All posts by nagaraj11081993

Vasthu Shastra: ತುಳಸಿ ಗಿಡದ ಪಕ್ಕದಲ್ಲಿ ಈ ಸಸ್ಯ ಬೆಳೆದಿದ್ಯಾ? ಇದು ಕೌಟುಂಬಿಕ ಸಂತೋಷ ಮತ್ತು ಸಮೃದ್ಧಿಯ ಸಂಕೇತ – Kannada News | Tulasi Durva: Unveiling Spiritual Meanings and Prosperity Omens in Sanatana Dharma

ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ತುಳಸಿಗೆ ವೈಜ್ಞಾನಿಕ ಮತ್ತು ಧಾರ್ಮಿಕ ಮಹತ್ವವೂ ಇದೆ ಎಂದು ಪರಿಗಣಿಸಲಾಗಿದೆ. ತುಳಸಿ ಮಾತೆಯನ್ನು ಪೂಜಿಸುವ ಜನರಿಗೆ ತಮ್ಮ ಮನೆಗಳಲ್ಲಿ ಎಂದಿಗೂ ಸಂಪತ್ತು ಮತ್ತು ಸಮೃದ್ಧಿಯ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಗಿಡದ ಸ್ಥಾನವು ಮನೆಯ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕುಟುಂಬ ಸದಸ್ಯರಿಗೆ ಶುಭ ಮತ್ತು ಅಶುಭ ಚಿಹ್ನೆಗಳನ್ನು ನೀಡುತ್ತದೆ.

ಮನೆಯಲ್ಲಿ ತುಳಸಿ ಗಿಡದಲ್ಲಿ ಆಗುವ ಬದಲಾವಣೆಗಳು ಕುಟುಂಬ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುವ ಅನೇಕ ಚಿಹ್ನೆಗಳನ್ನು ನೀಡುತ್ತವೆ ಎಂಬುದನ್ನು ಗಮನಿಸಬೇಕು. ಇದಲ್ಲದೆ, ತುಳಸಿ ಗಿಡದ ಬಳಿ ಗರಿಕೆ (ದೂರ್ವೆ) ಇದ್ದಕ್ಕಿದ್ದಂತೆ ಬೆಳೆದರೆ, ಅದಕ್ಕೂ ಗಮನಾರ್ಹ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗರಿಕೆ ಹುಲ್ಲು ಕೂಡ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ಪೂಜಿಸುವಂತೆಯೇ, ಗರಿಕೆ ಹುಲ್ಲುಗೂ ವಿಶೇಷ ಮಹತ್ವವಿದೆ. ಗಣೇಶನಿಗೆ ಗರಿಕೆ ಅರ್ಪಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತುಳಸಿ ಗಿಡದ ಸುತ್ತಲೂ ಗರಿಕೆ ಹಠಾತ್ತನೆ ಬೆಳೆಯುವುದು ವಿಶೇಷ ಮಹತ್ವವನ್ನು ಹೊಂದಿದೆ.

ಶುಭ ಸುದ್ದಿಯ ಲಕ್ಷಣ:

ನಿಮ್ಮ ಮನೆಯಲ್ಲಿರುವ ತುಳಸಿ ಗಿಡದ ಸುತ್ತಲೂ ಗರಿಕೆ ಹುಲ್ಲು ಇದ್ದಕ್ಕಿದ್ದಂತೆ ಬೆಳೆಯಲು ಪ್ರಾರಂಭಿಸಿದರೆ, ಶೀಘ್ರದಲ್ಲೇ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಗರಿಕೆ ಹುಲ್ಲಿನ ಬೆಳವಣಿಗೆ ಬಹಳ ಶುಭವೆಂದು ಪರಿಗಣಿಸಲಾಗಿದೆ.

ಕೌಟುಂಬಿಕ ಸಂತೋಷ ಮತ್ತು ಸಮೃದ್ಧಿಯ ಸಂಕೇತ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಗರಿಕೆ ಹುಲ್ಲನ್ನು ಗಣೇಶನಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ ಮತ್ತು ಗಣೇಶನನ್ನು ಸಮೃದ್ಧಿ, ಸಂತೋಷ ಮತ್ತು ಸಮೃದ್ಧಿಯ ಪೋಷಕ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನಿಮ್ಮ ಮನೆಯಲ್ಲಿರುವ ತುಳಸಿ ಗಿಡದ ಬಳಿ ಗರಿಕೆ ಹುಲ್ಲು ಬೆಳೆದರೆ, ಅದನ್ನು ಹಲವು ವಿಧಗಳಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಶೀಘ್ರದಲ್ಲೇ ನಿಮ್ಮ ಮನೆಗೆ ಸಮೃದ್ಧಿ ಬರಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ:

ತುಳಸಿ ಗಿಡಗಳ ಬಳಿ ಗರಿಕೆ ನೆಡುವುದರಿಂದ ಆರ್ಥಿಕ ಯೋಗಕ್ಷೇಮ ಸುಧಾರಿಸುತ್ತದೆ. ಇದು ನಿಮಗೆ ಶೀಘ್ರದಲ್ಲೇ ಉತ್ತಮ ಕೊಡುಗೆ ಸಿಗಬಹುದು ಎಂಬುದನ್ನು ಸೂಚಿಸುತ್ತದೆ, ಇದು ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದು ನಂಬಲಾಗಿದೆ.

