ಚಾಮರಾಜನಗರ, ಏಪ್ರಿಲ್ 09: ಕಳ್ಳ-ಕಾಕರಿಗೆ ಸಾಮಾನ್ಯವಾಗಿ ಯಾವುದರ ಮೇಲೂ ಭಯ ಇರೋದಿಲ್ಲ. ಆದರೆ ಗುಂಡ್ಲುಪೇಟೆತಾಲೂಕಿನ ಬೊಮ್ಮಲಾಪುರದಲ್ಲಿ ದೇವಸ್ಥಾನದ ಹುಂಡಿ ಕದಿಯಲು ಬಂದ ಖದೀಮನೋರ್ವ, ಕನ್ನ ಹಾಕುವ ಮೊದಲು ದೇವರಿಗೆ ಕೈ ಮುಗಿದು ಕುಂಕುಮವನ್ನೂ ಹಚ್ಚಿಕೊಂಡಿದ್ದಾನೆ. ಗ್ರಾಮದ ಶಕ್ತಿ ದೇವತೆ ಪಟ್ಟದರಾಣಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಈ ಹಿಂದೆಯೂ ಹುಂಡಿ ಹಣ ಕಳುವಾಗಿದ್ದ ಕಾರಣಕ್ಕೆ ದೇಗುಲಕ್ಕೆ ಸಿಸಿಟಿವಿ ಕ್ಯಾಮರಾ ಹಾಕಲಾಗಿತ್ತು. ಈ ಹಿನ್ನೆಲೆ ಕಳ್ಳತನದ ದೃಶ್ಯ ಸೆರೆಯಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಬೊಮ್ಮಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಬೆಂಗಳೂರು, ಏಪ್ರಿಲ್ 10: ಚಿನ್ನ, ಬೆಳ್ಳಿ ಬೆಲೆಗಳ ಏರಿಳಿತದ ಟ್ರೆಂಡ್ ಮುಂದುವರಿಯುತ್ತಿದೆ. ಚಿನ್ನದ ಬೆಲೆ (Gold Rates) ಮೊನ್ನೆ ಏರಿತ್ತು, ನಿನ್ನೆ ಕುಸಿದಿತ್ತು, ಇವತ್ತು ಮತ್ತೆ ಏರಿದೆ. ಶುಕ್ರವಾರ ಇದರ ಬೆಲೆ ಗ್ರಾಮ್ಗೆ 140 ರೂಗಳಷ್ಟು ಹೆಚ್ಚಿದೆ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಅಲ್ಪ ಏರಿಳಿತಗಳಾಗಿವೆ. ಬೆಳ್ಳಿ ಬೆಲೆಯಲ್ಲೂ ಇದೇ ಟ್ರೆಂಡ್ ಇದೆ. ನಿನ್ನೆ ಇಳಿದಿದ್ದ ಬೆಳ್ಳಿ ಬೆಲೆ ಇವತ್ತು 5 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,40,250 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,53,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,40,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 10ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,300 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,025 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,475 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,300 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,025 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಬೆಂಗಳೂರು, ಏ.10 : ಬೆಂಗಳೂರಿನ ಪ್ರತಿಷ್ಠಿತ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರ ರಸ್ತೆ (Neeladri Nagar Road) ಸದ್ಯ ಗುಂಡಿಗಳ ಮಯವಾಗಿದ್ದು, ಮಳೆಯಾದರಂತೂ ಕೆರೆಯಂತಾಗುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಈ ರಸ್ತೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಕ್ಷರಶಃ ನರಕವಾಗಿ ಮಾರ್ಪಟ್ಟಿದೆ. ಲವಲವಿಕೆಯಿಂದ ಇರಬೇಕಾದ ಈ ರಸ್ತೆಯಲ್ಲಿ ಸ್ವಲ್ಪ ಮಳೆಯಾದರೂ ನೀರು ಸರಿಯಾಗಿ ಹರಿದು ಹೋಗದೆ ನಿಲ್ಲುತ್ತಿದೆ. ಇದರಿಂದ ರಸ್ತೆಯಲ್ಲಿರುವ ಗುಂಡಿಗಳು ಯಾವುವು ಎಂಬುದು ತಿಳಿಯದೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಈ ಭಾಗದಲ್ಲಿ ಸುಮಾರು ಶೇ. 70ರಷ್ಟು ಕಟ್ಟಡಗಳು ಪಿಜಿ (PG) ಗಳಾಗಿವೆ. ಕೆಲಸಕ್ಕೆ ಹೋಗುವ ಸಾವಿರಾರು ಯುವಕ-ಯುವತಿಯರು ಪ್ರತಿದಿನ ಇದೇ ರಸ್ತೆಯನ್ನು ಬಳಸಬೇಕಿದ್ದು, ಪಾದಚಾರಿಗಳು ಕೆಸರು ನೀರಿನಲ್ಲಿ ನಡೆಯಲು ಹರಸಾಹಸ ಪಡುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಆಳವಾದ ಗುಂಡಿಗಳಿಗೆ ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳು ಸಾಮಾನ್ಯವಾಗುತ್ತಿವೆ. “ನಾವು ಭಾರಿ ಪ್ರಮಾಣದ ತೆರಿಗೆ ಪಾವತಿಸುತ್ತಿದ್ದರೂ ಕನಿಷ್ಠ ಗುಣಮಟ್ಟದ ರಸ್ತೆಯೂ ನಮಗಿಲ್ಲ” ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಬಿಬಿಎಂಪಿ (BBMP) ಅಥವಾ ಇಎಲ್ಸಿಐಎ (ELCIA) ಅಧಿಕಾರಿಗಳು ತಕ್ಷಣ ಎಚ್ಚೆತ್ತು ರಸ್ತೆ ದುರಸ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಏಪ್ರಿಲ್ 12ರಿಂದ 18ರ ಅವಧಿಯಲ್ಲಿ ಸಾಡೇ ಸಾಥ್ ಶನಿ ಮೀನ ರಾಶಿಯಲ್ಲಿ ಹಾಗೂ ಗುರು ಮಿಥುನ ರಾಶಿಯಲ್ಲಿದ್ದಾನೆ. ಈ ಗ್ರಹಸ್ಥಿತಿಗಳು ಉದ್ಯೋಗದ ಮೇಲೆ ಬೀರುವ ಅನೇಕ ಪ್ರಭಾವಗಳನ್ನು ಬೀರಲಿವೆ.
