರ್ ನಟಿ ಎನಿಸಿಕೊಂಡ ಶ್ರೀಲೀಲಾ, ಇದೀಗ ಬಾಲಿವುಡ್ ಮತ್ತು ತಮಿಳು ಚಿತ್ರರಂಗಗಳಲ್ಲಿಯೂ ಮಿಂಚುತ್ತಿದ್ದಾರೆ. ಶ್ರೀಲೀಲಾ ನಟಿಸಿರುವ ಮೊದಲ ಹಿಂದಿ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಈಗ ಒಳ್ಳೆಯ ಆಫರ್ಗಳು ಬರುತ್ತಿವೆ. ಇಷ್ಟೆಲ್ಲಾ ಆದರೂ ಕನ್ನಡ ಚಿತ್ರರಂಗವನ್ನು ಶ್ರೀಲೀಲಾ ಮರೆತಿಲ್ಲ. ಇದೀಗ ಕನ್ನಡದ ಸಿನಿಮಾಗಳಿಗೆ ಸಂಬಂಧಿಸಿದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು ಶ್ರೀಲೀಲಾ, ಈ ವೇಳೆ ನಟಿ ರಮ್ಯಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.
ಚಿತ್ತಾರ ಫಿಲಂ ಅವಾರ್ಡ್ಸ್ನಲ್ಲಿ ನಟಿ ಶ್ರೀಲೀಲಾಗೆ ಪ್ರಶಸ್ತಿ ನೀಡಲಾಯ್ತು. ಈ ಪ್ರಶಸ್ತಿಯನ್ನು ವಿತರಣೆ ಮಾಡಿದ್ದು ನಟಿ ರಮ್ಯಾ. ಈ ವೇಳೆ ಮಾತನಾಡಿದ ನಟಿ ಶ್ರೀಲೀಲಾ, ‘ಈ ಪ್ರಶಸ್ತಿಯನ್ನು ಕ್ವೀನ್ ರಮ್ಯಾ ಅವರಿಂದ ಪಡೆದುಕೊಳ್ಳುತ್ತಿರುವುದು ನಿಜಕ್ಕೂ ನನ್ನ ಪಾಲಿಗೆ ಹೆಮ್ಮೆಯ ವಿಷಯ. ನಾನು ರಮ್ಯಾ ಅವರ ಬಹಳ ದೊಡ್ಡ ಅಭಿಮಾನಿ’ ಎಂದರು. ಇದಕ್ಕೆ ರಮ್ಯಾ ಸಹ ಶ್ರೀಲೀಲಾಗೆ ಧನ್ಯವಾದ ಹೇಳಿದರು.
‘ಎಲ್ಲರಿಗೂ ನಮಸ್ಕಾರ, ಬಹಳ ಅವಧಿಯ ಬಳಿಕ ಚಿತ್ರರಂಗದ ಎಲ್ಲರೂ ಒಟ್ಟಿಗೆ ಸೇರಿದ್ದೀವಿ ಅನಿಸುತ್ತಿದೆ. ನಾನು ಬಹಳ ಇಷ್ಟಪಡುವ ರಮ್ಯಾ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿ ತಂದಿದೆ. ನನಗೆ ಪ್ರೀತಿ ಕೊಟ್ಟಿರುವ ಮತ್ತು ಪ್ರೀತಿ ಕೊಡುತ್ತಿರುವ ಎಲ್ಲರಿಗೂ ಈ ಪ್ರಶಸ್ತಿಯನ್ನು ಡೆಡಿಕೇಟ್ ಮಾಡುತ್ತೀನಿ. ಹೀಗೆ ನನ್ನ ಮೇಲೆ ಹಾಗೂ ನಾನು ಮಾಡುವ ಸಿನಿಮಾ ಮೇಲೆ ನಿಮ್ಮ ಪ್ರೀತಿ ಹೀಗೆಯೇ ಇರಲಿ’ ಎಂದಿದ್ದಾರೆ ನಟಿ ಶ್ರೀಲೀಲಾ. ಶ್ರೀಲೀಲಾ ಮಾತ್ರವೇ ಅಲ್ಲದೆ ಹಲವಾರು ಮಂದಿಗೆ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. ನಟಿ ರಮ್ಯಾ ಅವರಿಗೂ ಪ್ರಶಸ್ತಿ ದೊರೆತಿದ್ದು ಆ ಪ್ರಶಸ್ತಿಯನ್ನು ಅವರು ಡಾ ರಾಜ್ಕುಮಾರ್ ಕುಟುಂಬ ಸೇರಿದಂತೆ, ತಮ್ಮ ಸಿನಿಮಾ ವೃತ್ತಿ ಜೀವನಕ್ಕೆ ಸಹಾಯ ಮಾಡಿದ ಅನೇಕರಿಗೆ ಡೆಡಿಕೇಟ್ ಮಾಡಿದರು.