ನಕಾರಾತ್ಮಕ ಶಕ್ತಿಯ ಅಂತ್ಯ:

ನಿಮ್ಮ ಮನೆಯಲ್ಲಿರುವ ತುಳಸಿ ಗಿಡದ ಬಳಿ ಗರಿಕೆ ಬೆಳೆಯಲು ಪ್ರಾರಂಭಿಸಿದಾಗ, ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಸಕಾರಾತ್ಮಕ ಶಕ್ತಿಯು ಪ್ರವೇಶಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದಲ್ಲದೆ, ಸಂಪತ್ತು ಶೀಘ್ರದಲ್ಲೇ ನಿಮ್ಮ ಮನೆಗೆ ಬರಲಿದೆ ಎಂಬುದರ ಸೂಚನೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಪ್ಪು ಹೆಚ್ಚಾಗಿ ಅಡುಗೆ ಕೆಟ್ಟು ಹೋದ್ರೆ, ರುಚಿ ಸರಿದೂಗಿಸಲು ಈ ಸರಳ ಸಲಹೆಯನ್ನು ಪಾಲಿಸಿ – Kannada News | If Dishes has too much salt, follow this tip to fix it

ಅಡುಗೆಯ ರುಚಿ ಹೆಚ್ಚಿಸುವಲ್ಲಿ ಉಪ್ಪಿನ (salt) ಪಾತ್ರ ಬಹಳ ದೊಡ್ಡದು. ಅದೇ ಒಂದು ವೇಳೆ ಸ್ವಲ್ಪ ಉಪ್ಪು ಜಾಸ್ತಿ ಆದ್ರೂ ಸಹ ಅಡುಗೆಯ ರುಚಿಯೇ ಕೆಟ್ಟು ಹೋಗುತ್ತದೆ. ಈ ರೀತಿ ಉಪ್ಪು ಜಾಸ್ತಿಯಾದಾಗ ಅಯ್ಯೋ ಕಷ್ಟಪಟ್ಟು ಮಾಡಿದ ಅಡುಗೆಯೆಲ್ಲಾ ವೇಸ್ಟ್‌ ಆಯ್ತಲ್ವಾ ಎಂದು ಹಲವರು ಟೆನ್ಷನ್‌ ಮಾಡ್ಕೊಳ್ಳುತ್ತಾರೆ. ಅಡುಗೆಗೆ ಉಪ್ಪು ಹೆಚ್ಚಾದ್ರೆ ಈ ರೀತಿ ಟೆನ್ಷನ್‌ ಮಾಡುವ ಯಾವುದೇ ಅವಶ್ಯಕತೆ ಇಲ್ಲ, ಜಸ್ಟ್‌ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ರುಚಿಯನ್ನು ಸರಿದೂಗಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಡುಗೆಗೆ ಉಪ್ಪು ಜಾಸ್ತಿ ಆದ್ರೆ ಏನು ಮಾಡಬೇಕು?

ಮೊಸರು ಸೇರಿಸಿ: ಉಪ್ಪು ಜಾಸ್ತಿಯಾಗಿ ಅಡುಗೆಯ ರುಚಿ ಕೆಟ್ಟು ಹೋದರೆ ರುಚಿಯನ್ನು ಸರಿದೂರಿಸಲು ನೀವು ಅಡುಗೆಗೆ ಮೊಸರನ್ನು ಸೇರಿಸಬಹುದು. ಅಡುಗೆಗೆ ಎರಡು ಚಮಚ ಮೊಸರು ಸೇರಿಸಿ ಎರಡು ನಿಮಿಷ ಬೇಯಿಸಿ. ಇದು ಉಪ್ಪಿನ ಅಂಶವನ್ನು ಸಮತೋಲನಗೊಳಿಸುತ್ತದೆ ಮತ್ತು ಅಡುಗೆಯ ರುಚಿಯನ್ನು ಸುಧಾರಿಸುತ್ತದೆ.

ಕಡಲೆ ಹಿಟ್ಟು: ನೀವು ಹುರಿದ ಕಡಲೆ ಹಿಟ್ಟನ್ನು ಸಹ ಬಳಸಬಹುದು. ನೀವು ಮಾಡಿದ ಅಡುಗೆಯಲ್ಲಿ ಉಪ್ಪು ಹೆಚ್ಚು ಇದ್ದರೆ, ಅದಕ್ಕೆ ಹುರಿದ ಕಡಲೆ ಹಿಟ್ಟನ್ನು ಸೇರಿಸಿ. ಇದು ಹೆಚ್ಚುವರಿ ಉಪ್ಪನ್ನು ಸಮತೋಲನಗೊಳಿಸುತ್ತದೆ ಮತ್ತು ಅಡುಗೆಯ ರುಚಿಯನ್ನು ಸುಧಾರಿಸುತ್ತದೆ.