ಮೇಷ:
ಉದ್ಯೋಗದಲ್ಲಿ ಹಠಾತ್ ಬದಲಾವಣೆ ಸಾಧ್ಯತೆ. ಹಿರಿಯ ಅಧಿಕಾರಿಗಳಿಂದ ಒತ್ತಡ ಬರಬಹುದು. ಆದರೆ ನಿಮ್ಮ ಸಂವಹನ ಕಲೆ ಮತ್ತು ಶ್ರಮದಿಂದ ವಾರದ ಕೊನೆಯಲ್ಲಿ ಉತ್ತಮ ಲಾಭ ಹಾಗೂ ಕಚೇರಿಯಲ್ಲಿ ಸ್ಥಾನಮಾನ ಪಡೆಯುವಿರಿ.
ವೃಷಭ:
ವೃತ್ತಿಯಲ್ಲಿ ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಸಿಗುವ ಸಮಯ. ಆರ್ಥಿಕವಾಗಿ ಲಾಭದಾಯಕ ದಿನಗಳು. ಹೊಸ ಉದ್ಯೋಗದ ಆಫರ್ಗಳು ನಿಮ್ಮನ್ನು ಹುಡುಕಿ ಬರಲಿವೆ. ಆತ್ಮವಿಶ್ವಾಸದಿಂದ ಹೆಜ್ಜೆ ಇಡಿ, ಯಶಸ್ಸು ನಿಮ್ಮದಾಗಲಿದೆ.
ಮಿಥುನ:
ನಿಮ್ಮ ರಾಶಿಯಲ್ಲೇ ಗುರು ಇರುವುದರಿಂದ ಉದ್ಯೋಗದಲ್ಲಿ ಹೊಸ ಆಯಾಮ ತೆರೆದುಕೊಳ್ಳಲಿದೆ. ಸೃಜನಾತ್ಮಕ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕ ವಾರವಿದು. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ.
ಕರ್ಕಾಟಕ:
ದೂರದ ಪ್ರಯಾಣದಿಂದ ವೃತ್ತಿಜೀವನದಲ್ಲಿ ಲಾಭವಾಗಲಿದೆ. ಧಾರ್ಮಿಕ ಅಥವಾ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಇದು ಅತ್ಯಂತ ಶುಭ ಕಾಲ. ಭಾಗ್ಯೋದಯವಾಗುವ ಸೂಚನೆಗಳಿದ್ದು, ಮೇಲಧಿಕಾರಿಗಳ ಸಂಪೂರ್ಣ ಸಹಕಾರ ನಿಮಗಿರುತ್ತದೆ.
ಸಿಂಹ:
ಕೆಲಸದ ಸ್ಥಳದಲ್ಲಿ ಶತ್ರುಗಳ ಕಾಟವಿರಬಹುದು, ಜಾಗರೂಕರಾಗಿರಿ. ಹಠಾತ್ ವರ್ಗಾವಣೆಯ ಯೋಗವಿದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯಿರಿ. ಆರೋಗ್ಯದ ಕಡೆಗೂ ಸ್ವಲ್ಪ ಗಮನ ನೀಡುವುದು ಅನಿವಾರ್ಯ.
ಕನ್ಯಾ:
ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುತ್ತದೆ. ಸಾರ್ವಜನಿಕ ಸಂಪರ್ಕ ಹೊಂದಿರುವ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗಲಿದ್ದು, ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಅತ್ಯಂತ ಸೂಕ್ತವಾದ ಸಮಯವಾಗಿದೆ.
ತುಲಾ:
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶುಭ ವಾರ್ತೆ ಇದೆ. ಉದ್ಯೋಗದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯಲಿವೆ. ಕಠಿಣ ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಸಾಲದ ಬಾಧೆಗಳಿಂದ ಮುಕ್ತಿ ಪಡೆಯಲು ದಾರಿ ಗೋಚರಿಸಲಿದೆ.
