ದರ್ಶನ್ ಮ್ಯಾಜೇರ್ ಆಗಿದ್ದ ಮಲ್ಲಿಕಾರ್ಜುನ ಅವರು ಹಲವು ವರ್ಷಗಳ ಕಾಲ ತಲೆಮರಿಸಿಕೊಂಡಿದ್ದರು. ಅವರ ಕಾಣೆ ಆದ ಪ್ರಕರಣದಲ್ಲಿ ತನಿಖೆ ನಡೆಯಬೇಕು ಎಂದೆಲ್ಲ ಆಗ್ರಹ ಕೇಳಿ ಬಂದವು. ಈಗ ಮಲ್ಲಿಕಾರ್ಜುನ್ ಮರಳಿದ್ದು ತಮ್ಮ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ. ಆ ಸಂದರ್ಭದ ಲೈವ್ ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು, ಏಪ್ರಿಲ್ 16: ಜಾಗತಿಕ ಯುದ್ಧದ ಸನ್ನಿವೇಶ ಮತ್ತು ವಾಣಿಜ್ಯ ಬಳಕೆಯ ಎಲ್ಪಿಜಿ (LPG) ಸಿಲಿಂಡರ್ ಲಭ್ಯತೆ, ದರ ಅನಿಶ್ಚಿತತೆಯಿಂದ ಕಂಗಾಲಾಗಿರುವ ಬೆಂಗಳೂರಿನ ಹೋಟೆಲ್ ಮಾಲೀಕರು ಈಗ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಸಂಪೂರ್ಣವಾಗಿ ಎಲ್ಪಿಜಿ ಗ್ಯಾಸ್ ಅವಲಂಬನೆಯನ್ನು ಕೈಬಿಟ್ಟು, ‘ಕಸದಿಂದ ರಸ’ ಎಂಬ ಪರಿಕಲ್ಪನೆಯಡಿ ಬಯೋಗ್ಯಾಸ್ (Bio-Gas) ಬಳಕೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಬೆಂಗಳೂರಿನ ಅನೇಕ ಹೋಟೆಲ್ ಮಾಲೀಕರು ಆ ನಿಟ್ಟಿನಲ್ಲಿ ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ.
ಕಸ ನೀಡಿ ಗ್ಯಾಸ್ ಪಡೆಯುವ ಯೋಜನೆ
ಬೆಂಗಳೂರಿನ ಹೋಟೆಲ್ಗಳಿಂದ ಪ್ರತಿದಿನ ಟನ್ ಗಟ್ಟಲೆ ಹಸಿ ಕಸ ಉತ್ಪತ್ತಿಯಾಗುತ್ತದೆ. ಈ ಕಸವನ್ನು ಎಲ್ಲೋ ಸುರಿಯುವ ಬದಲು ಅಥವಾ ಡಂಪಿಂಗ್ ಯಾರ್ಡ್ಗಳಿಗೆ ನೀಡುವ ಬದಲು, ಬಯೋಗ್ಯಾಸ್ ಉತ್ಪಾದನಾ ಕಂಪನಿಗಳಿಗೆ ನೀಡಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ತಾವು ನೀಡುವ ಕಸಕ್ಕೆ ಪ್ರತಿಯಾಗಿ ಆ ಕಂಪನಿಗಳು ಉತ್ಪಾದಿಸುವ ಬಯೋಗ್ಯಾಸ್ ಸಿಲಿಂಡರ್ ಅಥವಾ ಪಿಎನ್ಜಿ (PNG) ಸಂಪರ್ಕವನ್ನು ಪಡೆಯುವ ಒಪ್ಪಂದಕ್ಕೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.
ಮಾಲೀಕರ ಸಂಘದ ಚರ್ಚೆ
ಈಗಾಗಲೇ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಬಯೋಗ್ಯಾಸ್ ತಯಾರಿಕಾ ಘಟಕಗಳ ಸ್ಥಾಪನೆ ಮತ್ತು ಕೆಲವು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಗಂಭೀರ ಚರ್ಚೆ ನಡೆಸಿದೆ. ಎಲ್ಪಿಜಿ ಸಮಸ್ಯೆ ಉಲ್ಬಣಿಸಿರುವುದರಿಂದ ಹೋಟೆಲ್ ಉದ್ಯಮವನ್ನು ಉಳಿಸಿಕೊಳ್ಳಲು ಈ ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕವಾದ ಹೊಸ ಪ್ಲಾನ್ ರೂಪಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಹೋಟೆಲ್ಗಳು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಕನೆಕ್ಷನ್ ಪಡೆಯಲು ಸಹ ಆಸಕ್ತಿ ತೋರಿವೆ.
