All posts by nagaraj11081993

ಸಿಗ್ನಲಿಂಗ್ ಸುಧಾರಣೆ, ಪ್ಲಾಟ್‌ಫಾರ್ಮ್ ವಿಸ್ತರಣೆ ಕಾಮಗಾರಿ ಹಿನ್ನೆಲೆ KSR ಬೆಂಗಳೂರು ನಿಲ್ದಾಣದಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ – Kannada News | KSR Bengaluru Faces Major Train Disruptions Amid Signalling and Platform Upgrade Works

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣImage Credit source: deccanherald.com

ಬೆಂಗಳೂರು, ಜೂನ್​​ 16: ಯಾರ್ಡ್ ಮರು ವಿನ್ಯಾಸ (Yard Remodelling) ಹಾಗೂ ಸುರಕ್ಷತಾ ಸುಧಾರಣಾ ಕಾಮಗಾರಿಗಳು ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಮುಂದಿನ ಕೆಲವು ದಿನ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಕಾಮಗಾರಿಗಳ ಹಿನ್ನೆಲೆ 58 ರೈಲುಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದ್ದು, 116 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ನಾಲ್ಕು ರೈಲುಗಳ ಸಂಚಾರವನ್ನು ಭಾಗಶಃ ವಿಸ್ತರಿಸಲಾಗಿದ್ದು, 26 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಎರಡು ರೈಲುಗಳ ವೇಳಾಪಟ್ಟಿಯನ್ನು ಮರುನಿಗದಿಪಡಿಸಲಾಗಿದ್ದು, ಐದು ರೈಲುಗಳ ಸಂಚಾರ 15ರಿಂದ 60 ನಿಮಿಷಗಳವರೆಗೆ ನಿಯಂತ್ರಣಗೊಳ್ಳಲಿದೆ. ಕೆಲವು ರೈಲುಗಳ ರದ್ದತಿ ಜೂನ್ 16ರಿಂದಲೇ (ಇಂದಿನಿಂದ) ಆರಂಭವಾಗಲಿದ್ದು, ಸುಮಾರು ಎರಡು ತಿಂಗಳ ಕಾಲ ಇದು ಮುಂದುವರಿಯಲಿದೆ.

ವಂದೇ ಭಾರತ್ ಸಂಚಾರವೂ ಬದಲಾವಣೆ

ಒಟ್ಟು 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಯಾವುದೇ ವಂದೇ ಭಾರತ್ ರೈಲನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿಲ್ಲ.

ಇದನ್ನೂ ಓದಿ: ಬೆಂಗಳೂರು ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ಸೋಮಣ್ಣ ಗುಡ್ ನ್ಯೂಸ್; ಕೊನೆಗೂ ಈಡೇರಿತು ಬಹುಕಾಲದ ಬೇಡಿಕೆ

ಆಗಸ್ಟ್ 1ರಿಂದ 3ರವರೆಗೆ

  • ಬೆಳಗಾವಿ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (26751) ಯಶವಂತಪುರದಲ್ಲಿ ಅಂತ್ಯಗೊಳ್ಳಲಿದೆ.
  • ಕೆಎಸ್‌ಆರ್ ಬೆಂಗಳೂರು–ಬೆಳಗಾವಿ ವಂದೇ ಭಾರತ್ (26752) ಯಶವಂತಪುರದಿಂದ ಆರಂಭವಾಗಲಿದೆ.
  • ಕಲಬುರಗಿ–ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ (22232) ಯಲಹಂಕದಲ್ಲಿ ಅಂತ್ಯಗೊಳ್ಳಲಿದೆ.
  • ಎಸ್‌ಎಂವಿಟಿ ಬೆಂಗಳೂರು–ಕಲಬುರಗಿ ವಂದೇ ಭಾರತ್ (22231) ಯಲಹಂಕದಿಂದ ಆರಂಭವಾಗಲಿದೆ.
  • ಕೆಎಸ್‌ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ (20661) ಯಶವಂತಪುರದಿಂದ ಸಂಚರಿಸಲಿದೆ.

ಜುಲೈ 31ರಿಂದ ಆಗಸ್ಟ್ 3ರವರೆಗೆ

  • ಧಾರವಾಡ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (20662) ಯಶವಂತಪುರದಲ್ಲಿ ಅಂತ್ಯಗೊಳ್ಳಲಿದೆ.
  • ಎರ್ನಾಕುಲಂ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (26652) ಕೆ.ಆರ್.ಪುರಂನಲ್ಲಿ ಅಂತ್ಯಗೊಳ್ಳಲಿದೆ.

ಆಗಸ್ಟ್ 1ರಿಂದ 4ರವರೆಗೆ

ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ (26651) ಬೆಂಗಳೂರು ಕ್ಯಾಂಟೋನ್ಮೆಂಟ್‌ನಿಂದ ಆರಂಭವಾಗಲಿದೆ.

ರಾಜಧಾನಿ ಮತ್ತು ಕರ್ನಾಟಕ ಎಕ್ಸ್‌ಪ್ರೆಸ್ ರೈಲುಗಳು

ಆಗಸ್ಟ್ 1ರಿಂದ 3ರವರೆಗೆ

  • ಕೆಎಸ್‌ಆರ್ ಬೆಂಗಳೂರು–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ (22691) ಯಶವಂತಪುರದಿಂದ ಆರಂಭವಾಗಲಿದೆ.
  • ಇದರ ಜೋಡಿ ರೈಲು (22692) ಆಗಸ್ಟ್ 2ರಂದು ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.

ಜುಲೈ 29ರಿಂದ ಆಗಸ್ಟ್ 1ರವರೆಗೆ

  • ನವದೆಹಲಿ–ಕೆಎಸ್‌ಆರ್ ಬೆಂಗಳೂರು ಕರ್ನಾಟಕ ಎಕ್ಸ್‌ಪ್ರೆಸ್ (12628) ಬೈಯಪ್ಪನಹಳ್ಳಿಯಲ್ಲಿ ಅಂತ್ಯಗೊಳ್ಳಲಿದೆ.
  • ಕೆಎಸ್‌ಆರ್ ಬೆಂಗಳೂರು–ನವದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್ (12627) ಆಗಸ್ಟ್ 1ರಿಂದ 3ರವರೆಗೆ ಬೈಯಪ್ಪನಹಳ್ಳಿಯಿಂದ ಆರಂಭವಾಗಲಿದೆ.

ಮೈಸೂರು-ತುಮಕೂರು ಪ್ರಯಾಣಿಕರಿಗೆ ಹೆಚ್ಚು ಅನಾನುಕೂಲ

ಮೈಸೂರು/ಅಶೋಕಪುರಂನಿಂದ ಆರಂಭವಾಗುವ ಅಥವಾ ಅಂತ್ಯಗೊಳ್ಳುವ 16 ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಕೆಎಸ್‌ಆರ್ ಬೆಂಗಳೂರು ನಗರವನ್ನು ಸಂಪರ್ಕಿಸುವ 9 ಮೆಮು ರೈಲುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಈ ರೈಲುಗಳು ತುಮಕೂರು ಸೇರಿದಂತೆ ನಗರದ ವಿವಿಧ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದವು. ಭಾಗಶಃ ರದ್ದುಗೊಂಡ ರೈಲುಗಳು ಬೆಂಗಳೂರಿನ ಇತರ ನಿಲ್ದಾಣಗಳಿಂದ ಆರಂಭವಾಗಲಿದ್ದು ಅಥವಾ ಅಲ್ಲಿ ಅಂತ್ಯಗೊಳ್ಳಲಿವೆ.