ಬೇಯಿಸಿದ ಆಲೂಗಡ್ಡೆ: ಬೇಯಿಸಿದ ಆಲೂಗಡ್ಡೆಯನ್ನು ಬಳಸುವ ಮೂಲಕ ಅಡುಗೆಯಲ್ಲಿನ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಉಪ್ಪು ಹೆಚ್ಚಾಗಿ ರುಚಿ ಕೆಟ್ಟಿದ್ದರೆ ಬೇಯಿಸಿದ ಆಲೂಗಡ್ಡೆಯನ್ನು ಕಟ್‌ ಮಾಡಿ, ನೀವು ತಯಾರಿಸಿಟ್ಟ ಅಡುಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಉಪ್ಪಿನಾಂಶವನ್ನು ಹೀರಿಕೊಳ್ಳುತ್ತದೆ. ಹಸಿ ಆಲೂಗಡ್ಡೆಯ ತುಂಡನ್ನು ಸಹ ಸೇರಿಸಬಹುದು.

ಇದನ್ನೂ ಓದಿ: ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಸರಳ ಸಲಹೆಯನ್ನು ಪಾಲಿಸಿ

ನಿಂಬೆ ರಸ: ಅಡುಗೆಯಲ್ಲಿ ಉಪ್ಪು ಹೆಚ್ಚಾಗಿದ್ದರೆ ಅದನ್ನು ಸಮತೋಲನಗೊಳಿಸಲು ನಿಂಬೆ ರಸ ಕೂಡ ಸಹಕಾರಿಯಾಗಿದೆ. ಹೌದು ಉಪ್ಪು ಜಾಸ್ತಿಯಾದ್ರೆ ಅಡುಗೆಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ ಚೆನ್ನಾಗಿ ವಿಶ್ರಣ ಮಾಡಿ. ಇದು ಹೆಚ್ಚಾದ ಉಪ್ಪಿನಾಂಶವನ್ನು ಸಮತೋಲನಗೊಳಿಸುತ್ತದೆ.

ತೆಂಗಿನ ಹಾಲು: ನೀವು ಮಾಡಿದ ಗ್ರೇವಿಯ ಉಪ್ಪು ಜಾಸ್ತಿ ಆದ್ರೆ ಅದಕ್ಕೆ ತೆಂಗಿನ ಹಾಲನ್ನು ಸೇರಿಸಬಹುದು. ತೆಂಗಿನ ಹಾಲಿನೊಂದಿಗೆ ಸ್ವಲ್ಪ ನೀರು ಬೆರೆಸಿ ಗ್ರೇವಿಗೆ ಸೇರಿಸಿ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಉಪ್ಪನ್ನು ಸಮತೋಲನಗೊಳಿಸುತ್ತದೆ.

ಸಕ್ಕರೆ: ಅಡುಗೆಗೆ ಉಪ್ಪು ಹೆಚ್ಚಾದರೆ ಅದಕ್ಕೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಸೇರಿಸಿ. ಸಕ್ಕರೆಯ ಸಿಹಿಯು ಉಪ್ಪಿನ ಪ್ರಮಾಣವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:11 pm, Wed, 24 December 25

Source link

‘ಮೈಸಾ’ ಫಸ್ಟ್ ಗ್ಲಿಂಪ್ಸ್: ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ರಶ್ಮಿಕಾ ಮಂದಣ್ಣ – Kannada News | Rashmika Mandanna starrer Mysaa movie First Glimpse released

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರರಂಗದಲ್ಲಿ ದೊಡ್ಡ ಗೆಲುವು ಕಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಅವರು ಮಿಂಚಿದ್ದಾರೆ. ಹಾಗಂತ ಅವರು ಒಂದೇ ಬಗೆಯ ಸಿನಿಮಾಗಳನ್ನು ಮಾಡುತ್ತಿಲ್ಲ. ಬದಲಿಗೆ, ಬೇರೆ ಬೇರೆ ರೀತಿಯ ಸಿನಿಮಾ ಮತ್ತು ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಅವರ ‘ದಿ ಗರ್ಲ್​ಫ್ರೆಂಡ್’ ಸಿನಿಮಾ ಗಮನ ಸೆಳೆದಿತ್ತು. ಈಗ ಅವರು ‘ಮೈಸಾ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ. ಈ ಸಿನಿಮಾದಿಂದ ಫಸ್ಟ್ ಗ್ಲಿಂಪ್ಸ್ (Mysaa First Glimpse) ಬಿಡುಗಡೆ ಆಗಿದೆ.

ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸಲು ರಶ್ಮಿಕಾ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರ ನಡುವೆಯೂ ಅವರು ಹೊಸ ಬಗೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ‘ಮೈಸಾ’ ಸಿನಿಮಾವೇ ಬೆಸ್ಟ್ ಉದಾಹರಣೆ. ಈ ಸಿನಿಮಾದಲ್ಲಿ ಅವರು ಹಿಂದೆಂದೂ ಕಾಣಿಸಿಕೊಳ್ಳದ ಗೆಟಪ್​​ನಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಆ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಸಲು ಈ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ.

