ಬೆಂಗಳೂರು, (ಏಪ್ರಿಲ್ 05): ಕರ್ನಾಟಕದ ಶಾಸಕರಿಗೆ ಐಪಿಎಲ್ ಟಿಕೆಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಧಿವೇಶದಲ್ಲೇ ಐಪಿಎಲ್ ಟಿಕೆಟ್ಗೆ ಬೇಡಿ ಕೊನೆಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಓರ್ವ ಶಾಸಕನಿಗೆ ಮೂರು ಐಪಿಎಲ್ ನೀಡಲು ಕೆಎಸ್ಸಿಎ ತೀರ್ಮಾನಿಸಿದ್ದು, ಅದರಂತೆ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಪಂದ್ಯದ ಟಿಕೆಟ್ ಗಾಗಿ ಶಾಸಕರು ಪಿಎಗಳು ಕ್ಯೂ ನಿಂತುಕೊಂಡು ಟಿಕೆಟ್ ಪಡೆದುಕೊಂಡಿದ್ದು, ಇದೀಗ ಬಿಜೆಪಿ ಶಾಸಕರು ಹಾಗೂ ಸಂಸದರು ಆರ್ಸಿಬಿ ಹಾಗೂ ಸಿಎಸ್ಕೆ ಪಂದ್ಯ ವೀಕ್ಷಣೆಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿದ್ದಾರೆ. ಬಿಜೆಪಿ ಸಂಸದರಾದ ಬಿವೈ ರಾಘವೇಂದ್ರ, ಡಾ ಸಿ.ಎನ್ ಮಂಜುನಾಥ್ ಹಾಗೂ ಬಿಜೆಪಿ ಶಾಸಕ ಡಾ ಅಶ್ವಥ್ ನಾರಾಯಣ ಮತ್ತು ಜೆಡಿಎಸ್ ಎಂಎಲ್ಸಿ ಶರವಣ ಅವರು ಕುಟುಂಬ ಸಮೇತ ಪಂದ್ಯ ವೀಕ್ಷಿಸುತ್ತಿದ್ದಾರೆ.
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾನಲ್ಲಿ ಭಾರತದ ಕೇಂದ್ರ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರವು ಭಾರತೀಯ ಸೈನಿಕನೊಬ್ಬನ ಪಾಕಿಸ್ತಾನಕ್ಕೆ ಗೂಢಚಾರಿಯಾಗಿ ಕಳಿಸಿ ಉಗ್ರರನ್ನು ಮಟ್ಟ ಹಾಕುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಪಾಕಿಸ್ತಾನದ ನಿಜ ಉಗ್ರರ ಪಾತ್ರಗಳನ್ನು ತೋರಿಸಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಭಾರತದ ಕೆಲ ರಾಜಕೀಯ ನಾಯಕರು, ಪಕ್ಷಗಳ ಉಲ್ಲೇಖ ಸಹ ಇದೆ. ಸಿನಿಮಾದ ನೈಜತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಲವು ವಿಡಿಯೋಗಳು ಹರಿದಾಡುತ್ತಿವೆ. ಮಾಜಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಂಕಜ್ ಸರನ್ ಅವರು ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ವೀಕ್ಷಿಸಿ ಸಿನಿಮಾದ ನೈಜತೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾದ ಮೇಕಿಂಗ್, ಗುಣಮಟ್ಟ ಇನ್ನಿತರೆಗಳನ್ನು ಕೊಂಡಾಡಿರುವ ಮಾಜಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಂಕಜ್ ಸರನ್, ‘ಈ ಸಿನಿಮಾ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಮಾನದಂಡವನ್ನು ನಿಗದಿಪಡಿಸಿದೆ. ಈ ಚಿತ್ರವನ್ನು ಹಾಲಿವುಡ್ನ ಯುದ್ಧ ಆಧಾರಿತ ಸಿನಿಮಾಗಳಿಗೆ ಹೋಲಿಸಿರುವ ಅವರು, ಚಿತ್ರದ ಮೇಕಿಂಗ್ ಮತ್ತು ಗುಣಮಟ್ಟವು ಅತ್ಯಂತ ವೃತ್ತಿಪರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾದಲ್ಲಿ ತೋರಿಸಲಾದ ಘಟನೆಗಳು ಮತ್ತು ಪಾತ್ರಗಳು ನೈಜ ಘಟನೆಗಳಿಂದ ಪ್ರೇರಿತವಾಗಿದ್ದು, ಜಾಗತಿಕ ಮಟ್ಟದ ಚಿತ್ರನಿರ್ಮಾಣದ ಗುಣಮಟ್ಟಕ್ಕೆ ಸಿನಿಮಾ ಸರಿಸಾಟಿಯಾಗಿದೆ. ಚಿತ್ರದಲ್ಲಿನ ಹಿಂಸಾಚಾರ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ ಎನಿಸಿದರೂ, ಗುಣಮಟ್ಟದ ನಿರ್ಮಾಣ ಮತ್ತು ತಾಂತ್ರಿಕ ಕೌಶಲದ ದೃಷ್ಟಿಯಿಂದ ಈ ಸಿನಿಮಾವನ್ನು ಮೀರಿಸುವುದು ಇತರರಿಗೆ ಕಷ್ಟ’ ಎಂದು ಅವರು ಹೇಳಿದ್ದಾರೆ.