ಕಾಮಗಾರಿಗಳಿಂದ ಆಗುವ ಪ್ರಯೋಜನಗಳು

ದಕ್ಷಿಣ ಪಶ್ಚಿಮ ರೈಲ್ವೆ (SWR) ಪ್ರಕಾರ, ಈ ಯಾರ್ಡ್ ಮರು ವಿನ್ಯಾಸ ಕಾಮಗಾರಿಯಿಂದ ಹಲವು ಕಾರ್ಯಾಚರಣಾ ಸುಧಾರಣೆಗಳು ಸಾಧ್ಯವಾಗಲಿವೆ.

  • ಬೆಂಗಳೂರು ಕ್ಯಾಂಟೋನ್ಮೆಂಟ್ ದಿಕ್ಕಿನಲ್ಲಿ ಒಂದೇ ಸಮಯದಲ್ಲಿ ರೈಲು ಆಗಮನ ಹಾಗೂ ನಿರ್ಗಮನ ವ್ಯವಸ್ಥೆ.
  • 7ನೇ ಪ್ಲಾಟ್‌ಫಾರ್ಮ್ ಅನ್ನು 460 ಮೀಟರ್‌ನಿಂದ 600 ಮೀಟರ್‌ಗೆ ವಿಸ್ತರಿಸಿ 24 ಬೋಗಿಗಳ ಪೂರ್ಣ ಉದ್ದದ ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯ.
  • ಸರಕು ರೈಲುಗಳಿಗೆ ಪ್ರತ್ಯೇಕ ನಾನ್-ಪ್ಲಾಟ್‌ಫಾರ್ಮ್ ಮಾರ್ಗ ಸೌಲಭ್ಯ.
  • ಮೈಸೂರು ಹಾಗೂ ಕ್ಯಾಂಟೋನ್ಮೆಂಟ್ ಮಾರ್ಗಗಳಲ್ಲಿ ಉತ್ತಮ ಸಿಗ್ನಲಿಂಗ್ ವ್ಯವಸ್ಥೆ.
  • ಹಳೆಯ Solid State Interlocking (SSI) ವ್ಯವಸ್ಥೆಯನ್ನು ಅತ್ಯಾಧುನಿಕ Electronic Interlocking (EI) ವ್ಯವಸ್ಥೆಯಾಗಿ ಪರಿವರ್ತನೆ.

ಎರಡು ಹಂತಗಳಲ್ಲಿ ಕಾಮಗಾರಿ

ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಾಡಿ ಅವರ ಪ್ರಕಾರ, ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ರೈಲುಗಳ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಯಶವಂತಪುರ ಗ್ರಿಡ್ ಭಾಗದಲ್ಲಿ ಇನ್ನೆರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:07 am, Tue, 16 June 26

Source link

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು 13ನೇ ರೈಲು: ಶೀಘ್ರದಲ್ಲೇ 5 ನಿಮಿಷಕ್ಕೊದರಂತೆ ಮೆಟ್ರೋ ಸಂಚಾರ ಶುರು – Kannada News | Namma Metro Yellow Line Receives 13th Train in Bengaluru; Waiting Time to Drop to 5 Minutes by August

ನಮ್ಮ ಮೆಟ್ರೋ ಹಳದಿ ಮಾರ್ಗ ರೈಲಿನ ಸಂಗ್ರಹ ಚಿತ್ರImage Credit source: tv9

ಬೆಂಗಳೂರು, ಜೂನ್ 16: ಬೆಂಗಳೂರಿನ ಸಂಚಾರ ದಟ್ಟಣೆಗೆ ಪ್ರಮುಖ ಪರಿಹಾರ ಎಂದೇ ಬಿಂಬಿತವಾಗಿರುವ ನಮ್ಮ ಮೆಟ್ರೋದ ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಅಥವಾ ಹಳದಿ ಮಾರ್ಗಕ್ಕೆ (Yellow Line) ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸೋಮವಾರ 13ನೇ ಹೊಸ ರೈಲನ್ನು ಬರಮಾಡಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಹೆಬ್ಬಗೋಡಿ ಡಿಪೋಗೆ ಆಗಮಿಸಿದ 13ನೇ ರೈಲು
  • ರಾತ್ರಿ ವೇಳೆ 750 ಕಿಮೀ ಟ್ರಯಲ್ ರನ್
  • ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿರುವ ರೈಲುಗಳ ಸೇರ್ಪಡೆ

ಆರು ಕೋಚ್‌ಗಳನ್ನು ಒಳಗೊಂಡಿರುವ ಈ ಹೊಸ ಮೆಟ್ರೋ ರೈಲು ಸೋಮವಾರ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿದೆ. ಸದ್ಯ ಟ್ರೈಲರ್‌ಗಳಿಂದ ಕೋಚ್‌ಗಳನ್ನು ಕೆಳಗಿಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಬಳಿಕ ಇವುಗಳನ್ನು ಒಟ್ಟುಗೂಡಿಸಿ (Assemble) ಸ್ಟ್ಯಾಟಿಕ್ ಟೆಸ್ಟಿಂಗ್‌ಗಾಗಿ ಇನ್ಸ್‌ಪೆಕ್ಷನ್ ಬೇ ಲೈನ್‌ಗೆ (IBL) ಕೊಂಡೊಯ್ಯಲಾಗುತ್ತದೆ. ಸಾರ್ವಜನಿಕರ ಸೇವೆಗೆ ಮುಕ್ತವಾಗುವ ಮುನ್ನ ಈ ರೈಲು ಮುಖ್ಯ ಮಾರ್ಗದಲ್ಲಿ ಸುಮಾರು 750 ಕಿಲೋಮೀಟರ್‌ಗಳಷ್ಟು ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಬೇಕಿದೆ. ಮೆಟ್ರೋ ಸಂಚಾರಕ್ಕೆ ತೊಂದರೆಯಾಗದಂತೆ ಈ ಪ್ರಕ್ರಿಯೆಯನ್ನು ಕೇವಲ ರಾತ್ರಿ ವೇಳೆಯಲ್ಲಿ ಮಾತ್ರ ನಡೆಸಲಾಗುತ್ತದೆ.

ಪೀಕ್ ಅವರ್‌ನಲ್ಲಿ 5 ನಿಮಿಷಕ್ಕೊಂದು ರೈಲು

ಪ್ರಸ್ತುತ 19.75 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಪೀಕ್ ಅವರ್‌ನಲ್ಲಿ (ಹೆಚ್ಚಿನ ದಟ್ಟಣೆ ಇರುವ ಸಮಯ) ಪ್ರತಿ 7 ನಿಮಿಷಕ್ಕೊಮ್ಮೆ ಮೆಟ್ರೋ ಸೌಲಭ್ಯ ಸಿಗುತ್ತಿದೆ. ಇನ್ನುಳಿದ ಎರಡು ರೈಲುಗಳು ಈಗಾಗಲೇ ಪರೀಕ್ಷಾ ಹಂತದಲ್ಲಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿವೆ. ಕೋಲ್ಕತ್ತಾ ಸಮೀಪದ ತಿತಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು 14 ಮತ್ತು 15ನೇ ರೈಲುಗಳನ್ನು ಸಿದ್ಧಪಡಿಸುತ್ತಿದ್ದು, ಜುಲೈ ಆರಂಭದ ವೇಳೆಗೆ ಅವು ಬೆಂಗಳೂರಿಗೆ ರವಾನೆಯಾಗಲಿವೆ.

ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್ ದೆಹಲಿ ಭೇಟಿಯ ಮೊದಲ ಫಲ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಮತ್ತೊಂದು ಗುಡ್ ನ್ಯೂಸ್

ಬರುವ ಆಗಸ್ಟ್ 11ಕ್ಕೆ ಹಳದಿ ಮಾರ್ಗದ ಮೊದಲ ವಾರ್ಷಿಕೋತ್ಸವದ ವೇಳೆಗೆ ಎಲ್ಲಾ 15 ರೈಲುಗಳು ಕಾರ್ಯಾಚರಣೆಗೆ ಸಜ್ಜಾಗಲಿವೆ. ಇದರಿಂದಾಗಿ ಪೀಕ್ ಅವರ್‌ನ ಕಾಯುವಿಕೆ ಅವಧಿ 5 ನಿಮಿಷ ಅಥವಾ ಅದಕ್ಕಿಂತಲೂ ಕಡಿಮೆಯಾಗಲಿದೆ. ಇದರಲ್ಲಿ ಎರಡು ರೈಲುಗಳನ್ನು ತುರ್ತು ಪರಿಸ್ಥಿತಿ ಎದುರಿಸಲು ರಿಸರ್ವ್ ಸ್ಟಾಕ್ ಆಗಿ ಇರಿಸಲಾಗುತ್ತದೆ. ಇದರ ನಂತರ ಟಿಆರ್‌ಎಸ್‌ಎಲ್ ಸಂಸ್ಥೆಯು ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಿಗಾಗಿ 18 ರೈಲುಗಳನ್ನು ಪೂರೈಸುವತ್ತ ಗಮನ ಹರಿಸಲಿದೆ. ಅಲ್ಲದೆ, 2027ರ ವೇಳೆಗೆ ಬೆಮೆಲ್ (BEML) ಸಂಸ್ಥೆಯಿಂದ ಹಳದಿ ಮಾರ್ಗಕ್ಕೆ ಹೆಚ್ಚುವರಿಯಾಗಿ ಮತ್ತೂ 6 ರೈಲುಗಳು ಪೂರೈಕೆಯಾಗಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರಷ್ಯಾ ಬಾಂಬರ್ ವಿಮಾನ ಪತನ: ನಾಲ್ವರು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪಾರು – Kannada News | Russian Long Range Bomber Goes Down in Fiery Incident Caught on Video

ಮಾಸ್ಕೋ, ಜೂನ್ 16: ರಷ್ಯಾದ ಸೈಬೀರಿಯಾ ಪ್ರಾಂತ್ಯದ ಇರ್ಕುಟ್ಸ್ಕ್ ಪ್ರದೇಶದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ರಷ್ಯಾದ ವಾಯುಸೇನೆಗೆ ಸೇರಿದ ಬೃಹತ್ ‘Tu-22M3’ ಕಾರ್ಯತಂತ್ರದ ಬಾಂಬರ್ ವಿಮಾನ ಪತನ(Plane Crash)ಗೊಂಡಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಗಳು ಸಮಯಪ್ರಜ್ಞೆ ಮೆರೆದು ಸುರಕ್ಷಿತವಾಗಿ ಹೊರಜಿಗಿದಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ವಿಮಾನವು ತರಬೇತಿ ಹಾರಾಟದಲ್ಲಿದ್ದ ಕಾರಣ ಯಾವುದೇ ಯುದ್ಧ ಸಾಮಗ್ರಿ ಅಥವಾ ಬಾಂಬ್‌ಗಳನ್ನು ಹೊತ್ತೊಯ್ದಿರಲಿಲ್ಲ. ವಿಮಾನವು ಕಾಮೆಂಕಾ ಗ್ರಾಮದ ಬಳಿಯ ಅಂಗಾರ ನದಿಯ ಅರಣ್ಯ ಪ್ರದೇಶದಲ್ಲಿ ಬಿದ್ದಿರುವುದರಿಂದ ನೆಲದ ಮೇಲಿನ ಸಾರ್ವಜನಿಕ ಆಸ್ತಿಗೆ ಯಾವುದೇ ಹಾನಿಯಾಗಿಲ್ಲ.

ವಿಡಿಯೋ

ವಿಮಾನವು ತಾಂತ್ರಿಕ ಕಾರಣಗಳಿಂದಾಗಿ ಇದ್ದಕ್ಕಿದ್ದಂತೆ ನೆಲಕ್ಕೆ ಧುಮುಕಿ ಬೆಂಕಿ ಹೊತ್ತಿಕೊಂಡಿದೆ. ಇರ್ಕುಟ್ಸ್ಕ್ ಗವರ್ನರ್ ಇಗೊರ್ ಕೊಬ್ಜೆವ್ ಅವರ ಪ್ರಕಾರ, ವಿಮಾನದ ಎಂಜಿನ್ ವೈಫಲ್ಯವೇ ಈ ಭೀಕರ ಅಪಘಾತಕ್ಕೆ ಪ್ರಾಥಮಿಕ ಕಾರಣ ಎನ್ನಲಾಗಿದೆ. ಗಾಯಗೊಂಡ ಸಿಬ್ಬಂದಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತಷ್ಟು ಓದಿ: Video: ಪಾಕಿಸ್ತಾನದಲ್ಲಿ ವಾಯುಸೇನೆಯ ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‌ಗಳ ದುರ್ಮರಣ, ಮೂವರಿಗೆ ಗಾಯ

ಅಪಘಾತಕ್ಕೀಡಾದ ‘Tu-22M3’ ಸೋವಿಯತ್ ಒಕ್ಕೂಟದ ಕಾಲದ ಅತ್ಯಂತ ವೇಗದ ಸೂಪರ್‌ಸಾನಿಕ್ ಬಾಂಬರ್ ವಿಮಾನವಾಗಿದೆ. ಇದನ್ನು ನ್ಯಾಟೋ (NATO) ಪಡೆಗಳು ಬ್ಯಾಕ್‌ಫೈರ್ ಎಂದೂ ಕೂಡ ಕರೆಯಲಾಗುತ್ತದೆ. ಅತ್ಯಾಧುನಿಕ ಆವೃತ್ತಿಯಾದ ಈ ವಿಮಾನವು ಹೈಪರ್‌ಸಾನಿಕ್ ಕಿಂಜಾಲ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಅಪಘಾತದ ಕುರಿತು ರಷ್ಯಾ ರಕ್ಷಣಾ ಸಚಿವಾಲಯವು ಆಳವಾದ ತನಿಖೆಗೆ ಆದೇಶಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:10 am, Tue, 16 June 26

Source link

‘ಅಮೃತಧಾರೆ’ ಮಹಾ ತಿರುವು; ಗೌತಮ್ ಹಾಗೂ ಭೂಮಿಕಾ ದಂಪತಿಗೆ ತಿಳಿಯಿತು ಮಿಂಚು ಸತ್ಯ – Kannada News | Amrutha Dhare: Minchu’s True Identity Gautam and Bhumika Reunite with Lost Child

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಈಗ ಅತ್ಯಂತ ರೋಚಕ ಹಂತ ತಲುಪಿದೆ. ಗೌತಮ್ ಹಾಗೂ ಭೂಮಿಕಾ ದಂಪತಿಯಿಂದ ಹಲವು ಸಮಯದ ಹಿಂದೆ ದೂರವಾಗಿದ್ದ ಮಗಳು ಕೊನೆಗೂ ಸಿಕ್ಕಿರುವ ಸತ್ಯ ಈಗ ಪ್ರೋಮೋ ಮೂಲಕ ರಿವೀಲ್ ಆಗಿದೆ. ಇದು ವೀಕ್ಷಕರಲ್ಲಿ ಖುಷಿ ಮೂಡಿಸಿದೆ.

ಭೂಮಿಕಾಗೆ ಅವಳಿ ಮಕ್ಕಳು ಜನಿಸಿದ್ದವು. ಆದರೆ ಕ್ರೂರ ಜೆಡಿ ಸಂಚು ನಡೆಸಿ ಒಂದು ಮಗುವನ್ನು ಕಿಡ್ನ್ಯಾಪ್ ಮಾಡಿದ್ದ. ಇದಾದ ಹಲವು ಸಮಯದ ಬಳಿಕ ಗೌತಮ್‌ಗೆ ‘ಮಿಂಚು’ ಎಂಬ ಮುದ್ದಾದ ಹುಡುಗಿ ಸಿಕ್ಕಿದ್ದಳು. ಆಕೆ ಅನಾಥೆ ಎಂದು ಭಾವಿಸಿ ಗೌತಮ್ ದತ್ತು ಪಡೆದು ಪ್ರೀತಿಯಿಂದ ಸಾಕಿದ್ದ. ಆದರೆ, ಈಗ ಆ ಮಿಂಚು ಬೇರೆ ಯಾರೂ ಅಲ್ಲ, ಗೌತಮ್ ಮತ್ತು ಭೂಮಿಕಾ ಅವರ ಸ್ವಂತ ಮಗಳು ಎಂಬ ಮಹತ್ವದ ಸತ್ಯ ಬಯಲಾಗಿದೆ.

