All posts by nagaraj11081993

ದಿನ ಭವಿಷ್ಯ: ಇಂದು ಈ ರಾಶಿಯವರು ಅಧಿಕಾರಕ್ಕೆ ತಂತ್ರಗಳ ಮಾಡುವರು

ದಿನ ಭವಿಷ್ಯ: ಇಂದು ಈ ರಾಶಿಯವರು ಅಧಿಕಾರಕ್ಕೆ ತಂತ್ರಗಳ ಮಾಡುವರು

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಶೂಲಿ, ಕರಣ : ಬವ, ಸೂರ್ಯೋದಯ – 06 – 22 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:32 – 17:04, ಯಮಗಂಡ ಕಾಲ 09:25 – 10:57, ಗುಳಿಕ ಕಾಲ 12:29 – 14:00

ಮೇಷ ರಾಶಿ :

ನಿಮ್ಮ ನಡವಳಿಕೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು. ಕಛೇರಿಯ ಕೆಲಸಗಳನ್ನು ಯಾವುದೇ ನಿರ್ಬಂಧವಿಲ್ಲದೇ ಮಾಡುವಿರಿ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ. ಹಳೆಯ ಪ್ರೇಮಿಗಳ ಅನಿರೀಕ್ಷಿತ ಭೇಟಿ, ಮನದೊಳಗೆ ಆನಂದ. ಸಹಾಯ ಮಾಡಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ದುರ್ವ್ಯಸನವು ನಿಮ್ಮನ್ನು ಅಂಟಿಕೊಳ್ಳಬಹುದು.

ವೃಷಭ ರಾಶಿ :

ವೈವಾಹಿಕ ಸುಖವು ಕ್ಷೀಣಿಸಬಹುದು. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಕಷ್ಟಕ್ಕೆ ನೆರವಾಗುವರು. ಹೊಸ ಪರಿಚಯದಲ್ಲಿ ಆತ್ಮೀಯತೆ ಬೆಳೆಯುವುದು. ಅತಿಯಾದ ಆಸೆಯಿಂದಾಗಿ ದುಃಖಿಸಬೇಕಾದೀತು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡಲಿದೆ.

ಮಿಥುನ ರಾಶಿ :

ಉದ್ಯಮವನ್ನು ಚುರುಕುಗೊಳಿಸುವ ಅಗತ್ಯವಿದೆ. ನಿಮ್ಮ ವ್ಯಕ್ತಿತ್ವ ಮತ್ತು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕಿವಿಯಲ್ಲಿ ದೋಷ ಕಾಣಿಸುವುದು. ಆದಾಯದ ಮೂಲಗಳೂ ಬಲಗೊಳ್ಳುತ್ತವೆ. ಇಂದು ನೀವು ಅನುಭವಸ್ಥರ ಮಾರ್ಗದರ್ಶನವನ್ನು ತೆಗೆದುಕೊಳ್ಳಬೇಕು. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಸಂಗಾತಿಗಳಿಬ್ಬರೂ ದೂರಾಗುವ ಯೋಚನೆ ಮಾಡಬಹುದು. ನಿಮ್ಮ ಮಾತು ನಿಷ್ಪಕ್ಷಪಾತದಿಂದ ಇರಲಿ.

ಕರ್ಕಾಟಕ ರಾಶಿ :

ಸಾಲ ಕೊಟ್ಟವರ ಮಾತಿನಿಂದ ಇಂದು ನೆಮ್ಮದಿ ಹಾಳಾಗುವುದು. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಸರಿಯಾದ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನಿಮ್ಮ ತಪ್ಪಿಗೆ ಕ್ಷಮೆ ಕೇಳುವವರೆಗೂ ಪರಿಚಿತರು ನಿಮ್ಮನ್ನು ಬಿಡಲಾರರು. ನೀವು ಹೊಸ ವಾಹನವನ್ನು ಸ್ನೇಹಿತರ ಒತ್ತಾಯಕ್ಕೆ ಖರೀದಿ ಮಾಡುವಿರಿ. ಒಂದೇ ತರದ ಜೀವನವು ನಿಮಗೆ ಬೇಸರವಾಗುವುದು.

ಸಿಂಹ ರಾಶಿ :

ಇಂದು ಮಾಡಿದ ಕಠಿಣ ಕೆಲಸವು ಮುಂದಿನ ದಿನಗಳಲ್ಲಿ ಖಚಿತವಾದ ಫಲಿತಾಂಶವನ್ನು ನೀಡಲಿದೆ. ಇಂದು ಕೆಲವು ಕೆಲಸಗಳಲ್ಲಿ ಅನಿರೀಕ್ಷಿತ ಲಾಭದ ಪರಿಸ್ಥಿತಿ ಇದೆ. ನೀವು ಇಂದು ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಬೇಕು ಎಂದುಕೊಂಡವರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು, ಅವರ ಸಾಧನೆಗಾಗಿ ಸಮ್ಮಾನಿಸಬಹುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳ ಸಂಖ್ಯೆ ಹೆಚ್ಚುಮಾಡಿಕೊಳ್ಳುವಿರಿ.‌ ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ಯಾರಾದರೂ ನೆನಪಿಸುವರು.

ಕನ್ಯಾ ರಾಶಿ :

ನಿಮ್ಮ ಪ್ರಮುಖ ಕೆಲಸಕ್ಕೆ ಸಂಬಂಧಿಸಿದ ರೂಪರೇಷೆಯನ್ನು ಮಾಡಿ. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ನಿಮ್ಮಲ್ಲಿ ಇರುವುದನ್ನು ಹಂಚಿ ಸ್ವೀಕರಿಸಿ. ಸುಮ್ಮನೇ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಉದ್ಯಮದಲ್ಲಿ ಕಡಿಮೆ ಲಾಭವು ಸಮಾಧಾನ ತರದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ಒದ್ದಾಡುವಿರಿ. ತಂದೆಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಗಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಸ್ತ್ರೀಯರನ್ನು ಅಪರಿಚಿತರು ಕಾಡಬಹುದು.

ತುಲಾ ರಾಶಿ :

ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಭಾವನೆಗಳಲ್ಲಿ ಬರುವ ಮೂಲಕ ನೀವು ಹಾನಿ ಮಾಡಬಹುದು. ಇಂದು ನೀವು ಆಕರ್ಷಕ ವ್ಯಕ್ತಿಗಳಾಗಿ ಕಾಣುರುವಿರಿ. ಕೃಷಿಯ ಕೆಲಸದಲ್ಲಿ ನಿಮ್ಮ ಉತ್ಸಾಹ ಕಡಿಮೆಯಾಗಲಿದೆ. ನಿಮ್ಮ ಕಾರ್ಯ ಸಾಮರ್ಥ್ಯದ ಆಧಾರದ ಮೇಲೆ, ನೀವು ಯಾವುದೇ ಪ್ರಮುಖ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆಯಾಗಲಿದೆ.

ವೃಶ್ಚಿಕ ರಾಶಿ :

ನಿಮ್ಮ ಆದಾಯದ ಮೂಲಗಳಿಂದ ಆದಾಯವು ಕಡಿಮೆಯಾಗಬಹುದು. ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತೀರಿ. ಹೊಸದನ್ನು ಮಾಡಲು ಯೋಚಿಸುವಿರಿ. ನಿಮ್ಮೊಳಗಿನ ಹೊಸ ಶಕ್ತಿಯ ಪರಿಣಾಮವನ್ನು ನೀವು ಅನುಭವಿಸುವಿರಿ. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಮನೆಯವರ ಜೊತೆ ವಾಗ್ವಾದಕ್ಕೆ ನಿಲ್ಲುವಿರಿ. ಸಂತಾನ ಸಂತೋಷವನ್ನು ನೀವು ಇಂದು ಅನುಭವಿಸುವಿರಿ.