ಸಿನಿಮಾನಲ್ಲಿ ನೈಜತೆಯ ಅಂಶದ ಬಗ್ಗೆ ಮಾತನಾಡಿರುವ ಅವರು, ‘ಹಾಲಿವುಡ್ನ ಹಲವು ಯುದ್ಧ ಸಿನಿಮಾಗಳು ನಾಜಿಗಳನ್ನು, ರಷ್ಯರನ್ನು ವಿಲನ್ಗಳಂತೆ ತೋರಿಸಿದ್ದಾರೆ. ಅದನ್ನ ನಾವು ಒಪ್ಪಿಕೊಂಡಿದ್ದೇವೆ. ನಿರ್ದೇಶಕರು ಕಲಾತ್ಮಕ ಸ್ವಾತಂತ್ರ್ಯವನ್ನು ಬಳಸಿದಾಗ ಉತ್ಪ್ರೇಕ್ಷಿತ ಕತೆಯನ್ನು ನಾವು ಪ್ರಶ್ನೆ ಮಾಡಲಾಗದು. ಸಿನಿಮಾ ನೈಕ ಘಟನೆಗಳನ್ನು ಆಧರಿಸಿದೆ, ಆದರೆ ಉತ್ಪ್ರೇಕ್ಷೆಗೆ ಯಾವುದೇ ಸಮರ್ಥನೆಯನ್ನು ನಿರ್ದೇಶಕರು ಅಥವಾ ಚಿತ್ರತಂಡ ನೀಡಬೇಕಿಲ್ಲ ಏಕೆಂದರೆ ಅದು ಅವರ ಕಲಾತ್ಮಕ ಸ್ವಾತಂತ್ರ್ಯ’ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ‘ಧುರಂಧರ್’ ಸಿನಿಮಾದ ಬಗ್ಗೆ ಇಂದು ಮಾತನಾಡಿದ್ದು, ಪ್ರತಿ ಪಕ್ಷಗಳು ಅಥವಾ ಬಿಜೆಪಿ ವಿರೋಧಿಗಳು ‘ಕೇರಳ ಸ್ಟೋರಿ’, ‘ಕಾಶ್ಮೀರ್ ಫೈಲ್ಸ್’ ಈಗ ಬಿಡುಗಡೆ ಆಗಿರುವ ‘ಧುರಂಧರ್’ ಸಿನಿಮಾವನ್ನ ಸುಳ್ಳು ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ. ಆ ಮೂಲಕ ಆ ಸಿನಿಮಾಗಳು ಸತ್ಯದಿಂದ ಕೂಡಿವೆ ಎಂದು ಹೇಳಿದ್ದಾರೆ.
ನವದೆಹಲಿ, ಏಪ್ರಿಲ್ 5: ಎರಡನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕ ಜಪಾನ್ನ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಹಾಕಿದ ಎರಡು ಅಣು ಬಾಂಬ್ಗಳು ಅದೆಷ್ಟು ಘನಘೋರ ಪರಿಣಾಮ ಬೀರುತ್ತಿವೆ ಎಂಬುದನ್ನು ಬಹಳ ಸ್ಪಷ್ಟವಾಗಿ ತೋರಿಸಿವೆ. ಚೆರ್ನೋಬಿಲ್ ಅಣು ಸ್ಥಾವರದಲ್ಲಿ ವಿಕಿರಣ ಸೋರಿಕೆಯಾದ ಘೋರ ಘಟನೆ ನಾಲ್ಕು ದಶಕಗಳಾದರೂ ನೆನಪು ಮಾಸಿಲ್ಲ. ಇದೇ ವೇಳೆ, ಇರಾನ್ನ ಬುಶೆಹರ್ನಲ್ಲಿರುವ ಪರಮಾಣು ವಿದ್ಯುತ್ ಘಟಕದ (Bushehr Nuclear power plant) ಮೇಲೆ ಅಮೆರಿಕ ಮತ್ತು ಇಸ್ರೇಲ್ ಮಿಸೈಲ್ ದಾಳಿ ಮಾಡಿ ಹಾನಿಗೆಡವಿರುವ ಸುದ್ದಿ ಇದೆ. ಇದರಿಂದ ವಿಕಿರಣ ಸೋರಿಕೆಯಾಗುತ್ತಿರಬಹುದು ಎಂದು ಹೇಳಲಾಗುತ್ತಿದೆ. ಇರಾನ್ ಈ ಸಂಬಂಧ ಗಲ್ಫ್ ರಾಷ್ಟ್ರಗಳನ್ನು ಎಚ್ಚರಿಸಿದೆ. ವಿಕಿರಣದಿಂದ (radioactive) ಇರಾನ್ಗಿಂತ ಗಲ್ಫ್ ರಾಷ್ಟ್ರಗಳಿಗೆ ಹೆಚ್ಚು ಹಾನಿಯಾಗುತ್ತದೆ ಎಂದು ಹೇಳಿದೆ.
ಬುಶೆಹರ್ನ ಪರಮಾಣ ವಿದ್ಯುತ್ ಘಟಕದ ಮೇಲೆ ನಾಲ್ಕು ಬಾರಿ ಬಾಂಬ್ ಹಾಕಲಾಗಿದೆ. ಹೊರಬರುವ ರೇಡಿಯೋ ಆ್ಯಕ್ಟಿವ್ನಿಂದ ಟೆಹರಾನ್ಗಿಂತ ಗಲ್ಫ್ ರಾಷ್ಟ್ರಗಳ ರಾಜಧಾನಿಗಳಲ್ಲಿ ಜೀವ ಅಂತ್ಯಗೊಳ್ಳುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಇರಾನ್ನ ಬುಶೆಹರ್ ನಗರವು ಗಲ್ಫ್ ರಾಷ್ಟ್ರಗಳಾದ ಕುವೇತ್, ಬಹರೇನ್ ಮತ್ತು ಕತಾರ್ಗೆ ಬಹಳ ಸಮೀಪ ಇದೆ. ಹೀಗಾಗಿ, ಗಲ್ಫ್ ರಾಷ್ಟ್ರಗಳೂ ಕೂಡ ವಿಕಿರಣದ ದುಷ್ಪರಿಣಾಮ ಎದುರಿಸಬೇಕಾಗಬಹುದು.