ಈ ಮಹಾ ಸತ್ಯವನ್ನು ಗೌತಮ್ ಕುಟುಂಬದ ಮುಂದೆ ತಂದು ನಿಲ್ಲಿಸುವುದು ಜೀ ಕನ್ನಡದ ಮತ್ತೊಂದು ಹೊಸ ಧಾರಾವಾಹಿ ‘ಕರ್ಣ’ ನಾಯಕ ಕರ್ಣ. ‘ಅಮೃತಧಾರೆ’ಯ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ. ಕರ್ಣ ಮೆಡಿಕಲ್ ರಿಪೋರ್ಟ್‌ಗಳನ್ನು ಹಿಡಿದು ಗೌತಮ್ ಮನೆಗೆ ಎಂಟ್ರಿ ಕೊಡುತ್ತಾನೆ. ‘ಯಾರೋ ಈ ರಿಪೋರ್ಟ್ ಅನ್ನು ಸ್ವಾಪ್ (ಅದಲು-ಬದಲು) ಮಾಡಿರೋ ತರ ಇದೆ’ ಎಂದು ಅನುಮಾನ ವ್ಯಕ್ತಪಡಿಸುವ ಕರ್ಣ, ಬಳಿಕ ಡಿಎನ್‌ಎ ರಿಪೋರ್ಟ್‌ಗಳನ್ನು ಮ್ಯಾಚ್ ಮಾಡಿ ತೋರಿಸುತ್ತಾನೆ.

‘ನನಗೆ ಮೊದಲೇ ಆ ಮಗು ನಿಮ್ಮ ಮಗುವೇ ಆಗಿರಬಹುದು ಅನ್ನೋ ಡೌಟ್ ಇತ್ತು. ಈಗ ರಿಪೋರ್ಟ್‌ಗಳು ಮ್ಯಾಚ್ ಆಗ್ತಿವೆ. ಆ ಮಿಂಚು ಬೇರೆ ಯಾರೂ ಅಲ್ಲ, ನಿಮ್ಮದೇ ಮಗಳು’ ಎಂದು ಕರ್ಣ ಅಧಿಕೃತವಾಗಿ ಸಾರುತ್ತಾನೆ.

ಮಗುವಿನ ಕೈ ಮೇಲಿನ ಆ ಗುರುತು

ಸತ್ಯ ಕೇಳಿ ಇಡೀ ಕುಟುಂಬ ಆಶ್ಚರ್ಯಚಕಿತರಾದಾಗ, ಕರ್ಣ ಮತ್ತೊಂದು ಮುಖ್ಯವಾದ ಸುಳಿವು ನೀಡುತ್ತಾನೆ. ‘ಆ ಮಗುವಿನ ಕೈ ಮೇಲೇನಾದರೂ ಮಚ್ಚೆ ಇತ್ತಾ?” ಎಂದು ಪ್ರಶ್ನಿಸುತ್ತಾನೆ. ತಕ್ಷಣವೇ ಭೂಮಿಕಾ ಹಾಗೂ ಗೌತಮ್‌ಗೆ ತಮ್ಮ ಮಗುವಿನ ಕೈ ಮೇಲಿದ್ದ ತ್ರಿಶೂಲದ ಆಕಾರದ ಮಚ್ಚೆ ನೆನಪಿಗೆ ಬರುತ್ತದೆ. ಇದರಿಂದಾಗಿ ಮಿಂಚು ತಾವೇ ಕಳೆದುಕೊಂಡ ಮಗಳು ಎಂಬುದು ನೂರಕ್ಕೆ ನೂರರಷ್ಟು ಖಚಿತವಾಗುತ್ತದೆ. ಇತ್ತ ಮಗುವಿನ ಸತ್ಯ ಬಯಲಾಗುತ್ತಿದ್ದಂತೆ ಸದಾ ಸಂಚು ರೂಪಿಸುತ್ತಿದ್ದ ಜೆಡಿಗೆ ತಕ್ಕ ಶಾಸ್ತಿ ಕಾದಂತಿದೆ.

ಇದನ್ನೂ ಓದಿ: ಅಮೃತಧಾರೆ ಧಾರಾವಾಹಿ: ಮಗಳು ಮಿಂಚು ಕಿಡ್ನ್ಯಾಪ್, ಭದ್ರಕಾಳಿ ಅವತಾರ ತಾಳಿದ ಭೂಮಿಕಾ

ಇಷ್ಟು ದಿನ ತನ್ನದೇ ಮಗಳನ್ನು ದತ್ತು ಪುತ್ರಿ ಎಂದು ಸಾಕುತಿದ್ದ ಗೌತಮ್‌ಗೆ ಈಗ ಅವಳೇ ತನ್ನ ಕಂದ ಎಂಬ ಸತ್ಯ ತಿಳಿದಾಗ ಆಗುವ ಭಾವುಕ ಕ್ಷಣಗಳನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..! – Kannada News | Vaibhav sooryavanshi fight with sri lanka Players

ಶ್ರೀಲಂಕಾದ ದಂಬುಲಾದಲ್ಲಿ ನಡೆದ ಟ್ರೈ-ನೇಷನ್ ‘ಎ’ ಸರಣಿಯ 4ನೇ ಪಂದ್ಯವು ಹೈ-ಡ್ರಾಮಾಗೆ ಸಾಕ್ಷಿಯಾಗಿದೆ. ಭಾರತ ಎ ಮತ್ತು ಶ್ರೀಲಂಕಾ ಎ ನಡುವಣ ಏಕದಿನ ಪಂದವು ಮೊದಲಿಗೆ ಟೈನಲ್ಲಿ ಅಂತ್ಯಗೊಂಡಿತು. ಆ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದೆ. ಈ ಸೋಲಿನ ಬೆನ್ನಲ್ಲೇ ಆಟಗಾರರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಈ ಮ್ಯಾಚ್​ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ‘ಎ’ ತಂಡ ಸೂರ್ಯಂಶ್ ಶೆಡ್ಗೆ (72) ಅವರ ಅರ್ಧಶತಕದ ನೆರವೇರಿಕೆಯಿಂದ 265 ರನ್ ಗಳಿಸಿತ್ತು. ಶ್ರೀಲಂಕಾ ತಂಡವೂ ಸರಿಯಾಗಿ 265 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಗಿ, ಸೂಪರ್ ಓವರ್ ಆಡಲಾಯಿತು.

  • ಸೂಪರ್ ಓವರ್‌ನಲ್ಲಿ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್ ಗುರಿ ನೀಡಿತು.
  • 17 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ ಹಾಗೂ ಸೂರ್ಯಂಶ್ ಶೆಡ್ಗೆ ಕಣಕ್ಕಿಳಿದಿದ್ದರು.

ಸೂಪರ್ ಓವರ್​ನ ಮೊದಲ 4 ಎಸೆತಗಳಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು 5 ರನ್​ಗಳು ಮಾತ್ರ. ಅದರಂತೆ ಕೊನೆಯ 2 ಎಸೆತಗಳಲ್ಲಿ ಭಾರತ ತಂಡಕ್ಕೆ 12 ರನ್​ಗಳು ಬೇಕಿದ್ದವು. 5ನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ ಫೋರ್ ಬಾರಿಸಿದರು.