ಧನು ರಾಶಿ :

ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುವುದರಿಂದ, ಶೀಘ್ರದಲ್ಲೇ ವಿಷಯಗಳು ಸಾಮಾನ್ಯವಾಗುತ್ತವೆ. ಕೆಲವು ದಿನಗಳಿಂದ ನಡೆಯುತ್ತಿರುವ ಯಾವುದೇ ಸಮಸ್ಯೆಗೆ ಇಂದು ಸ್ವಲ್ಪ ಪರಿಹಾರ ದೊರೆಯಲಿದೆ. ಮಕ್ಕಳ ಗಮನವೂ ಅವರ ಅಧ್ಯಯನದ ಕಡೆಗೆ ಇರುತ್ತದೆ. ನಿಮ್ಮ ಮಾತುಗಳು ಇತರರಿಗೆ ಇಷ್ಟವಾಗುವುದು. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಇರಲಿದೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು. ನೀವು ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು.

ಮಕರ ರಾಶಿ :

ಕುಶಲ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಿರುವುದು. ಯಾವುದೇ ಸ್ಥಗಿತಗೊಂಡ ಸರ್ಕಾರಿ ಕೆಲಸಗಳು ಇಂದು ಪೂರ್ಣಗೊಳ್ಳಬಹುದು. ಆದ್ದರಿಂದ ನಿಮ್ಮ ಸಂಪೂರ್ಣ ಗಮನವನ್ನು ಅದರ ಮೇಲೆ ಇರಿಸಿ. ಯಾವುದೇ ವ್ಯಕ್ತಿಯೊಂದಿಗೆ ಚರ್ಚಿಸುವಾಗ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಬೇಡಿ. ಅಪರಿಚಿತರ ಮಾತು ನಿಮಗೆ ಸಮಾಧಾನವನ್ನು ಕೊಡಬಹುದು. ಯಾರ ಮಾತನ್ನೂ ನೀವು ಕೇಳಲಾರಿರಿ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬದಲಾಗುವುದು. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು.

ಕುಂಭ ರಾಶಿ :

ಇಂದು ಸಾಮಾಜಿಕ ಚಟುವಟಿಕೆಗಳಿಗೆ ನಿಮ್ಮದಾದ ಕೊಡುಗೆ ಇರಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳ ವರ್ತನೆಯು ನಿಮ್ಮನ್ನು ಅಸಮಾಧಾನಗೊಳಿಸಬಹುದು. ನಿಮ್ಮ ತಂದೆಯ ಜೊತೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಜವಾಬ್ದಾರಿಗಳಿಂದ ನೀವು ಮುಕ್ತರಾಗಿ ಸಂತೋಷಿಸುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ಕೊಡುವರು.

ಮೀನ ರಾಶಿ :

ನಿಮಗೆ ಯಾರನ್ನು ದ್ವೇಷಿಸಲೂ ಬಲವಾದ ಕಾರಣ ಇರದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಿಸುವ ಬಯಕೆ ಇರಲಿದೆ. ಕೆಲವು ಪ್ರಮುಖ ವ್ಯಕ್ತಿಗಳ ಯಶಸ್ಸು ನಿಮಗೆ ಹೆಚ್ಚು ಸ್ಫೂರ್ತಿ ನೀಡುತ್ತದೆ. ನಿರಂತರ ಓಡಾಟದಲ್ಲಿರುಬ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರವಾಗಲಿದೆ. ನಿಮಗೆ ಯಾವುದರೂ ಅನವಶ್ಯಕ ಖರ್ಚು ಎಂದು ಕಂಡರೆ ಹೇಗಾದರೂ ಮಾಡಿ ನಿಲ್ಲಿಸುವಿರಿ. ಬಂಧನದಂತೆ ಅನ್ನಿಸಬಹುದು. ಅಪರಿಚಿತರ ಜೊತೆ ಸಲುಗೆ ಬೇಡ. ಸಂಗಾತಿಯ ಆಲೋಚನೆಗಳು ನಿಮಗೆ ಇಷ್ಟವಾಗಬಹುದು. ಇನ್ನೊಬ್ಬರಿಗೂ ಸಂತೋಷವಾಗುವಂತೆ ಇರುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)

Source link

ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​​ನ ಆಪರೇಷನ್ ಮುಸ್ಲಿಂ ಕ್ಯಾಂಡಿಡೇಟ್ ಕಾರ್ಯಾಚರಣೆ ಫೇಲ್

ದಾವಣಗೆರೆ, ಮಾರ್ಚ್ 30): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ (Davanagere South By Election) ಪ್ರಚಾರ ಜೋರಾಗಿದೆ. ಆದರೆ ಕಾಂಗ್ರೆಸ್​​ಗೆ ಅಲ್ಪಸಂಖ್ಯಾತ ಸಮುದಾಯದ ಮತ ವಿಭಜನೆಯಾಗುವ ಆತಂಕ ಎದುರಾಗಿದೆ. ಹೀಗಾಗಿ ಸಾಧಿಕ್ ಪೈಲ್ವಾನ್ ಬಳಿಕ ಕಣದಲ್ಲಿರುವ ಮತ್ತೋರ್ವ ಮುಸ್ಲಿಂ ಪಕ್ಷೇತರ ಅಭ್ಯರ್ಥಿ ಖಾದರ್ ಬಾಷಾ ಮನವೊಲಿಕೆಗೆ ಕಾಂಗ್ರೆಸ್ ಮುಂದಾಗಿದೆ. ಮುಸ್ಲಿಂ ಸಮುದಾಯದ ಹಿರಿಯ ನಾಯಕ ಸಿಎಂ ಇಬ್ರಾಹಿಂ ಪ್ರಚಾರಕ್ಕಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಕಾಂಗ್ರೆಸ್ ನಾಯಕರು ಖಾದರ್ ಬಾಷಾ ಅವರನ್ನು ಸೈಲೆಂಟ್ ಮಾಡಿಸಲು ಮುಂದಾಗಿದ್ದಾರೆ. ಆದ್ರೆ, ಇದಕ್ಕೆ ಖಾದರ್ ಬಾಷಾ ಕ್ಯಾರೇ ಎಂದಿಲ್ಲ.

ಮತ ವಿಭಜನೆ ಆತಂಕದಲ್ಲಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಭದ್ರಾವತಿ ಶಾಸಕ ಸಂಗಮೇಶ್ (MLA Sangamesh) ಅವರು ಖಾದರ್ ಆದಿಲ್ ಬಾಷಾ ಅವರು ದಾವಣಗೆರೆ ದೇವರಾಜ ಅರಸು ಬಡಾವಣೆಯ ಆದಿಲ್ ಅವರ ಮನೆಗೆ ಭೇಟಿ ನೀಡಿದ್ದು, ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ ಮನವೊಲಿಕೆಗೆ ಯತ್ನಿಸಿದ್ದಾರೆ.

ಇದನ್ನೂ ನೋಡಿ: ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ: ದಾವಣಗೆರೆಯಲ್ಲಿ ಮ್ಯಾಜಿಕ್ ಆಗುತ್ತಾ?

ಭೇಟಿ ಬಳಿಕ ಶಾಸಕ ಸಂಗಮೇಶ್ ಹೇಳಿದ್ದೇನು?