ಇದೇ ವೇಳೆ, ಬುಶೆಹರ್ ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗುತ್ತಿರಬಹುದು ಎನ್ನುವ ಸುದ್ದಿಗೆ ಇಂಬುಕೊಡುವಂತೆ, ಆ ಘಟಕದಿಂದ ರಷ್ಯನ್ ಎಂಜಿನಿಯರುಗಳು ನಿರ್ಗಮಿಸುತ್ತಿದ್ದಾರೆ. ನೂರು ಮಂದಿ ರಷ್ಯನ್ ಮೂಲದ ಉದ್ಯೋಗಿಗಳು ತೊರೆದು ಹೋಗಿದ್ದಾರೆ. ಒಟ್ಟು ಅಲ್ಲಿ 198 ಮಂದಿ ಕೆಲಸ ಮಾಡುತ್ತಿದ್ದರು. ಎಲ್ಲರನ್ನೂ ಹೊರಸಾಗಿಸಲು ರಷ್ಯಾ ಪ್ರಯತ್ನಿಸುತ್ತಿದೆ. ಈ ಘಟಕವನ್ನು ರಷ್ಯಾ ನಿರ್ಮಿಸಿ, ನಿರ್ವಹಿಸುತ್ತಾ ಬಂದಿದೆ.
ರೇಡಿಯೇಶನ್ ಮಟ್ಟ ಹೆಚ್ಚಿಲ್ಲ: ಅಟಾಮಿಕ್ ಎನರ್ಜಿ ಏಜೆನ್ಸಿ ಸ್ಪಷ್ಟನೆ
ಬುಶಹರ್ನ ಪರಮಾಣ ವಿದ್ಯುತ್ ಘಟಕ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಯಾವತ್ತೂ ದಾಳಿಯಾಗಬಾರದು ಎಂದು ಅಂತರರಾಷ್ಟ್ರೀಯ ಅಣು ಇಂಧನ ಸಂಸ್ಥೆಯಾದ ಐಎಇಎ ಮುಖ್ಯಸ್ಥ ರಫೇಲ್ ಗ್ರಾಸಿ ಹೇಳಿದ್ದಾರೆ. ಹಾಗೆಯೇ, ಬುಶೆಹರ್ನ ಘಟಕದಲ್ಲಿ ರೇಡಿಯೇಶನ್ ಮಟ್ಟ ಹೆಚ್ಚಿರುವ ಬಗ್ಗೆ ವರದಿಯಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಹೈದರಾಬಾದ್ನಲ್ಲಿ ನಡೆದ ಐಪಿಎಲ್ 2026 (IPL 2026) ರ 10ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕೊನೆಯ ಓವರ್ನಲ್ಲಿ ಮಣಿಸಿದ ಲಕ್ನೋ ಸೂಪರ್ಜೈಂಟ್ಸ್ ತಂಡ (SRH vs LSG) ಲೀಗ್ನಲ್ಲಿ ತನ್ನ ಗೆಲುವಿನ ಖಾತೆ ತೆರೆಯಿತು. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋತಿದ್ದ ಲಕ್ನೋ, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿತು. ಇತ್ತ ಈ ಲೀಗ್ನಲ್ಲಿ ಮೂರನೇ ಪಂದ್ಯವನ್ನಾಡಿದ ಸನ್ರೈಸರ್ಸ್ ತಂಡ ಎರಡನೇ ಸೋಲನ್ನು ಎದುರಿಸಬೇಕಾಯಿತು. ಅದರಲ್ಲೂ ತವರಿನಲ್ಲಿ ತನ್ನ ಮೊದಲ ಪಂದ್ಯವನ್ನಾಡಿದ ಸನ್ರೈಸರ್ಸ್ ತನ್ನ ಕಳಪೆ ಬ್ಯಾಟಿಂಗ್ಗೆ ಸೋಲಿನ ಬೆಲೆ ತೆರಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ ಕೊನೆಯ ಓವರ್ನಲ್ಲಿ ಗೆಲುವಿನ ದಡ ಮುಟ್ಟಿತು.
ಸನ್ರೈಸರ್ಸ್ ಬ್ಯಾಟಿಂಗ್ ವೈಫಲ್ಯ
ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಅಭಿಷೇಕ್ ಶರ್ಮಾ ಖಾತೆ ತೆರೆಯದೆಯೇ ಔಟಾದರು. ಅದಾದ ನಂತರ, ಟ್ರಾವಿಸ್ ಹೆಡ್ ಅವರ ಆಟ ಕೇವಲ 7 ರನ್ಗಳಿಗೆ ಕೊನೆಗೊಂಡಿತು. ಇಶಾನ್ ಕಿಶನ್ 1 ರನ್ ಗಳಿಸಿ ಟೆಂಟ್ಗೆ ಮರಳಿದರು. ಲಿಯಾಮ್ ಲಿವಿಂಗ್ಸ್ಟೋನ್ ಕೂಡ ಕೇವಲ 14 ರನ್ ಗಳಿಸಲು ಸಾಧ್ಯವಾಯಿತು. ತಂಡ ಸಂಕಷ್ಟದಲ್ಲಿದ್ದಾಗ, ಹೆನ್ರಿಕ್ ಕ್ಲಾಸೆನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಇನ್ನಿಂಗ್ಸ್ಗೆ ಚೇತರಿಕೆ ನೀಡಿದರು. ಐದನೇ ವಿಕೆಟ್ಗೆ 63 ಎಸೆತಗಳಲ್ಲಿ 116 ರನ್ಗಳ ಪಾಲುದಾರಿಕೆಯನ್ನು ನಿರ್ಮಿಸಿದರು.