ಆದರೆ  ಶ್ರೀಲಂಕಾದ 19 ವರ್ಷದ ಮಿಸ್ಟರಿ ಸ್ಲಿಂಗರ್  ಕುಗಥಾಸ್ ಮಥುಲನ್ ಎಸೆದ ಕೊನೆಯ ಎಸೆತವನ್ನು ಕನೆಕ್ಟ್ ಮಾಡಲು ವೈಭವ್ ವಿಫಲರಾದರು. ಈ ಮೂಲಕ ಟೀಮ್ ಇಂಡಿಯಾ  7 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಕೆರಳಿದ ವೈಭವ್ ಸೂರ್ಯವಂಶಿ!

ಸೂಪರ್ ಓವರ್​ನಲ್ಲಿ 7 ರನ್​ಗಳಿಂದ ಗೆಲ್ಲುತ್ತಿದ್ದಂತೆ​ ಶ್ರೀಲಂಕಾ ಆಟಗಾರರು ಅತಿಯಾದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಾಗೆ, ನಿರಾಸೆಯಿಂದ ಪೆವಿಲಿಯನ್‌ಗೆ ಮರಳುತ್ತಿದ್ದ ವೈಭವ್ ಸೂರ್ಯವಂಶಿಯವರನ್ನು ನೋಡಿ ಅದೇನೋ ಹೇಳಿದ್ದಾರೆ.

ಈ ಮಾತಿನಿಂದ ಕೆರಳಿದ 15 ವರ್ಷದ ವೈಭವ್ ಸೂರ್ಯವಂಶಿ, ನೇರವಾಗಿ ಹಾಲಂಬಾಗೆ ಅವರತ್ತ ಧಾವಿಸಿ ಮಾತಿನ ಚಕಮಕಿ ನಡೆಸಿದರು. ಈ ವಾಗ್ವಾದದ ನಡುವೆ ವೈಭವ್, ಲಂಕಾ ಆಟಗಾರನ ಎದೆಗೆ ಜೋರಾಗಿ ಕೈಯಿಂದ ತಳ್ಳಿದ್ದಾರೆ.

ಆಟಗಾರರ ನಡುವಣ ಈ ಜಗಳದಿಂದಾಗಿ ಮೈದಾನದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ತಕ್ಷಣವೇ ಶ್ರೀಲಂಕಾದ ಹಿರಿಯ ವಿಕೆಟ್‌ಕೀಪರ್ ನಿರೋಷನ್ ಡಿಕ್ವೆಲ್ಲಾ ಮತ್ತು ಕೆಲ ಆಟಗಾರರು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ವೈಭವ್ ಸೂರ್ಯವಂಶಿ ನಡೆಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಸದ್ಯ ಶ್ರೀಲಂಕಾ ಎ ವಿರುದ್ಧ ಸೋತಿರುವ ಭಾರ ಎ ತಂಡವು ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ್ ಎ ವಿರುದ್ಧ ಆಡಲಿದೆ. ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ತ್ರಿಕೋನ ಸರಣಿಯಲ್ಲಿ ಫೈನಲ್​ ಆಡಬಹುದು.

Source link

ಮಕ್ಕಳ ಸುರಕ್ಷತೆ ಕಡೆಗೆ ಬ್ರಿಟನ್ ಮಹಾ ಹೆಜ್ಜೆ: 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧ – Kannada News | UK Bans Social Media for Under 16s: Protecting Children’s Mental Health Online

ಲಂಡನ್, ಜೂನ್ 16: ಮಕ್ಕಳ ಮಾನಸಿಕ ಆರೋಗ್ಯ(Mental Health)ವನ್ನು ಕಾಪಾಡುತ್ತಾ ಶಿಕ್ಷಣ ಮತ್ತು ಬಾಲ್ಯವನ್ನು ಮೊಬೈಲ್ ಚಟದಿಂದ ರಕ್ಷಿಸಲು ಬ್ರಿಟನ್ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಿದೆ. ಆಸ್ಟ್ರೇಲಿಯಾ ಮತ್ತು ಫ್ರಾನ್ಸ್​ ದೇಶಗಳು ಕೂಡ ಇದೇ ಹಾದಿಯಲ್ಲಿ ಮುನ್ನಡೆಯುತ್ತಿವೆ.

ಸಾಮಾಜಿಕ ಮಾಧ್ಯಮಗಳ ಅತಿಯಾದ ವ್ಯಸನವು ಮಕ್ಕಳ ಮಾನಸಿಕ ಆರೋಗ್ಯ, ನಿದ್ರೆ, ಶಿಕ್ಷಣ, ಆಟ ಮತ್ತು ಕುಟುಂಬ ಜೀವನದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಆದ್ದರಿಂದ ಮಕ್ಕಳಿಗೆ ಅವರ ಮುಗ್ಧ ಬಾಲ್ಯವನ್ನು ಮರಳಿ ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಈ ನಿರ್ಧಾರಕ್ಕೆ ಜಗತ್ತಿನ ಪ್ರಭಾವಿ ತಂತ್ರಜ್ಞಾನ ಕಂಪನಿಗಳಿಂದ ವಿರೋಧ ವ್ಯಕ್ತವಾಗಬಹುದು. ಆದರೆ, ಯಾವುದೇ ವಾಣಿಜ್ಯ ಲಾಭಕ್ಕಿಂತ ಮಕ್ಕಳ ಸುರಕ್ಷತೆಯೇ ನಮಗೆ ಮುಖ್ಯ ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ಸ್ಪಷ್ಟಪಡಿಸಿದ್ದಾರೆ.

ಕೇವಲ ಬ್ರಿಟನ್ ಮಾತ್ರವಲ್ಲದೆ, ಈಗಾಗಲೇ ಆಸ್ಟ್ರೇಲಿಯಾ 16 ವರ್ಷದೊಳಗಿನ ಮಕ್ಕಳಿಗೆ ನಿಷೇಧ ಹೇರಿದೆ. ಫ್ರಾನ್ಸ್ 15 ವರ್ಷದೊಳಗಿನ ಮಕ್ಕಳಿಗೆ ಕಠಿಣ ಕಾನೂನು ತರುತ್ತಿದೆ ಹಾಗೂ ಜಪಾನ್, ಸ್ಪೇನ್ ಮತ್ತು ಡೆನ್ಮಾರ್ಕ್ ದೇಶಗಳು ಕೂಡ ಅಪ್ರಾಪ್ತ ವಯಸ್ಕರ ಸಾಮಾಜಿಕ ಮಾಧ್ಯಮ ಬಳಕೆಯನ್ನು ಬಿಗಿಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಮತ್ತಷ್ಟು ಓದಿ: ಮೊಬೈಲ್​ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು

ಬ್ರಿಟನ್‌ನ ಪ್ರಸಿದ್ಧ ‘ದಿ ಗಾರ್ಡಿಯನ್’ ಪತ್ರಿಕೆಯ ವರದಿಯ ಪ್ರಕಾರ, ಈ ಪ್ರಸ್ತಾವಿತ ವಯೋಮಿತಿ ನಿಷೇಧವು ಮಕ್ಕಳ ನೆಚ್ಚಿನ ಅಪ್ಲಿಕೇಶನ್‌ಗಳಾದ ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಥ್ರೆಡ್ಸ್, ಎಕ್ಸ್ (ಟ್ವಿಟರ್), ಯೂಟ್ಯೂಬ್, ಸ್ನ್ಯಾಪ್‌ಚಾಟ್ ಮತ್ತು ರೆಡ್ಡಿಟ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಅನ್ವಯಿಸಲಿದೆ. ಮಕ್ಕಳ ಭಾವನಾತ್ಮಕ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