ವೃಶ್ಚಿಕ:
ಬುದ್ಧಿವಂತಿಕೆಯಿಂದ ಕಠಿಣ ಸವಾಲುಗಳನ್ನು ಎದುರಿಸುವಿರಿ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ವೇದಿಕೆ ಸಿಗಲಿದೆ. ಉದ್ಯೋಗ ಬದಲಾವಣೆಗೆ ಇದು ಪೂರಕ ಸಮಯವಲ್ಲ, ಇರುವ ಕಡೆಯೇ ನಿಮ್ಮ ಶಕ್ತಿ ಪ್ರದರ್ಶಿಸಿ ಜಯಿಸಿ.
ಧನು:
ವೃತ್ತಿ ಕ್ಷೇತ್ರದಲ್ಲಿ ಸುಧಾರಣೆ ಕಂಡುಬರುತ್ತದೆ. ಭೂಮಿ ಅಥವಾ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಲಾಭ. ಮನೆಯಿಂದಲೇ ಕೆಲಸ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚಿರಬಹುದು. ಸ್ಥಿರವಾದ ಮನಸ್ಥಿತಿ ಕಾಪಾಡಿಕೊಳ್ಳಿ.
ಮಕರ:
ನಿಮ್ಮ ಪರಾಕ್ರಮದಿಂದ ಕಷ್ಟದ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಲೇಖಕರು ಮತ್ತು ಪತ್ರಕರ್ತರಿಗೆ ಶುಭ ಕಾಲ. ಕಿರಿಯ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗಲಿದೆ. ಆರ್ಥಿಕವಾಗಿ ಈ ವಾರ ಧನ ಲಾಭದ ಸೂಚನೆಗಳಿವೆ.
ಕುಂಭ:
ಮಾತಿನ ಮೇಲೆ ನಿಗಾ ಇರಲಿ, ಕಚೇರಿಯಲ್ಲಿ ವಾದಗಳನ್ನು ತಪ್ಪಿಸಿ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಕುಟುಂಬದ ವ್ಯವಹಾರಗಳನ್ನು ವೃತ್ತಿಯೊಂದಿಗೆ ಬೆರೆಸಬೇಡಿ. ತಾಳ್ಮೆಯಿಂದ ಕೆಲಸ ಮಾಡಿದರೆ ವಾರಾಂತ್ಯಕ್ಕೆ ಶುಭ ಫಲ ದೊರೆಯಲಿದೆ.
ಮೀನ:
ರಾಶಿಯಲ್ಲಿ ಶನಿ ಇರುವುದರಿಂದ ಕೆಲಸದಲ್ಲಿ ಗೊಂದಲವಿರಬಹುದು. ಶಿಸ್ತುಬದ್ಧವಾಗಿ ಕೆಲಸ ಮಾಡುವುದು ಅನಿವಾರ್ಯ. ಅತಿಯಾದ ಆಲೋಚನೆ ಬಿಟ್ಟು ಕರ್ತವ್ಯದ ಮೇಲೆ ಗಮನವಿಡಿ. ಧೈರ್ಯದಿಂದ ಕೆಲಸ ಮಾಡಿದರೆ ಅಡೆತಡೆಗಳು ದೂರವಾಗುತ್ತವೆ.
ಮಂಗಳೂರು, ಏಪ್ರಿಲ್ 10: ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ (PUC Topper Disha)ಪಡೆದಿದ್ದಾಳೆ. ಈಕೆಯ ಈ ಸಾಧನೆಯ ಹಿಂದೆ ಒಂದು ನೋವಿನ ಕಥೆಯಿದೆ. ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ಅಮ್ಮನನ್ನು ಕಳೆದುಕೊಂಡ ದಿಶಾಳಿಗೆ ಧೃತಿಗೆಡದೆ ತನ್ನ ಗುರಿ ಸಾಧಿಸಲು ಪ್ರೇರೇಪಿಸಿದ್ದು ಆಕೆಯ ತಾಯಿಯ ಮಾತುಗಳು.
ಪರೀಕ್ಷೆ ಮುಗಿಸಿ ಬಂದ ದಿಶಾಳಿಗೆ ಕಾದಿತ್ತು ಆಘಾತ!
ದಿನೇಶ್ ಹಾಗೂ ಸವಿತಾ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯವಳು ದಿಶಾ. ತಂಗಿ ದೀಕ್ಷಾ ಈಗಷ್ಟೇ ಎಸ್ಎಸ್ಎಲ್ಸಿ ಗೆ ಕಾಲಿಟ್ಟಿದ್ದಾಳೆ. ಅಂದು ದಿಶಾ ಗಣಿತ ಪರೀಕ್ಷೆಗೆ ರೂಂ ನಲ್ಲಿ ಕುಳಿತು ತಯಾರಿ ನಡೆಸುತ್ತಿದ್ದಳು. ರಾತ್ರಿಯಾಗುತ್ತಿದ್ದಂತೆ ರೂಂ ನ ಹೊರಗೆ ಯಾರೋ ಬಿದ್ದಂತೆ ಶಬ್ದ ಕೇಳಿ ಬಂದಿದೆ. ಹೊರಗೆ ಬಂದು ನೋಡಿದಾಗ ದಿಶಾ ತಾಯಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದ್ದರು. ತಕ್ಷಣಕ್ಕೆ ಏನೂ ಆಗಿಲ್ಲ ಎಂಬಂತೆ ಇದ್ದ ದಿಶಾ ತಾಯಿ ಮರುದಿನ ಬೆಳಗ್ಗಿನ ವೇಳೆಗೆ ಪ್ರಜ್ಞೆ ತಪ್ಪಿದ್ದರು. ಮನೆಯವರು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಮರುದಿನ ಆಕೆಯನ್ನು ವೆನ್ಲಾಕ್ ಆಸ್ಪತ್ರೆಯಿಂದ ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆ ತರಲಾಯಿತು.