ಖಾದರ್ ಬಾಷಾ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭದ್ರಾವತಿ ಶಾಸಕ ಸಂಗಮೇಶ್ . ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ನನಗೆ ಆತ್ಮೀಯ. ಇದೇ ಕಾರಣಕ್ಕೆ ಖಾದರ್ ಆದಿಲ್ ಬಾಷಾ ಮನೆಗೆ ಬಂದಿರುವೆ. ಪಕ್ಷದ ವರಿಷ್ಠರು, ಸಚಿವ ಮಲ್ಲಿಕಾರ್ಜುನ ಸೂಚನೆಯಂತೆ ಬಂದಿದ್ದೇನೆ. ಖಾದರ್ ಬಾಷಾ ಪರ ಪ್ರಚಾರ ನಡೆಸಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ನನ್ನ ಎದುರು ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಅಂತಹ ವ್ಯಕ್ತಿ ಬಂದು ಇಲ್ಲಿ ಖಾದರ್ ಬಾಷಾರನ್ನು ಹೇಗೆ ಗೆಲ್ಲಿಸಲು ಸಾಧ್ಯ? ಕೇವಲ ಭಾಷಣ ಮಾಡಿದ್ರೆ ಮತ ಬರಲ್ಲ. ಮತ ವಿಭಜನೆ ಆಗಬಾರದು. ಕೋಮುವಾದಿ ಶಕ್ತಿಗಳಿಗೆ ಲಾಭ ಆಗಬಾರದು ಎಂಬುದು ನಮ್ಮ ಉದ್ದೇಶ. ಇನ್ನೆರಡು ದಿನದಲ್ಲಿ ನಿರ್ಧಾರ ತಿಳಿಸುವುದಾಗಿ ಖಾದರ್ ಬಾಷಾ ಹೇಳಿದ್ದಾರೆ ಎಂದರು.

ನಾನಂತೂ ಚುನಾವಣಾ ಕಣದಲ್ಲೇ ಇರುವೆ

ಇನ್ನು ತಮ್ಮ ನಿವಾಸಕ್ಕೆ ಶಾಸಕ ಸಂಗಮೇಶ್ ಭೇಟಿ ನೀಡಿರುವ ಬಗ್ಗೆ ಮಾತನಾಡಿದ ಖಾದರ್ ಆದಿಲ್ ಬಾಷಾ,
ನಾನು ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ. ನಾನು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನನ್ನ ಪರ ಕೇಂದ್ರದ ಮಾಜಿ ಸಚಿವ ಇಬ್ರಾಹಿಂ ಪ್ರಚಾರ ಮಾಡುತ್ತಿದ್ದಾರೆ. ಶಾಸಕ ಸಂಗಮೇಶ್ ನನ್ನ ಆತ್ಮೀಯರು, ಹೀಗಾಗಿ ಭೇಟಿಯಾಗಿದ್ದರು. ನಾನಂತೂ ಚುನಾವಣಾ ಕಣದಲ್ಲೇ ಇರುವೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಕಾಂಗ್ರೆಸ್​​​ಗೆ ಮತ ವಿಭಜನೆ ಆತಂಕ

ಕಳೆದ ನಾಲ್ಕೈದು ದಿನಗಳಿಂದ ಸಿಎಂ ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ದಲಿತ ನಾಯಕರ ಜೊತೆಗೂಡಿ ಆದಿಲ್ ಪ್ರಚಾರ ನಡೆಸಿದ್ದಾರೆ. ಇದೇ ಹೊತ್ತಲ್ಲಿ ಸಾದಿಕ್ ಪೈಲ್ವಾನ್ ಅವರಿಗೆ ಬೆಂಬಲ ನೀಡಿದ್ದ ಬಹುತೇಕ ಅಲ್ಪಸಂಖ್ಯಾತ ಯುವಕರು, ನಾಯಕರು ಆದಿಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದೇ ಕಾರಣಕ್ಕೆ ಸಾದಿಕ್ ಪೈಲ್ವಾನ್ ನಂತರ ಕಾಂಗ್ರೆಸ್‍ಗೆ ಆದಿಲ್ ಬಾಷಾ ತಲೆನೋವಾಗಿದ್ದಾರೆ. ಮತ ವಿಭಜನೆ ಆತಂಕದಿಂದ ಎಚ್ಚೆತ್ತ ಕಾಂಗ್ರೆಸ್ ಮನವೊಲಿಕೆಗೆ ಕಸರತ್ತು ನಡೆಸುತ್ತಿದೆ. ಆದ್ರೆ, ಇದಕ್ಕೆ ಖಾದರ್ ಆದಿಲ್ ಬಾಷಾ ಡೋಂಡ್ ಕೇರ್ ಎಂದಿದ್ದು, ಕೊನೆ ತನಕ ಕಣದಲ್ಲಿ ಇರುವೆ ಎಂದಿದ್ದಾರೆ.

ಸದ್ಯ ಮುಸ್ಲಿಂ ಪಕ್ಷೇತರ ಅಭ್ಯರ್ಥಿ ಖಾದ್ ಬಾಷಾ ಅವರು ಕಣದಲ್ಲಿರುವುದಾಗಿ ಕಡ್ಡಿ ಮುರಿದಂತೆ ಹೇಳಿದ್ದು, ಸದ್ಯಕ್ಕೆ ಕಾಂಗ್ರೆಸ್​​ನ ಆಪರೇಷನ್ ಮುಸ್ಲಿಂ ಕ್ಯಾಂಡಿಡೇಟ್ ಕಾರ್ಯಚರಣೆ ಫೇಲ್ ಆಗಿದೆ. ಆದ್ರೆ, ಮುಂದೆ ಏನಾಗುತ್ತೋ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹುಟ್ಟುಹಬ್ಬದಂದೇ ಹೆಲ್ತ್ ಇನ್ಸ್‌ಪೆಕ್ಟರ್​​ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ತುಮಕೂರು, ಮಾರ್ಚ್​ 30: ಖಾಸಗಿ ಜಾಗವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ (Food Inspector)​​​ ಶವ ಪತ್ತೆ (Death) ಆಗಿರುವಂತಹ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ತಾವರೆಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಮೇಶ್​​ ಮೃತ ಹೆಲ್ತ್ ಇನ್ಸ್‌ಪೆಕ್ಟರ್. ಹುಟ್ಟುಹಬ್ಬದ ದಿನವೇ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಆಗಿದ್ದು, ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸಾವಿನ ಬಗ್ಗೆ ದೂರು ನೀಡಿದ ಬಳಿಕ ಪೊಲೀಸರು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.

ನಡೆದಿದ್ದೇನು?

ವರ್ಷದ ಹಿಂದೆ ಸ್ಕ್ಯಾವೆಂಜರ್ ಆಕ್ಟ್ ಅಡಿ ಉಮೇಶ್​ ಅಮಾನತಾಗಿದ್ದರು. ನಾಲ್ಕು ತಿಂಗಳ ಬಳಿಕ ಮತ್ತೆ ಹೆಲ್ತ್ ಆಫೀಸರ್​​ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಪ್ರಸ್ತುತ ಹುಲಿಕುಂಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇದೀಗ ನೇಣುಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಗಿದೆ. ಅದರಲ್ಲೂ ಹುಟ್ಟುಹಬ್ಬದ ದಿನದಂದೇ ಹೀಗಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ತಾಯಿ ಸಾವು: ಮಹಿಳಾ ಉದ್ಯೋಗಿ ಸಾವಿನ ಸುತ್ತ ಅನುಮಾನದ ಹುತ್ತ

ಸದ್ಯ ಸ್ಥಳಕ್ಕೆ ತಾವರೇಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತರ ಕುಟುಂಬಸ್ಥರ ದೂರಿಗಾಗಿ ಕಾಯುತ್ತಿದ್ದಾರೆ. ಇನ್ನು ತಂದೆಯ ಸಾವಿನ ಸಂಗತಿ ತಿಳಿದು ಉತ್ತರ ಭಾರತದಿಂದ ಉಮೇಶ್ ಅವರ ಮಗಳು ಬರುತ್ತಿದ್ದಾರೆ. ಮಗಳು ಬಂದ ನಂತರ ಸಾವಿನ ಬಗ್ಗೆ ದೂರು ನೀಡಿದ ಬಳಿಕ ಪೊಲೀಸರು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.