ಈ ಕಠಿಣ ನಿರ್ಧಾರದ ಬಗ್ಗೆ ಯೂಟ್ಯೂಬ್ ಮತ್ತು ಸ್ನ್ಯಾಪ್‌ಚಾಟ್ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕಂಪನಿಗಳು ಕಳವಳ ವ್ಯಕ್ತಪಡಿಸಿವೆ. ವಯಸ್ಸಿನ ಪರಿಶೀಲನೆ ಮತ್ತು ಪೋಷಕರ ನಿಯಂತ್ರಣವನ್ನು ಬಲಪಡಿಸುವುದು ನಿಷೇಧಕ್ಕಿಂತ ಉತ್ತಮ ಎಂದು ಕಂಪನಿಗಳು ವಾದಿಸಿವೆ. ಆದರೆ, ತಂತ್ರಜ್ಞಾನ ಕಂಪನಿಗಳ ವಿರೋಧವನ್ನು ಎದುರಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಮಕ್ಕಳನ್ನು ರಕ್ಷಿಸುವ ಈ ಕಠಿಣ ನಿಯಮವು ಇತ್ತೀಚಿನ ಜಾಗತಿಕ ಟ್ರೆಂಡ್ ಆಗಿದೆ. ಈಗಾಗಲೇ ಆಸ್ಟ್ರೇಲಿಯಾ, ಕೆನಡಾ, ಬ್ರೆಜಿಲ್ ಮತ್ತು ಇಂಡೋನೇಷ್ಯಾ ದೇಶಗಳು ಇಂತಹ ವಯೋಮಿತಿ ನಿರ್ಬಂಧಗಳನ್ನು ಜಾರಿಗೆ ತಂದಿದ್ದು, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳು ಕೂಡ ಇದರ ಪರಿಶೀಲನೆಯಲ್ಲಿವೆ.

ಬ್ರಿಟನ್ ಸರ್ಕಾರದ ಈ ಪ್ರಸ್ತಾವನೆಗೆ ಅಲ್ಲಿನ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಬರೋಬ್ಬರಿ 1.16 ಲಕ್ಷಕ್ಕೂ ಹೆಚ್ಚು ಜನ ನಿಷೇಧದ ಪರವಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನಾವು ದೇಶದ ಕುಟುಂಬಗಳ ಪರವಾಗಿ ನಿಲ್ಲಬೇಕೇ ಹೊರತು, ಡಿಜಿಟಲ್ ವ್ಯವಸ್ಥೆಯ ಪರವಾಗಿ ಅಲ್ಲ ಎಂದು ಪ್ರಧಾನಿ ಸ್ಟಾರ್ಮರ್ ಖಡಕ್ ಆಗಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ಕನ್ನಡದ ನಟಿ ಸಂಯುಕ್ತಾ ಹೆಗಡೆ ಎಂಟ್ರಿ – Kannada News | Samyuktha Hegde Joins Chiyaan Vikram’s ‘Chiyaan 63’ A Rising Pan India Star

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಈಗ ಪರಭಾಷೆಗಳಲ್ಲೂ ಧೂಳೆಬ್ಬಿಸುತ್ತಿರುವ ನಟಿ ಸಂಯುಕ್ತಾ ಹೆಗಡೆ ಅವರ ಖಾತೆಗೆ ಮತ್ತೊಂದು ದೊಡ್ಡ ಸಿನಿಮಾ ಸೇರ್ಪಡೆಯಾಗಿದೆ. ಕಾಲಿವುಡ್ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ನಟನೆಯ, ಆನಂದ್ ಶಂಕರ್ ನಿರ್ದೇಶನದ ಬಹುನಿರೀಕ್ಷಿತ ‘ಚಿಯಾನ್ 63’ ಚಿತ್ರಕ್ಕೆ ಸಂಯುಕ್ತಾ ಆಯ್ಕೆಯಾಗಿದ್ದಾರೆ. ಈ ಹಿಂದೆ ವಿಕ್ರಮ್ ಹಾಗೂ ಆನಂದ್ ಅವರು ‘ಇರು ಮುಗನ್’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದಾದ ಹತ್ತು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದೆ. ಈ ಬಿಗ್ ಪ್ರಾಜೆಕ್ಟ್‌ನಲ್ಲಿ ಸಂಯುಕ್ತಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.

ರಕ್ಷಿತ್ ಶೆಟ್ಟಿ ನಟನೆಯ ಹಾಗೂ ರಿಷಬ್ ಶೆಟ್ಟಿ ನಿರ್ದೇಶನದ ಹಿಟ್ ಚಿತ್ರ ‘ಕಿರಿಕ್ ಪಾರ್ಟಿ’ ಮೂಲಕ ಸಂಯುಕ್ತಾ ಹೆಗಡೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ತಮ್ಮ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಮನಗೆದ್ದ ಇವರು, ಚಿತ್ರದಲ್ಲಿನ ಆರ್ಯ ಪಾತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಪಟ್ಟ ತಂದುಕೊಂಡರು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಇದರ ತೆಲುಗು ರಿಮೇಕ್ ‘ಕಿರಾಕ್ ಪಾರ್ಟಿ’ ಮೂಲಕ ಅವರು ಟಾಲಿವುಡ್‌ಗೂ ಎಂಟ್ರಿ ಕೊಟ್ಟರು.

ಕನ್ನಡದ ನಂತರ ತಮಿಳು ಚಿತ್ರರಂಗದಲ್ಲೂ ಸಕ್ರಿಯರಾದರು. ‘ಕೋಮಾಲಿ’ ಮತ್ತು ‘ಮನ್ಮಥ ಲೀಲೆ’ ಚಿತ್ರಗಳಲ್ಲಿನ ತಮ್ಮ ನಟನೆಯ ಮೂಲಕ ಕಾಲಿವುಡ್ ಪ್ರೇಕ್ಷಕರಿಗೆ ಹತ್ತಿರವಾದರು. ಕೇವಲ ಗ್ಲಾಮರ್ ಮಾತ್ರವಲ್ಲದೆ ವಿಭಿನ್ನ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಮಾರುಕಟ್ಟೆ ಸೃಷ್ಟಿಸಿಕೊಂಡ ಈ ಕರಾವಳಿ ಬೆಡಗಿ, ಇತ್ತೀಚೆಗೆ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು ಅಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಕನ್ನಡ ಬಿಗ್ ಬಾಸ್ ಅಲ್ಲೂ ಸಂಯುಕ್ತಾ ಕಾಣಿಸಿಕೊಂಡಿದ್ದರು. ಸಹ ಸ್ಪರ್ಧಿ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸಬೇಕಾಯಿತು. ಬಿಗ್ ಬಾಸ್ ಮನೆಯ ಕಟ್ಟುನಿಟ್ಟಿನ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಅವರನ್ನು ಶೋನಿಂದ ಅರ್ಧಕ್ಕೇ ಎಲಿಮಿನೇಟ್ ಮಾಡಿ ಹೊರಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಸತತ ಸೋಲಿನ ಬಳಿಕ ಸಂಭಾವನೆಯನ್ನು ಗಣನೀಯವಾಗಿ ಇಳಿಸಿಕೊಂಡ ವಿಕ್ರಮ್

ಈಗ ಸಂಯುಕ್ತಾಗೆ ದೊಡ್ಡ ಆಫರ್​ ಸಿಕ್ಕಿದೆ. ಈ ಸಿನಿಮಾ ಕಂಪ್ಲೀಟ್ ಫ್ಯಾಮಿಲಿ ಆ್ಯಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಕೇವಲ ವಿಕ್ರಮ್ ಅಷ್ಟೇ ಅಲ್ಲದೆ ಹಿರಿಯ ನಟಿ ಊರ್ವಶಿ, ಎಂ.ಎಸ್. ಭಾಸ್ಕರ್ ಮತ್ತು ರಿಯಾ ಶಿಬು ಸೇರಿದಂತೆ ಒಂದು ದೊಡ್ಡ ತಾರಾಬಳಗವೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಲ್ಲಿ ಶೇ 21 ರಷ್ಟು ಮುಂಗಾರು ಮಳೆ ಕೊರತೆ: ಪ್ರಮುಖ ಡ್ಯಾಂಗಳಲ್ಲಿ ತಳ ಸೇರಿದ ನೀರು – Kannada News | Karnataka Suffer 21 percent Monsoon Rain Deficit; Water Levels in 14 Major Reservoirs Drop to 23 percent of Capacity

ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆImage Credit source: tv9

ಬೆಂಗಳೂರು, ಜೂನ್ 16: ರಾಜ್ಯದಲ್ಲಿ ಈ ವರ್ಷ ಮುಂಗಾರು (Monsoon Rain) ಆರಂಭದಲ್ಲೇ ಆತಂಕ ಮೂಡಿಸಿದೆ. ಜೂನ್ 1 ರಿಂದ ಜೂನ್ 15 ರವರೆಗಿನ ಅವಧಿಯಲ್ಲಿ ಕರ್ನಾಟಕ ಒಟ್ಟಾರೆ ಶೇಕಡಾ 21 ರಷ್ಟು ಮಳೆ ಕೊರತೆಯನ್ನು ಎದುರಿಸಿದೆ. ಅದರಲ್ಲೂ ವಿಶೇಷವಾಗಿ, ಹೆಚ್ಚು ಮಳೆಯಾಗುವ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕ್ರಮವಾಗಿ ಶೇ 41 ಮತ್ತು ಶೇ 36 ರಷ್ಟು ಮಳೆ ಅಭಾವ ಸೃಷ್ಟಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಕರಾವಳಿ, ಮಲೆನಾಡಿನಲ್ಲಿ ತೀವ್ರ ಮಳೆ ಕೊರತೆ
  • ಬರಿದಾಗುತ್ತಿರುವ ಪ್ರಮುಖ ಡ್ಯಾಂಗಳು
  • ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದ ಸರ್ಕಾರ

ಜೂನ್ 4 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತಾದರೂ, ಜೂನ್ 15 ರವರೆಗೆ ದಾಖಲಾಗಬೇಕಿದ್ದ 85.5 ಮಿಮೀ ವಾಡಿಕೆ ಮಳೆಯ ಬದಲಿಗೆ ಕೇವಲ 67 ಮಿಮೀ ಮಳೆಯಾಗಿದೆ. ಎಲ್ ನಿನೋ ಪರಿಣಾಮದಿಂದಾಗಿ ಈ ಬಾರಿ ಮುಂಗಾರು ಮಾರುತಗಳು ಅತ್ಯಂತ ದುರ್ಬಲವಾಗಿವೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಎನ್. ಪುವಿಯರಸನ್ ತಿಳಿಸಿದ್ದಾರೆ.

ಸದ್ಯಕ್ಕೆ ಅರಬ್ಬಿ ಸಮುದ್ರದಲ್ಲಿ ಯಾವುದೇ ವಾಯುಭಾರ ಕುಸಿತದ ಮುನ್ಸೂಚನೆ ಇಲ್ಲದಿರುವುದರಿಂದ ಕರಾವಳಿ ತೀರ ಒಣಹವೆಯಿಂದ ಕೂಡಿದೆ. ಇದರ ಜೊತೆಗೆ ರಾಜ್ಯದ ಶೇ 82 ರಷ್ಟು ಭಾಗದಲ್ಲಿ 30 ರಿಂದ 36 ಡಿಗ್ರಿ ಸೆಲ್ಶಿಯಸ್ ತಾಪಮಾನವಿದ್ದರೆ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಬೆಳಗಾವಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಶಿಯಸ್​ನಿಂದ 40.5 ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುತ್ತಿದ್ದು, ಬೇಸಿಗೆಯ ವಾತಾವರಣ ಮುಂದುವರಿದಿದೆ.

ಜಲಾಶಯಗಳು ಖಾಲಿ ಖಾಲಿ

ಕೆಆರ್​ಎಸ್ ಡ್ಯಾಂ ಬ್ಯಾಕ್​ವಾಟರ್ ಪ್ರದೇಶದಲ್ಲಿ ನೀರು ಕಡಿಮೆಯಾಗಿರುವುದು

ಮಳೆಯ ಕೊರತೆ ಮತ್ತು ತೀವ್ರ ಶಾಖದಿಂದಾಗಿ ರಾಜ್ಯದ 14 ಪ್ರಮುಖ ಜಲಾಶಯಗಳ ನೀರು ವೇಗವಾಗಿ ಖಾಲಿಯಾಗುತ್ತಿದೆ. ಒಟ್ಟು 896 ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯಗಳಲ್ಲಿ ಪ್ರಸ್ತುತ ಕೇವಲ 206 ಟಿಎಂಸಿ (ಶೇ. 23) ನೀರು ಮಾತ್ರ ಉಳಿದಿದೆ. ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಕೇವಲ 34 ಟಿಎಂಸಿ ನೀರಿದ್ದರೆ (ಕಳೆದ ವರ್ಷ 77 ಟಿಎಂಸಿ ಇತ್ತು), ಕೃಷ್ಣಾ ಕೊಳ್ಳದ 6 ಜಲಾಶಯಗಳಲ್ಲಿ ಒಟ್ಟು 423 ಟಿಎಂಸಿ ಸಂಗ್ರಹ ಸಾಮರ್ಥ್ಯ ಇದ್ದು, ಕೇವಲ 94 ಟಿಎಂಸಿ ನೀರಿದೆ.

ಇದನ್ನೂ ಓದಿ: ಕರ್ನಾಟಕ ಸೇರಿ ದೇಶಾದ್ಯಂತ ಮುಂಗಾರು ಕೊರತೆ: 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ

ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಸದ್ಯಕ್ಕೆ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡಲು ಆದ್ಯತೆ ನೀಡಲಾಗುವುದು. ಜುಲೈ ಮೊದಲ ವಾರದಲ್ಲಿ ಜಲಾಶಯಗಳ ಮಟ್ಟವನ್ನು ಪರಿಶೀಲಿಸಿ ಬರ ಪರಿಸ್ಥಿತಿಯ ಘೋಷಣೆಯ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ವಿಭಾಗ) ಕಮಿಷನರ್ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. ಕೃಷಿ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಮುನ್ನೆಚ್ಚರಿಕೆ ತುರ್ತು ಯೋಜನೆಗಳನ್ನು ಪಾಲಿಸಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿಗೆ ಸ್ಲೋವಾಕಿಯಾದ ಅತ್ಯುನ್ನತ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಗೌರವ – Kannada News | PM Modi Awarded Slovakia’s Highest Honor, ‘Order of the White Double Cross’, Boosting India Ties

ಬ್ರಾಟಿಸ್ಲಾವಾ, ಜೂನ್ 16: ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರಿಗೆ ಮತ್ತೊಂದು ಅಂತಾರಾಷ್ಟ್ರೀಯ ಗೌರವ ಲಭಿಸಿದೆ, ನಾರ್ವೆ ಮತ್ತು ಸ್ವೀಡನ್ ದೇಶಗಳ ಬಳಿಕ ಈಗ ಸ್ಲೋವಾಕಿಯಾ ಸರ್ಕಾರವು ಪ್ರಧಾನಿ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ರಾಷ್ಟ್ರೀಯ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್ ‘ ಪ್ರಶಸ್ತಿ ನೀಡಿ ಗೌರವಿಸಿದೆ.

ಸ್ಲೋವಾಕಿಯಾದ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನ್ ಅವರು ಪ್ರಧಾನಿಯವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡಿದ 33ನೇ ಅತ್ಯುನ್ನತ ಗೌರವ ಇದಾಗಿದೆ.