ತಾಯಿಯ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದರಿಂದ ವೈದ್ಯರು ಹೆಚ್ಚು ದಿನ ಬದುಕೋದಿಲ್ಲ ಎಂದು ಹೇಳಿದ್ದರು. ಆದರೆ ಅದೇ ದಿನ ದಿಶಾ ಎಕನಾಮಿಕ್ಸ್ ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆ ಬರೆದು ಅಮ್ಮನನ್ನು ನೋಡಲು ಆಸ್ಪತ್ರೆಗೆ ಒಡೋಡಿ ಬಂದಿಳು. ಆದರೆ ಅದೇ ದಿನ ರಾತ್ರಿ ದಿಶಾ ತಾಯಿ ಸವಿತಾ ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು. ತಾಯಿಯನ್ನು ಕಳೆದುಕೊಂಡ ಸುದ್ದಿ ಕೇಳಿ ದಿಶಾಗೆ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಆಗಿತ್ತು. ಒಂದೆಡೆ ಹೆತ್ತ ತಾಯಿಯನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ಭವಿಷ್ಯವನ್ನು ನಿರ್ಧರಿಸುವ ಇನ್ನುಳಿದ ಪರೀಕ್ಷೆಗಳು.
ಅಮ್ಮನಿಗಾಗಿ ಸಾಧನೆ ಮಾಡಿದೆ ಎಂದ ವಿದ್ಯಾರ್ಥಿನಿ
ದಿಶಾ ಪರೀಕ್ಷೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾಗ ಆಕೆಯ ತಾಯಿ ನೀನು ಕಷ್ಟಪಟ್ಟಿದ್ದೀಯ, ದೇವರು ಇದ್ದಾನೆ, ಯಾರ ಹಣೆಯಲ್ಲಿ ಬರೆದಿದೆಯೋ ಅವರಿಗೆ ಸಿಗುತ್ತೆ. ಹೆದರಬೇಡ ಎಂದು ಧೈರ್ಯ ಹೇಳುತ್ತಿದ್ದರಂತೆ. ಹೀಗಾಗಿ ಅಮ್ಮನ ಆ ಮಾತುಗಳನ್ನೆ ಶಕ್ತಿಯಾಗಿಸಿ ದಿಶಾ ಪರೀಕ್ಷೆ ಬರೆದಿದ್ದಳು. ಆ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದಾಗ ನನ್ನ ಅಮ್ಮನಿಗೋಸ್ಕರವಾದರೂ ನಾನು ಇದನ್ನು ಸಾಧಿಸಬೇಕಿತ್ತು ಎಂದು ದಿಶಾ ಈ ಸಾಧನೆಯ ಬಳಿಕ ಭಾವುಕರಾಗಿ ಹೇಳಿದ್ದಾಳೆ.
ಈ ಸಮಯದಲ್ಲಿ ಆಕೆಗೆ ಬೆಂಬಲವಾಗಿ ನಿಂತಿದ್ದು ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು. ಕೌಟುಂಬಿಕ ಸಮಸ್ಯೆಯಿಂದಾಗಿ ಈಗ ದಿಶಾ ಮತ್ತು ಆಕೆಯ ತಂಗಿ ಶಿಕ್ಷಕಿ ವೀಣಾ ಎಂಬುವರ ಮನೆಯಲ್ಲಿದ್ದು, ಮುಂದೆ ಹಾಸ್ಟೆಲ್ ಅಥವಾ ಪಿಜಿಯಲ್ಲಿದ್ದು ವಿದ್ಯಾಭ್ಯಾಸ ಮುಂದುವರಿಸುವ ಬಗ್ಗೆ ಇನ್ನಷ್ಟೇ ನಿರ್ಧಾರವನ್ನು ಮಾಡಲಿದ್ದಾರೆ. ದಿಶಾ ತನ್ನ ತಾಯಿಯ ಕನಸಿನಂತೆಯೇ ಸಿಎ ಮಾಡಲು ಮುಂದಾಗಿದ್ದು, ಪ್ರಸ್ತುತ ಸಿ.ಎ ಫೌಂಡೇಷನ್ ಪರೀಕ್ಷೆಗೂ ಸಜ್ಜಾಗುತ್ತಿದ್ದಾಳೆ.