ನಿಯಂತ್ರಣ ತಪ್ಪಿ ಬೈಕ್​ನಿಂದ ಬಿದ್ದು ಇಬ್ಬರು ಸವಾರರ ಸಾವು

ನಿಯಂತ್ರಣ ತಪ್ಪಿ ಬೈಕ್​ನಿಂದ ಬಿದ್ದು ಇಬ್ಬರು ಸವಾರರು ಸಾವನ್ನಪ್ಪಿರುವಂತಹ ಘಟನೆ ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದ ಬಳಿ ನಡೆದಿದೆ. ರಂಗನಾಥಪುರದ ಪ್ರಸಾದ್(20) ಮತ್ತು ವಸಂತ್(22) ಮೃತರು.

ಇದನ್ನೂ ಓದಿ: ಪ್ರತ್ಯೇಕ ಘಟನೆ: ರಜೆ ತಂದ ಆಪತ್ತು; ಈಜಲು ತೆರಳಿದ್ದ ಐವರು ಬಾಲಕರು ನೀರುಪಾಲು

ರಂಗನಾಥಪುರದಿಂದ ತುಮಕೂರು ಕಡೆಗೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ತೀವ್ರ ರಕ್ತಸ್ರಾವವಾಗಿ ಪ್ರಸಾದ್, ವಸಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

CSK vs RR: 15 ವರ್ಷದ ವೈಭವ್ ಸೂರ್ಯವಂಶಿ ಸುನಾಮಿಗೆ ಕೊಚ್ಚಿ ಹೋದ ಸಿಎಸ್​ಕೆ

ಗುವಾಹಟಿಯಲ್ಲಿ ನಡೆದ ಐಪಿಎಲ್ 2026 ರ 3ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಈ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಈ ಮೂಲಕ ಸಿಎಸ್​ಕೆ ವಿರುದ್ಧ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಕಳೆದ ಆವೃತ್ತಿಯಲ್ಲಿ ಸಿಎಸ್​ಕೆ ವಿರುದ್ಧ ಆಡಿದ್ದ ಎರಡೂ ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ್, ಈ ಆವೃತ್ತಿಯಲ್ಲೂ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ ಕೇವಲ 127 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್, 15 ವರ್ಷದ ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಅರ್ಧಶತಕದಿಂದಾಗಿ ಇನ್ನು 47 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.

Source link

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2026: ಈ ಬಾರಿ ಯಾರಿಗೆಲ್ಲ ಸಿಕ್ಕಿದೆ ಪ್ರಶಸ್ತಿ?

7ನೇ ವರ್ಷದ ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ’ (Chandanavana Film Critics Academy Awards) ಪ್ರದಾನ ಮಾಡಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ ಸಮಾರಂಭ ನಡೆಯಿತು. 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ (Rishab Shetty) ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ‘ಗತ ವೈಭವ’ ಸಿನಿಮಾದ ನಟನೆಗಾಗಿ ಆಶಿಕಾ ರಂಗನಾಥ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

2025ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪಾಲಾಯಿತು. ಈ ಸಿನಿಮಾ ಒಟ್ಟು 9 ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು. ಮೂರು ಟ್ರೋಫಿಗಳು ರಿಷಬ್ ಅವರ ಕೈಸೇರಿತು. ಸುಬ್ಬಯ್ಯ ನಾಯ್ಡು ಅವರ ಮರಿಮೊಮ್ಮಗ ಸುಕ್ರತ್ ಸೃಜನ್ ಲೋಕೇಶ್ ಅವರಿಗೆ ವಿಶೇಷ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ನಿರ್ದೇಶಕ ರಾಜೇಂದ್ರ್ ಸಿಂಗ್ ಬಾಬು ಅವರಿಗೆ ಜೀವಮಾನ ಸಾಧನೆಯ ಗೌರವವನ್ನು ನೀಡಲಾಯಿತು.

2025ನೇ ಸಾಲಿನ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪಡೆದವರು:

1. ಅತ್ಯುತ್ತಮ ಚೊಚ್ಚಲು ನಿರ್ಮಾಣ: ನಿವೇದಿತಾ ಶಿವರಾಜ್ ಕುಮಾರ್ (ಫೈರ್ ಪ್ಲೈ)
2. ಅತ್ಯುತ್ತಮ ಚೊಚ್ಚಲ ಬರಹಗಾರ: ಸುಮಂತ್ ಭಟ್ (ಮಿಥ್ಯ)
3. ಅತ್ಯುತ್ತಮ ಚೊಚ್ಚಲ ಸಿನಿಮಾ ನಿರ್ದೇಶನ : ಭೀಮರಾವ್ ಪಿ (ಹೆಬ್ಬುಲಿ ಕಟ್)
4. ಅತ್ಯುತ್ತಮ ಚೊಚ್ಚಲ ನಟಿ: ಪ್ರಿಯಾಂಕಾ ಆಚಾರ್ (ಏಳುಮಲೆ)
5. ಅತ್ಯುತ್ತಮ ಚೊಚ್ಚಲ ನಟ: ಕಿರಿಟಿ (ಜ್ಯೂನಿಯರ್) ಹಾಗೂ ದುಷ್ಯಂತ್ (ಗತ ವೈಭವ)
6. ಅತ್ಯುತ್ತಮ ಬಾಲ ನಟ: ಅತೀಶ್ ಶೆಟ್ಟಿ (ಮಿಥ್ಯ)
7. ಅತ್ಯುತ್ತಮ ವಿಎಫೆಕ್ಸ್: ಕೆ.ವಿ, ಸಂಜಿತ್ (ಕಾಂತಾರ ಚಾಪ್ಟರ್ 1)
8. ಅತ್ಯುತ್ತಮ ಕಲಾ ನಿರ್ದೇಶನ : ಬೆಂಗಲನ್ ಮತ್ತು ಧರಣಿ ಗಂಗಾಪುತ್ರ (ಕಾಂತಾರ ಚಾಪ್ಟರ್ 1)
9. ಅತ್ಯುತ್ತಮ ಸಾಹಸ ನಿರ್ದೇಶನ: ಅರ್ಜುನ್ ರಾಜ್ ( ಕಾಂತಾರ ಚಾಪ್ಟರ್ 1)
10. ಅತ್ಯುತ್ತಮ ಸಂಕಲನ: ಕೆ.ಎಂ ಪ್ರಕಾಶ್ (ಏಳುಮಲೆ)