ಜಾಗತಿಕ ಯುದ್ಧದ ಸನ್ನಿವೇಶಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿವೆ. ಭಾರತವು ಅಡುಗೆ ಅನಿಲದ ಅವಶ್ಯಕತೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಮದನ್ನು ಅವಲಂಬಿಸಿರುವುದರಿಂದ, ಅಂತರಾಷ್ಟ್ರೀಯ ದರ ಏರಿಕೆಯು ನೇರವಾಗಿ ಬೆಂಗಳೂರಿನ ವಾಣಿಜ್ಯ ಹೋಟೆಲ್ ಉದ್ಯಮದ ಮೇಲೆ ತಟ್ಟಿದೆ. ಮತ್ತೊಂದೆಡೆ, ಕಳೆದ ಕೆಲವು ವರ್ಷಗಳಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಗಳು ಅಸ್ಥಿರವಾಗಿದ್ದು, ಆಗಾಗ್ಗೆ ಏರಿಕೆಯಾಗುತ್ತಿರುವುದು ಹೋಟೆಲ್ ಮಾಲೀಕರ ಲಾಭಾಂಶವನ್ನು ಕಸಿದುಕೊಳ್ಳುತ್ತಿದೆ. ಪೂರೈಕೆ ಸರಪಳಿಯಲ್ಲಿನ ವ್ಯತ್ಯಯದಿಂದಾಗಿ ಸಕಾಲಕ್ಕೆ ಸಿಲಿಂಡರ್ ಲಭ್ಯವಾಗದಂತಾಗಿ ಹೋಟೆಲ್ಗಳ ದೈನಂದಿನ ಕಾರ್ಯಚಟುವಟಿಕೆಗೂ ಅಡ್ಡಿಯುಂಟುಮಾಡಿದೆ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೋಟೆಲ್ಗಳು ದಿನದ 15-18 ಗಂಟೆಗಳ ಕಾಲ ಸತತವಾಗಿ ಇಂಧನ ಬಳಸುವುದರಿಂದ, ಎಲ್ಪಿಜಿ ಮೇಲಿನ ಅವಲಂಬನೆಯು ವೆಚ್ಚದಾಯಕವಾಗಿದೆ. ಈ ಸಮಸ್ಯೆಯನ್ನು ನೀಗಿಸಲು ಹೋಟೆಲ್ ಮಾಲೀಕರು ಪರ್ಯಾಯ ಇಂಧನದ ಹುಡುಕಾಟದಲ್ಲಿದ್ದರು. ಇದೀಗ ಬಯೋಗ್ಯಾಸ್ ಮತ್ತು ಪಿಎನ್ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಬಳಕೆಯಿಂದ ಇಂಧನ ವೆಚ್ಚವನ್ನು ಶೇ 20 ರಿಂದ 30 ರಷ್ಟು ಉಳಿತಾಯ ಮಾಡಲು ಸಾಧ್ಯವಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ನಗರದಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಹಸಿ ಕಸದ ವಿಲೇವಾರಿಗೆ ಹೋಟೆಲ್ಗಳೇ ಹಣ ನೀಡುವ ಬದಲು, ಅದೇ ಕಸದಿಂದ ಇಂಧನ ಪಡೆಯುವುದು ಆರ್ಥಿಕವಾಗಿ ಮತ್ತು ಪರಿಸರ ಸ್ನೇಹಿಯಾಗಿ ಅತ್ಯಂತ ಲಾಭದಾಯಕವಾಗಿ ಪರಿಣಮಿಸಲಿದೆ ಎಂದು ಭಾವಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹೈದರಾಬಾದ್: ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧ ಎನ್ನುವ ಮಾತಿದೆ, ಆದರೆ ಇಲ್ಲೊಬ್ಬಳು ಯುವತಿತನ್ನ ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡಲು ಹೋಗಿ ಅರೆಸ್ಟ್ ಆಗಿದ್ದಾಳೆ. ನಗರದ ಜುಬಿಲಿ ಹಿಲ್ಸ್ನಲ್ಲಿರುವ ಐಷಾರಾಮಿ ಶೋರೂಮ್ನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಾಚ್ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ 26 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ಯುವತಿ ಜುಬಿಲಿ ಹಿಲ್ಸ್ನಲ್ಲಿರುವ ಪ್ರತಿಷ್ಠಿತ ವಾಚ್ ಶೋರೂಮ್ಗೆ ಗ್ರಾಹಕಿಯಂತೆ ಎಂಟ್ರಿ ಕೊಟ್ಟಿದ್ದಾಳೆ. ತನಗೆ ಒಳ್ಳೆಯ ವಾಚ್ಗಳನ್ನು ತೋರಿಸುವಂತೆ ಸಿಬ್ಬಂದಿಯನ್ನು ಕೇಳಿದ್ದಾಳೆ. ಸಿಬ್ಬಂದಿ ವಿವಿಧ ಮಾದರಿಗಳನ್ನು ತೋರಿಸುತ್ತಿದ್ದಾಗ, ಯಾರಿಗೂ ಸಂಶಯ ಬರದಂತೆ ಸುಮಾರು ತಲಾ 1 ಲಕ್ಷ ರೂಪಾಯಿ ಮೌಲ್ಯದ ಎರಡು ‘ಟಿಸ್ಸೋಟ್’ (Tissot) ವಾಚ್ಗಳನ್ನು ಸದ್ದಿಲ್ಲದೆ ತನ್ನ ಬ್ಯಾಗ್ನಲ್ಲಿ ಅಡಗಿಸಿಟ್ಟುಕೊಂಡಿದ್ದಾಳೆ. ನಂತರ ಏನೂ ತಿಳಿಯದವಳಂತೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಸಿಸಿಟಿವಿಯಲ್ಲಿ ಯುವತಿಯ ಕೈಚಳಕ ಬಯಲು:
ವಾಚ್ಗಳು ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಶೋರೂಮ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯುವತಿಯ ಕೈಚಳಕ ಬಯಲಾಗಿದೆ. ತಕ್ಷಣವೇ ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಲಾಗಿದ್ದು, ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆಕೆ ಬಂದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ತನಿಖೆ ಚುರುಕುಗೊಳಿಸಿದರು.