ಕ್ಲಾಸೆನ್- ನಿತೀಶ್ ಅರ್ಧಶತಕ
ಹೆನ್ರಿಕ್ ಕ್ಲಾಸೆನ್ 62 ರನ್ ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 56 ರನ್ ಗಳಿಸಿದರು. ಅದಾದ ನಂತರ, ಕೆಳ ಹಂತದ ಬ್ಯಾಟ್ಸ್ಮನ್ಗಳು ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ಮೊದಲ ಎಸೆತದಲ್ಲೇ ಹರ್ಷ್ ದುಬೆ ಔಟಾದರು. ಶಿವಾಂಗ್ ಕುಮಾರ್ 5 ರನ್ ಗಳಿಸಿ ಔಟಾದರು. ಲಕ್ನೋ ತಂಡದ ಪರ ಮೊಹಮ್ಮದ್ ಶಮಿ 2, ಪ್ರಿನ್ಸ್ ಯಾದವ್ 2, ಆವೇಶ್ ಖಾನ್ 2, ದಿಗ್ವೇಶ್ ಸಿಂಗ್ ರಥಿ 1 ಮತ್ತು ಮಣಿಮಾರನ್ ಸಿದ್ಧಾರ್ಥ್ 1 ವಿಕೆಟ್ ಪಡೆದರು.
ಲಕ್ನೋಗೆ ಸಾಧಾರಣ ಆರಂಭ
ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ಪರ ಏಡನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಿದರು . ಮೊದಲ ವಿಕೆಟ್ಗೆ 37 ರನ್ಗಳ ಜೊತೆಯಾಟ ನೀಡಿದರು. ಮಿಚೆಲ್ ಮಾರ್ಷ್ 14 ರನ್ಗಳಿಗೆ ಔಟಾದರು. ನಂತರ ಏಡನ್ ಮಾರ್ಕ್ರಾಮ್ ಮತ್ತು ರಿಷಭ್ ಪಂತ್ 40 ರನ್ಗಳ ಜೊತೆಯಾಟ ನಡೆಸಿದರು. ಏಡನ್ ಮಾರ್ಕ್ರಾಮ್ ಔಟಾದ ನಂತರ, ಆಯುಷ್ ಬದೋನಿ ಬಂದರು. ಅವರ ಆಟ ಕೇವಲ 12 ರನ್ಗಳಿಗೆ ಕೊನೆಗೊಂಡಿತು. ನಿಕೋಲಸ್ ಪೂರನ್ ಕೇವಲ 1 ರನ್ಗೆ ಔಟಾದರು. 105 ರನ್ಗಳಿಗೆ ನಾಲ್ಕನೇ ವಿಕೆಟ್ ಪತನದೊಂದಿಗೆ ಒತ್ತಡ ಹೆಚ್ಚಾಯಿತು.
ಆದರೆ ನಾಯಕನ ಆಟವನ್ನಾಡಿದ ರಿಷಭ್ ಪಂತ್ ತಂಡವು ಸಂಕಷ್ಟದಲ್ಲಿದ್ದಾಗ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಅಬ್ದುಲ್ ಸಮದ್ 12 ರನ್ಗಳಿಗೆ ಔಟಾದಾಗ ಒತ್ತಡ ಮತ್ತೊಮ್ಮೆ ಹೆಚ್ಚಾಯಿತು. ಆದರೆ ರಿಷಭ್ ಪಂತ್ ಒಂದು ಬದಿಯಲ್ಲಿ ಆಟವನ್ನು ಮುಂದುವರಿಸಿ ಅರ್ಧಶತಕವನ್ನು ಸಹ ಪೂರೈಸಿದರು. ಕೊನೆಯ ಓವರ್ನಲ್ಲಿ ಗೆಲ್ಲಲು 9 ರನ್ಗಳು ಬೇಕಾಗಿದ್ದವು. ಪಂತ್ ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಅಂತಿಮವಾಗಿ ಪಂತ್ 50 ಎಸೆತಗಳಲ್ಲಿ 68 ರನ್ ಬಾರಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 05 : ಬೆಂಗಳೂರು (Bengaluru) ಅಂದ್ರೆ ಈಗಿನ ಯುವಕ ಯುವತಿಯರಿಗೆ ಅದೇನೋ ಸೆಳೆತ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಅದೆಷ್ಟೋ ಯುವಕ ಯುವತಿಯರು ಉದ್ಯೋಗ ಅರಸುತ್ತಾ ನಗರಕ್ಕೆ ಬರ್ತಾರೆ. ಹೀಗೆ ಬಂದವರಿಗೆ ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳೋದು ಕಷ್ಟವಾಗಬಹುದು. ಆದರೆ, ಬೆಂಗಳೂರಿನಲ್ಲಿ ವಾಸಿಸುವ ಬಂಗಾಳಿ ಮಹಿಳೆಯೊಬ್ಬರು ನಗರಕ್ಕೆ ಬರುವ ಹೊಸಬರಿಗೆ 30 ದಿನಗಳ ಪ್ಲ್ಯಾನ್ ಹಂಚಿಕೊಂಡಿದ್ದಾರೆ. ಕೇವಲ ಮೂವತ್ತು ದಿನಗಳಲ್ಲಿ ಈ ಹೊಸ ನಗರಕ್ಕೆ ಹೊಂದಿಕೊಂಡು ಮೊದಲ ಕೆಲವು ವಾರಗಳಲ್ಲಿ ಆತಂಕವಿಲ್ಲದೆ ಜೀವನ ನಡೆಸಬಹುದು ಎಂದು ವಿವರಿಸಿದ್ದಾರೆ. ಈ ಮಹಿಳೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಸಲಹೆಯನ್ನು ಮೆಚ್ಚಿಕೊಂಡಿದ್ದಾರೆ.