ತಾಯಿಯನ್ನು ಕಳೆದುಕೊಂಡ ದಿಶಾಳಿಗೆ ಆಳ್ವಾಸ್ ಸಂಸ್ಥೆ ವಿಶೇಷ ಬೆಂಬಲ ನೀಡಿದೆ. ಮುಂದೆ ಆಕೆಯ ಪಾಲಕನಾಗಿ ಆಕೆಯ ಜೊತೆ ನಿಲ್ಲುತ್ತೇನೆ, ಮುಂದಿನ ಎಲ್ಲಾ ಶಿಕ್ಷಣವನ್ನು ಉಚಿತವಾಗಿ ಹಂತ ಹಂತವಾಗಿ ಮಾಡಲು ಸಹಕಾರ ನೀಡುವುದಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವ ಹೇಳಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600 ರಲ್ಲಿ 600 ಅಂಕ ಪಡೆದ ಸಾಧನೆಗಾಗಿ ಮೂರು ಲಕ್ಷ ನಗದು ಬಹುಮಾನ ನೀಡುವುದಾಗಿಯು ಘೋಷಿಸಿದ್ದಾರೆ. ಒಟ್ಟಿನಲ್ಲಿ ದಿಶಾ ಅವರ ಈ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ.
ಐಪಿಎಲ್ನ (IPL) ಈ ಸೀಸನ್ ಅಲ್ಲಿ ಆರ್ಸಿಬಿ ಮೊದಲ ಎರಡು ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ ತಂಡ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡೂ ತಂಡಗಳು ಸಮಬಲದಲ್ಲಿವೆ ಎಂದರೂ ತಪ್ಪಾಗಲಾರದು. ಇಂದು (ಏಪ್ರಿಲ್ 10) ಎರಡೂ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪೈಕಿ ಗೆಲವು ಯಾರ ಪಾಲಿಗೆ ಒಲಿಯಲಿದೆ ಎನ್ನುವ ಕುತೂಹಲ ಮೂಡಿದೆ. ಹೀಗಿರುವಾಗಲೇ ಜೋಶ್ ಹೇಜಲ್ವುಡ್ ಕಣಕ್ಕೆ ಇಳಿಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಆರ್ಸಿಬಿಯಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ಉತ್ತಮ ರೀತಿಯಲ್ಲಿ ಇದೆ. ಹೇಜಲ್ವುಡ್ ಅಲಭ್ಯತೆಯಲ್ಲಿ ಜೇಕಬ್ ಡಫ್ಫಿ ಅವರು ಉತ್ತಮ ಬೌಲಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಈ ಮೂಲಕ ಹೇಜಲ್ವುಡ್ ಇಲ್ಲ ಎಂಬ ಕೊರುಗನ್ನು ನೀಗಿಸುತ್ತಿದ್ದಾರೆ. ಈ ಮಧ್ಯೆ ಹೆಜಲ್ವುಡ್ ಕೂಡ ಫೀಲ್ಡ್ಗೆ ಇಳಿಯಲಿ ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು. ಅದು ಈಡೇರುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.
ಹೇಜಲ್ವುಡ್ ಅವರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಸಂಪೂರ್ಣ ಫಿಟ್ ಆಗುವ ಪ್ರಯತ್ನದಲ್ಲಿ ಇದ್ದಾರೆ. ಒಂದೊಮ್ಮೆ ಫಿಟ್ನೆಸ್ ಇಲ್ಲದೆ ಕಣಕ್ಕೆ ಇಳಿದರೆ ಅದು ದೀರ್ಘ ಕಾಲದ ಗಾಯಕ್ಕೆ ಒಳಗಾಗುವಂತೆ ಮಾಡುವು ಭಯ ಕಾಡಿದೆ. ಹೀಗಾಗಿ, ಸಂಪೂರ್ಣ ಫಿಟ್ ಆದಂತೂ ಅವರನ್ನು ಇಳಿಸುವ ಆಲೋಚನೆ ತಂಡಕ್ಕೆ ಇಲ್ಲ. ಈ ಮೊದಲು ಚೆನ್ನೈ ವಿರುದ್ಧದ ಪಂದ್ಯದಲ್ಲಿ ನೆಟ್ಸ್ನಲ್ಲಿ ಹೇಜಲ್ವುಡ್ ಕಾಣಿಸಿಕೊಂಡಿದ್ದರು. ಹೀಗಾಗಿ, ಅವರು ಫಿಟ್ನೆಸ್ಗೆ ಮರಳಿರಬಹುದು ಎಂದು ಊಹಿಸಲಾಗಿದೆ.