11. ಅತ್ಯುತ್ತಮ ಸಂಭಾಷಣೆ: ಜೆ.ಪಿ. ತುಮಿನಾಡು (ಸು ಫ್ರಂ ಸೋ)
12. ಅತ್ಯುತ್ತಮ ಸಿನಿಮಾಟೋಗ್ರಫಿ: ಅರವಿಂದ್ ಕಶ್ಯಪ್ (ಕಾಂತಾರ ಚಾಪ್ಟರ್ 1)
13. ಅತ್ಯುತ್ತಮ ನೃತ್ಯ ನಿರ್ದೇಶನ: ವಿನಾಯಕ ಆಚಾರ್ಯ (ಸು ಫ್ರಂ ಸೋ)
14. ಅತ್ಯುತ್ತಮ ಗಾಯಕ: ಅಬ್ಬಿ ವಿ (ಕಾಂತಾರ ಚಾಪ್ಟರ್ 1)
15. ಅತ್ಯುತ್ತಮ ಗಾಯಕಿ: ಸಾನ್ವಿ ಸುದೀಪ್ ( ಮಾರ್ಕ್)
16. ಅತ್ಯುತ್ತಮ ಚಿತ್ರ ಸಾಹಿತ್ಯ: ಸಿಂಪಲ್ ಸುನಿ (ಗತ ವೈಭವ)
17. ಅತ್ಯುತ್ತಮ ಹಿನ್ನೆಲೆ ಸಂಗೀತ: ಸಂದೀಪ್ ತುಳಸಿದಾಸ್ ( ಸು ಫ್ರಂ ಸೋ)
18. ಅತ್ಯುತ್ತಮ ಸಂಗೀತ: ಅಜನೀಶ್ ಲೋಕನಾಥ್ (ಕಾಂತಾರ ಚಾಪ್ಟರ್ 1)

19. ಅತ್ಯುತ್ತಮ ಚಿತ್ರಕಥೆ: ಪುನೀತ್ ರಂಗಸ್ವಾಮಿ (ಏಳು ಮಲೆ)
20. ಅತ್ಯುತ್ತಮ ಸಹ ನಟಿ: ಸಂಧ್ಯಾ ಅರಕೆರೆ (ಸು ಫ್ರಂ ಸೋ)
21. ಅತ್ಯುತ್ತಮ ಸಹ ನಟ: ಮಹಾಂತೇಶ್ ಹಿರೇಮಠ (ಹೆಬ್ಬುಲಿ ಕಟ್)
22. ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ (ಕಾಂತಾರ ಚಾಪ್ಟರ್ 1)
23. ಅತ್ಯುತ್ತಮ ನಟಿ : ಆಶಿಕಾ ರಂಗನಾಥ್ ( ಗತ ವೈಭವ)
24. ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ ಚಾಪ್ಟರ್
25. ಅತ್ಯುತ್ತಮ ಚಿತ್ರ: ಕಾಂತಾರ ಚಾಪ್ಟರ್ 1
26. ಜೀವಮಾನ ಸಾಧನೆ ಪ್ರಶಸ್ತಿ: ಎಸ್.ವಿ.ರಾಜೇಂದ್ರ ಸಿಂಗ್ ಬಾಬು

ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ ಅನುರಾಧಾ, ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಖ್ಯಾತ ನಿರ್ದೇಶಕ ಬಿ. ಸುರೇಶ, ಹಿರಿಯ ನಟಿ ಗಿರಿಜಾ ಲೋಕೇಶ್, ಖ್ಯಾತ ನಟಿ ಪೂಜಾ ಗಾಂಧಿ, ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ, ಖ್ಯಾತ ನಟ ಮಾಸ್ಟರ್ ಮಂಜುನಾಥ್ ಮುಂತಾದವರು ಭಾಗಿ ಆಗಿದ್ದರು.

ಇದನ್ನೂ ಓದಿ: Oscars 2026: ಈ ಬಾರಿ ಆಸ್ಕರ್ ಅವಾರ್ಡ್​ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

ಅಂಬರ್ಸ್ಟೋನ್ ಪ್ರಾಪರ್ಟೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಯಶ್ವಂತ್ ಕುಮಾರ್, ಕಿರಣ್ ಕುಮಾರ್, ಕೀರ್ತಿ, ಅಶ್ವಸೂರ್ಯ ರಿಯಾಲಿಟಿಸ್ ಡೈರೆಕ್ಟರ್ ಎಸ್. ರಂಜಿತ್ ಕುಮಾರ್ ಅಲೈನ್ಸ್ ಯೂನಿವರ್ಸಿಟಿಯ ರೆಜಿಸ್ಟರ್ ಸುರೇಖಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾರುಖ್ ಖಾನ್​ಗೂ ತಟ್ಟಿತು ಯುದ್ಧದ ಬಿಸಿ; ಮುಂಬೈನಲ್ಲೇ ಸೃಷ್ಟಿ ಆಗಲಿದೆ ಮರುಭೂಮಿ

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮತ್ತು ಅವರ ಪುತ್ರಿ ಸುಹಾನಾ ಖಾನ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ‘ಕಿಂಗ್’ (King) ಸಿನಿಮಾದ ಚಿತ್ರೀಕರಣಕ್ಕೆ ಅನಿರೀಕ್ಷಿತ ಅಡೆತಡೆ ಎದುರಾಗಿದೆ. ದುಬೈನಲ್ಲಿ ನಡೆಯಬೇಕಿದ್ದ ಈ ಚಿತ್ರದ ಪ್ರಮುಖ ಹಂತದ ಚಿತ್ರೀಕರಣವನ್ನು ಭದ್ರತಾ ಕಾರಣಗಳಿಂದಾಗಿ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದುಬೈ ಬದಲು ಮುಂಬೈನಲ್ಲೇ ಮರುಭೂಮಿ ನಿರ್ಮಾಣ ಮಾಡಿ ಚಿತ್ರೀಕರಣ ನಡೆಸಲಾಗುವುದು!

ವರದಿಗಳ ಪ್ರಕಾರ, ಏಪ್ರಿಲ್ 9ರಿಂದ ದುಬೈನಲ್ಲಿ ಒಂದು ವಾರಗಳ ಕಾಲ ‘ಕಿಂಗ್’ ಸಿನಿಮಾಗೆ ಚಿತ್ರೀಕರಣ ನಡೆಸಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಸಹ ಪಡೆಯಲಾಗಿತ್ತು. ಆದರೆ, ಯುದ್ಧದ ಭೀತಿಯಿಂದಾಗಿ ಪ್ಲ್ಯಾನ್ ಬದಲಾಗಿದೆ. ಸಿನಿಮಾದ ತಾರಾಗಣ ಮತ್ತು ತಾಂತ್ರಿಕ ತಂಡದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ದುಬೈ ಪ್ಲ್ಯಾನ್ ರದ್ದಾದ ಬೆನ್ನಲ್ಲೇ ಚಿತ್ರತಂಡ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ. ಮುಂಬೈನ ವಿಲೆ ಪಾರ್ಲೆ ಬಳಿಯ ಸ್ಟುಡಿಯೋದಲ್ಲಿ ಈಗ ಚಿತ್ರೀಕರಣ ನಡೆಯಲಿದೆ. ಅಲ್ಲಿನ ಪ್ರೊಡಕ್ಷನ್ ವಿನ್ಯಾಸ ತಂಡವು ಮರುಭೂಮಿಯಂತಹ ಬೃಹತ್ ಸೆಟ್ ನಿರ್ಮಿಸುತ್ತಿದೆ. ಇಲ್ಲಿ ಶಾರುಖ್ ಖಾನ್ ಅವರ ಸಾಹಸ ದೃಶ್ಯಗಳು ಮತ್ತು ಚೇಸಿಂಗ್ ಸೀಕ್ವೆನ್ಸ್ ಚಿತ್ರೀಕರಿಸಲಾಗುವುದು.