ಪ್ರಧಾನಿ ಮೋದಿ ಪೋಸ್ಟ್

ಏನಿದು ಪ್ರತಿಷ್ಠಿತ ಪ್ರಶಸ್ತಿ, ಪ್ರಧಾನಿಗೆ ಏಕೆ ಸಿಕ್ಕಿದೆ?
‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಎಂಬುದು ಸ್ಲೋವಾಕಿಯಾ ಗಣರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿದೆ. ಭಾರತ ಮತ್ತು ಸ್ಲೋವಾಕಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ, ಜಾಗತಿಕ ಮಟ್ಟದಲ್ಲಿ ಸಹಕಾರ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಹೆಚ್ಚಿಸುವಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.

ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ: ಪ್ರಧಾನಿ ಮೋದಿ
ಪ್ರಶಸ್ತಿ ಸ್ವೀಕರಿಸಿದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, ಸ್ಲೋವಾಕಿಯಾದ ಸರ್ಕಾರ ಮತ್ತು ಜನರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಸಂದ ದೊಡ್ಡ ಗೌರವ. ಇದು ಭಾರತದ 1.4 ಶತಕೋಟಿ (140 ಕೋಟಿ) ಜನರಿಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿಯನ್ನು ಭಾರತ ಮತ್ತು ಸ್ಲೋವಾಕಿಯಾ ನಡುವಿನ ಸ್ನೇಹಕ್ಕೆ ಅರ್ಪಿಸುತ್ತೇನೆ ಎಂದು ಅವರು ಬರೆದಿದ್ದಾರೆ.

ಮತ್ತಷ್ಟು ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಇತಿಹಾಸ ಸೃಷ್ಟಿಸಿದ ಭೇಟಿ: 11 ಪ್ರಮುಖ ಒಪ್ಪಂದಗಳಿಗೆ ಸಹಿ
ಸ್ಲೋವಾಕಿಯಾ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಭೇಟಿಯ ವೇಳೆ ಪ್ರಧಾನಿ ಮೋದಿ ಮತ್ತು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರು ನಡೆಸಿದ ದೀರ್ಘ ಮಾತುಕತೆ ಅತ್ಯಂತ ಯಶಸ್ವಿಯಾಗಿದೆ. ಉಭಯ ದೇಶಗಳು ತಮ್ಮ ಸಂಬಂಧವನ್ನು ಸಮಗ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನಿರ್ಧರಿಸಲಾಗಿದೆ.

ವಲಸೆ, ಡಿಜಿಟಲ್ ತಂತ್ರಜ್ಞಾನ ಮತ್ತು ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು 11 ಒಪ್ಪಂದಗಳಿಗೆ ಸಹಿ ಹಾಕಿವೆ. ಭಾರತ ಮತ್ತು ಐರೋಪ್ಯ ಒಕ್ಕೂಟ (EU) ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ತ್ವರಿತವಾಗಿ ಜಾರಿಗೆ ತರಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಭಾರತ ಮತ್ತು ಯುರೋಪ್ ನಡುವಿನ ಆರ್ಥಿಕ ಹಾಗೂ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ – Kannada News | Sri Lanka A vs India A, 4th Match Highlights

ಭಾರತ ಎ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಎ ತಂಡ ಜಯ ಸಾಧಿಸಿದೆ. ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಾಚ್ಚಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.2 ಓವರ್​ಗಳಲ್ಲಿ 265 ರನ್​ಗಳಿಸಿ ಆಲೌಟ್ ಆಗಿತ್ತು.

266 ರನ್​​ಗಳ ಗುರಿ ಪಡೆದ ಶ್ರೀಲಂಕಾ ಎ ತಂಡವು 49 ಓವರ್​ಗಳ ಮುಕ್ತಾಯದ ವೇಳೆಗೆ ಕಲೆಹಾಕಿದ್ದು ಬರೋಬ್ಬರಿ 261 ರನ್​ಗಳು. ಅದರಂತೆ ಕೊನೆಯ ಓವರ್​ನಲ್ಲಿ ಕೇವಲ 5 ರನ್​ಗಳ ಗುರಿ ಪಡೆದಿದ್ದರು.

ಆದರೆ ಟೀಮ್ ಇಂಡಿಯಾ ಪರ 50ನೇ ಓವರ್​ ಎಸೆದ ಅರ್ಷದ್ ಖಾನ್ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ. 2ನೇ ಎಸೆತದಲ್ಲಿ ಸಮರವಿಕ್ರಮ (93) ರನ್ನು ಬೌಲ್ಡ್ ಮಾಡಿದರು. 3ನೇ ಎಸೆತದಲ್ಲಿ ಒಂದು ರನ್ ನೀಡಿದರು. 4ನೇ ಎಸೆತದಲ್ಲಿ 1 ರನ್​ ಕಲೆಹಾಕಿದರು. 5ನೇ ಎಸೆತದಲ್ಲಿ ಮತ್ತೊಂದು ರನ್​ ನೀಡಿದರು. ಅದರಂತೆ ಕೊನೆಯ ಎಸೆತದಲ್ಲಿ  2 ರನ್ ಬೇಕಿತ್ತು. ಈ ವೇಳೆ ಕೇವಲ ಒಂದು ರನ್ ಮಾತ್ರ ನೀಡುವ ಮೂಲಕ ಅರ್ಷದ್ ಖಾನ್ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು.

– ಭಾರತ ಎ- 265 (49.2)
– ಶ್ರೀಲಂಕಾ- 265/9 (50)

ಸೂಪರ್ ಓವರ್​:

ಮ್ಯಾಚ್ ಟೈ ಆಗಿದ್ದ ಕಾರಣ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು. ಟೀಮ್ ಇಂಡಿಯಾ ಪರ ಸೂಪರ್ ಓವರ್ ಎಸೆದ ಅರ್ಷದ್ ಖಾನ್ ನೀಡಿದ್ದು ಬರೋಬ್ಬರಿ 16 ರನ್​ಗಳು.

17 ರನ್​ಗಳ ಗುರಿ ಬೆನ್ನತ್ತಲು ಬಂದ ಸೂರ್ಯಾಂಶ್ ಶೆಡ್ಗೆ ಹಾಗೂ ವೈಭವ್ ಸೂರ್ಯವಂಶಿ ಜೊತೆಗೂಡಿ 6 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 9 ರನ್​ ಮಾತ್ರ. ಈ ಮೂಲಕ ಶ್ರೀಲಂಕಾ ತಂಡವು 7 ರನ್​ಗಳ ಸೂಪರ್ ಜಯ ಸಾಧಿಸಿದೆ.

ಶ್ರೀಲಂಕಾ ಎ ಪ್ಲೇಯಿಂಗ್ 11: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್) , ಅವಿಷ್ಕಾ ಫೆರ್ನಾಂಡೊ , ವಿಷೇನ್ ಹಾಲಂಬಗೆ , ಸದೀರ ಸಮರವಿಕ್ರಮ , ಅಹಾನ್ ವಿಕ್ರಮಸಿಂಘೆ , ಸಹನ್ ಅರಚ್ಚಿಗೆ (ನಾಯಕ) , ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್ , ಕುಗಥಾಸ್ ಮಥುಲನ್ , ಮೊಹಮ್ಮದ್ ಶಿರಾಜ್ , ಚಾಮಿಕಾ ಗುಣಶೇಖರ.

ಭಾರತ ಎ ಪ್ಲೇಯಿಂಗ್ 11: ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಆಯುಷ್ ಬದೋನಿ , ಸೂರ್ಯಾಂಶ್ ಶೆಡ್ಗೆ , ನಿಶಾಂತ್ ಸಿಂಧು , ಅನುಕೂಲ್ ರಾಯ್ , ಅರ್ಷದ್ ಖಾನ್ , ವಿಪ್ರಾಜ್ ನಿಗಮ್ , ಯಶ್ ಠಾಕೂರ್.

 

Source link