ಪ್ರಿಯಾಂಕಾ ಮಂಡಲ್ (priyankablrdairy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಈ ಮಹಿಳೆ, ಬೆಂಗಳೂರಿನಲ್ಲಿ ಕಷ್ಟಪಡುವುದು ಸರ್ವೇ ಸಾಮಾನ್ಯ. ಆದರೆ ನೀವು ಈ 30 ದಿನಗಳ ಯೋಜನೆಯನ್ನು ಅನುಸರಿಸಿದರೆ, ಇಲ್ಲಿನ ಜೀವನ ಇನ್ನು ಸುಲಭವಾಗಿಸಬಹುದು. ಮೊದಲ ವಾರದಲ್ಲಿ, ಮನೆಯನ್ನು ತಕ್ಷಣ ಹುಡುಕುವ ಬದಲು ತಾತ್ಕಾಲಿಕ ವಾಸ್ತವ್ಯದತ್ತ ಗಮನ ಹರಿಸಿ. ಎರಡನೇ ವಾರದಲ್ಲಿ, ನಿಮ್ಮ ದೈನಂದಿನ ಪ್ರಯಾಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದುವೇ ನಿಮ್ಮ ದೈನಂದಿನ ಜೀವನದಲ್ಲಿ ನಿಜವಾದ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ಮೂರನೇ ವಾರದ ವೇಳೆಗೆ, ನಿಮ್ಮ ಆಹಾರ, ದಿನಸಿ ಮತ್ತು ದೈನಂದಿನ ಅಭ್ಯಾಸಗಳನ್ನು ವಿಂಗಡಿಸುವ ಮೂಲಕ ದಿನಚರಿಯನ್ನು ನಿರ್ಮಿಸಲು ಪ್ರಾರಂಭಿಸಿ. ಇವು ಮಾಡಿದಿದ್ದಲ್ಲಿ ತಿಂಗಳು ಅಸ್ತವ್ಯಸ್ತವಾಗಿರಬಹುದು. ಕೊನೆಯ ವಾರದಲ್ಲಿ, ನಗರವನ್ನು ಅನ್ವೇಷಿಸಲು ಮತ್ತು ಹೊಸ ಜನರನ್ನು ಭೇಟಿ ಮಾಡಲು ಸಮಯ ತೆಗೆದುಕೊಳ್ಳಿ. ಈ ಕೆಲಸ ಮಾಡದೇ ಹೋದರೆ ಈ ನಗರವು ಎಂದಿಗೂ ನಿಮ್ಮದೇ ಎಂದು ಅನಿಸುವುದಿಲ್ಲ. ಬೆಂಗಳೂರು ಸವಾಲಿನದ್ದಾಗಿರಬಹುದು, ಆದರೆ ಸರಿಯಾದ ಯೋಜನೆಯೊಂದಿಗೆ, ನ್ಯಾವಿಗೇಟ್ ಮಾಡಲು ಹಾಗೂ ಆನಂದಿಸಲು ತುಂಬಾ ಸುಲಭವಾಗುತ್ತದೆ ಎಂದು ಹೇಳಿದ್ದಾರೆ.
ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿನಲ್ಲಿ ಪ್ರಯಾಣವೇ ಸರ್ವಸ್ವ, ನೀವು ಈ ತಪ್ಪು ಮಾಡಿದರೆ ನಿಮ್ಮ ದೈನಂದಿನ ಜೀವನವು ಒತ್ತಡದಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ನಿಮ್ಮ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದಿದ್ದಾರೆ. ಮತ್ತೊಬ್ಬರು, ಶಾಶ್ವತ ಮನೆಯನ್ನು ಹುಡುಕಲು ಆತುರಪಡದಿರುವುದು ವಾಸ್ತವವಾಗಿ ತುಂಬಾ ಪ್ರಾಯೋಗಿಕ ಸಲಹೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಐಪಿಎಲ್ 2026 ರ ಇದುವರೆಗಿನ ಅತಿದೊಡ್ಡ ಪಂದ್ಯಕ್ಕೆ ಸಾಕ್ಷಿಯಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಸೀಸನ್ನ 11 ನೇ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ರಜತ್ ಪಟಿದಾರ್ ತಂಡವು ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಏತನ್ಮಧ್ಯೆ, ತನ್ನ ಎರಡೂ ಪಂದ್ಯಗಳಲ್ಲಿ ಸೋತಿರುವ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಗೆಲುವನ್ನು ಎದುರು ನೋಡುತ್ತಿದೆ.
ಕೊಡಗು, ಏಪ್ರಿಲ್ 05: ಮಡಿಕೇರಿಯ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಕೊನೆಗೂ ಪತ್ತೆ ಆಗಿದ್ದಾರೆ. ಆ ಮೂಲಕ ನಾಲ್ಕು ದಿನಗಳ ಕಾರ್ಯಾಚರಣೆ ಯಶಸ್ವಿ ಆಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ರಸ್ತೆ ಅರಿವಾಗದೆ ಪಾಳು ಬಿದ್ದ ಬಂಗಲೆಯೊಂದರಲ್ಲೇ ಶರಣ್ಯ ಉಳಿದುಕೊಂಡಿದ್ದರು. ಸ್ಥಳೀಯ ಜನಾಂಗದವರ ಸಹಾಯ ಬೆನ್ನಲ್ಲೇ ಇದೀಗ ಯುವತಿ ಪತ್ತೆ ಆಗಿದ್ದಾರೆ.