ದುಬೈನಲ್ಲಿ ಶಾರುಖ್ ಖಾನ್ ಆ್ಯಕ್ಷನ್ ದೃಶ್ಯಗಳಲ್ಲಿ ಭಾಗಿಯಾಗಬೇಕಿತ್ತು. ಸುಹಾನಾ ಖಾನ್ ಮತ್ತು ಅನಿಲ್ ಕಪೂರ್ ಅವರು ಮರುಭೂಮಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಚಿತ್ರದಲ್ಲಿ ಇವರಲ್ಲದೇ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಅಭಯ್ ವರ್ಮಾ, ಅರ್ಷದ್ ವಾರ್ಸಿ ಮತ್ತು ರಾಘವ್ ಜುಯಲ್ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್​ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ

ಶಾರುಖ್ ಒಡೆತನದ ‘ರೆಡ್ ಚಿಲ್ಲಿಸ್ ಎಂಟರ್ಟೈನ್‌ಮೆಂಟ್’ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಾರುಖ್ ಖಾನ್ ಅವರು ವೃತ್ತಿಪರ ಹಂತಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಪಾಯಕಾರಿ ಜಗತ್ತಿನಲ್ಲಿ ಬದುಕುಳಿಯುವುದು ಹೇಗೆ ಎಂಬ ಬಗ್ಗೆ ಯುವತಿಯೊಬ್ಬಳಿಗೆ ಅವರು ತರಬೇತಿ ನೀಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ ಎನ್ನಲಾಗಿದೆ. ಈ ಬಹುನಿರೀಕ್ಷಿತ ಚಿತ್ರವು ಕ್ರಿಸ್‌ಮಸ್ ವೇಳೆಗೆ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಜಿಮ್ ಟ್ರೈನರ್ ಅನುಚಿತ ವರ್ತನೆ, ಧಾರವಾಡದಲ್ಲಿ ಭುಗಿಲೆದ್ದ ಆಕ್ರೋಶ

ಧಾರವಾಡ, (ಮಾರ್ಚ್ 30): ಹಿಂದೂ ಯುವತಿಯರನ್ನು (hindu Young Women) ಟಾರ್ಗೆಟ್ ಮಾಡಿ ಅನುಚಿತವಾಗಿ ವರ್ತಿಸಿದ ಆರೋಪ ಮುಸ್ಲಿಂ ಜಿಮ್ ಟ್ರೈನರ್ ವಿರುದ್ಧ ಕೇಳಿಬಂದಿದೆ. ಧಾರವಾಡದ (Dharwad)  ನಗರದ ಮರಾಠಾ ಕಾಲನಿಯಲ್ಲಿರುವ ಫಿಟ್ನೆಸ್ ಫಸ್ಟ್ ಜಿಮ್​ ಟ್ರೈನರ್ ಸಾಬಿರ್, ಟ್ರೈನಿಂಗ್ ವೇಳೆ ಬೇಕಂತಲೇ ಮೈಮುಟ್ಟಿ ಅನುಚಿತ ವರ್ತನೆ ಮಾಡುತ್ತಾನೆಂದು ಆರೋಪಿಸಲಾಗಿದೆ. ವರ್ಕೌಟ್ ಮಾಡಲು ಬರುವ ಹಿಂದೂ ಯುವತಿಯರಿಗೆ ಟ್ರೈನಿಂಗ್ ವೇಳೆ ಬೇಕಂತಲೇ ಮೈಮುಟ್ಟಿ ಅನುಚಿತವಾಗಿ ವರ್ತಿಸುವುದಲ್ಲದೇ ಯುವತಿಯರ ಬಾತ್ ರೂಮ್​ಗೆ ಹೋಗಿ ಬರುತ್ತಿದ್ದ ಎಂದು ಆರೋಪಿಸಿದ್ದು, ಈ ಸಂಬಂಧ ಬಜರಂಗದಳ ಕಾರ್ಯಕರ್ತರು ಜಿಮ್​ಗೆ ಬೀಗ ಹಾಕಿ ಜಿಮ್ ಟ್ರೈನರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಹೀಗೆ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ ಆರೋಪ ಸಂಬಂಧ ಈ ಹಿಂದೆಯೇ ಟ್ರೈನರ್ ಸಾಬಿರ್​ಗೆ ಬಜರಂಗದಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು. ಆದರೂ ವರ್ತನೆ ಸರಿಪಡಿಸಿಕೊಳ್ಳದ ಸಾಬಿರ್ ವಿರುದ್ಧ ಮತ್ತೆ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ಇದೀಗ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅನುಚಿತ ವರ್ತನೆ ಮಾಡುವ ಜಿಮ್ ನಲ್ಲಿ ಟ್ರೈನರ್ ಸಾಬಿರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ:ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಉಪ ನಗರ ಠಾಣೆ ಪೊಲೀಸರು, ದೌಡಾಯಿಸಿ ಪ್ರತಿಭಟನೆಕಾರರ ಮನವೊಲಿಸಲು ಯತ್ನಿಸಿದ್ದಾರೆ. ಆದರೂ ಪಟ್ಟು ಬಿಡಿದ ಪ್ರತಿಭಟನೆಕಾರರು, ಸ್ಥಳಕ್ಕೆ ಸಾಬಿರ್ ಕರೆಸುವಂತೆ ಒತ್ತಾಯಿಸಿದ್ದಾರೆ.

ರ್ಯಾಪಿಡೋ ಚಾಲಕನಿಂದ ಯುವತಿಗೆ ಕಿರುಕುಳ

ಬೆಂಗಳೂರು: ಇನ್ನೊಂದೆಡೆ ರ್ಯಾಪಿಡೋ ಚಾಲಕನೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವತಿಯೋರ್ವಳು ಬಿಟಿಎಂ ಲೇಔಟ್‌ನಿಂದ ಇಂದಿರಾನಗರಕ್ಕೆ ಬೈಕ್ ಬುಕ್‌ ಮಾಡಿದ್ದಳು. ಬಳಿಕ ಬೈಕ್‌ನಲ್ಲಿ ಬರುವಾಗ ಚಾಲಕ ಮೊಹಮ್ಮದ್ ಖಾಜಾ, ದಾರಿಯುದ್ದಕ್ಕೂ ಮೈಮುಟ್ಟಿ ಅಸಭ್ಯ ವರ್ತಿಸಿದ್ದಾನೆಂದು ಯುವತಿ ಆರೋಪಿಸಿದ್ದು, ಈ ಸಂಬಂಧ ಯುವತಿ ದೂರು ನೀಡಿದ್ದಾಳೆ. ಇದರ ಮೇರೆಗೆ ಇದೀಗ ಇಂದಿರಾನಗರ ಠಾಣೆ ಪೊಲೀಸರು ರ್ಯಾಪಿಡೋ ಚಾಲಕ ಮೊಹಮ್ಮದ್ ಖಾಜಾ ಎನ್ನುವಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

CSK vs RR: ಸಿಎಸ್​ಕೆ ವಿರುದ್ಧ 15 ಎಸೆತಗಳಲ್ಲಿ 50 ರನ್ ಚಚ್ಚಿದ ವೈಭವ್ ಸೂರ್ಯವಂಶಿ

ಗುವಾಹಟಿಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2026 ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ ಕೇವಲ 127 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡಕ್ಕೆ ವೈಭವ್ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು.

ಜೇಮಿ ಓವರ್ಟನ್ ಎಸೆದ ಮೊದಲ ಓವರ್​ನಲ್ಲಿ ತಾನು ಎದುರಿಸಿದ ಮೊದಲ ಎಸೆತದಲ್ಲೇ ವೈಭವ್ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚ್ ನೀಡಿದ್ದರು. ಆದರೆ ಸ್ವಲ್ಪ ಕಷ್ಟಕರವಾದ ಕ್ಯಾಚ್ ಅನ್ನು ಕಾರ್ತಿಕ್ ಶರ್ಮಾ ಕೈಚೆಲ್ಲಿದರು. ಕ್ಯಾಚ್ ಬಿಟ್ಟಿದಲ್ಲದೆ ಬೌಂಡರಿಯನ್ನು ಬಿಟ್ಟುಕೊಟ್ಟರು. ಮೊದಲ ಎಸೆತದಲ್ಲೇ ಜೀವದಾನ ಪಡೆದ ವೈಭವ್ ನಂತರದ ಎಸೆತವನ್ನು ಸಿಕ್ಸರ್​ಗಟ್ಟಿದರು.