ಇಂದಿನ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ. ಆರ್ಸಿಬಿ vs ಆರ್ಆರ್ ಪಂದ್ಯಕ್ಕೆ ಮಳೆ ಬರುವ ಸೂಚನೆ ಎಂದು ಹೇಳಲಾಗುತ್ತಾ ಇದೆ. ಸಂಜೆ ವೇಳೆಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಆರ್ಆರ್ ತಂಡದ ಓಪನಿಂಗ್ ಪೇರ್ ಎನಿಸಿಕೊಂಡಿರುವ ವೈಭವ್ ಸೈರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಕಟ್ಟಿ ಹಾಕುವ ಚಾಲೆಂಜ್ ಆರ್ಸಿಬಿಗೆ ಇದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ಚಿಕ್ಕಮಗಳೂರು, ಏಪ್ರಿಲ್ 10: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಮಾಣಿಕ್ಯಧಾರ ಜಲಪಾತದ ಬಳಿ ನಾಪತ್ತೆಯಾಗಿದ್ದು, ಇನಾಮು ದತ್ತಾತ್ರೇಯ ಬಾಬುಡಂ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ. ಎಸ್ಡಿಆರ್ಎಫ್, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಎನ್ಎಫ್ ತಂಡಗಳು ಸೇರಿ ಬಾಲಕಿಯ ಶೋಧ ಕಾರ್ಯದಲ್ಲಿ ತೊಡಗಿವೆ. ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಬಳಸಲಾಗಿದೆಯಾದರೂ, ಬಾಲಕಿ ಬಗ್ಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬಾಲಕಿ ಎಲ್ಲಾದರೂ ಬಿದ್ದಿದ್ದಾಳಾ ಅಥವಾ ಬೇರೆಡೆ ಹೋಗಿದ್ದಾಳೆ ಎಂಬ ಅನುಮಾನದ ಮೇಲೆ ತನಿಖೆ ಮುಂದುವರಿದಿದೆ. ಕೇರಳದಿಂದಲೂ ಪೊಲೀಸರ ತಂಡ ಆಗಮಿಸಿದ್ದು, ಪೋಷಕರ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ಇಸ್ಲಾಮಾಬಾದ್, ಏಪ್ರಿಲ್ 10: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಬಾಂಬ್ಗಳ ಸದ್ದು ಕೇಳಿಸುತ್ತಿರುವಂತೆಯೇ, ಇತ್ತ ರಾಜತಾಂತ್ರಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತು ಇಸ್ರೇಲ್(Israel) ನಡುವೆ ‘ಪದಗಳ ಸಮರ’ ತಾರಕಕ್ಕೇರಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ಪಾಕ್ ರಕ್ಷಣಾ ಸಚಿವರ ಸ್ಫೋಟಕ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ಕಿಚ್ಚು ಹಚ್ಚಿದೆ.
ಇಸ್ರೇಲ್ ಒಂದು ಕ್ಯಾನ್ಸರ್: ಪಾಕ್ ಸಚಿವ ಖವಾಜಾ ಆಸಿಫ್ ಆಕ್ರೋಶ, ನೆತನ್ಯಾಹು ತಿರುಗೇಟು
ಅಮೆರಿಕ ಮತ್ತು ಇರಾನ್ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿದ್ದರೂ, ಲೆಬನಾನ್ ಮತ್ತು ಗಾಜಾದಲ್ಲಿ ನಡೆಯುತ್ತಿರುವ ರಕ್ತಪಾತವು ಹೊಸ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಇಸ್ರೇಲ್ ವಿರುದ್ಧ ನಡೆಸಿರುವ ವಾಗ್ದಾಳಿ ಈಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕೆರಳಿಸಿದೆ.
ಖ್ವಾಜಾ ಆಸಿಫ್ ಅವರ ವಿವಾದಾತ್ಮಕ ಹೇಳಿಕೆ
ಇಸ್ಲಾಮಾಬಾದ್ನಲ್ಲಿ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧವಾಗುತ್ತಿರುವಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಆಸಿಫ್, ಇಸ್ರೇಲ್ ಅನ್ನು ಕಟುವಾದ ಪದಗಳಿಂದ ಟೀಕಿಸಿದ್ದಾರೆ. ಇಸ್ರೇಲ್ ಒಂದು ಶಾಪ ಮತ್ತು ಕ್ಯಾನ್ಸರ್ ಇದ್ದಂತೆ ಅದನ್ನು ನರಕದಲ್ಲಿ ಸುಟ್ಟುಹಾಕಿಬಿಡಬೇಕು ಎಂದು ಹೇಳಿದ್ದರು.
ಗಾಜಾ ಮತ್ತು ಇರಾನ್ ನಂತರ ಈಗ ಲೆಬನಾನ್ನಲ್ಲಿ ಇಸ್ರೇಲ್ ಅಮಾಯಕರ ರಕ್ತವನ್ನು ಸುರಿಸುತ್ತಿದೆ ಎಂದು ಅವರು ಆರೋಪಿಸಿದರು. ವಿವಾದ ತಾರಕಕ್ಕೇರುತ್ತಿದ್ದಂತೆಯೇ ಆಸಿಫ್ ಅವರು ತಮ್ಮ ಟ್ವೀಟ್ ಅನ್ನು ಅಳಿಸಿ ಹಾಕಿದರಾದರೂ, ಅಷ್ಟರಲ್ಲೇ ಅದು ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು.