ರವೀಂದ್ರ ಪುಲ್ಲೆ ಅವರು ‘ಮೈಸಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾಗಿ ಇದು ಅವರ ಮೊದಲ ಸಿನಿಮಾ. ಹಾಗಿದ್ರೂ ಕೂಡ ಓರ್ವ ಅನುಭವಿ ನಿರ್ದೇಶಕನ ರೀತಿಯಲ್ಲಿ ಅವರು ಸಿನಿಮಾ ಮಾಡಿದ್ದಾರೆ ಎಂಬುದಕ್ಕೆ ಫಸ್ಟ್ ಗ್ಲಿಂಪ್ಸ್ ಟೀಸರ್​​ನಲ್ಲಿ ಸುಳಿವು ಸಿಕ್ಕಿದೆ. ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆಯ ಮೂಲಕ ‘ಮೈಸಾ’ ಸಿನಿಮಾ ನಿರ್ಮಾಣ ಆಗುತ್ತಿದೆ.

ಮೈಸಾ ಸಿನಿಮಾ ಫಸ್ಟ್ ಗ್ಲಿಂಪ್ಸ್:

ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ಹಿಂದೆ, ತಮಿಳು ಮುಂತಾದ ಭಾಷೆಗಳಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಭಾರಿ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಕೈಯಲ್ಲಿ ಬೇಡಿ, ಬಂದೂಕು, ಮೈಯೆಲ್ಲಾ ರಕ್ತ, ಮುಖದಲ್ಲಿ ನೋವು, ಆಕ್ರೋಶ.. ಹೀಗೆ ಮೊದಲ ಲುಕ್​​ನಲ್ಲೇ ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಈ ಫಸ್ಟ್ ಗ್ಲಿಂಪ್ಸ್ ಇಷ್ಟ ಆಗಿದೆ. ಸಿನಿಮಾ ನೋಡಲು ತಾವೆಲ್ಲ ಕಾಯುತ್ತಿರುವುದಾಗಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮದುವೆಗೆ ಮುನ್ನ ಗೆಳತಿಯರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ ರಶ್ಮಿಕಾ: ಚಿತ್ರಗಳು ಇಲ್ಲಿವೆ

‘ಮೈಸಾ’ ಸಿನಿಮಾದ ಈ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆ ಪಾತ್ರದ ಹಿನ್ನೆಲೆ ಹೇಗಿದೆ ಎಂಬುದನ್ನು ತಾಯಿಯ ಧ್ವನಿ ವಿವರಿಸುತ್ತದೆ. ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಶ್ರೀಯಾಸ್ ಪಿ. ಕೃಷ್ಣ ಅವರ ಛಾಯಾಗ್ರಹಣ, ಜೇಕ್ಸ್ ಬೆಜೋಯ್ ಅವರ ಸಂಗೀತ, ಆಂಡಿ ಲಾಂಗ್ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಶ್ಲೀಲ ಕಮೆಂಟ್ ಹಾಕಿದವರಿಗೆ ಸಂಕಷ್ಟ; ದೂರು ದಾಖಲಿಸಿ, ದಾಖಲೆ ಕೊಟ್ಟ ವಿಜಯಲಕ್ಷ್ಮೀ – Kannada News | Vijayalakshmi Files Cyber Complaint: Darshan Wife Battles Online Hate and Fan Wars

ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳು ಇದಕ್ಕೆ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಈಗ ವಿಜಯಲಕ್ಷ್ಮೀ ಕೂಡ ಇದರಿಂದ ತೊಂದರೆ ಅನುಭವಿಸಿದ್ದಾರೆ. ಈ ಸಂಬಂಧ ಅವರು ದೂರು ಕೂಡ ದಾಖಲು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಂದ ಹೇಟ್ ಕಮೆಂಟ್ ಹಾಗೂ ಮೆಸೇಜ್​​ಗಳ ಸ್ಕ್ರೀನ್​ಶಾಟ್​​ಗಳನ್ನು ಸೈಬರ್ ಪೊಲೀಸರಿಗೆ ನೀಡುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.

ಸುದೀಪ್ ಅವರು ಇತ್ತೀಚೆಗೆ ‘ಸಿನಿಮಾ ರಿಲೀಸ್ ವೇಳೆ ಒಂದು ಪಡೆ ಯುದ್ಧಕ್ಕೆ ರೆಡಿ ಇದೆ’ ಎಂದಿದ್ದರು. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ ಮಾತು ಎಂದು ಬಣ್ಣಿಸಲಾಯಿತು. ಆ ಬಳಿಕ ವಿಜಯಲಕ್ಷ್ಮೀ ಅವರು ನೇರವಾಗಿ ಅಖಾಡಕ್ಕೆ ಇಳಿದು, ಸುದೀಪ್​​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಆ ಬಳಿಕ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದವು. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮೀ ಅವರಿಗೆ ಹೇಟ್ ಕಮೆಂಟ್ ಹೆಚ್ಚಿದೆ.

ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಜಯಲಕ್ಷ್ಮೀ ದೂರು ದಾಖಲು ಮಾಡಿದ್ದಾರೆ. ತಮಗೆ ಬಂದ ಹೇಟ್ ಕಮೆಂಟ್​ ಸ್ಕ್ರೀನ್​ಶಾಟ್ ಹಾಗೂ ಆಯಾ ಖಾತೆಗಳ ವಿವರಗಳನ್ನು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸೈಬರ್ ಅಪರಾಧ ವಿಭಾಗದ ಇನ್ಸ್​ಪೆಕ್ಟರ್​ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸುದೀಪ್ ಫ್ಯಾನ್ಸ್?