ಆರೋಪಿ ಯುವತಿ ಖಮ್ಮಂ ಜಿಲ್ಲೆಯಲ್ಲಿದ್ದಾಳೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ತೆರಳಿದ ಪೊಲೀಸ್ ತಂಡ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನ್ನ ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡುವ ಸಲುವಾಗಿಯೇ ಆಕೆ ಈ ಕಳ್ಳತನ ಎಸಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಕಳ್ಳತನದ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಾಲ್ಕು ವಾರಗಳನ್ನು ಪೂರ್ಣಗೊಳಿಸಿದೆ. ಈ ಚಿತ್ರ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ. ಆದಾಗ್ಯೂ ಸಿನಿಮಾದ ಕಲೆಕ್ಷನ್ ಜೋರಾಗಿಯೇ ಇದೆ. ಭಾರತದಲ್ಲಿ ದಾಖಲೆಯ ಗಳಿಕೆ ಮಾಡಲು ಸಿನಿಮಾಗೆ ಬೇಕಿರುವುದು ಇನ್ನು ಕೆಲವೇ ಕೋಟಿ ರೂಪಾಯಿ ಮಾತ್ರ.
‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿದ್ದು ಮಾರ್ಚ್ 19ರಂದು. ಅಂದಿನಿಂದ ಇಂದಿನವರೆಗೂ ಸಿನಿಮಾ ಅಬ್ಬರಿಸುತ್ತಲೇ ಇದೆ. ವಾರಾಂತ್ಯದಲ್ಲಿ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಭಾರತದ ನೆಟ್ ಕಲೆಕ್ಷನ್ 1,099 ರೂಪಾಯಿ ಆಗಿದೆ. ಈ ಚಿತ್ರದ ಭಾರತದ ಗ್ರಾಸ್ ಕಲೆಕ್ಷನ್ 1,316 ರೂಪಾಯಿ ಆಗಿದೆ. ಈ ಚಿತ್ರದ ವಿದೇಶದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವಾದ್ಯಂತ 1,733 ಕೋಟಿ ರೂಪಾಯಿ ಬಾಚಿಕೊಂಡಿದೆ.
ಭಾರತದ ಗಲ್ಲಾ ಪೆಟ್ಟಿಗೆಯಲ್ಲಿ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರವನ್ನು ಬೀಟ್ ಮಾಡಲು ಸಿನಿಮಾಗೆ ಇನ್ನು ಬೇಕಿರೋದು 135 ಕೋಟಿ ರೂಪಾಯಿ ಮಾತ್ರ. ಸಿನಿಮಾ ‘ಪುಷ್ಪ 2’ ದಾಖಲೆಯನ್ನು ಮುರಿಯುತ್ತದೆಯೇ ಎಂಬುದು ಸದ್ಯದ ಪ್ರಶ್ನೆ. ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ಅಲ್ಲಿ ‘ಪುಷ್ಪ 2’ ಚಿತ್ರವನ್ನು ‘ಧುರಂಧರ್ 2’ ಸದ್ಯದಲ್ಲೇ ಬೀಟ್ ಮಾಡಲಿದೆ. ಇದಕ್ಕೆ ಬೇಕಿರೋದು ಬೆರಳೆಣಿಕೆ ಕೋಟಿಗಳು ಮಾತ್ರ.
‘ಧುರಂಧರ್ 2’ ಸಿನಿಮಾ ಚಿತ್ರವನ್ನು ಸದ್ಯಕ್ಕಂತೂ ಒಟಿಟಿಗೆ ತರುವ ಆಲೋಚನೆ ಇಲ್ಲ ಎಂದು ಹೇಳಲಾಗುತ್ತಾ ಇದೆ. ಇದಕ್ಕೆ ಕಾರಣವೂ ಇದೆ. ಸಾಮಾನ್ಯವಾಗಿ ಸಿನಿಮಾಗಳು 50 ದಿನಕ್ಕೆಲ್ಲ ಒಟಿಟಿಗೆ ಬರುತ್ತವೆ. ಆದರೆ, ‘ಧುರಂಧರ್ 2’ ಬಳಿ ಹೆಚ್ಚಿನ ಶಕ್ತಿ ಇರುವುದರಿಂದ ಸಿನಿಮಾ 2 ತಿಂಗಳು ಥಿಯೇಟರ್ನಲ್ಲಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.