ಪ್ರತಿ ಓವರ್​ನಲ್ಲೂ ಬೌಂಡರಿ ಹಾಗೂ ಸಿಕ್ಸರ್​ ಬಾರಿಸಿದ ವೈಭವ್ ತಂಡವನ್ನು ಪವರ್ ಪ್ಲೇ ಮುಕ್ತಾಯಕ್ಕೆ 74 ರನ್​ಗಳಿಗೆ ಕೊಂಡೊಯ್ದರು. ಇದರಲ್ಲಿ ವೈಭವ್ ಅವರ ಬ್ಯಾಟ್​​ನಿಂದ ಸಿಡಿದಿದ್ದು ಬರೋಬ್ಬರಿ 50 ರನ್. ಇತ್ತ ಯಶಸ್ವಿ ಜೈಸ್ವಾಲ್ ಕಲೆಹಾಕಿದ್ದು, ಕೇವಲ 18 ರನ್. 6ನೇ ಓವರ್​ನಲ್ಲಿ ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ವೈಭವ್ ಕೇವಲ 15 ಎಸೆತಗಳಲ್ಲಿ ಐಪಿಎಲ್ ಇತಿಹಾಸದಲ್ಲಿ ಮೂರನೇ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದರು.

ಆದಾಗ್ಯೂ ಅರ್ಧಶತಕ ಬಾರಿಸಿದ ಬಳಿಕ ವೈಭವ್ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ವೈಭವ್ ತಮ್ಮ ಇನ್ನಿಂಗ್ಸ್​ನಲ್ಲಿ 17 ಎಸೆತಗಳನ್ನು ಎದುರಿಸಿ 5 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳ ಸಹಿತ 52 ರನ್ ಬಾರಿಸಿ ಔಟಾದರು. ಅಂದರೆ ವೈಭವ್ ಕಲೆಹಾಕಿದ 52 ರನ್​ಗಳಲ್ಲಿ 46 ರನ್​​ಗಳು ಕೇವಲ ಬೌಂಡರಿ, ಸಿಕ್ಸರ್​ಗಳಿಂದಲೇ ಬಂದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬ್ರಹ್ಮರಾಕ್ಷಸ’ ತಂಡದಿಂದ ‘ಶ್ರೀಕೃಷ್ಣ’ ಸಿನಿಮಾ: ಉಧೋ ಉಧೋ ಯಲ್ಲವ್ವ ಹಾಡು ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಯಲ್ಲಮ್ಮನ (Yellamma) ಕುರಿತು ಒಂದಷ್ಟು ಹಾಡುಗಳು ಬಂದಿವೆ. ಈಗ ಅವುಗಳ ಸಾಲಿಗೆ ಮತ್ತೊಂದು ಹೊಸ ಗೀತೆ ಸೇರ್ಪಡೆ ಆಗಿದೆ. ಈ ಹಿಂದೆ ‘ಬ್ರಹ್ಮರಾಕ್ಷಸ’ ಸಿನಿಮಾ ಮಾಡಿದ್ದ ಶಂಕರ್ ರಾಜ ವರ್ಮ ಅವರು ಈಗ ‘ಶ್ರೀಕೃಷ್ಣ’ (Shri Krishna) ಎಂಬ ಹೊಸ ಚಿತ್ರವನ್ನು ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ. ಈಗ ಇದೇ ಸಿನಿಮಾದಿಂದ ‘ಉಧೋ ಉಧೋ ಯಲ್ಲವ್ವ..’ (Udho Udho Yellavva) ಹಾಡನ್ನು ರಿಲೀಸ್ ಮಾಡಲಾಗಿದೆ.

ಈ ಹಾಡಿಗೆ ಎಂ.ಎಸ್‍. ತ್ಯಾಗರಾಜ್‍ ಅವರು ಸಾಹಿತ್ಯ ಬರೆದು, ಸಂಗೀತ ನೀಡಿದ್ದಾರೆ. ಅಲ್ಲದೇ, ಅವರೇ ಧ್ವನಿಯಾಗಿದ್ದಾರೆ. ಅವರ ಜೊತೆಗೆ ಸರಯೂ ಕೂಡ ಹಾಡಿದ್ದಾರೆ. ‘ಸಿರಿ ಮ್ಯೂಸಿಕ್‍’ ಮೂಲಕ ಈ ಲಿರಿಕಲ್‍ ಹಾಡು ಬಿಡುಗಡೆ ಆಗಿದೆ. ಹಾಡಿನ ಬಿಡುಗಡೆ ಕಾರ್ಯಕ್ರಮದ ವೇಳೆ ಚಿತ್ರತಂಡದವರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಬೃಹಸ್ಪತಿ ಕ್ರಿಯೇಷನ್ಸ್’ ಬ್ಯಾನರ್‍ ಮೂಲಕ ಶಂಕರ್‍ ರಾಜ ವರ್ಮ ಮತ್ತು ಅಜಯ್‍ ಕುಮಾರ್ ಪಿ.ಎಂ. ಅವರು ‘ಶ್ರೀಕೃಷ್ಣ’ ಸಿನಿಮಾ ನಿರ್ಮಿಸುತ್ತಿದ್ದಾರೆ. ಶಿವಲಿಂಗಯ್ಯ ಸಿ.ಎಂ, ಉಲ್ಲಾಸ್‍ ಕೆ.ಸಿ.ಎಸ್., ಚಾಣುಕ್ಯ ಆರ್‍, ‘ನೆನಪಿರಲಿ’ ಮೋಹನ್‍ ಹಾಗೂ ಲತಾ ಮಂಜುನಾಥ್‍ ಸಹ ನಿರ್ಮಾಪಕರಾಗಿದಾರೆ.

Shri Krishna Movie Team

ನಟ-ನಿರ್ದೇಶಕ ಶಂಕರ್ ರಾಜ ವರ್ಮ ಮಾತನಾಡಿ, ‘ನಾನು ನಿರ್ದೇಶಕನಾಗುತ್ತೇನೆ, ಒಂದು ಸಂಸ್ಥೆ ಕಟ್ಟಿ ಇಷ್ಟು ದೂರ ಸಾಗುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ. ಅದಕ್ಕೆ ಕಾರಣರಾದವರು ನಮ್ಮ ತಂದೆ-ತಾಯಿ, ಕುಟುಂಬದವರು ಮತ್ತು ಸ್ನೇಹಿತರು. ಅವರೆಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರ ಸಾಧ್ಯವಾಗಿದೆ. ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಬಹುತೇಕ ಯಾರೆಲ್ಲಾ ಕೆಲಸ ಮಾಡಿದ್ದಾರೋ, ಅವರೆಲ್ಲರೂ ಈ ಚಿತ್ರತಂಡದಲ್ಲಿದ್ದಾರೆ’ ಎಂದು ಹೇಳಿದರು.