ಶ್ರೀಲೀಲಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿಯಲ್ಲಿ ಮೂರು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಅವುಗಳಲ್ಲಿ ಒಂದು ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಸಾಯಿ ಪಲ್ಲವಿ ನಟಿಸುತ್ತಿರುವ ಸಿನಿಮಾ ಒಂದರಲ್ಲಿ ಶ್ರೀಲೀಲಾ ಸಹ ನಾಯಕಿ. ತೆಲುಗಿನಲ್ಲಿ ಪ್ರಸ್ತುತ ಎರಡು ಸಿನಿಮಾಗಳನ್ನು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಅಜಿಂಕ್ಯ ರಹಾನೆ ಹಾಗೂ ಫಿಲ್ ಅಲೆನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮುಂಬೈನ ಬಲಿಷ್ಠ ಬೌಲಿಂಗ್ ವಿಭಾಗದ ಬೆವರಿಳಿಸಿದರು.
ಆರಂಭದಿಂದಲ್ಲೂ ಅಬ್ಬರದ ಬ್ಯಾಟಿಂಗ್ ಮಾಡಿದ ಇವರಿಬ್ಬರು ಮೊದಲ ವಿಕೆಟ್ಗೆ ಕೇವಲ 32 ಎಸೆತಗಳಲ್ಲಿ 69 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅದರಲ್ಲೂ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಬೌಂಡರಿಗಳ ಮಳೆಗರೆದ ಈ ಜೋಡಿ ಪಾಂಡ್ಯರ ಒಂದೇ ಓವರ್ನಲ್ಲಿ 26 ರನ್ ಕಲೆಹಾಕಿತು.
ಪವರ್ಪ್ಲೇನಲ್ಲಿ ಹಾರ್ದಿಕ್ ಪಾಂಡ್ಯ ಎರಡು ಓವರ್ಗಳನ್ನು ಬೌಲ್ ಮಾಡಿ ಒಟ್ಟು 29 ರನ್ಗಳನ್ನು ಬಿಟ್ಟುಕೊಟ್ಟರು. ಅದರಲ್ಲೂ ತಮ್ಮ ಖೋಟಾದ ಎರಡನೇ ಓವರ್ನಲ್ಲಿ ಪಾಂಡ್ಯ 26 ರನ್ಗಳನ್ನು ಬಿಟ್ಟುಕೊಟ್ಟರು. ಫಿನ್ ಅಲೆನ್ ಮತ್ತು ರಹಾನೆ ಈ ಓವರ್ನಲ್ಲಿ ಎರಡು ಸಿಕ್ಸರ್ಗಳು ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ಇದು ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು.
ಇವರಿಬ್ಬರ ಈ ಅಬ್ಬರದಿಂಆಗಿ ಕೆಕೆಆರ್ ಕೇವಲ 3.5 ಓವರ್ಗಲ್ಲಿ 50 ರನ್ಗಳ ಗಡಿ ದಾಟಿತು. ಇದು ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ನ ಅತ್ಯಂತ ವೇಗದ ಅರ್ಧಶತಕವಾಗಿದೆ. ಆದಾಗ್ಯೂ ಫಿನ್ ಅಲೆನ್ 17 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 37 ರನ್ ಗಳಿಸಿ ಔಟಾದರೆ, ರಹಾನೆ ಕೇವಲ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ಗಳ ಸಹಾಯದಿಂದ ತಮ್ಮ ಐಪಿಎಲ್ ವೃತ್ತಿಜೀವನದ 34 ನೇ ಅರ್ಧಶತಕ ಪೂರೈಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2025 ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದರು. ಪ್ರಸ್ತುತ ಗುಜರಾತ್ ತಂಡದಲ್ಲಿರುವ ಸಿರಾಜ್, ಐಪಿಎಲ್ನಲ್ಲಿ ಘರ್ಜಿಸಲು ತಯಾರಿ ನಡೆಸುತ್ತಿದ್ದಾರೆ. ಈ ಮೂಲಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯುವುದು ಸಿರಾಜ್ ಗುರಿಯಾಗಿದೆ. ಆದರೆ ಇದೆಲ್ಲದರ ನಡುವೆ ಸಿರಾಜ್ ತಮ್ಮ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಆಧಾರಿಸಿದ ಸುದ್ದಿಯ ಪ್ರಕಾರ ಸಿರಾಜ್, ಬಿಗ್ ಬಾಸ್ ಬ್ಯೂಟಿ ಮಹಿರಾ ಶರ್ಮಾ (Mahira Sharma) ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಪ್ರೀತಿಯಲ್ಲಿ ಬಿದ್ದ ಸಿರಾಜ್