ವಿಜಯಲಕ್ಷ್ಮೀ ಖಾತೆಗೆ ಬಂದ ಕಾಮೆಂಟ್​​ಗಳು ಸುದೀಪ್ ಅಭಿಮಾನಿಗಳದ್ದೇ ಎಂಬ ಅನುಮಾನ ಮೂಡಿದೆ. ಏಕೆಂದರೆ ಕೆಲವು ಖಾತೆಗಳು ಸುದೀಪ್ ಅಭಿಮಾನಿಗಳ ಹೆಸರಲ್ಲಿ ಇದೆ. ಇನ್ನೂ ಕೆಲವರು ಸುದೀಪ್ ಹೆಸರು ಬಳಸಿದ್ದಾರೆ. ಇನ್ನೂ ಕೆಲವರು ಸುದೀಪ್ ಸ್ಟಿಕ್ಕರ್ ಬಳಸಿದ್ದಾರೆ. ಇವರ ಪೈಕಿ ಎಷ್ಟು ಮಂದಿ ನಿಜವಾದ ಸುದೀಪ್ ಅಭಿಮಾನಿಗಳು ಎಂಬುದು ತನಿಖೆ ಬಳಿಕವೇ ತಿಳಿಯಬೇಕಿದೆ.

ಇದನ್ನೂ ಓದಿ: ‘ಅವರು ಯಾವ ನೋವಲ್ಲಿದ್ದಾರೋ ಗೊತ್ತಿಲ್ಲ’; ವಿಜಯಲಕ್ಷ್ಮೀ ಬಗ್ಗೆ ಕಿಚ್ಚನ ಮಾತು

ಡಿ ಬಾಸ್ ಫ್ಯಾನ್ಸ್ ಅರೆಸ್ಟ್

ಈ ಮೊದಲು ರಮ್ಯಾ ಅವರು ಇದೇ ರೀತಿಯ ಕ್ರಮ ಕೈಗೊಂಡಿದ್ದರು. ತಮಗೆ ಬಂದ ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್​​ಗಳನ್ನು ನೀಡಿ ದೂರು ದಾಖಲಿಸಿದ್ದರು. ಕೆಲ ದರ್ಶನ್ ಅಭಿಮಾನಿಗಳನ್ನು ಕೇಸ್​​ನಲ್ಲಿ ಅರೆಸ್ಟ್ ಮಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಣ್ಣೆ ನಗರಿ ಹುಡುಗಿಗೆ ಮನಸೋತ ನ್ಯೂಜಿಲೆಂಡ್‌ ಯುವಕ! ಅಪ್ಪಟ ಹಿಂದೂ ಸಂಪ್ರದಾಯದಂತೆ ದಾವಣಗೆರೆಯಲ್ಲಿ ನಡೀತು ಅದ್ದೂರಿ ವಿವಾಹ – Kannada News | New Zealand man marries Davanagere girl: Embraces Hindu Rituals

ಕ್ಯಾಂಬೆಲ್, ನ್ಯೂಜಿಲೆಂಡ್‌ನ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಇಷ್ಟಪಟ್ಟಿದ್ದಾರೆ. ಮದುವೆಗೆ ಒಂದು ವಾರದಿಂದ ಪೂರ್ವತಯಾರಿ ಆಗಿದ್ದು, ಕುಟುಂಬಸ್ಥರು ಶೇರ್ವಾನಿ, ಸೀರೆ ಧರಿಸಿ ತಯಾರಾದರು. ಅರ್ಚನಾ, ಶಾಸ್ತ್ರ ಪೂಜೆಗಳು, ಅರುಂಧತಿ ನಕ್ಷತ್ರ ಮತ್ತು ಎಲ್ಲಾ ಸಂಪ್ರದಾಯಿಕ ವಿಧಿಗಳನ್ನು ಪಾಲಿಸಿ ಮದುವೆ ನಡೆದಿದೆ. ಪ್ರತಿ ಕ್ಷಣವೂ ಸಾಂಸ್ಕೃತಿಕ ವೈಭವ ಮತ್ತು ಪವಿತ್ರತೆಯನ್ನು ತೋರಿಸುತ್ತಿದೆ.

Source link

Hubli: ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು; ಅಷ್ಟಕ್ಕೂ ಆಗಿದ್ದೇನು? – Kannada News | Four Shops Gutted in Massive Blaze at Hubballis Kundagola Cross

ಹುಬ್ಬಳ್ಳಿ, ಡಿಸೆಂಬರ್​​ 24: ಕುಂದಗೋಳ ಕ್ರಾಸ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ಕು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಮಾಹಿತಿಗಳ ಪ್ರಕಾರ, ಬೆಂಕಿಯು ಮೊದಲು ಒಂದು ಡಾಬಾದಲ್ಲಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹಬ್ಬಿದ ಪರಿಣಾಮ ನಾಲ್ಕು ಶಾಪ್​​ಗಳು ಅಗ್ನಿಗೆ ಆಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್ – Kannada News | Instagram Love Ends in Street Attack: Bengaluru Man Assaults Woman, Arrested

ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್

ಬೆಂಗಳೂರು, ಡಿಸೆಂಬರ್ 24: ಇನ್ಸ್ಟಾಗ್ರಾಮ್ ಸಿಕ್ಕ ಯುವಕನೊಬ್ಬ ಪ್ರೀತಿ ವಿಚಾರವಾಗಿ ನಡು ರಸ್ತೆಯಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿ.ಜಿ ಬಳಿ ಕಾರಿನಲ್ಲಿ ಬಂದ ಯುವಕ, ಯುವತಿಗೆ ಹಲವು ಬಾರಿ ಥಳಿಸಿದ್ದು, ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಯುವಕ

ಆರೋಪಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಯುವತಿಯೊಂದಿಗೆ 2024ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು ಎನ್ನಲಾಗಿದೆ. ಪರಿಚಯದ ಬಳಿಕ ಇಬ್ಬರ ನಡುವೆ ಫೋನ್ ಕರೆ ಮತ್ತು ಮೆಸೇಜ್ ಮೂಲಕ ಸಂಪರ್ಕ ಮುಂದುವರಿದಿತ್ತು. ಆದರೆ ನವೀನ್ ಕುಮಾರ್ ಯುವತಿಯನ್ನು ಪ್ರೀತಿಸಬೇಕು ಎಂದು ಬಲವಂತ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹಾಗೂ ಹಣಕಾಸಿನ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ಸಿಸಿ ಟಿವಿ ದೃಶ್ಯ ಇಲ್ಲಿದೆ

ಇದನ್ನೂ ಓದಿ ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!

ಪರಾರಿಯಾಗಿದ್ದ ಆರೋಪಿಯ ಬಂಧನ

ಸೋಮವಾರ ಜ್ಞಾನಭಾರತಿಯಲ್ಲಿರುವ ಯುವತಿಯ ಪಿ.ಜಿ ಬಳಿ ಕಾರಿನಲ್ಲಿ ಬಂದ ನವೀನ್, ಹಾರನ್ ಹೊಡೆದು ಯುವತಿಯನ್ನು ಕರೆಯಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯ ಸ್ನೇಹಿತೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದ್ದು, ಯುವತಿ ಹಿಂದಕ್ಕೆ ಸರಿಯಲು ಯತ್ನಿಸಿದ್ದಾಳೆ. ಆದರೆ ನವೀನ್ ಆಕೆಯ ವ್ಯಾನಿಟಿ ಬ್ಯಾಗ್ ಕಸಿದು ಅದರೊಳಗೆ ಹುಡುಕಾಟ ನಡೆಸಿ, ಯುವತಿಯ ಹಿಂದೆ ಓಡಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಎರಡು ಬಾರಿಗೂ ಹೆಚ್ಚು ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಘಟನೆಯ ನಂತರ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದರೂ, ಜ್ಞಾನಭಾರತಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಪ್ರದೀಪ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:48 pm, Wed, 24 December 25

Source link

ಮತ್ತೆ ಒಂದಾಗುತ್ತಿದೆ ಸ್ಟಾರ್ ಹೀರೋ-ಡೈರೆಕ್ಟರ್ ಜೋಡಿ, 1000 ಕೋಟಿ ಸಿನಿಮಾ – Kannada News | Trivikram Srinivas to join hands with Allu Arjun for big budget movie

ನಾಯಕ-ನಾಯಕಿ ಜೋಡಿಯಂತೆ ಸ್ಟಾರ್ ಹೀರೋ-ಡೈರೆಕ್ಟರ್ ಜೋಡಿಗಳು ಸಹ ಎಲ್ಲ ಚಿತ್ರರಂಗದಲ್ಲಿಯೂ ಇವೆ. ಈ ಜೋಡಿ ಒಟ್ಟಿಗೆ ಕೆಲಸ ಆರಂಭಿಸಿದರೆಂದರೆ ಸಾಕು ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ, ನಿರೀಕ್ಷೆ ಗರಿಗೆದರುತ್ತದೆ. ಇಂಥಹಾ ಸೂಪರ್ ಹಿಟ್ ಆಕ್ಟರ್-ಡೈರೆಕ್ಟರ್ ಜೋಡಿಗಳಲ್ಲಿ ಅಲ್ಲು ಅರ್ಜುನ್ (Allu Arjun) ಮತ್ತು ತ್ರಿವಿಕ್ರಮ್ ಅವರದ್ದು ಸಹ ಒಂದು. ‘ಜುಲೈ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲಾ ವೈಕುಂಟಪುರಂಲೊ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಈ ಜೋಡಿ ಇದೀಗ ಮತ್ತೆ ಒಂದಾಗುತ್ತಿದೆ. ಅದೂ 1000 ಕೋಟಿ ಬಜೆಟ್ ಸಿನಿಮಾ ಮೂಲಕ.

ಅಸಲಿಗೆ ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಅವರು ತ್ರಿವಿಕ್ರಮ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಲ್ಲು ಅರ್ಜುನ್ ತಮಿಳಿನ ನಿರ್ದೇಶಕ ಅಟ್ಲಿಗೆ ಓಕೆ ಹೇಳಿದರು. ಇತ್ತ ತ್ರಿವಿಕ್ರಮ್ ಅವರು ನಟ ವೆಂಕಟೇಶ್ ಜೊತೆಗೆ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡರು. ಅದರ ಜೊತೆಗೆ ಜೂ ಎನ್​​ಟಿಆರ್ ಜೊತೆಗೆ ‘ಮುರುಗನ್’ ಸಿನಿಮಾ ಮಾಡಲಿದ್ದಾರೆ ಎಂದು ಸಹ ಸುದ್ದಿ ಆಯ್ತು. ಆದರೆ ಇದೀಗ ತ್ರಿವಿಕ್ರಮ್ ಮತ್ತೆ ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ:ಜಾಹೀರಾತು ಚಿತ್ರೀಕರಣಕ್ಕೆ ಬಂದ ಅಲ್ಲು ಅರ್ಜುನ್; ಎಂಟ್ರಿ ಹೇಗಿತ್ತು ನೋಡಿ..