ರಣ್ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಭಾರಿ ಅದ್ಧೂರಿ ವಿಎಫ್ಎಕ್ಸ್, ಅದ್ಧೂರಿ ಸೆಟ್ಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಪೌರಾಣಿಕ ಕತೆಗೆ ಭವ್ಯತೆಯನ್ನು ಸೇರಿಸಿ ಪ್ರೇಕ್ಷಕರಿಗೆ ನೀಡಲಾಗುತ್ತಿದೆ ‘ರಾಮಾಯಣ’ ಸಿನಿಮಾನಲ್ಲಿ. ಹಲವು ಆಸ್ಕರ್ಗಳನ್ನು ಗೆದ್ದಿರುವ ಡಿಎನ್ಇಜಿ ಸಂಸ್ಥೆ ಈ ಸಿನಿಮಾಕ್ಕೆ ವಿಎಫ್ಎಕ್ಸ್ ಮಾಡಿದೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರು ಸಂಗೀತ ನೀಡಲಿದ್ದಾರೆ. ರಣ್ಬೀರ್, ಯಶ್ ಇನ್ನೂ ಹಲವು ಸ್ಟಾರ್ಗಳು ಸಿನಿಮಾನಲ್ಲಿ ನಟಿಸಲಿದ್ದಾರೆ. ಇಷ್ಟೆಲ್ಲ ಇದ್ದರೂ, ಸಿನಿಮಾದ ಮುಖ್ಯ ಹೈಲೆಟ್ ಪಾಯಿಂಟ್ ಬೇರೆ ಏನೋ ಇದೆಯಂತೆ. ಖುದ್ದು ಸಿನಿಮಾದ ನಿರ್ದೇಶಕ ನಿತೇಶ್ ತಿವಾರಿ ಈ ಬಗ್ಗೆ ಮಾತನಾಡಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ಅವರು ಹೇಳಿರುವಂತೆ ಅವರ ಪ್ರಕಾರ ಈ ವರ್ಷ ಬಿಡುಗಡೆ ಆಗಲಿರುವ ‘ರಾಮಾಯಣ’ ಸಿನಿಮಾದ ಮೊದಲ ಭಾಗದಲ್ಲಿ ಹೈಲೆಟ್ ದೃಶ್ಯವೆಂದರೆ ಅದು ರಾಮ ಅಯೋಧ್ಯೆ ಬಿಟ್ಟು ಹೋಗುವ ದೃಶ್ಯವಂತೆ. ನಿತೇಶ್ ತಿವಾರಿ ಅವರು ಹೇಳಿರುವಂತೆ ‘ಸಿನಿಮಾ ಬಿಡುಗಡೆ ಆದಾಗ ಜನ ಆ ದೃಶ್ಯಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಲು ಕಾತರನಾಗಿ ಕಾಯುತ್ತಿದ್ದೇನೆ. ಆ ಇಡೀ ಸನ್ನಿವೇಶ ನಮ್ಮ ಸಿನಿಮಾನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ನಾನಂತೂ ಪ್ರತಿ ಬಾರಿ ಆ ದೃಶ್ಯವನ್ನು ನೋಡಿದಾಗಲೂ ಕಣ್ಣೀರಾಗುತ್ತೇನೆ. ಆ ದೃಶ್ಯ ನಮ್ಮ ಸಿನಿಮಾದ ಬಹಳ ಮುಖ್ಯವಾದ ದೃಶ್ಯ’ ಎಂದಿದ್ದಾರೆ ನಿತೇಶ್ ತಿವಾರಿ.
ಇದೀಗ ಬಿಡುಗಡೆ ಆಗಿರುವ ‘ರಾಮಾಯಣ’ ಟೀಸರ್ನಲ್ಲಿ ಆ ಸನ್ನಿವೇಶದ ಎರಡು ಸಣ್ಣ ದೃಶ್ಯಗಳನ್ನು ಸೇರಿಸಲಾಗಿದೆ. ಆದರೆ ಸಿನಿಮಾದ ವೈಭವದ ದೃಶ್ಯಗಳು, ಕೆಲ ಆಕ್ಷನ್ ದೃಶ್ಯಗಳು, ಪುಷ್ಪಕ ವಿಮಾನ ಮತ್ತು ರಣ್ಬೀರ್ ಕಪೂರ್ ಅವರ ರಾಮನ ಪಾತ್ರದ ಮೇಲೆ ಟೀಸರ್ ಹೆಚ್ಚು ಪೋಕಸ್ ಆಗಿತ್ತು. ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಸಹಜವಾಗಿಯೇ ಕೆಲವರು ಮೆಚ್ಚಿಕೊಂಡರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
‘ರಾಮಾಯಣ’ ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆ ಹಾಗೂ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರು ಸಂಗೀತ ನೀಡಿದ್ದಾರೆ. ರಾಮಾಯಣ ಸಿನಿಮಾದ ಎರಡೂ ಭಾಗಗಳಿಗೆ 4000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಸಿನಿಮಾದ ಮೊದಲ ಭಾಗ ಇದೇ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ.