ಹಾಸನ, ಏ.16: ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ನಡುವೆಯೇ ಭೀಕರ ದುರಂತವೊಂದು ಸಂಭವಿಸಿದೆ. ಕಾರ್ಯಾಚರಣೆಗೆಂದು ಕರೆತರಲಾಗಿದ್ದ ಸಾಕಾನೆ ‘ಸುಗ್ರೀವ’, ತನ್ನದೇ ಕಾವಾಡಿಗನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಇಂದು (ಏಪ್ರಿಲ್ 16, 2026) ಬೆಳಿಗ್ಗೆ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಆನೆ ಶಿಬಿರದಲ್ಲಿ ಆನೆಗಳಿಗೆ ಆಹಾರ ನೀಡುವ ವೇಳೆ ಈ ಘಟನೆ ನಡೆದಿದೆ. ಕಾವಾಡಿಗ ರಾಜು ಅವರು ಸುಗ್ರೀವನಿಗೆ ಆಹಾರ ನೀಡಲು ಹೋದಾಗ, ಆನೆಯು ದಿಢೀರನೆ ಆಕ್ರೋಶಗೊಂಡು ತನ್ನ ದಂತದಿಂದ ರಾಜು ಅವರಿಗೆ ಇರಿದಿದೆ. ಈ ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ‘ನರಹಂತಕ ಒಂಟಿಕೋರೆ’ ಕಾಡಾನೆಯನ್ನು ಸೆರೆಹಿಡಿಯಲು ಸುಗ್ರೀವ ಸೇರಿದಂತೆ ಹಲವು ಸಾಕಾನೆಗಳನ್ನು ಕರೆತರಲಾಗಿತ್ತು. ನಿನ್ನೆ ಈ ಕಾಡಾನೆಯನ್ನು ಸೆರೆಹಿಡಿಯಲಾಗಿತ್ತಾದರೂ, ಅದು ಮತ್ತೆ ತಪ್ಪಿಸಿಕೊಂಡು ಹೋಗಿತ್ತು. ಇಂದು ಪುನಃ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಆನೆ ದಾಳಿಯಿಂದ ರಾಜು ಅವರಿಗೆ ತೀವ್ರವಾದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹಾಸನದ ಹಿಮ್ಸ್ (HIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಒಂದೆಡೆ ನರಹಂತಕ ಕಾಡಾನೆ ತಪ್ಪಿಸಿಕೊಂಡು ಆತಂಕ ಮೂಡಿಸಿದ್ದರೆ, ಮತ್ತೊಂದೆಡೆ ಪಳಗಿಸಿದ ಸಾಕಾನೆಯೇ ಮಾವುತರು/ಕಾವಾಡಿಗರ ಮೇಲೆ ತಿರುಗಿಬಿದ್ದಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.
ಬೆಂಗಳೂರು, ಏಪ್ರಿಲ್ 16: ಚಿನ್ನದ ಬೆಲೆ ಸತತ ಮೂರನೇ ದಿನ ಏರಿಕೆ ಕಂಡಿದೆ. ಎರಡು ದಿನದಲ್ಲಿ 265 ರೂ ಹೆಚ್ಚಿದ್ದ ಬಂಗಾರದ ದರ (gold rates) ಇವತ್ತು ಗುರುವಾರ 20 ರೂಗಳಷ್ಟು ದುಬಾರಿಗೊಂಡಿದೆ. ಆದರೆ, ನಿನ್ನೆ ಭರ್ಜರಿಯಾಗಿ ಹೆಚ್ಚಿದ್ದ ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,42,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,55,570 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,42,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 27,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 16ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,557 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,260 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,668 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,557 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,260 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಕ್ರೈಂ-ಸಾಂದರ್ಭಿಕ ಚಿತ್ರ Image Credit source: Taylor & Ring
ಇಂದೋರ್, ಏಪ್ರಿಲ್ 16: ಮಧ್ಯಪ್ರದೇಶದ ಡಾ. ಅಂಬೇಡ್ಕರ್ ನಗರದ (ಮೋವ್) ಸಮೀಪವಿರುವ ಬೆರ್ಚಾ ಅರಣ್ಯ ಪ್ರದೇಶವು ಒಂದು ಘೋರ ಅಪರಾಧಕ್ಕೆ ಸಾಕ್ಷಿಯಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡಿ ಗೆಳೆಯನೊಂದಿಗೆ ಮಾತನಾಡುತ್ತಾ ಕುಳಿತಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಮೃಗೀಯವಾಗಿ ದಾಳಿ ನಡೆಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯ ಮಂಗಳವಾರ ಸಂಜೆ ಪ್ರಸಿದ್ಧ ಲಗ್ನಶಾ ಭೈರವ ಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದರ್ಶನದ ನಂತರ ಇಬ್ಬರೂ ಸಮೀಪದ ‘ಜೈ ಜವಾನ್ ಜೈ ಕಿಸಾನ್’ ಕೊಳದ ಬಳಿ ತೆರಳಿದ್ದರು. ಸಂಜೆ ಅಸ್ಪಷ್ಟ ಬೆಳಕಿರುವಾಗಲೇ ಪೊದೆಯ ಹಿಂದೆ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಕಾಮುಕರು ಏಕಾಏಕಿ ಆಕಯ ಮೇಲೆರಗಿದ್ದಾರೆ.