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ, ಸಿರಾಜ್ ಮತ್ತು ನಟಿ ಮಹಿರಾ ಶರ್ಮಾ ಮುಂಬೈನ ಒಂದೇ ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇಬ್ಬರೂ ಅಕ್ಕಪಕ್ಕದಲ್ಲಿ ಕಾಣಿಸಿಕೊಂಡಿರಲಿಲ್ಲ. ಬದಲಿಗೆ, ಸಿರಾಜ್ ರೆಸ್ಟೋರೆಂಟ್ ಹೊರಗೆ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದರೆ, ಇತ್ತ ಮಹಿರಾ ರೆಸ್ಟೋರೆಂಟ್ನಿಂದ ಹೊರಬಂದು ತನ್ನ ಕಾರಿನ ಕಡೆಗೆ ಹೋಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Mohammed Siraj was spotted with Mahira Sharma at the same cafe.
ಸಿರಾಜ್ ಮತ್ತು ಮಹಿರಾ ಶರ್ಮಾಗೆ ಸಂಬಂಧಿಸಿದಂತೆ ಈ ರೀತಿಯ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಪರಸ್ಪರರ ಪೋಸ್ಟ್ಗಳಿಗೆ ಲೈಕ್ ಕೊಡುವುದು ಅಭಿಮಾನಿಗಳ ಗಮನ ಸೆಳೆದಿತ್ತು. ಆ ಸಮಯದಲ್ಲಿ, ಮಹಿರಾ ಶರ್ಮಾ ಈ ವರದಿಗಳಿಗೆ ಪ್ರತಿಕ್ರಿಯಿಸಿ, ತಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಮತ್ತು ಯಾರು ವದಂತಿಗಳನ್ನು ಹರಡಬಾರದು ಎಂದು ಮನವಿ ಮಾಡಿದ್ದರು.
ಹಾಗೆಯೇ ಮೊಹಮ್ಮದ್ ಸಿರಾಜ್ ಕೂಡ ಇನ್ಸ್ಟಾಗ್ರಾಮ್ನಲ್ಲಿ ಈ ವದಂತಿ ಬಗ್ಗೆ ಪ್ರತಿಕ್ರಿಯಿಸಿ, ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಪೋಸ್ಟ್ ಮಾಡಿದ್ದರು. ಆದರೆ, ಆಶ್ಚರ್ಯಕರವಾಗಿ, ಈ ಪೋಸ್ಟ್ ಮಾಡಿದ ಸ್ವಲ್ಪ ಸಮಯದ ನಂತರ ಸಿರಾಜ್ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು. ಇದು ಅಭಿಮಾನಿಗಳಲ್ಲಿನ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಳಗಾವಿ, ಮಾರ್ಚ್ 29: ಬೆಳಗಾವಿ ತಾಲೂಕಿನ ಬೋಡಕ್ಯಾನಟ್ಟಿ ಗ್ರಾಮದ ರೈತ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಮೀನು ಸಾಕಾಣಿಕೆಯಲ್ಲಿ (Fish Farming) ಯಶಸ್ಸು ಕಂಡಿದ್ದಾರೆ. ಅವರ ಸಾಧನೆ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಮನ್ ಕಿ ಬಾತ್ನಲ್ಲಿ ಉಲ್ಲೇಖಿಸಿದ್ದಾರೆ. ಆ ಮೂಲಕ ದೇಶಾದ್ಯಂತ ಕನ್ನಡಿಗನ ಹೆಸರು ಮೊಗಿದೆ. ಲಕ್ಷಾಂತರ ರೂ ಆದಾಯ ಗಳಿಸುತ್ತಿರುವ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಅವರ ಕಥೆ ನಿಜಕ್ಕೂ ರೋಚಕವಾಗಿದೆ. ಸದ್ಯ ಹುದ್ದಾರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
30 ಲಕ್ಷಕ್ಕೂ ಅಧಿಕ ಖರ್ಚು: ಮೂರು ವರ್ಷದಿಂದ ಮೀನು ಸಾಗಾಣಿಕೆ
ಬೋಡಕ್ಯಾನಟ್ಟಿ ಎನ್ನುವ ಪುಟ್ಟ ಗ್ರಾಮದಲ್ಲಿ ಶಿವಲಿಂಗಪ್ಪ ಅವರು ತಮ್ಮ ಪುತ್ರ ರಾಜು ನೆರವಿನಿಂದ ಒಂದು ಎಕರೆಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನವನ್ನು ಬಳಸಿ ಕುಚ್ಚು(ಮರಲ್) ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಕೃಷಿ ಮೀನುಗಾರಿಕೆಗೆ 30 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಆರಂಭಿಸಿರುವ ಶಿವಲಿಂಗಪ್ಪ, ಕಳೆದ ಮೂರು ವರ್ಷದಿಂದ ಮೀನು ಸಾಗಾಣಿಕೆ ಮಾಡುತ್ತಿದ್ದಾರೆ.