ಬೆಂಗಳೂರು, ಏಪ್ರಿಲ್ 5: ಭಾರತದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಎಂ ಬೆಂಗಳೂರು (IIM Bangalore) ಈ ಬಾರಿ ದೊಡ್ಡ ಪ್ರತಿಭೆಯೊಂದನ್ನು ಲೋಕಕ್ಕೆ ಕೊಡುಗೆಯಾಗಿ ನೀಡಿದೆ. ಅದ್ಭುತ ಶೈಕ್ಷಣಿಕ ಸಾಧನೆಗಾಗಿ ಧ್ವಿತ್ ಮೆಹತಾ (Dhvit Mehta) ಐಐಎಂ ಬೆಂಗಳೂರಿನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಅವರ ಹೆಸರನ್ನು ವಾಲ್ ಆಫ್ ಫೇಮ್ಗೆ ಸೇರಿಸಲಾಗಿದೆ. ಐಐಟಿ ಮತ್ತಿತರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಬಂದಿದ್ದ ಘಟಾನುಘಟಿ ಅಭ್ಯರ್ಥಿಗಳು ಆ ಬ್ಯಾಚ್ನಲ್ಲಿ ಇದ್ದರು. ಇವರ ತೀವ್ರ ಪೈಪೋಟಿ ನಡುವೆ 27 ವರ್ಷದ ಧ್ವಿತ್ ಮೆಹತಾ ಅತ್ಯುತ್ತಮ ಎನಿಸಿದ್ದ ಅಸಾಧಾರಣ ಸಂಗತಿ.
ಗುಜರಾತ್ ಮೂಲದ ಧ್ವಿತ್ ಮೆಹತಾ ಗುಜರಾತ್ನ ಆನಂದ್ ನಗರದ ಆನಂದಾಲಯ ಸ್ಕೂಲ್ನಲ್ಲಿ ಓದಿ, ಐಐಟಿ ಅಲಹಾಬಾದ್ನಲ್ಲಿ ಬಿಟೆಕ್ ಮತ್ತು ಎಂಟೆಕ್ ಎಂಜಿನಿಯರ್ ಪೂರೈಸಿದ್ದಾರೆ. ಚಿಕ್ಕಂದಿನಲ್ಲಿ ಕೋಡಿಂಗ್ ಕಡೆಗೆ ಆಸಕ್ತಿ ಹೊಂದಿದ್ದರಿಂದ ತಂತ್ರಜ್ಞಾನ ಕ್ಷೇತ್ರವು ಅವರನ್ನು ಸಳೆಯಿತು.
2021ರಿಂದ ಅವರು ಅಮೆರಿಕ ಮತ್ತು ಯೂರೋಪ್ನಲ್ಲಿ ಮೈಕ್ರೋಸಾಫ್ಟ್ ಇತ್ಯಾದಿ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದರು. ಸ್ಥಿರವಾದ ವೃತ್ತಿ ಸಿಕ್ಕಿತಾದರೂ ಧ್ವಿತ್ ಅವರಿಗೆ ಎಲ್ಲೋ ಒಂದು ಕಡೆ ಫಿನಾನ್ಸ್ ವಿಷಯ ಬಹಳ ಆಸಕ್ತಿ ಕೆರಳಿಸತೊಡಗಿತು.
ಆಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳದ ಧ್ವಿತ್, ಬಹಳ ಕಠಿಣವಾದ ಸಿಎಫ್ಎ ಪ್ರೋಗ್ರಾಮ್ ಸೇರಿದರು. ಕೋಚಿಂಗ್ ಇಲ್ಲದೇ ಲೆವೆಲ್ 1 ಮತ್ತು 2 ಅನ್ನು ಪಾಸ್ ಮಾಡಿದರು. ಮೈಕ್ರೋಸಾಫ್ಟ್ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಈ ಸಾಧನೆ ಮಾಡಿದ್ದರು.
ಧ್ವಿತ್ ಮೆಹತಾ ಅವರು ಐಐಎಂ ಬೆಂಗಳೂರಲ್ಲಿ ಮಾತನಾಡಿರುವುದು
2024ರಲ್ಲಿ ಮೈಕ್ರೋಸಾಫ್ಟ್ ಕಂಪನಿ ತೊರೆದು ನಾರ್ವೆಯಿಂದ ಭಾರತಕ್ಕೆ ಬಂದು ಐಐಎಂ ಬೆಂಗಳೂರಿನಲ್ಲಿ ಎಂಬಿಎಗೆ ಸೇರಿದರು. ಎಂಬಿಎಗೆ ಸೇರುವ ಅವರ ಪ್ರಯತ್ನ 2021ರಿಂದಲೂ ನಡೆದಿತ್ತು. ಬಹಳ ಸುಲಭವಾಗಿ ಟಾಪ್ ಸ್ಕೋರ್ ಮಾಡುತ್ತಿದ್ದ ಅವರಿಗೆ ಐಐಎಂ ಬೆಂಗಳೂರು ಸೇರುವುದು ಬೇಕಾಗಿತ್ತು. ಬಹಳ ಪೈಪೋಟಿ ಇದ್ದ ಬ್ಯಾಚ್ನಲ್ಲಿ ಅವರು ಸರ್ವೋಚ್ಚ ಎನಿಸಿದ್ದಾರೆ. 2026ರ ಮಾರ್ಚ್ 27ರಂದು ನಡೆದ ಘಟಿಕೋತ್ಸವದಲ್ಲಿ ಧ್ವಿತ್ಗೆ ಗೋಲ್ಡ್ ಮೆಡಲ್ ಕೊಡಲಾಯಿತು.