ಗೆಳೆಯನಿಗೆ ಬರ್ಬರ ಥಳಿತ, ಯುವತಿಯ ಅಪಹರಣ
ದುಷ್ಕರ್ಮಿಗಳು ಮೊದಲು ವಿದ್ಯಾರ್ಥಿನಿಯ ಗೆಳೆಯನನ್ನು ಗುರಿಯಾಗಿಸಿಕೊಂಡರು. ಕೈಯಲ್ಲಿದ್ದ ಕೋಲುಗಳಿಂದ ಆತನ ತಲೆ ಮತ್ತು ಮೈಮೇಲೆ ಮನಬಂದಂತೆ ಹೊಡೆದು ಗಾಯಗೊಳಿಸಿದರು. ಆತ ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದಾಗ, ಕಿಡಿಗೇಡಿಗಳು ಯುವತಿಯನ್ನು ಬಲವಂತವಾಗಿ ದಟ್ಟ ಕಾಡಿನೊಳಗೆ ಎಳೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯ ಕಿರುಚಾಟಕ್ಕೂ ಕಿವಿಗೊಡದೆ ಇಬ್ಬರೂ ಅತ್ಯಾಚಾರ ಎಸಗಿದ್ದಾರೆ.
ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಹೇಗೆ?
ದುಷ್ಕರ್ಮಿಗಳು ಕೃತ್ಯವೆಸಗಿ ಪರಾರಿಯಾದ ನಂತರ, ತೀವ್ರವಾಗಿ ಗಾಯಗೊಂಡಿದ್ದ ಯುವಕ ಹೇಗೋ ಧೈರ್ಯ ತಂದುಕೊಂಡು ರಸ್ತೆಗೆ ಬಂದು ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾನೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ, ಕಾಡಿನೊಳಗೆ ನರಳುತ್ತಿದ್ದ ಯುವತಿಯನ್ನು ರಕ್ಷಿಸಿ ವೈದ್ಯಕೀಯ ಪರೀಕ್ಷೆಗೆ ರವಾನಿಸಿದೆ.
ತನಿಖೆ ಮತ್ತು ಪೊಲೀಸರ ಕಾರ್ಯಾಚರಣೆ
ಪ್ರಸ್ತುತ ಪೊಲೀಸರು ಈ ಸಂಬಂಧ ಸಾಮೂಹಿಕ ಅತ್ಯಾಚಾರ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳದಿಂದ ಕೆಲವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಅರಣ್ಯದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಸ್ಥಳೀಯರೇ ಇರಬಹುದೆಂಬ ಶಂಕೆಯಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ದೇವಸ್ಥಾನದ ಇಂತಹ ಘೋರ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಡಿನ ದಾರಿಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಈಗ ದೊಡ್ಡ ಮಟ್ಟದ ಪ್ರಶ್ನೆಗಳು ಎದ್ದಿವೆ.
ಪ್ಯಾನ್ ಇಂಡಿಯಾ ನಟಿ ಮೃಣಾಲ್ ಠಾಕೂರ್ (Mrunal Thakur), ಹಿಂದಿ ಮತ್ತು ದಕ್ಷಿಣದ ಸಿನಿಮಾಗಳಲ್ಲಿಯೂ ನಟಿಸುತ್ತಾ ಬರುತ್ತಿದ್ದಾರೆ. ಅದರಲ್ಲೂ ಅವರಿಗೆ ಹೆಚ್ಚು ಹಿಟ್ ನೀಡಿರುವುದು ಮತ್ತು ಒಳ್ಳೆಯ, ನೆನಪುಳಿಯುವ ಪಾತ್ರಗಳನ್ನು ನೀಡಿರುವುದು ತೆಲುಗು ಚಿತ್ರರಂಗ. ಮೂಲತಃ ಮರಾಠಿ ನಟಿಯಾದರೂ ಹಾಗೂ ನಟನೆಗೆ ಪ್ರವೇಶವನ್ನು ಹಿಂದಿ ಚಿತ್ರರಂಗದಿಂದ ಮಾಡಿದ್ದರೂ ಸಹ ಬಾಲಿವುಡ್ ಮೇಲೆ ಅವರಿಗೆ ಬೇಸರ ಇದೆ. ಇದೀಗ ಅವರು ಬಾಲಿವುಡ್ನ ಸಿನಿಮಾ ತಂಡವೊಂದು ತಮಗೆ ದೊಡ್ಡ ನಂಬಿಕೆ ದ್ರೋಹ ಮಾಡಿದೆ ಎಂದು ನಟಿ ಮೃಣಾಲ್ ಠಾಕೂರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಜಯ್ ದೇವಗನ್ ನಟನೆಯ ‘ಸನ್ ಆಫ್ ಸರ್ದಾರ್ 2’ ಸಿನಿಮಾನಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮೃಣಾಲ್ ಠಾಕೂರ್ ಮಾತನಾಡಿದ್ದಾರೆ.