ಸಚಿವ ಆಸಿಫ್ ಅವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಶಾಂತಿ ಪ್ರಕ್ರಿಯೆಯ ಭಾಗವೆಂದು ಹೇಳಿಕೊಳ್ಳುವ ದೇಶದ ಸಚಿವರು ಇಂತಹ ಅವಹೇಳನಕಾರಿ ಮತ್ತು ಅಪಾಯಕಾರಿ ಹೇಳಿಕೆ ನೀಡುವುದನ್ನು ಯಾವುದೇ ಸರ್ಕಾರ ಸಹಿಸುವುದಿಲ್ಲ ಎಂದು ಅವರು ಗುಡುಗಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಅವರು ಕದನ ವಿರಾಮವು ಲೆಬನಾನ್ ಸೇರಿದಂತೆ ಇಡೀ ಪ್ರದೇಶಕ್ಕೆ ಅನ್ವಯಿಸುತ್ತದೆ ಎಂದು ವಾದಿಸುತ್ತಿದ್ದಾರೆ. ಕದನ ವಿರಾಮವು ಇರಾನ್ ಮತ್ತು ಅಮೆರಿಕಕ್ಕೆ ಮಾತ್ರ ಸೀಮಿತವಾಗಿದ್ದು, ಲೆಬನಾನ್ನಲ್ಲಿ ಹಿಜ್ಬೊಲ್ಲಾ ವಿರುದ್ಧದ ಮಿಲಿಟರಿ ಕ್ರಮ ಮುಂದುವರಿಯಲಿದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
UNREAL:
Israel slams Pakistan after Defense Minister Khawaja Asif calls Israel “evil and a curse for humanity,” “cancerous,” and says he hopes those who created it “burn in hell.”
PM Benjamin Netanyahu’s office: “call for Israel’s annihilation is outrageous.”
ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ?
ಲೆಬನಾನ್ನಲ್ಲಿ ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ ಅಮೆರಿಕದೊಂದಿಗೆ ನಡೆಯಲಿರುವ ಶಾಂತಿ ಮಾತುಕತೆಗಳನ್ನು ಮುಂದೂಡುವುದಾಗಿ ಇರಾನ್ ಈಗಾಗಲೇ ಎಚ್ಚರಿಕೆ ನೀಡಿದೆ. ಮುಂದಿನ ವಾರ ಅಮೆರಿಕದಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಮಾತುಕತೆಗಳು ನಡೆಯುವ ನಿರೀಕ್ಷೆಯಿದ್ದರೂ, ಖ್ವಾಜಾ ಆಸಿಫ್ ಅವರಂತಹ ಕಠಿಣ ಹೇಳಿಕೆಗಳು ಮತ್ತು ಸತತ ದಾಳಿಗಳು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.
ಒಂದು ಕಡೆ ಶಾಂತಿಗಾಗಿ ಹರಸಾಹಸ ನಡೆಯುತ್ತಿದ್ದರೆ, ಇನ್ನೊಂದು ಕಡೆ ನಾಯಕರ ನಡುವಿನ ವೈಯಕ್ತಿಕ ವಾಗ್ದಾಳಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಪಾಕಿಸ್ತಾನವು ಮಧ್ಯಸ್ಥಿಕೆದಾರನ ಪಾತ್ರ ವಹಿಸಲು ಹವಣಿಸುತ್ತಿರುವ ಈ ಸಮಯದಲ್ಲಿ ಇಸ್ರೇಲ್ ಅನ್ನು ‘ಕ್ಯಾನ್ಸರ್’ ಎಂದು ಕರೆದಿರುವುದು ರಾಜತಾಂತ್ರಿಕವಾಗಿ ಇಸ್ಲಾಮಾಬಾದ್ಗೆ ಮುಳುವಾಗುವ ಸಾಧ್ಯತೆಯಿದೆ.
ಬುಧನ ಆಧಿಪತ್ಯದ ಕನ್ಯಾ ರಾಶಿಗೆ 2026ರ ಏಪ್ರಿಲ್ ತಿಂಗಳಲ್ಲಿ ಶನಿ, ಕುಜ, ರವಿ, ಬುಧರ ದೃಷ್ಟಿಯೂ ನೇರವಾಗಿ ಇರುವುದರಿಂದ ಜೊತೆಗೆ ರಾಶಿಯ ಅಧಿಪತಿಯಾದ ಬುಧನು ನೀಚಸ್ಥಾನಕ್ಕೆ ಹೋಗಿ, ಅಲ್ಲಿಂದ ದೃಷ್ಟಿಯನ್ನು ಇಟ್ಟ ಕಾರಣ ನಾನಾರೀತಿಯ ತೊಂದರೆಗಳು ಆರಂಭದ ದಿನಗಳಲ್ಲಿ ಆಗಲಿದೆ. ಅನಂತರದಲ್ಲಿ ಒಂದೊಂದೇ ಭಾರಗಳು ಕಡಿಮೆಯಾಗಿ ನಿಶ್ಚಿಂತೆಯ ಬೆಳಕು ನಿಮ್ಮೊಂದಿಗೆ ಮುನ್ನಡೆಸಲಿದೆ.
ಉದ್ಯೋಗ ಮತ್ತು ವ್ಯವಹಾರ:
ಉದ್ಯೋಗದ ದೃಷ್ಟಿಯಿಂದ ಈ ತಿಂಗಳು ಶುಭ ಫಲಿತಾಂಶಗಳನ್ನು ನೀಡಲಿದೆ. ಶನಿಯು ಆರನೇ ಮನೆಯಲ್ಲಿರುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಶತ್ರುಗಳ ಮೇಲೆ ಜಯ ಸಾಧಿಸುವಿರಿ. ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಹೂಡಿಕೆಯಲ್ಲಿ ಜಾಗರೂಕರಾಗಿರಿ. ತಿಂಗಳ ದ್ವಿತೀಯಾರ್ಧದಲ್ಲಿ ಹೊಸ ಒಪ್ಪಂದಗಳು ಕೈಗೂಡಬಹುದು.