ಒಂದು ಎಕರೆ ಜಮೀನಿನಲ್ಲಿ ನಾಲ್ಕು ಕೃಷಿ ಹೊಂಡ ನಿರ್ಮಿಸಿ 15 ಸಾವಿರ ಮೀನುಗಳನ್ನ ಸಾಗಾಣಿಕೆ ಮಾಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಿಂದ ಮೀನು ಮರಿಗಳನ್ನ ತರುತ್ತಾರೆ. ಏಳರಿಂದ ಎಂಟು ತಿಂಗಳವರೆಗೆ ಒಂದು ಬ್ಯಾಚ್ ರೆಡಿಯಾಗುತ್ತೆ. ಮೀನು ಬೇಕಾದವರು ಇವರ ಕೃಷಿ ಹೊಂಡಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ. ಪ್ರತಿ 15 ದಿನಕ್ಕೊಮ್ಮೆ ಕೃಷಿ ಹೊಂಡದ ನೀರು ಬದಲಾವಣೆ ಮಾಡುತ್ತಾರೆ. ಮೊದಲ ಬ್ಯಾಚ್ನಲ್ಲಿ 25 ಲಕ್ಷ, ಎರಡನೇ ಬ್ಯಾಚ್ನಲ್ಲಿ 22 ಲಕ್ಷ ಹೀಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಇನ್ನು ಈ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದ್ದು ವಿಶೇಷ. ಅಷ್ಟೇ ಅಲ್ಲದೆ ಇಂದು ಮನ್ ಕಿ ಬಾತ್ನಲ್ಲಿ ಶಿವಲಿಂಗಪ್ಪ ಹುದ್ದಾರ ಅವರ ಯಶಸ್ವಿ ಮೀನುಗಾರಿಕೆ ಬಗ್ಗೆ ದೇಶಕ್ಕೆ ಪರಿಚಯಿಸಿದರು. ಈ ರೀತಿ ಎಲ್ಲಾ ರೈತರು ವಿಭಿನ್ನವಾಗಿ ಪ್ರಯತ್ನಿಸಿದರೆ ದೇಶ ಆರ್ಥಿಕವಾಗಿ ಸದೃಢ ಆಗಬಹುದು. ಅಲ್ಲದೇ ದೇಶದ ಆರ್ಥಿಕ ಶಕ್ತಿಗೂ ದೊಡ್ಡ ಕೊಡುಗೆ ನೀಡಬಹುದು ಎಂದು ಕರೆ ನೀಡಿದ್ದಾರೆ.