‘ಸನ್ ಆಫ್ ಸರ್ದಾರ್ 2’ ಸಿನಿಮಾನಲ್ಲಿ ಮೃಣಾಲ್ ಠಾಕೂರ್ ಅವರು ರಾಬಿಯಾ ಅಖ್ತರ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಅವರ ಪತಿಯ ಪಾತ್ರದಲ್ಲಿ ಹಿರಿಯ ನಟ ಚಂಕಿ ಪಾಂಡೆ ಡ್ಯಾನಿಶ್ ಪಾತ್ರದಲ್ಲಿ ನಟಿಸಿದ್ದಾರೆ. ಮೃಣಾಲ್ ಪ್ರಕಾರ, ಚಿತ್ರಕ್ಕೆ ಸಹಿ ಮಾಡುವಾಗ ಅಥವಾ ಚಿತ್ರೀಕರಣದ ಆರಂಭದಲ್ಲಿ ತಮ್ಮ ಪತಿಯ ಪಾತ್ರದಲ್ಲಿ ಇಷ್ಟು ಹಿರಿಯ ನಟ ನಟಿಸುತ್ತಾರೆ ಎಂಬುದು ಅವರಿಗೆ ತಿಳಿದಿರಲಿಲ್ಲವಂತೆ. ಅವರಿಗೆ ಈ ಬಗ್ಗೆ ಹೇಳಿರಲಿಲ್ಲವಂತೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುತ್ತಾ ಅವರು, ‘ಒಬ್ಬ ಹಿರಿಯ ನಟ ನನ್ನ ಪತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ನನಗೆ ಮೊದಲೇ ತಿಳಿದಿರಲಿಲ್ಲ. ಈ ಒಂದು ನಿರ್ಧಾರ ನನ್ನ ಪಾತ್ರದ ಗತಿಯನ್ನೇ ಬದಲಿಸಿತು. ಇದು ನಾನು ನಿರೀಕ್ಷಿಸಿದ್ದಲ್ಲ, ಇದರಿಂದಾಗಿ ಚಿತ್ರತಂಡದ ಮೇಲಿದ್ದ ನನ್ನ ನಂಬಿಕೆ ಅಲುಗಾಡಿತು’ ಎಂದು ಹೇಳಿದ್ದಾರೆ. ಆದರೂ, ಇದು ನನಗೆ ಒಂದು ರೀತಿಯ ಪಾಠವಾಗಿತ್ತು, ಈ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇವಲ ಪಾತ್ರವರ್ಗದ ಆಯ್ಕೆ ಮಾತ್ರವಲ್ಲದೆ, ಚಿತ್ರದ ಎಡಿಟಿಂಗ್ ಹಂತದಲ್ಲಿ ತಮ್ಮ ಕೆಲವು ಪ್ರಮುಖ ಭಾವನಾತ್ಮಕ ದೃಶ್ಯಗಳನ್ನು ಕತ್ತರಿಸಿರುವುದಕ್ಕೆ ಮೃಣಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರೋಶ್ನಿ ವಾಲಿಯಾ (ಚಿತ್ರದಲ್ಲಿ ಅವರ ಮಗಳ ಪಾತ್ರ) ಜೊತೆಗಿನ ತಾಯಿ-ಮಗಳ ಬಾಂಧವ್ಯದ ಸುಂದರ ದೃಶ್ಯಗಳು ಸಿನಿಮಾದಿಂದ ತೆಗೆಯಲಾಗಿದೆ. ‘ತಾನು ಜನ್ಮ ನೀಡದಿದ್ದರೂ ಮಗುವನ್ನು ಹೇಗೆ ಪ್ರೀತಿಸುತ್ತೇನೆ ಎಂಬ ಭಾವನಾತ್ಮಕ ಅಂಶ ಚಿತ್ರದಲ್ಲಿ ಮಿಸ್ ಆಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಸನ್ ಆಫ್ ಸರ್ದಾರ್ 2’ ಸಿನಿಮಾನಲ್ಲಿ ಅಜಯ್ ದೇವಗನ್, ನೀರು ಬಾಜ್ವಾ, ರವಿ ಕಿಶನ್ ಮತ್ತು ಸಂಜಯ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಂಜಯ್ ದತ್ ಅವರಿಗೆ ವೀಸಾ ಸಮಸ್ಯೆ ಎದುರಾದ ಕಾರಣ ಅವರ ಬದಲಿಗೆ ರವಿ ಕಿಶನ್ ಈ ಚಿತ್ರಕ್ಕೆ ಬಂದಿದ್ದರು. ಕಳೆದ ವರ್ಷ ಆಗಸ್ಟ್ 1 ರಂದು ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಸುಮಾರು 32 ಕೋಟಿ ರೂಪಾಯಿಗಳ ಸಾಧಾರಣ ಗಳಿಕೆಯನ್ನು ಮಾಡಿತು. ಇತ್ತೀಚೆಗಷ್ಟೆ ತೆಲುಗು ನಟ ಅಡಿವಿ ಶೇಷ್ ಜೊತೆ ‘ಡಕಾಯ್ತ್’ ಸಿನಿಮಾನಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರೊಂದಿಗೆ ವರುಣ್ ಧವನ್ ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಮತ್ತು ‘ಪೂಜಾ ಮೇರಿ ಜಾನ್’ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಫರೀದ್ಕೋಟ್ , ಏಪ್ರಿಲ್ 16: ಮಕ್ಕಳ ರಕ್ಷಣೆಗಾಗಿ ಪೊಲೀಸ್(Police) ಇಲಾಖೆಯಲ್ಲಿ ‘ಮಹಿಳಾ ಮಿತ್ರ’ (ಮಹಿಳಾ ಹೆಲ್ಪ್ಡೆಸ್ಕ್) ಆಗಿ ಕೆಲಸ ಮಾಡುವ ಅಧಿಕಾರಿಯೊಬ್ಬರು, ತನ್ನ ಐದು ವರ್ಷದ ಮೊಮ್ಮಗಳ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ. ತಪ್ಪು ಮಾಡಿದವರನ್ನು ಸರಿಪಡಿಸಬೇಕಾದವರೇ ಮಗುವಿನ ಮೇಲೆ ಇಂತಹ ಕ್ರೌರ್ಯ ತೋರಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸುಡುವ ಬಿಸಿಲು, ಕೈಕಾಲು ಕಟ್ಟಿ ಮನೆಯ ಹೊರಗೆ ಮಲಗಿಸಿದ ಅಜ್ಜಿ
ಫರೀದ್ಕೋಟ್ನ ದೋಗರ್ ಬಸ್ತಿ ನಿವಾಸಿ ಎಎಸ್ಐ (ASI) ಸರಬ್ಜಿತ್ ಕೌರ್, ಬುಧವಾರ ತನ್ನ 5 ವರ್ಷದ ಮೊಮ್ಮಗಳ ಕೈ ಮತ್ತು ಕಾಲುಗಳನ್ನು ಬಟ್ಟೆಯಿಂದ ಮನೆಯ ಗೇಟ್ಗೆ ಕಟ್ಟಿಹಾಕಿದ್ದರು. ಸುಡುವ ಬಿಸಿಲಿನಲ್ಲಿ ಮಗು ಅಳುತ್ತಾ ಮಲಗಿದ್ದರೂ ಕರುಣೆ ತೋರದ ಅಜ್ಜಿ, ಹಾಗೆಯೇ ಬಿಟ್ಟು ಹೋಗಿದ್ದಾರೆ.