ವಿದ್ಯಾಭ್ಯಾಸ:
ವಿದ್ಯಾರ್ಥಿಗಳಿಗೆ ಇದು ಮಧ್ಯಮ ಫಲದ ಕಾಲ. ಏಕಾಗ್ರತೆಯ ಕೊರತೆ ಕಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶನಿಯ ಅನುಗ್ರಹದಿಂದ ಉತ್ತಮ ಯಶಸ್ಸು ಸಿಗುವ ಸಾಧ್ಯತೆ ಇದೆ. ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವವರು ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ.
ಅರ್ಥಿಕತೆ:
ಆರ್ಥಿಕ ಸ್ಥಿತಿ ಏರಿಳಿತದಿಂದ ಕೂಡಿರುತ್ತದೆ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಆದಾಯದ ಮೂಲಗಳು ಉತ್ತಮವಾಗಿದ್ದರೂ, ಉಳಿತಾಯ ಮಾಡುವುದು ಸವಾಲಾಗಬಹುದು. ಹಳೆಯ ಸಾಲಗಳನ್ನು ತೀರಿಸಲು ಇದು ಸಕಾಲ. ಆದರೆ, ಈ ತಿಂಗಳು ಹೊಸದಾಗಿ ದೊಡ್ಡ ಮೊತ್ತದ ಸಾಲ ಮಾಡುವುದನ್ನು ತಪ್ಪಿಸುವುದು ಕ್ಷೇಮ.
ವಿವಾಹ ಮತ್ತು ಕೌಟುಂಬಿಕ ಜೀವನ:
ಕೌಟುಂಬಿಕವಾಗಿ ಕೆಲವು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲು ಸ್ವಲ್ಪ ವಿಳಂಬವಾಗಬಹುದು. ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ವಿದೇಶ ಪ್ರವಾಸ ಮತ್ತು ವಾಹನ ಖರೀದಿ:
ವಿದೇಶಕ್ಕೆ ಹೋಗುವ ಪ್ರಯತ್ನದಲ್ಲಿದ್ದವರಿಗೆ ಈ ತಿಂಗಳು ಸಾಧಾರಣ ಫಲ ನೀಡಲಿದೆ. ದಾಖಲಾತಿಗಳ ಕೆಲಸದಲ್ಲಿ ವಿಳಂಬವಾಗಬಹುದು. ಹೊಸ ವಾಹನ ಖರೀದಿಗೆ ತಿಂಗಳ ಮಧ್ಯಭಾಗದ ಅನಂತರದ ಸಮಯ ಶುಭವಾಗಿದೆ. ಚಾಲನೆಯಲ್ಲಿ ಜಾಗರೂಕತೆ ಅತ್ಯಗತ್ಯ.
ಭೂಮಿ ಖರೀದಿ ಮತ್ತು ಗೃಹ ನಿರ್ಮಾಣ:
ಆಸ್ತಿ ವಿಚಾರದಲ್ಲಿ ಈ ತಿಂಗಳು ಶುಭ ಸೂಚನೆಗಳಿವೆ. ಭೂಮಿ ಖರೀದಿ ಮಾಡುವ ಆಲೋಚನೆ ಇದ್ದರೆ ಕಾನೂನುಬದ್ಧವಾಗಿ ಎಲ್ಲವನ್ನೂ ಪರಿಶೀಲಿಸಿ ಮುಂದುವರಿಯಿರಿ. ಗೃಹನಿರ್ಮಾಣ ಕಾರ್ಯ ಪ್ರಾರಂಭಿಸಲು ಅಥವಾ ಅರ್ಧಕ್ಕೆ ನಿಂತ ಕೆಲಸಗಳನ್ನು ಮುಂದುವರಿಸಲು ಪೂರಕ ವಾತಾವರಣವಿದೆ.
ಶತ್ರುಕಾಟ ಮತ್ತು ನ್ಯಾಯಾಲಯದ ವಿಚಾರ:
ಏಳನೇ ಮನೆಯ ಶನಿಯು ನಿಮ್ಮ ಸಂಗಾತಿಯ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದು, ನಿಮ್ಮ ಮೇಲೆ ಶತ್ರುವಿನ ಭಾವ ಉಂಟಾಗಲು ಸಾಕು. ಗುಪ್ತ ಶತ್ರುಗಳ ಬಗ್ಗೆ ಭಯ ಬೇಡ, ನಿಮ್ಮ ವ್ಯಕ್ತಿತ್ವವೇ ಅವರಿಗೆ ಉತ್ತರವಾಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆ ಹೆಚ್ಚಿದೆ. ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಇದು ಉತ್ತಮ ಸಮಯ. ಬುಧವಾರದಂದು ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಮಾನಸಿಕ ಶಾಂತಿ ಮತ್ತು ಕಾರ್ಯಸಿದ್ಧಿ ಲಭಿಸುತ್ತದೆ.
– ಲೋಹಿತ ಹೆಬ್ಬಾರ್
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