ಅಲ್ಲು ಅರ್ಜುನ್ ಜೊತೆಗೆ ಪೌರಾಣಿಕ ಕತೆಯೊಂದನ್ನು ಸಿನಿಮಾ ಮಾಡಲಿದ್ದಾರಂತೆ ತ್ರಿವಿಕ್ರಮ್. ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ತ್ರಿವಿಕ್ರಮ್ ಅವರು ಜೂ ಎನ್​​ಟಿಆರ್ ಜೊತೆ ಮಾಡಲಿದ್ದ ಸಿನಿಮಾವನ್ನೇ ಈಗ ಅಲ್ಲು ಅರ್ಜುನ್ ಅವರಿಗಾಗಿ ಮಾಡುತ್ತಿದ್ದಾರಂತೆ. ಅಸಲಿಗೆ ಆ ಕತೆಯನ್ನು ಅಲ್ಲು ಅರ್ಜುನ್ ಅವರಿಗಾಗಿಯೇ ತ್ರಿವಿಕ್ರಮ್ ಬರೆದಿದ್ದರು, ಆದರೆ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ನಡುವೆ ಅಭಿಪ್ರಾಯ ಭೇದಗಳು ಉಂಟಾಗಿ, ಸಿನಿಮಾವನ್ನು ಜೂ ಎನ್​​ಟಿಆರ್ ಜೊತೆ ಮಾಡುವುದಕ್ಕೆ ತ್ರಿವಿಕ್ರಮ್ ಮುಂದಾಗಿದ್ದರು. ಆದರೆ ಈಗ ಮತ್ತೆ ಮನಸ್ಸು ಬದಲಿಸಿ ಅಲ್ಲು ಅರ್ಜುನ್ ಜೊತೆಗೇ ಸಿನಿಮಾ ಮಾಡಲು ತ್ರಿವಿಕ್ರಮ್ ಮುಂದಾಗಿದ್ದಾರೆ.

ಈ ಪೌರಾಣಿಕ ಸಿನಿಮಾ ದೇವರು ಮುರುಗನ್ ಅಥವಾ ಕಾರ್ತಿಕೇಯ ಕುರಿತಾಗಿದ್ದಾಗಿದೆ. ಮುರುಗನ್ ಅನ್ನು ‘ಯುದ್ಧಗಳ ದೇವರು’ (ಲಾರ್ಡ್ ಆಫ್ ವಾರ್) ಎಂದೂ ಸಹ ಕರೆಯಲಾಗುತ್ತದೆ. ಮುರುಗನ್ ಅವರ ಈ ಆಯಾಮವನ್ನು ಸಿನಿಮಾನಲ್ಲಿ ಬಲು ಅದ್ಧೂರಿಯಾಗಿ ತೋರಿಸುವ ಯೋಜನೆ ತ್ರಿವಿಕ್ರಮ್ ಅವರದ್ದು. ರಾಜಮೌಳಿ, ಸುಕುಮಾರ್ ಅವರ ಸಾಲಿಗೆ ಸೇರಬಹುದಾದ ಪ್ರತಿಭೆಯುಳ್ಳ ನಿರ್ದೇಶಕ ತ್ರಿವಿಕ್ರಮ್. ಕಮರ್ಶಿಯಲ್ ಸಿನಿಮಾಗಳಲ್ಲಿ ಫಿಲಾಸಫಿ ಸೇರಿಸುವುದು ಅವರ ಶೈಲಿ. ಈ ಸಿನಿಮಾ ಮೂಲಕ ತ್ರಿವಿಕ್ರಮ್​​ಗೆ ಸಹ ಪ್ಯಾನ್ ಇಂಡಿಯಾ ಪ್ರೀತಿ, ಗೌರವ ಸಿಗುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆ ಶಿವಕುಮಾರ್: ಏನಂದ್ರು ನೋಡಿ – Kannada News | DK Shivakumar Hits Back at KN Rajanna from Delhi, Issues Strong Rebuttal