ಮಗುವಿನ ಎದೆ ಸೀಳುವಂತಹ ಅಳುವಿನ ಧ್ವನಿ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಅಲ್ಲಿ ಕಂಡ ದೃಶ್ಯ ಅವರನ್ನು ಕಂಗಾಲು ಮಾಡಿದೆ. ಮಗು ಬಿಸಿಲಿನಲ್ಲಿ ನರಳುತ್ತಿರುವುದನ್ನು ಕಂಡ ಸಾರ್ವಜನಿಕರು ತಕ್ಷಣ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ ಮತ್ತು ಮಗುವಿನ ಕಟ್ಟುಗಳನ್ನು ಬಿಚ್ಚಿ ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪಂಜಾಬ್ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಪೋಷಕರು ವಿದೇಶದಲ್ಲಿದ್ದಾರೆ
ಬಾಲಕಿಯ ತಂದೆ-ತಾಯಿ ಕೆಲಸದ ನಿಮಿತ್ತ ಪೋರ್ಚುಗಲ್ನಲ್ಲಿ ವಾಸಿಸುತ್ತಿದ್ದಾರೆ. ಮಗುವನ್ನು ಉತ್ತಮವಾಗಿ ನೋಡಿಕೊಳ್ಳುತ್ತಾರೆಂಬ ಭರವಸೆಯ ಮೇಲೆ ಅಜ್ಜಿಯ ಬಳಿ ಬಿಟ್ಟು ಹೋಗಿದ್ದರು. ಆದರೆ ಅಜ್ಜಿಯೇ ಮಗುವಿನ ಮೇಲೆ ಈ ರೀತಿ ದರ್ಪ ತೋರಿರುವುದು ಪೋಷಕರಿಗೂ ಆಘಾತ ತಂದಿದೆ.
ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ
ಘಟನೆ ಬೆಳಕಿಗೆ ಬಂದ ತಕ್ಷಣ ಫರೀದ್ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಪ್ರಜ್ಞಾ ಜೈನ್ ಅವರು ಕೌರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಪೊಲೀಸ್ ಪಡೆಯಲ್ಲಿ ಶಿಸ್ತು ಮತ್ತು ಮಾನವೀಯತೆ ಮುಖ್ಯ. ಅಧಿಕಾರಿಯೊಬ್ಬರು ಮಗುವಿನ ಮೇಲೆ ಇಂತಹ ಕ್ರೌರ್ಯ ತೋರುವುದು ಸ್ವೀಕಾರಾರ್ಹವಲ್ಲ ಎಂದು ಡಿಎಸ್ಪಿ ತರ್ಲೋಚನ್ ಸಿಂಗ್ ತಿಳಿಸಿದ್ದಾರೆ.
ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಲಾಗಿದೆ ಮತ್ತು ಸಂರಕ್ಷಣೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಆ ಅಜ್ಜಿಯ ವಿಕೃತ ವರ್ತನೆಯ ಹಿಂದೆ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಂಕಲ್ಪಪೂರ್ವಕವಾಗಿ ಮಾಡುವ ಪೂಜೆ, ವ್ರತ, ಯಜ್ಞ ಯಾಗಾದಿ, ಹೋಮಗಳ ಸಂದರ್ಭದಲ್ಲಿ, ಎಷ್ಟೇ ಕ್ಲಿಷ್ಟ ಅಥವಾ ಕಠಿಣ ಸಮಸ್ಯೆ ಎದುರಾದರೂ ಪೂಜಾ ಸ್ಥಳವನ್ನು ಬಿಟ್ಟು ಹೊರಗೆ ಬರಬಾರದು ಎಂಬುದು ನಿಯಮ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಅನೇಕ ಜನರು ಹೋಮ, ಯಜ್ಞಾದಿಗಳ ಸಮಯದಲ್ಲಿ ಫೋನ್ ಕರೆಗಳು, ವಿಐಪಿಗಳ ಆಗಮನ ಅಥವಾ ಇತರೆ ಕಾರಣಗಳಿಗಾಗಿ ಎದ್ದು ಹೋಗಿ ಮಾತನಾಡುತ್ತಾರೆ. ಇಂತಹ ಸಮಯದಲ್ಲಿ ಆ ಪೂಜೆಯು ಪರಿಪೂರ್ಣವಾಗುವುದಿಲ್ಲ. ಅಷ್ಟೇ ಅಲ್ಲ, ಮನೆಯಲ್ಲಿ ಗಣಪತಿ ಹೋಮ, ಮೃತ್ಯುಂಜಯ ಹೋಮ, ಸತ್ಯನಾರಾಯಣ ಹೋಮ, ಸುದರ್ಶನ ಹೋಮ, ನವಗ್ರಹ ಹೋಮ, ಆಯುಷ್ ಹೋಮಗಳಂತಹ ಯಾವುದೇ ಹೋಮ ಮಾಡುತ್ತಿರುವಾಗ, ಪುರೋಹಿತರು ಒಂದೆರಡು ನಿಮಿಷಗಳ ವಿರಾಮ ನೀಡಿದರೂ ಸಹ, ಹೋಮ ಮಾಡುವವರು ಹೊಸಲನ್ನು ದಾಟಿ ಹೊರಗೆ ಹೋಗಬಾರದು. ಇದರಿಂದ ಪೂಜೆಯ ಪಾವಿತ್ರತೆ ಮತ್ತು ಸಂಕಲ್ಪಕ್ಕೆ ಭಂಗ ಬರುತ್ತದೆ.
ಇದಕ್ಕೆ ಉದಾಹರಣೆಯಾಗಿ ರಾಮಾಯಣದಲ್ಲಿ ಬರುವ ಸೀತಾದೇವಿಯ ಪ್ರಸಂಗವನ್ನು ಸ್ಮರಿಸಬಹುದು. ವಾಲ್ಮೀಕಿ ಆಶ್ರಮದಲ್ಲಿ ಸೀತಾದೇವಿ ವ್ರತ ಮಾಡುತ್ತಿದ್ದಾಗ, ಮಧ್ಯದಲ್ಲಿ ಎದ್ದು ಸ್ವಲ್ಪ ಆಚೆ ಹೋದ ಕಾರಣದಿಂದ ಅನೇಕ ಸಂಕಟಗಳನ್ನು ಎದುರಿಸಬೇಕಾಯಿತು ಎಂದು ಹೇಳಲಾಗುತ್ತದೆ. ಹಾಗಾಗಿ, ಯಾವುದೇ ಪೂಜೆ, ವ್ರತ ಮಾಡುವಾಗ ಶ್ರದ್ಧೆ, ಭಕ್ತಿ, ನಂಬಿಕೆ, ಸಂಕಲ್ಪ, ವ್ರತದ ವಿಧಾನ ಮತ್ತು ಶಿಸ್ತು ಅತ್ಯಗತ್ಯ. ಇವುಗಳನ್ನು ಪಾಲಿಸಿದಾಗ ಮಾತ್ರ ವ್ರತವು ಪರಿಪೂರ್ಣವಾಗುತ್ತದೆ.
ಗೃಹ ಪ್ರವೇಶದಂತಹ ದೊಡ್ಡ ಸಮಾರಂಭಗಳಲ್ಲಿ ಅಥವಾ ಶ್ರೀಮಂತರು, ರಾಜಕೀಯ ವ್ಯಕ್ತಿಗಳು ಮಾಡುವ ಪೂಜೆಗಳಲ್ಲಿಯೂ ಸಹ ಕೆಲವರು ಮಧ್ಯದಲ್ಲಿ ಎದ್ದು ಓಡಾಡುತ್ತಾರೆ. ಇದರಿಂದ ಸಂಪೂರ್ಣ ಪೂಜೆಯು ವ್ಯರ್ಥವಾಗುತ್ತದೆ ಮತ್ತು ಅದರ ಫಲ ಲಭಿಸುವುದಿಲ್ಲ. ಒಂದು ವೇಳೆ ಪೂಜೆ ಮಾಡುವವರಿಗೆ ಅನಿವಾರ್ಯ ಕಾರಣಗಳಿಂದ ಎದ್ದು ಹೋಗಬೇಕಾದರೆ, ಆರಂಭದಿಂದಲೂ ಪೂಜೆಯಲ್ಲಿ ಪಾಲ್ಗೊಂಡಿದ್ದ ಬೇರೊಬ್ಬರನ್ನು ಪೂರ್ಣಗೊಳಿಸಲು ಬಿಡಬೇಕು. ಮಧ್ಯದಲ್ಲಿ ಇನ್ನೊಬ್ಬರನ್ನು ಕೂರಿಸಲು ಸಾಧ್ಯವಿಲ್ಲ.
ಇವೆಲ್ಲವೂ ಆಚಾರದ ಭಾಗಗಳು. “ಆಚಾರವೇ ಸ್ವರ್ಗ, ಅನಾಚಾರವೇ ನರಕ” ಎಂಬ ಮಾತಿನಂತೆ, ಪ್ರತಿಯೊಂದು ನಂಬಿಕೆಯ ಆಧಾರದ ಮೇಲೆ ಈ ಆಚಾರಗಳನ್ನು ಪಾಲಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