ಲಕ್ಷಾಂತರ ರೂ ಗಳಿಸಿದಾಗಲೂ ಇಷ್ಟು ಖುಷಿಯಾಗಿರಲಿಲ್ಲ: ಶಿವಲಿಂಗಪ್ಪ ಹುದ್ದಾರ
ಪ್ರಧಾನಿ ಮೋದಿಯವರು ತಮ್ಮ ಹೆಸರು ಉಲ್ಲೇಖ ಮಾಡಿದ ವಿಚಾರ ಶಿವಲಿಂಗಪ್ಪ ಹುದ್ದಾರ ಅವರ ಸಂತಸಕ್ಕೆ ಪಾರವೇ ಇರಲ್ಲ. ದೇಶದ ಪ್ರಧಾನಿ ಮೋದಿ ತಮ್ಮ ಬಗ್ಗೆ ಮಾತನಾಡಿದ್ದು ಹೆಮ್ಮೆ ತಂದಿದೆ ಅಂತಾ ಸಂತಷ ಹಂಚಿಕೊಂಡಿದ್ದಾರೆ. ನಾವು ಲಕ್ಷ ಲಕ್ಷ ಆದಾಯ ಗಳಿಸಿದಾಗಲೂ ಇಷ್ಟು ಖುಷಿ ಆಗಿರಲಿಲ್ಲ. ನಾನು, ನನ್ನ ಮಕ್ಕಳಾದ ರಾಜು ಮತ್ತು ಸಾತೇಶ ಪಟ್ಟ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ ರಾಜು ಹುದ್ದಾರ
ಶಿವಲಿಂಗಪ್ಪ ಪುತ್ರ ರಾಜು ಹುದ್ದಾರ ಮಾತನಾಡಿದ್ದು, ಮನ್ ಕಿ ಬಾತ್ನಲ್ಲಿ ಮೋದಿ ಅವರು ನಮ್ಮ ಬಗ್ಗೆ ಮಾತನಾಡಿದ್ದಕ್ಕೆ ಬಹಳಷ್ಟು ಖುಷಿ ಆಗುತ್ತಿದೆ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಆದರೆ, ನಮ್ಮ ಮೀನು ಸಾಕಾಣಿಕೆ ಸಾಧನೆ ಪ್ರಧಾನಮಂತ್ರಿಗಳವರೆಗೂ ಮುಟ್ಟಿದ್ದು ನಮಗೆ ಇನ್ನಿಲ್ಲದ ಸಂತಸ ತಂದಿದೆ. ಬಹಳಷ್ಟು ಜನರು ಫೋನ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಅಂತಾ ಹೇಳಿದ್ದಾರೆ.
ವರ್ಷದ ಪ್ರತಿ ತಿಂಗಳೂ ಸಹ ಹಬ್ಬ ಹರಿ ದಿನಗಳಿರುವಂತೆ, ಪ್ರತಿ ತಿಂಗಳೂ ಸಹ ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ ಇತ್ಯಾದಿಗಳಿಗೆ ಸಂಬಂಧಪಟ್ಟ ಒಂದಷ್ಟು ಜಾಗೃತಿ ದಿನಗಳನ್ನು ಆಚರಿಸಲಾಗುತ್ತದೆ. ಈ ಪ್ರತಿಯೊಂದು ಕಾರ್ಯಕ್ರಮಗಳನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಇನ್ನೇನು ಏಪ್ರಿಲ್ (April) ತಿಂಗಳು ಆರಂಭವಾಗಲಿದ್ದು, ವರ್ಷದ ಈ ನಾಲ್ಕನೇ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಏಪ್ರಿಲ್ನಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳು:
ಏಪ್ರಿಲ್ 2 – ವಿಶ್ವ ಆಟಿಸಂ ಜಾಗೃತಿ ದಿನ
ಏಪ್ರಿಲ್ 3 – ವಿಶ್ವ ಪಾರ್ಟಿ ದಿನ
ಏಪ್ರಿಲ್ 4 – ಅಂತರರಾಷ್ಟ್ರೀಯ ಕ್ಯಾರೆಟ್ ದಿನ
ಏಪ್ರಿಲ್ 5 – ರಾಷ್ಟ್ರೀಯ ಕಡಲ ದಿನ
ಏಪ್ರಿಲ್ 6 – ಅಭಿವೃದ್ಧಿ ಮತ್ತು ಶಾಂತಿಗಾಗಿ ಅಂತರರಾಷ್ಟ್ರೀಯ ಕ್ರೀಡಾ ದಿನ.
ಏಪ್ರಿಲ್ 7 – ವಿಶ್ವ ಆರೋಗ್ಯ ದಿನ
ಏಪ್ರಿಲ್ 10 – ವಿಶ್ವ ಹೋಮಿಯೋಪತಿ ದಿನ
ಏಪ್ರಿಲ್ 10 – ಒಡಹುಟ್ಟಿದವರ ದಿನ
ಏಪ್ರಿಲ್ 11 – ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನ
ಏಪ್ರಿಲ್ 11 – ರಾಷ್ಟ್ರೀಯ ಜಲಾಂತರ್ಗಾಮಿ ದಿನ
ಏಪ್ರಿಲ್ 14 – ಅಂತರರಾಷ್ಟ್ರೀಯ ನಗುವಿನ ದಿನ
ಏಪ್ರಿಲ್ 14 – ರಾಷ್ಟ್ರೀಯ ತೋಟಗಾರಿಕೆ ದಿನ
ಏಪ್ರಿಲ್ 14 – ಸುಗಂಧ ದ್ರವ್ಯ ದಿನ
ಏಪ್ರಿಲ್ 14 – ರಾಷ್ಟ್ರೀಯ ಡಾಲ್ಫಿನ್ ದಿನ.