ಉಧೋ ಉಧೋ ಯಲ್ಲವ್ವ ಹಾಡು:

ಕಥೆ ಬಗ್ಗೆ ಕೂಡ ಅವರು ಮಾಹಿತಿ ನೀಡಿದರು. ‘ಮೂವರು ಅನಾಥರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಇಲ್ಲಿ ನಾಯಕಿ ಸಹ ಅನಾಥೆ. ಎಲ್ಲರೂ ಜೊತೆಯಾಗಿರುವಾಗ ಅವರ ಜೀವನದಲ್ಲೊಂದು ಘಟನೆ ನಡೆಯುತ್ತದೆ. ಇದರಿಂದ ಅವರು ಜೈಲಿಗೆ ಹೋಗಬೇಕಾಗುತ್ತದೆ. ಜೈಲಿಂದ ತಪ್ಪಿಸಿಕೊಂಡು ಬಂದ ನಂತರ ಅವರು ಏನೆಲ್ಲಾ ಮಾಡುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಯಲ್ಲಮ್ಮ’ ಸಿನಿಮಾದಿಂದ ಹೊರನಡೆದ ಸಾಯಿ ಪಲ್ಲವಿ, ಕಾರಣವೇನು?

ಅನಿರುದ್ಧ್ ಅವರ ಛಾಯಾಗ್ರಹಣ, ಕೀರ್ತಿರಾಜು ಅವರ ಸಂಕಲನ ‘ಶ್ರೀಕೃಷ್ಣ’ ಚಿತ್ರಕ್ಕಿದೆ. ಚೈತ್ರಾ ತೋಟದ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹುಬ್ಬಳ್ಳಿ ಮೂಲದ ಅವರು ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದರು. ಈಗ ನಾಯಕಿಯಾಗಿದ್ದಾರೆ. ಪ್ರದೀಪ್‍ ಪೂಜಾರಿ, ಭುವನ್‍ ಗೌಡ, ಸ್ನೇಹಾ, ಈಶ್ವರ್‍ ಶೆಟ್ಟಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ:ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು

ಉಡುಪಿ, (ಮಾರ್ಚ್ 30): ಮದುವೆಯಾದ (Marriage)  ಒಂದೇ ತಿಂಗಳಿಗೆ ಉದ್ಯಮಿ (Businessman)  ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ  ಉಡುಪಿ (Udupi) ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಮೂಲತಃ ನೆಲ್ಯಾಡಿ ನಿವಾಸಿಯಾಗಿರುವ ಸುದೀಪ್​ ಶೆಟ್ಟಿ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ತಿಂಗಳು ಮದುವೆಯಾಗಿದ್ದ ವಿವಾಹಿತ ಉದ್ಯಮಿ ಸುದೀಪ್​ ಶೆಟ್ಟಿ, ಮಾರ್ಚ್ 17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ, ಹತ್ತಾರು ದಿನ ಜೀವನ್ಮರಣ ಹೋರಾಟ ನಡೆಸಿ ಕೊನೆಗೆ ಚಿಕಿತ್ಸೆ ಫಲಿಸದೆ ಮಾರ್ಚ್ 29ರಂದು ಕೊನೆಯುಸಿರೆಳೆದಿದ್ದಾರೆ.ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸುದೀಪ್‌ನ ತಂದೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಸುದೀಪ್‌ನ ಪತ್ನಿ ಸೌಮ್ಯ ಶೆಟ್ಟಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ದೂರು ದಾಖಲಿಸಿದ್ದಾರೆ.

ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ

ಸುದೀಪ್ ಹಾಗೂ ಸೌಮ್ಯ ಶೆಟ್ಟಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮೂಲತಃ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿಯಾಗಿರುವ ಸೌಮ್ಯ ಶೆಟ್ಟಿ, ಜೊತೆ ಸುದೀಪ್​ ಕಳೆದ ತಿಂಗಳು ಫೆಬ್ರವರಿ 17ರಂದು ಪುತ್ತೂರು ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿದ್ದರು. ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಆಗಿರುವ ಸೌಮ್ಯ ಶೆಟ್ಟಿ ಈ ಹಿಂದೆ ಒಂದು ಮದುವೆಯಾಗಿ ಪತಿಗೆ ಡಿವೋರ್ಸ್ ನೀಡಿ ಸುದೀಪ್​ ಜೊತೆ ವಿವಾಹವಾಗಿದ್ದರು. ಆದರೆ, ಸೌಮ್ಯ ಜೊತೆ ವಿವಾಹದ ಬಗ್ಗೆ ಸುದೀಪ್ ಕುಟುಂಬ ಆಕ್ಷೇಪ ವ್ಯಕ್ತಪಡಿಸಿತ್ತು.

ಸೌಮ್ಯ ಶೆಟ್ಟಿ ಜೊತೆ ಮದುವೆಯಾಗಿದ್ದಕ್ಕೆ ಸುದೀಪ್ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಒಂದೇ ತಿಂಗಳಲ್ಲಿ ಸಂಬಂಧ ಬಿಗಡಾಯಿಸಿತ್ತು. ಬಳಿಕ ಸುದೀಪ್ ಕಳೆದ ಮಾರ್ಚ್ 17 ರಂದು ಕಡಬ ತಾಲೂಕಿನ ನೆಲ್ಯಾಡಿಯಲ್ಲಿದ್ದ ವೇಳೆ ಅಲ್ಲಿಗೆ ಬಂದಿದ್ದ ಸೌಮ್ಯ ಬೆದರಿಕೆ ಹಾಕಿರುವುದಾಗಿ ಆರೋಪ ಕೇಳಿಬಂದಿದೆ. ಇದಾದ ಬಳಿಕ ಮಾರ್ಚ್ 22 ರಂದು ಸುದೀಪ್ ವಿಷ ಸೇವಿಸಿರುವ ಬಗ್ಗೆ ಸೌಮ್ಯ ಸಂಬಂಧಿಕರು ಮಾಹಿತಿ ನೀಡಿದ್ದರು. ಮಾ.23 ರಂದು ವಿಷ ಸೇವಿಸಿದ ಸುದೀಪ್​ನನ್ನು ಸೌಮ್ಯ ನಿಟ್ಟೆಯ ಗಜಾರಿಯ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಮಾರ್ಚ್ 24ರಂದು ಸುದೀಪ್ ತಂದೆ ಮಂಗಳೂರಿನ ಏನಪೋಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಸುದೀಪ್​ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸಾವನ್ನಪ್ಪಿದ್ದಾರೆ.

ಮಗ ಸಾವನ್ನಪ್ಪಿದ ಬೆನ್ನಲ್ಲೇ ಸೊಸೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಮೃತ ಸುದೀಪ್​ ತಂದೆ ದಾಮೋದರ್ ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಪೊಲೀಸರು, ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಮುಂದಿನ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಪತ್ನಿ ಸೌಮ್ಯ ಶೆಟ್ಟಿ ಹೇಳಿದ್ದೇನು?

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಸೌಮ್ಯ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸುದೀಪ್ ಸಾವಿಗೆ ನಾನು ಕಾರಣವಲ್ಲ. ಸುದೀಪ್ ಸ್ವತಃ ವಿಷ ಸೇವಿಸಿರುವ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ವಿಷ ಸೇವಿಸಿದ ನಂತರವೂ 4-5 ದಿನ ಆರಾಮಾಗಿದ್ದರು. ಬಳಿಕ ಫುಡ್ ಪಾಯಿಸನ್ ಆಗಿದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದೆ. ಅಲ್ಲಿ ಜಾಂಡಿಸ್ ಆಗಿರಬಹುದು ಎಂದು ಚಿಕಿತ್ಸೆ ನೀಡಿದರು. ಯಾವ ಕಾರಣಕ್ಕೆ ವಿಷ ಸೇವಿಸಿದ್ದಾರೆ ತಿಳಿದಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link