ಐಪಿಎಲ್ನಲ್ಲಿ ಲಕ್ನೋ ತಂಡ ತನ್ನ ಪ್ರದರ್ಶನದಿಂದ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಮ್ಮ ನಡವಳಿಕೆಗಳಿಂದ ಸುದ್ದಿಯಾಗಿದ್ದಾರೆ. ಈ ಹಿಂದಿನ ಸೀಸನ್ಗಳಲ್ಲಿ ತಂಡದ ನಾಯಕರನ್ನು ಕ್ರೀಡಾಂಗಣದಲ್ಲೇ ಬಹಿರಂಗವಾಗಿ ನಿಂಧಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಗೋಯೆಂಕಾ, ಈ ಆವೃತ್ತಿಯಲ್ಲೂ ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದರು. ಲಕ್ನೋ ತಂಡ ಡೆಲ್ಲಿ ವಿರುದ್ಧ ಸೋತಾಗ ತಂಡದ ನಾಯಕ ರಿಷಭ್ ಪಂತ್ಗೆ ಗೋಯೆಂಕಾ ಮೈದಾನದಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು. ಇದನ್ನು ಗಮನಿಸಿದ್ದ ಬಿಸಿಸಿಐ, ಬಹಿರಂಗವಾಗಿ ಆಟಗಾರರನ್ನು ಅಥವಾ ನಾಯಕರನ್ನು ನಿಂಧಿಸಿದಂತೆ ಎಲ್ಲಾ ತಂಡಗಳ ಮಾಲೀಕರಿಗೆ ಖಡಕ್ ಸಂದೇಶ ರವಾನಿಸಿತ್ತು. ಇದೀಗ ಇದೆಲ್ಲದರ ನಡುವೆ ಇದೀಗ ಸಂಜೀವ್ ಗೋಯೆಂಕಾ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.
ವಾಸ್ತವವಾಗಿ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಅವರ ತವರು ನೆಲದಲ್ಲಿ ಎದುರಿಸಿತ್ತು. ಸನ್ರೈಸರ್ಸ್ ತಂಡಕ್ಕೆ ಇದು ತವರು ಪಂದ್ಯವಾಗಿದ್ದರಿಂದ ತಂಡದಿಂದ ಸ್ಫೋಟಕ ಬ್ಯಾಟಿಂಗ್ನ ನಿರೀಕ್ಷೆ ಇತ್ತು. ಆದರೆ ಇದಕ್ಕೆ ಲಕ್ನೋ ವೇಗಿಗಳು ಅವಕಾಶ ಮಾಡಿಕೊಡಲಿಲ್ಲ. ತಂಡದ ಪ್ರಮುಖ 4 ವಿಕೆಟ್ಗಳು ಬಹುಬೇಗನೇ ಉದುರಿದವು. ಇದರಿಂದ ಸನ್ರೈಸರ್ಸ್ ತಂಡದ ರನ್ ವೇಗ ಪಾತಳಕ್ಕೆ ಕುಸಿಯಿತು. ಇದೆಲ್ಲದರ ನಡುವೆ ಸನ್ರೈಸರ್ಸ್ ತಂಡದ ನಾಯಕ ಇಶಾನ್ ಕಿಶನ್ ಅವರ ವಿಕೆಟ್ ಬಿದ್ದಾಗ, ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನೀಡಿದ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸನ್ರೈಸರ್ಸ್ ತಂಡ ಪವರ್ಪ್ಲೇನಲ್ಲಿಯೇ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿತು. ಅದರಲ್ಲೂ ಆರಂಭಿಕರಾದ ಅಭಿಷೇಕ್ ಶರ್ಮಾ ಖಾತೆ ತೆರೆಯದೆ ಔಟಾದರೆ, ಟ್ರಾವಿಸ್ ಹೆಡ್ ಕೂಡ 7 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಈ ಎರಡು ವಿಕೆಟ್ಗಳು ಬಿದ್ದಾಗಲೇ ಸಾಕಷ್ಟು ಖುಷಿಯಲ್ಲಿದ್ದ ಗೋಯೆಂಕಾ ಅವರಿಗೆ ಅವರ ಖುಷಿಯನ್ನು ಇಮ್ಮಡಿಗೊಳಿಸುವ ಮತ್ತೊಂದು ಘಟನೆ ನಡೆಯಿತು. ಆರಂಭಿಕ ಆಘಾತದಿಂದ ತಂಡವನ್ನು ಮೇಲೇತ್ತುವ ಕೆಲಸ ಮಾಡುವ ಜವಾಬ್ದಾರಿ ಹೊತ್ತಿದ್ದ ತಂಡದ ನಾಯಕ ಇಶಾನ್ ಕಿಶನ್ ಕೂಡ ಇನ್ನಿಂಗ್ಸ್ನ 4ನೇ ಓವರ್ನಲ್ಲಿ ಕೇವಲ 1 ರನ್ ಗಳಿಸಿ ಔಟಾದರು. ಕಿಶನ್ ಔಟಾದ ಕೂಡಲೇ ಸಂಜೀವ ಗೋಯೆಂಕಾ ತಮ್ಮ ಆಸನದಿಂದ ಮೇಲೆದ್ದು, ತಮ್ಮ ಕಿಸೆಯಲ್ಲಿದ್ದ ದೇವರ ಫೋಟೋವನ್ನು ಹೊರತೆಗೆದು ಅದನ್ನು ತಮ್ಮ ಹಣೆಗೆ ಒತ್ತಿಕೊಂಡರು. ನಂತರ ತಮ್ಮ ಎರಡು ಕೈಗಳನ್ನು ಜೋಡಿಸಿ ದೇವರಿಗೆ ನಮಸ್ಕರಿಸಿದರು. ಈ ವೇಳೆ ಅವರ ಮೊಗದಲ್ಲಿ ಸಂತಸ ತುಂಬಿ ತುಳುಕುತ್ತಿತ್ತು. ಇದೀಗ ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