ನವದೆಹಲಿ, ಡಿಸೆಂಬರ್ 24: ದೆಹಲಿಯಲ್ಲಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಆಪ್ತ ಕೆಎನ್ ರಾಜಣ್ಣಗೆ ಖಾರವಾಗಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿಗೆ ರಾಜಣ್ಣ ಸರಣಿ ಪತ್ರ ಬರೆದಿರುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಅಧ್ಯಕ್ಷರು ಸರಿಯಾಗಿ ಆಯ್ಕೆ ಮಾಡಿದ್ದರೆ ವಿಧಾನಸಭೆ ಚುನಾವಣೆಯಲ್ಲಿ ಇನ್ನೂ 12-13 ಸ್ಥಾನಗಳನ್ನು ಹೆಚ್ಚು ಗೆಲ್ಲಬಹುದಿತ್ತು ಎಂದು ಹೈಕಮಾಂಡ್​ಗೆ ಬರೆದ ಪತ್ರದಲ್ಲಿ ರಾಜಣ್ಣ ಉಲ್ಲೇಖಿಸಿದ್ದಾರಲ್ಲಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನನಗೆ ಇನ್ನೂ ಸ್ವಲ್ಪ ಅನುಭವ ಕಡಿಮೆ ಇದೆ. ತರಬೇತಿ ಪಡೆದುಕೊಂಡು ಬರುತ್ತೇನೆ ಎಂದರು. ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ಮಾಜಿ ಸಿಎಂ ಎಸ್ಎಂ ಕೃಷ್ಣ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಬಹಳ ಸಂತೋಷ. ಕೃಷ್ಣ ಅವರು ಈಗ ಇಲ್ಲವಲ್ಲ, ದೇವರಲ್ಲಿ ಕೇಳಿಕೊಂಡು ಬರಬೇಕಷ್ಟೇ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: ಬೆಳ್ಳಿ ಬೆಲೆ ಮತ್ತೆ ಹೊಸ ದಾಖಲೆ; ಚಿನ್ನವೂ ದುಬಾರಿ – Kannada News | Gold Price Today on 24th December 2025, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಡಿಸೆಂಬರ್ 24: ಬೆಳ್ಳಿ ಬೆಲೆಯ ದಾಖಲೆ ಓಟ ಮುಂದುವರಿದಿದೆ. ಇಂದು ಬುಧವಾರ ಚಿನ್ನ ಮತ್ತು ಬೆಳ್ಳಿ, ಈ ಎರಡೂ ಲೋಹಗಳ ಬೆಲೆ ಹೆಚ್ಚಾಗಿದೆ. ಚಿನ್ನದ ಬೆಲೆ (Gold rate) ಗ್ರಾಮ್​ಗೆ 30 ರೂ ಸಾಧಾರಣ ಏರಿಕೆ ಕಂಡರೆ, ಬೆಳ್ಳಿ ಬೆಲೆ 10 ರೂ ಜಂಪ್ ಪಡೆದಿದೆ. ಚಿನ್ನಕ್ಕಿಂತಲೂ ಬೆಳ್ಳಿಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಬೆಳ್ಳಿ ಬೆಲೆ ಮತ್ತೆ ಹೊಸ ದಾಖಲೆ ಪಡೆದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,400 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 24ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,893 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,735 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,420 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 233 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,893 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,735 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 233 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,735 ರೂ
  • ಚೆನ್ನೈ: 12,800 ರೂ
  • ಮುಂಬೈ: 12,735 ರೂ
  • ದೆಹಲಿ: 12,750 ರೂ
  • ಕೋಲ್ಕತಾ: 12,735 ರೂ
  • ಕೇರಳ: 12,735 ರೂ
  • ಅಹ್ಮದಾಬಾದ್: 12,740 ರೂ
  • ಜೈಪುರ್: 12,750 ರೂ
  • ಲಕ್ನೋ: 12,750 ರೂ
  • ಭುವನೇಶ್ವರ್: 12,735 ರೂ

ಇದನ್ನೂ ಓದಿ: ಅಂತಿಮ ಡೆಡ್​ಲೈನ್; ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಜನವರಿ 1ರಿಂದ ಡೆಡ್; ಹಣಕಾಸು ತೊಂದರೆಗಳೇನಾಗಬಹುದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 573 ರಿಂಗಿಟ್ (12,700 ರುಪಾಯಿ)
  • ದುಬೈ: 496.25 ಡಿರಾಮ್ (12,129 ರುಪಾಯಿ)
  • ಅಮೆರಿಕ: 138.50 ಡಾಲರ್ (12,433 ರುಪಾಯಿ)
  • ಸಿಂಗಾಪುರ: 179.90 ಸಿಂಗಾಪುರ್ ಡಾಲರ್ (12,590 ರುಪಾಯಿ)
  • ಕತಾರ್: 494 ಕತಾರಿ ರಿಯಾಲ್ (12,166 ರೂ)
  • ಸೌದಿ ಅರೇಬಿಯಾ: 504 ಸೌದಿ ರಿಯಾಲ್ (12,062 ರುಪಾಯಿ)
  • ಓಮನ್: 52.85 ಒಮಾನಿ ರಿಯಾಲ್ (12,323 ರುಪಾಯಿ)
  • ಕುವೇತ್: 40.64 ಕುವೇತಿ ದಿನಾರ್ (11,880 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 233 ರೂ
  • ಚೆನ್ನೈ: 244 ರೂ
  • ಮುಂಬೈ: 233 ರೂ
  • ದೆಹಲಿ: 233 ರೂ
  • ಕೋಲ್ಕತಾ: 233 ರೂ
  • ಕೇರಳ: 244 ರೂ
  • ಅಹ್ಮದಾಬಾದ್: 233 ರೂ
  • ಜೈಪುರ್: 233 ರೂ
  • ಲಕ್ನೋ: 233 ರೂ
  • ಭುವನೇಶ್ವರ್: 244 ರೂ
  • ಪುಣೆ: 233

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link