ಏಪ್ರಿಲ್ 15 – ವಿಶ್ವ ಕಲಾ ದಿನ
ಏಪ್ರಿಲ್ 17 – ವಿಶ್ವ ಹಿಮೋಫಿಲಿಯಾ ದಿನ
ಏಪ್ರಿಲ್ 18 – ವಿಶ್ವ ಪರಂಪರೆಯ ದಿನ
ಏಪ್ರಿಲ್ 19 – ವಿಶ್ವ ಯಕೃತ್ತಿನ ದಿನ
ಏಪ್ರಿಲ್ 21 – ರಾಷ್ಟ್ರೀಯ ನಾಗರಿಕ ಸೇವಾ ದಿನ
ಏಪ್ರಿಲ್ 21 – ಅಂತರರಾಷ್ಟ್ರೀಯ ಸೃಜನಶೀಲತೆ ಮತ್ತು ನಾವೀನ್ಯತೆ ದಿನ
ನವದೆಹಲಿ, ಮಾರ್ಚ್ 29: ಇರಾನ್ ಯುದ್ಧ ಶುರುವಾದ ಬಳಿಕ ಎಲ್ಲರ ಗಮನ ಹಾರ್ಮುಜ್ ಜಲಸಂಧಿಯತ್ತ (Strait of Hormuz) ನೆಟ್ಟಿದೆ. ಗಲ್ಫ್ ರಾಷ್ಟ್ರಗಳಿಂದ ಬರುವ ತೈಲ ಹಡಗುಗಳಿಗೆ ಇರಾನ್ ತಡೆ ಹಾಕಿದೆ. ಇದರಿಂದ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುವಂತಾಗಿದೆ. ಹಾರ್ಮುಜ್ ಜಲಸಂಧಿ ಮಾರ್ಗವನ್ನು ಮುಕ್ತಗೊಳಿಸಲು ಅಮೆರಿಕ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಪರ್ಷಿಯನ್ ಗಲ್ಫ್ ಮತ್ತು ಅರೇಬಿಯನ್ ಸಮುದ್ರಕ್ಕೆ ಕೊಂಡಿಯಾಗಿರುವ ಈ ಜಲಸಂಧಿ ಮೂಲಕ ವಿಶ್ವದ ಶೇ. 20ರಷ್ಟು ತೈಲವು ಹಡಗುಗಳಿಂದ ಸಾಗಿ ಹೋಗುತ್ತದೆ. ಇದೇ ಹೊತ್ತಲ್ಲಿ ಈಗ ಮತ್ತೊಂದು ಜಲಸಂಧಿ ಸುದ್ದಿಗೆ ಬಂದಿದೆ. ಅದುವೇ ಬಾಬ್ ಎಲ್ ಮಂಡೇಬ್ ಸ್ಟ್ರೇಟ್ (Bab el-Mandeb strait).
ಇದು ರೆಡ್ ಸೀ ಅಥವಾ ಕೆಂಪು ಸಮುದ್ರದಲ್ಲಿರುವ ಒಂದು ಕಿರಿದಾದ ಜಲಮಾರ್ಗ. ಈಜಿಪ್ಟ್ನ ಸೂಜ್ ಕೆನಾಲ್ಗೆ (Suez Canal) ಹೋಗಬೇಕಾದರೆ ಈ ಜಲಸಂಧಿ ಮೂಲಕವೇ ಹಡಗುಗಳು ಸಾಗಬೇಕು. ಕುತೂಹಲ ಎಂದರೆ ಈ ಬಾಬ್ ಎಲ್ ಮಂಡೇಬ್ ಎಂದರೆ ಅರೇಬಿಕ್ ಭಾಷೆಯಲ್ಲಿ ಕಣ್ಣೀರ ದ್ವಾರ. ಇದರ ಆಜುಬಾಜಿನಲ್ಲಿರುವ ದೇಶಗಳಲ್ಲಿ ಯೆಮೆನ್ ಕೂಡ ಒಂದು. ಈ ವಿಚಾರವೇ ಈಗ ಜಾಗತಿಕ ಭೀತಿಗೆ ಕಾರಣವಾಗಿರುವುದು.
ಯೆಮೆನ್ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಸಂಘಟನೆಯ ಉಪಸ್ಥಿತಿ ಇದೆ. ಇರಾನ್ ಸೂಚನೆ ಕೊಟ್ಟರೆ ಹೌತಿ ಬಂಡುಕೋರರು ಈ ಜಲಸಂಧಿಯಲ್ಲಿ ದಾಳಿ ಶುರು ಹಚ್ಚಿಕೊಳ್ಳಬಹುದು. ಬಾಬೆಲ್ ಮಂಡೆಬ್ ಜಲಸಂಧಿ ಬಹಳ ಮುಖ್ಯವಾದ ಟ್ರೇಡಿಂಗ್ ರೂಟ್ನಲ್ಲಿ ಇದೆ. ಇದಕ್ಕೆ ತಡೆ ಬಿದ್ದರೆ ಹಾರ್ಮುಜ್ ಜಲಸಂಧಿಗಿಂತಲೂ ಪರಿಣಾಮ ಘೋರವಾಗಿರುತ್ತದೆ.
ಹಾರ್ಮುಜ್ ಜಲಸಂಧಿಯಲ್ಲಿ ಬಹುತೇಕ ನೌಕೆಗಳು ತೈಲ ಸಾಗಣೆ ಮಾಡುತ್ತವೆ. ಆದರೆ, ಬಾಬೆಲ್ ಮಂಡೇಬ್ ಜಲಸಂಧಿ ಇನ್ನೂ ದೊಡ್ಡ ವ್ಯಾಪಾರ ಮಾರ್ಗಕ್ಕೆ ಬರುತ್ತದೆ. ತೈಲವಷ್ಟೇ ಅಲ್ಲ, ಹಲವು ಸರಕುಗಳ ಸಾಗಣೆಯಾಗುತ್ತದೆ. ಏಷ್ಯಾ ಮತ್ತು ಯೂರೋಪ್ ನಡುವೆ ಹಡಗುಗಳು ಸಾಗಲು ಇದೇ ಜಲಸಂಧಿಯನ್ನು ದಾಟಿ ಹೋಗಬೇಕು. ವಿಶ್ವದ ಅತ್ಯಂತ ನಿರತವಾಗಿರುವ ಮತ್ತು ಬಹಳ ಮುಖ್ಯವಾಗಿರುವ ಜಲಮಾರ್ಗದಲ್ಲಿ ಬಾಬ್ ಎಲ್ ಮಂಡೆಬ್ ಜಲಸಂಧಿ ಇದೆ.
ವಿಶ್ವದ ಶೇ. 10ಕ್ಕಿಂತಲೂ ಹೆಚ್ಚು ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ, ಶೇ. 12ರಷ್ಟು ಜಾಗತಿಕ ಟ್ರೇಡಿಂಗ್ಗಳು ಈ ಜಲಸಂಧಿಯನ್ನು ಮುಟ್ಟಿ ಹೋಗಬೇಕು.
ರೆಡ್ ಸೀ ಮಾರ್ಗದಲ್ಲಿ ಒಂದು ವರ್ಷದಲ್ಲಿ ಈ ಮೊದಲು 26,000 ಹಡಗುಗಳು ಸಾಗುತ್ತಿದ್ದವು. ಹೌತಿಗಳ ದಾಳಿ ಘಟನೆಗಳು ಶುರುವಾದ ಮೇಲೆ 2025ರಲ್ಲಿ ಇಲ್ಲಿ ಸಾಗುವ ಹಡಗುಗಳ ಸಂಖ್ಯೆ ಅರ್ಧದಷ್ಟು ಕಡಿಮೆ ಆಗಿದೆ. ಭಾರತದ ಬಹಳಷ್ಟು ಸರಕುಗಳನ್ನು ಹೊತ್ತ ಹಡಗುಗಳು ಈ ಮಾರ್ಗದಲ್ಲಿ ಹೋಗುತ್ತವೆ. ಇಲ್ಲಿ ಹೌತಿಗಳಿಂದ ಜಲಸಂಧಿಗೆ ಪೂರ್ಣ ತಡೆ ಬಿದ್ದರೆ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಕೊಡುವ ಸಾಧ್ಯತೆ ಇದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್ನಲ್ಲಿ (IPL 2026) ತನ್ನ ಅಭಿಯಾನವನ್ನು ಆರಂಭಿಸುವ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸಂಕಷ್ಟಗಳು ಒಂದೊಂದಾಗಿಯೇ ಹೆಚ್ಚಾಗುತ್ತಿವೆ. ಮಾಜಿ ನಾಯಕ ಎಂಎಸ್ ಧೋನಿ (MS Dhoni) ಗಾಯದಿಂದಾಗಿ ಮುಂದಿನ ಕೆಲವು ವಾರಗಳ ಕಾಲ ಆಟದಿಂದ ಹೊರಗುಳಿಯಲಿದ್ದಾರೆ. ಈ ಆಘಾತದಿಂದ ಹೊರಬರುವ ಮುನ್ನವೇ ಸಿಎಸ್ಕೆ ತಂಡಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರನ ಇಂಜುರಿ ಮರ್ಮಾಘಾತ ನೀಡಿದೆ. ವರದಿಗಳ ಪ್ರಕಾರ, 22 ವರ್ಷದ ದಕ್ಷಿಣ ಆಫ್ರಿಕಾದ ಯುವ ಸ್ಫೋಟಕ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ (Dewald Brevis) ಕೂಡ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರು ಕೂಡ ತಂಡದ ಮೊದಲ ಎರಡು ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಬ್ರೆವಿಸ್ಗೆ ಇಂಜುರಿ
ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ ಸೈಡ್ ಸ್ಟ್ರೈನ್ನಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 30 ರ ಭಾನುವಾರ ನಡೆಯಲಿರುವ ತಮ್ಮ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಧೋನಿ ಮತ್ತು ಬ್ರೆವಿಸ್ ಇಬ್ಬರೂ ಇಲ್ಲದೆ ಆಡಬೇಕಾಗುತ್ತದೆ. ಇದರ ಜೊತೆಗೆ ತಂಡದ ಎರಡನೇ ಪಂದ್ಯದಲ್ಲೂ ಈ ಇಬ್ಬರು ಆಡುವುದು ಅನುಮಾನವಾಗಿದೆ.
ಕಳೆದ ಆವೃತ್ತಿಯಲ್ಲಿ ಸಿಎಸ್ಕೆ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದ ಬ್ರೆವಿಸ್ ಅವರ ಗಾಯವು ಸಿಎಸ್ಕೆ ತಂಡದ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಅವರನ್ನು ಸೀಸನ್ ಮಧ್ಯದಲ್ಲಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೀಗೆ ಬದಲಿ ಆಟಗಾರನಾಗಿ ಬಂದಿದ್ದ ಬ್ರೆವಿಸ್ ಕೇವಲ ಆರು ಪಂದ್ಯಗಳಲ್ಲಿ 180 ಸ್ಟ್ರೈಕ್ ರೇಟ್ನಲ್ಲಿ 17 ಸಿಕ್ಸರ್ಗಳು ಮತ್ತು 13 ಬೌಂಡರಿಗಳ ಸಹಾಯದಿಂದ 225 ರನ್ ಬಾರಿಸಿದ್ದರು. ಈಗ, ತಂಡವು ಅವರಿಲ್ಲದೆ ಮೈದಾನಕ್ಕೆ ಇಳಿಯಬೇಕಾಗುತ್ತದೆ, ಇವರ ಜೊತೆಗೆ ಧೋನಿ ಕೂಡ ಇಲ್ಲದಿರುವುದು ಸಿಎಸ್ಕೆ ದೊಡ್ಡ ತಲೆನೋವಾಗಿದೆ.
ಆದಾಗ್ಯೂ ಬ್ರೆವಿಸ್ ಗಾಯದ ಬಗ್ಗೆ ಸಿಎಸ್ಕೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಒಂದು ದಿನದ ಹಿಂದೆಯಷ್ಟೇ, ಚೆನ್ನೈ ತಂಡವು ಕಾಲಿನ ಗಾಯದಿಂದಾಗಿ ಧೋನಿ ಸುಮಾರು ಎರಡು ವಾರಗಳ ಕಾಲ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ನೀಡಿತ್ತು. ಆದರೀಗ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಧೋನಿ ಲೀಗ್ ಹಂತದ ಮೊದಲ ಆರು ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ವರದಿಯೊಂದು ಬಹಿರಂಗಪಡಿಸಿದೆ. ಈ ಇಬ್ಬರು ಸ್ಟಾರ್ ಆಟಗಾರರ ಜೊತೆಗೆ, ವೇಗದ ಬೌಲರ್ ನಾಥನ್ ಎಲಿಸ್ ಈಗಾಗಲೇ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಸಿಎಸ್ಕೆ ಸ್ಪೆನ್ಸರ್ ಜಾನ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಅವರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